ಭಾನುವಾರ, ಸೆಪ್ಟೆಂಬರ್ 17, 2023

ಗಣಪತಿ - ಕಥೆಯ ಹಿಂದಿನ ಚಿಂತನೆ




ಗಣೇಶ ಬಂದ, ಕಾಯಿ ಕಡುಬು ತಿಂದ, ಹೊಟ್ಟೆಮೇಲೆ ಗಂಧ, ಚಿಕ್ಕೆರೇಲಿ ಬಿದ್ದ, ದೊಡ್ಕೆರೇಲಿ  ಎದ್ದ !  ಇದು ನಾವು ಚಿಕ್ಕವರಿದ್ದಾಗ ಹಬ್ಬದ ಸಮಯದಲ್ಲಿ ಹೇಳುತ್ತಿದ್ದ ಶಿಶುಗೀತೆ. ಚಿಕ್ಕಕೆರೆ ದೊಡ್ಡಕೆರೆಗಳು ಯಾಕೆ ಎಂಬುದು ನನಗೆ ಇನ್ನೂ ತಿಳಿದಿಲ್ಲ !  ವಿದ್ಯಾಧಿಪತಿ ಎಂದೂ, ವಿಘ್ನ ನಾಶಕನೆಂದೂ ಹೆಸರಾದ ಗಣೇಶ ಎಲ್ಲರಿಗೂ ಬಹಳ ಪ್ರಿಯನಾದ ದೇವರು. ಅದರಲ್ಲೂ ಅವನ ಸ್ತುತಿಯಿಂದ ಕೆಲವು ಅಂಕ ಹೆಚ್ಚಿಗೆ ಗಳಿಸಬಹುದೆಂಬ ನಂಬಿಕೆಯಿರುವುದರಿಂದ ವಿದ್ಯಾರ್ಥಿಗಳಿಗೆ ‘ಪೆಟ್’ ದೇವರು ! ನನ್ನ ಸ್ನೇಹಿತರನೇಕರು ಪರೀಕ್ಷೆಗೆ ಬರುವ ಮುಂಚೆ ಗಣಪನಿಗೆ ಪ್ರದಕ್ಷಿಣೆ ಹಾಕಿ ಬರುತ್ತಿದ್ದರು! 


ಅದೇನೇ ಇರಲಿ. ನಾವು ಹಬ್ಬಕ್ಕೆಂದೇ ಪೇಟೆಯಿಂದ ಮೂರ್ತಿಯೊಂದನ್ನು ತಂದು, ಪ್ರತಿಷ್ಠಾಪನೆ ಮಾಡಿ, ಪೂಜಿಸಿ, ವಿಸರ್ಜಿಸುತ್ತಿದ್ದದ್ದು ಗಣೇಶನ ಹಬ್ಬದಲ್ಲಿ ಮಾತ್ರ. ಮತ್ತು ನಮ್ಮ ಮನೆಗೆ ಪುರೋಹಿತರೊಬ್ಬರು ಬಂದು ಪೂಜೆ ನಡೆಸಿಕೊಡುತ್ತಿದ್ದದ್ದೂ ಗಣೇಶನ ಹಬ್ಬದಲ್ಲಿ ಮಾತ್ರ. ಹಾಗಾಗಿ ಗಣೇಶನ ಹಬ್ಬವೆಂದರೆ ಮಂಟಪ, ತೋರಣ, ಬಾಳೆಕಂಭ, ಕಡುಬುಗಳ  ಸಂಭ್ರಮ. ಕಾಲಾನುಕ್ರಮದಲ್ಲಿ ಆಚರಣೆಗಳು ಕೊಂಚಮಟ್ಟಿಗೆ ಹಿಂದೆ ಮುಂದೆ ಆಗಿವೆಯಾದರೂ ಚಿಕ್ಕಂದಿನ ಸಂಭ್ರಮದ ಒಂದು ಭಾಗವಾದರೂ ಚೌತಿಯ ಸಮಯದಲ್ಲಿ ಈಗಲೂ ಕಾಣಿಸಿಕೊಳ್ಳುತ್ತದೆ !


ಗಣೇಶ ಚೌತಿಯ ಹಿಂದಿನ ದಿವಸ ಅಂದರೆ ತದಿಗೆಯ ದಿವಸ ನಮ್ಮಲ್ಲಿ ಗೌರಿಪೂಜೆ. ನಮ್ಮ ನಂಬಿಕೆಯ ಪ್ರಕಾರ ತವರಿಗೆ, ಅಂದರೆ ನಮ್ಮ ಮನೆಗಳಿಗೆ ಬಂದ ತಾಯಿಯನ್ನು ವಾಪಸು ಕರೆದೊಯ್ಯಲೆಂದು ಗಣಪತಿ ನಮ್ಮಲ್ಲಿಗೆ ಬರುತ್ತಾನೆ. (ಪಾರ್ವತಿದೇವಿಗೆ, ಅಥವಾ ಹಬ್ಬದ ಸಮಯದಲ್ಲಿ ನಾವೆನ್ನುವಂತೆ ಸ್ವರ್ಣಗೌರಿಗೆ, ನಮ್ಮ ಮನೆ ಅದುಯಾಕೆ, ಹೇಗೆ ತವರಾಯಿತೋ ನನಗೆ ತಿಳಿಯದು.) ತಾಯಿಯನ್ನು ಕರೆದೊಯ್ಯಲು ಬಂದ ಗಣಪನಿಗೂ ನಮ್ಮಿಂದ ಸ್ವಾಗತ, ಪೂಜೆ, ಹಬ್ಬ. ಮಗಳು ತವರಿಗೆ ಬಂದರೆ ತಂದೆ ತಾಯಿಯರಿಗೆ ಸಂಭ್ರಮ. ಮತ್ತೆ  ಮೊಮ್ಮಗ ಬಂದರೆ ಆ ಸಂಭ್ರಮ ಇನ್ನೂ ಒಂದು ಕೈ ಹೆಚ್ಚಲ್ಲವೇ ? ಅತ್ಯಂತ ಉಮೇದಿನಿಂದ ನೈವೇದ್ಯದ ಪದಾರ್ಥಗಳು ತಯಾರಾಗುತ್ತವೆ. ಸರಿ, ಮನೆಗೆ ಬಂದ ಗಣಪ ಅಕ್ಕರೆಯಿಂದ ಇಕ್ಕಿದ್ದನ್ನೆಲ್ಲಾ ತಿಂದ. ಚನ್ನಾಗಿ ತಿಂದ. ಭಾರವಾದ ಹೊಟ್ಟೆಹೊತ್ತು ವಾಪಸು ಹೊರಟ. ಅಜ್ಜಿ, ತಾತ ಭಾರವಾದ ಮನದಿಂದ ಬೀಳ್ಕೊಟ್ಟು ಮತ್ತೊಮ್ಮೆ ಬೇಗ ಬಾ ಎಂದು ಕೈಬೀಸಿದರು. ಮಹಾರಾಷ್ಟ್ರದಲ್ಲಿ ಗಣಪತಿ ವಿಸರ್ಜನೆಯ ಸಮಯದಲ್ಲಿ ಕೂಗುವಂತೆ, “ಫುಡಚಾ ವರ್ಷಿ ಲೌಕರ ಯಾ” ! 


ಗಣಪನ ಭಾರ ಹೊತ್ತ ಮೂಷಿಕ (ಅದಕ್ಕೂ ಹೊಟ್ಟೆಭಾರ!) ಹಾಗೂ ಹೀಗೂ ಹೆಜ್ಜೆ ಹಾಕುತ್ತಿತ್ತು. ಮೊದಲೇ ಕತ್ತಲೆ, ದಾರಿಕಾಣದು. ತಡವರಿಸುತ್ತಾ ನಡೆವಾಗ ಆ ಹಾವು ಎದುರಿಗೆ ಬರಬೇಕೇ ? ಮೂಷಿಕ ಬೆದರಿತು, ಅದುರಿತು. ಅಂಬಾರಿಯಿಲ್ಲದ ಮೂಷಿಕದ ಮೇಲೆ ಕುಳಿತಿದ್ದ ಇವ ಕೆಳಗೆ ಬಿದ್ದ. ಒಡೆದೇ ಹೋಯಿತು ಹೊಟ್ಟೆ. ಉಂಡೆ, ಲಡ್ಡುಗೆಗಳು ಉರುಳಾಡಿದವು. ತನಗೆ ಅಷ್ಟು ಪ್ರಿಯವಾದ ಉಂಡೆಗಳು, ಅಜ್ಜಿ ತಾತ ಪ್ರೀತಿಯಿಂದ ತಿನ್ನಿಸಿದ ತಿಂಡಿಗಳು. ಬಿಡುವುದುಂಟೇ ? ಹೇಗೂ ಯಾರೂ ನೋಡುತ್ತಿಲ್ಲವೆಂದು ಎಲ್ಲವನ್ನೂ ಎತ್ತಿ ಮತ್ತೆ ಹೊಟ್ಟೆಗೆ ತುಂಬಿಸಿದ. ಹತ್ತಿರವಿದ್ದ ಹಾವನ್ನೇ ಸೆಳೆದು ಬೆಲ್ಟ್ ಮಾಡಿ ಕಟ್ಟಿದ. ಪ್ರಯಾಣ ಮುಂದುವರೆಸಿದ. 


ಆದರೆ ಇದು ಆಕಾಶದಲ್ಲಿದ್ದ ಚಂದ್ರನ ಕಣ್ಣಿಗೆ ಬೀಳದಿರುವುದುಂಟೇ ? ಅವ ಕಂಡ. ನಕ್ಕ. ಬಿದ್ದು ಬಿದ್ದು ನಕ್ಕ. ಇವನಿಗೆ ರೇಗಿತು. ತನ್ನ ಹಲ್ಲನ್ನೇ ಮುರಿದು ಅವನಿಗೊಂದು ಪೆಟ್ಟು ಕೊಟ್ಟ! ಚಂದ್ರನ ಮೂತಿ ಸೊಟ್ಟಗಾಯಿತು. 


ಇದು ನಾವೆಲ್ಲರೂ ಬಲ್ಲ ಕಥೆಯಲ್ಲವೇ ? ಇದು ಬರಿಯ ರಂಜನೆಗೆಂದು ಕಟ್ಟಿದ ಕಥೆಯಲ್ಲದೆ ಇದರ ಹಿಂದೆ ಏನಾದರೂ ಹೆಚ್ಚಿನ ಅರ್ಥ ಇರಬಹುದೇ ಎಂಬ ಕುತೂಹಲ ನನಗೆ. ಆ ದಿಸೆಯಲ್ಲಿ ಚಿಂತನೆಮಾಡಿದಾಗ, ಗಣೇಶನಿಗೆ ಮತ್ತು ಮೇಲ್ಕಾಣಿಸಿದ ಪ್ರಸಂಗಕ್ಕೆ, ನಮಗೆ ಮೇಲುನೋಟಕ್ಕೆ ಕಾಣಿಸುವುದಕ್ಕಿಂತ ಹೆಚ್ಚಿನ ಅರ್ಥವೊಂದು ಕಾಣಬರುತ್ತದೆ.  


ಗಣೇಶನಿಗೆ ಆನೆಯ ತಲೆ. ನಾವು ಕಾಣುವ ಪ್ರಾಣಿಗಳ ಪೈಕಿ ಬುದ್ಧಿಗೂ, ನೆನಪಿನ ಶಕ್ತಿಗೂ ಹೆಸರುವಾಸಿಯಾದ ಪ್ರಾಣಿ, ಆನೆ.   ಅದರ ತಲೆಯಲ್ಲಿ ಎದ್ದುಕಾಣುವ ಭಾಗ ಅದರ ಕಿವಿ.  ಮೊರದಗಲ !  “ಮೋರೆಗಪ್ಪಿನ ಭಾವ, ಮೊರದಗಲದ ಕಿವಿ, ಕೋರೆದಾಡೆಯವನ್ಯಾರಮ್ಮಾ ?” ಎನ್ನುತ್ತಾರೆ ಕನಕದಾಸರು. “ನಮ್ಮಮ್ಮ ಶಾರದೆ” ಗೀತೆಯಲ್ಲಿ. ನಾವು ಗುರುಗಳಿಂದ ಪಾಠಕೇಳಿ ಬುದ್ಧಿವಂತರಾಗುವುದಲ್ಲವೇ? ದೊಡ್ಡ ಕಿವಿಗಳು, ಎಲ್ಲ ವಿಷಯಗಳನ್ನು ಸೆಳೆದುಕೊಂಡು ಕೇಳಿ, ಸಂಗ್ರಹಿಸಿ, ಬುದ್ಧಿ ಬೆಳಸಿಕೊಳ್ಳುವ ಸಂಕೇತ. ಜ್ಞಾನಾರ್ಜನೆಯ ಸಂಕೇತ. ತಾನು ಬುದ್ಧಿ ಬೆಳಸಿಕೊಳ್ಳುತ್ತಿದ್ದರೆ ತಾನೆ ಮತ್ತೊಬ್ಬರಿಗೆ ಕೊಡುವುದು ? ಗಣಪತಿ ತನ್ನ ಜ್ಞಾನ ಬೆಳಸಿಕೊಳ್ಳುತ್ತಾನೆ, ಕೇಳಿಕೊಂಡವರಿಗೆ ಹಂಚುತ್ತಾನೆ !


ಗಣೇಶ ಇಂದ್ರಿಯ ಚಪಲಗಳಿಂದ ದೂರವುಳಿದವ. ಮೇಲೆ ತಿಳಿಸಿದ ಗೀತೆಯ ಮತ್ತೊಂದು ಚರಣದಲ್ಲಿ “ರಾಶಿ ವಿದ್ಯೆಯಬಲ್ಲ, ರಮಣಿಹಂಬಲನೊಲ್ಲ, ಭಾಷಿಗನಿವನ್ಯಾರಮ್ಮಾ” ಎಂದರು ಕನಕದಾಸರು. ಹೀಗೆ ಬಹಳ ಬಲವಾದ ಇತರ ಚಾಪಲ್ಯಗಳಿಂದ ದೂರವುಳಿದ ಗಣಪನೂ ಜಿಹ್ವಾಚಾಪಲ್ಯಕ್ಕೆ ಬಲಿಯಾದ ! ಪ್ರಕೃತಿಯ ಸೆಳೆತ ಒಮ್ಮೊಮ್ಮೆ ಎಂಥವರನ್ನೂ ದಾರಿತಪ್ಪಿಸಬಹುದೆಂಬ ಸೂಚನೆ ಇದು. ಇಂಥ ಉದಾಹರಣೆಗಳನ್ನು ನಮ್ಮ ಪುರಾಣಗಳಲ್ಲಿ ಅನೇಕ ಕಡೆ ನೋಡಬಹುದು. 


ಸರಿ, ಹೊಟ್ಟೆಬಿರಿಯತಿಂದ ಗಣಪತಿ ದಾರಿಯಲ್ಲಿ ಬಿದ್ದ. ಒಡೆಯಿತು ಹೊಟ್ಟೆ. ಒಡೆದ ಹೊಟ್ಟೆಯನ್ನು ಕಟ್ಟಿದ್ದು ಯಾವುದರಿಂದ ? ಹಾವಿನಿಂದ. ಹಾವು ನಮ್ಮ ದೇಹದಲ್ಲಿನ ಕಾಮನೆಗಳ ಸಂಕೇತ. ಅವು ನಮ್ಮ ಕೈಗೆ ಸಿಗದಂತೆ ನುಣುಚಿಕೊಂಡು ಹಾವಿನಂತೆ ನಮ್ಮೊಳಗೆ ಹರಿದಾಡುತ್ತವೆ, ಅಥವಾ ಎಲ್ಲೋ ಮೂಲೆಯಲ್ಲಿ ನಮಗೆ ಕಾಣದಂತೆ ಅಡಗಿದ್ದು  ಇದ್ದಕ್ಕಿದ್ದಂತೆ ಯಾವಾಗಲೋ ಹೊರಬಂದು ಭುಸ್ಸೆನ್ನುತ್ತವೆ ! ಆದ್ದರಿಂದ ಗಣಪತಿ ತನ್ನ ಹೊಟ್ಟೆಯನ್ನು ಹಾವಿನಿಂದ ಕಟ್ಟಿದ್ದು ತನ್ನ ಜಿಹ್ವಾಚಾಪಲ್ಯದ ಕಾಮನೆಯನ್ನೂ ಕಟ್ಟಿಟ್ಟ ಸಂಕೇತ.  


ಇದನ್ನು ಕಂಡು ನಕ್ಕವನ್ಯಾರು? ಚಂದ್ರ. ನಮ್ಮ ಎಲ್ಲ ಕಾಮನೆಗಳಿಗೆ ಚಂದ್ರ ಅಧಿಪತಿ. ನಾವು ಇಂಗ್ಲೀಷಿನಲ್ಲಿ ‘ಮೂಡ್ಸ್’ ಎನ್ನುತ್ತೇವಲ್ಲ, ಅದಕ್ಕೆ ಸೂಕ್ತ ಕನ್ನಡ ಪದವೇನೋ  ತಿಳಿಯದು. ಮನಸ್ಥಿತಿ ಎನ್ನೋಣವೇ ? ಅದರ ನಿಯಂತ್ರಕ ಚಂದ್ರನಂತೆ.  ಅದರಿಂದಲೇ “ಹುಣ್ಣಿಮೆ ಅಮಾವಾಸ್ಯೆ ಸಮಯದಲ್ಲಿ ಹುಚ್ಚು ಏರಿಳಿತವಾಗುತ್ತದೆ” ಎಂಬ ಪ್ರತೀತಿ ಇರುವುದು. ಬೇರೆ ವಿಷಯಗಳಲ್ಲಿ ತನ್ನ ಅಂಕೆಗೆ ಸಿಗದಂತಿದ್ದ ಗಣಪನೂ ತನ್ನ ಅಧೀನದಲ್ಲಿರುವ ನಾಲಿಗೆ ಚಪಲಕ್ಕೆ ಸಿಕ್ಕಿಬಿದ್ದು, ನಂತರ ನೆಲಕ್ಕೂ ಉರುಳಿಬಿದ್ದನೆಂದು ಚಂದ್ರ ನಕ್ಕ. ರುಚಿಯನ್ನು ಅನುಭವಿಸುವುದು ನಾಲಿಗೆಯಾದರೂ, ರುಚಿ ನಾಲಿಗೆಗೆ ತೋರುವಂತೆ ಜಗಿದು ನೀಡುವುದು ಹಲ್ಲಲ್ಲವೇ ? ಅದರಿಂದ ಮತ್ತೊಮ್ಮೆ ತಾನು ಹೀಗೆ ಚಪಲಕ್ಕೆ ಸಿಲುಕುವುದಿಲ್ಲವೆಂದು ತೋರಿಸಲು ಗಣಪತಿ ತನ್ನ ಹಲ್ಲನ್ನೇ ಮುರಿದು ಚಂದ್ರನಿಗೆ ಬಡಿದ ! 


ಕಾಮನೆಗಳಿಗೆ ಸಿಲುಕಿದರೆ ಕೊನೆಗೆ ಉರುಳಿಬೀಳುವ ಪರಿಸ್ಥಿತಿಯೇ ಎಂದು ಭಗವದ್ಗೀತೆಯೂ ಹೇಳುತ್ತದೆ. ಎರಡನೇ ಅಧ್ಯಾಯದ ೬೨ - ೬೩ ನೇ ಶ್ಲೋಕಗಳ  “ಧ್ಯಾಯತೋ ವಿಷಯಾನ್ ಪುಂಸಃ, ಸಂಗಸ್ತೇಷೂಪಜಾಯತೇ” ಎಂಬ ಸಾಲಿನಿಂದ ಹಿಡಿದು  “ಬುದ್ಧಿನಾಶಾತ್ ವಿನಶ್ಯತಿ” ವರೆಗಿನ ಸಾಲುಗಳ ಅರ್ಥ ಅದೇ. ಹಾಗೆಂದರೆ ಎಲ್ಲ ಕಾಮನೆಗಳನ್ನು ಪೂರ್ತಿ ಕಟ್ಟಿ ಹೂತಿಡಬೇಕೆ ಎಂಬ ಪ್ರಶ್ನೆ ಬಂತು. ಕಟ್ಟಿಡಬೇಕಿಲ್ಲ ಅಂಕೆಯಲ್ಲಿಡಬೇಕು ಎಂದು ಕೃಷ್ಣ ಹೇಳಿದ. ಇಂದ್ರಿಯಗಳು ನಮ್ಮನ್ನು ಆಡಿಸಬಾರದು. ನಮಗೆ ಬೇಕಾದಂತೆ ಅವು ಆಡಬೇಕು!


ತಾನು ಉರುಳಿಬಿದ್ದು ಹೊಟ್ಟೆ ಒಡೆದುಕೊಂಡ ಕಥೆಯ ಮೂಲಕ  -  ಹೊಟ್ಟೆ ತುಂಬುವಷ್ಟು ಊಟಮಾಡಿ, ಹೊಟ್ಟೆ ಬಿರಿಯ ಉಣ್ಣಬೇಡಿ. ಕಾಮನೆಗಳಿರಲಿ, ನಿಮ್ಮ ಹದ್ದುಬಸ್ತಿನಲ್ಲಿರಲಿ ಎಂದು ಗಣಪತಿ ನಮಗೆ ತಿಳಿಯಹೇಳುತ್ತಿದ್ದಾನೆ ! 


ಇಲ್ಲಿಯವರೆಗೂ ನನ್ನ ಬರಹವನ್ನು ಓದಿಕೊಂಡು ಬಂದ ನಿಮಗೆ ಧನ್ಯವಾದಗಳು ಹಾಗೂ  ನಾಳೆಯ ಗಣೇಶನ ಹಬ್ಬದ ಶುಭಾಶಯಗಳು. ಗಜಮುಖಗೆ, ಗಣಪತಿಗೆ, ನನ್ನ ವಂದನೆಗಳು.  


  


ಶುಕ್ರವಾರ, ಆಗಸ್ಟ್ 4, 2023

ರಿಕ್ಷಾಚಾಲಕ ಮತ್ತು ರಾಜರತ್ನಂ.






ಮೊನ್ನೆ ಸಂಜೆ ಜಿಟಿಜಿಟಿ ಮಳೆಯಿದ್ದರೂ ಮನೆಯಲ್ಲಿರಲು ಕಾಲುನಿಲ್ಲದೆ ನನ್ನ

ಹಳೆಯ ಸ್ನೇಹಿತನೊಬ್ಬನನ್ನು ನೋಡಲೆಂದು ಹೋದೆ. ಹಿಂದಿನ ಹರಟೆ,

ಇಂದಿನ ಮಾತು, ಮುಂದಿನ ಕಥೆ, ಮುಂತಾದ ಪ್ರಕಾರಗಳನ್ನು ಒಳಗೊಂಡ

ನಮ್ಮ ಕಾಲಕ್ಷೇಪ ಕೊನೆಗೊಳ್ಳುವ ಹೊತ್ತಿಗೆ ವೇಳೆ ಎಂಟರ ಸಮೀಪವಾಯಿತು.

ನಮ್ಮ ಮಾತಿನಂತೆಯೇ ಮಳೆಯೂ ಎಡೆಬಿಡದೆ ಸುರಿಯುತ್ತಲೇ ಇತ್ತು. ನನ್ನ

ಮನೆಯಾಕೆಯಿಂದ “ಇನ್ನೂ ಎಷ್ಟು ಹೊತ್ತು?” ಎಂಬ ಕರೆ ಬರುವ ಮುಂಚೆ,

ತಣ್ಣಗಾಗಿದ್ದ ಕೊನೆಯ ಗುಟುಕು ಕಾಫಿ ಮುಗಿಸಿ, ಮಾತು ಕೊನೆಗೊಳಿಸಿ,

ಮಿತ್ರನಿಗೆ ವಿದಾಯ ಹೇಳಿ, ಛತ್ರಿಬಿಡಿಸಿ ಹೊರಬಿದ್ದೆ. 


ಹೊರಗೆ ಮಳೆ, ಕತ್ತಲು. ನನಗೆ ಮಂಡಿನೋವು ಮತ್ತು ಮಂದಕಣ್ಣು. ಕಾಲಿಟ್ಟರೆ

ಗಡ ಗಡ ಸದ್ದುಮಾಡಿ ಅಲುಗಾಡುತ್ತ, ಕೆಳಗಿನ ಚರಂಡಿಯೊಳಕ್ಕೆ ಕುಸಿದು

ಹೋಗುವುದೇನೋ ಎಂಬ ಹೆದರಿಕೆ ಹುಟ್ಟಿಸುವ, ಚಪ್ಪಡಿಕಲ್ಲುಗಳ ಫುಟ್ಪಾತು.

ಅದರ ಮೇಲೆ ಅಲ್ಲಲ್ಲಿ ಅಡ್ಡಬರುವ ಮರ, ಲೈಟ್ ಕಂಬ, ಅಕ್ಕಪಕ್ಕದ ಅಂಗಡಿಗಳ

ಸಾಮಾನು ಮತ್ತು ಆಚೀಚೆ ಮನೆಯವರ ರಿಪೇರಿ ತಾಜ್ಯ. ರಸ್ತೆಗಿಳಿದರೆ ಅಲ್ಲಿ ಗುಂಡಿ,

ಕೊಚ್ಚೆ, ಮೈಮೇಲೆಯೇ ಹಾಯುವ ಸ್ಕೂಟರುಗಳು, ರಿಕ್ಷಾಗಳು. ಹಾಗೂ ಹೀಗೂ

ಫುಟ್ಪಾತ್ ಮೇಲಿಂದ ಕೆಳಗೆ, ಕೆಳಗಿಂದ ಮೇಲೆ ಛತ್ರಿ ಹಿಡಿದು ಸರ್ಕಸ್ ಮಾಡುತ್ತಾ

ನಾಲ್ಕು ಹೆಜ್ಜೆ ನಡೆಯುವಷ್ಟರಲ್ಲಿ ಸಾಕಾಯಿತು. ನನ್ನ ಮನೆ ಅಲ್ಲಿಂದ ಹೆಚ್ಚಿನ

ದೂರವೇನೂ ಇರದಿದ್ದರೂ, ಹೀಗೆ ರಿಕ್ಷಾಗಳಿಂದ ತಪ್ಪಿಸಿಕೊಂಡು ಎಗರಾಡುತ್ತ

ನಡೆಯುವುದಕ್ಕಿಂತ ಅವುಗಳಲ್ಲೇ ಒಂದನ್ನು ಹಿಡಿದು ಅದರೊಳಗೇ ಕೂತರೆ

ಕ್ಷೇಮವಿನಿಸಿ ಅತ್ತಿತ್ತ ನೋಡಿದೆ. 


ಸಮೀಪ ನಿಂತಿದ್ದ ಒಂದಿಬ್ಬರು ಆಟೋ ಚಾಲಕರು ನನ್ನ ಬಾಯಿಯ ಮಾತು

ಅವರ ಕಿವಿಗೆ ತಾಕುವ ಮುನ್ನವೇ ತಲೆಯಲ್ಲಾಡಿಸಿ ಮತ್ತೆ ತಮ್ಮ ಕೈಲಿದ್ದ

ಮೊಬೈಲಿನಲ್ಲಿ ಮಗ್ನರಾದರು. ಕೊಂಚದೂರದಲ್ಲಿ ಗಾಡಿ ನಿಲ್ಲಿಸಿಕೊಂಡು

ಅರ್ಧಕಣ್ಮುಚ್ಚಿ ತೂಕಡಿಸುತ್ತಿದ್ದ, ನನಗಿಂತ ವಯಸ್ಸಾದವನಂತೆ ಕಾಣುತ್ತಿದ್ದ ಒಬ್ಬ

ಚಾಲಕ “ಸ್ವಾಮೀ ಬರ್ತೀರಾ” ಎಂಬ ನನ್ನ ಮಾತುಕೇಳಿ ಕಣ್ಣುತೆರೆದು “ಎಲ್ಲಿಗೆ” ಎಂದ. 


“ಪದ್ಮನಾಭನಗರ”

“ಅಲ್ಲಿ ಎಲ್ಲಿ ?”  

“ಕಿಡ್ನಿ ಆಸ್ಪತ್ರೆ ಗೊತ್ತಾ?”

“ಗೊತ್ತು. ಹೇಳಿ.”

“ಅಲ್ಲಿಂದ ಕೊಂಚ ಮುಂದಕ್ಕೆ”   

“ಆಸ್ಪತ್ರೆ ಮುಂದೆಬಿಟ್ಟರೆ ಸಾಕಾ?”  

 ಸಾಕೆಂದು ತಲೆಹಾಕಿದೆ. 

“ಮೇಲೆ ಏನಾದ್ರೂ ಕೊಡ್ತೀರಾ?”

ಮತ್ತೊಮ್ಮೆ ತಲೆಹಾಕಿ “ಇಪ್ಪತ್ತು” ಎಂದೆ 

“ಬನ್ನಿ” ಎಂದು ಗಾಡಿ ಸ್ಟಾರ್ಟ್ ಮಾಡಿ ಮೀಟರ್ ತಿರುಚಿದ. 


ಸೀಟಿನ ಎರಡೂ ಕೊನೆಗಳು ಮಳೆಹನಿ ಬಿದ್ದು ಒದ್ದೆಯಾಗಿದ್ದರಿಂದ ಅದನ್ನು ಬಿಟ್ಟು,

ಮಧ್ಯದಲ್ಲಿ ಮುದುರಿ ಕೂತೆ. ಅವನ ರಿಕ್ಷಾಗೆ ಹೆಡ್ ಲೈಟಿಲ್ಲ, ಗಾಜು ಒರಸುವ ವೈಪರ್

ಇಲ್ಲ. ರಸ್ತೆ ದೀಪ ಮತ್ತು ಇತರ ಗಾಡಿಗಳ ದೀಪದ ಬೆಳಕಿನಲ್ಲಿ ರಿಕ್ಷಾ ನಡೆಸುತ್ತಾ,

ರಸ್ತೆ ಗುಂಡಿಗಳನ್ನು ತಪ್ಪಿಸುತ್ತಾ, ಮತ್ಯಾವ ವಾಹನಕ್ಕೂ ಬಡಿಯದಂತೆ ನೋಡಿಕೊಂಡು

ಚಾಕಚಕ್ಯತೆಯಿಂದ ಅವುಗಳ ಮಧ್ಯೆ ನುಸುಳುತ್ತಾ ಹತ್ತುನಿಮಿಷದಲ್ಲಿ ಆಸ್ಪತ್ರೆ

ಮುಂದೆ ಗಾಡಿ ನಿಲ್ಲಿಸಿದ. ರಿಕ್ಷಾದಿಂದ ಇಳಿದು “ಎಷ್ಟಾಯಿತು ಸ್ವಾಮಿ” ಎಂದೆ. 

“ಕೊಡಿ ನೋಡಿಕೊಂಡು, ನೀವೇ ಏಳಿದೀರಲ್ಲಾ” ಎಂದ. ಮೀಟರಿನ ಮೇಲೆ ಇಪ್ಪತ್ತು

ಕೊಟ್ಟೆ. 


ದುಡ್ಡು ಜೇಬಿಗಿರಿಸಿ ಕೇಳಿದ “ಎಷ್ಟು ವಯಸ್ಸು ನಿಮಗೆ”  

“ಅರವತ್ತೇಳು, ಯಾಕೆ?”

“ಈ ಮಳೇಲಿ, ಕತ್ತಲಲ್ಲಿ, ಹೊರಗೆ ಹೊರಟರಲ್ಲಾ ಅದಕ್ಕೆ ಕೇಳಿದೆ” ಎಂದ 

“ಹೊರಡಲಿಲ್ಲ ಸ್ವಾಮೀ, ವಾಪಸು ಬಂದೆ” ಎಂದು ಹೇಳಿ “ನಿಮಗೆಷ್ಟು ವಯಸ್ಸು?”  

“ಎಷ್ಟಿರಬಹುದು, ಹೇಳಿ” ಮರುಪ್ರಶ್ನೆ ಬಂತು !

“ಎಪ್ಪತ್ತರ ಸುತ್ತ ಮುತ್ತ”

“ಮೇಲೈದು ಹಾಕಿ”

“ಎಪ್ಪತ್ತೈದು! ಪರವಾಗಿಲ್ಲ ಬಿಡಿ, ಈ ಮಳೇಲಿ, ಕತ್ತಲಲ್ಲಿ, ಲೈಟಿಲ್ಲದೆ, ವೈಪರಿಲ್ಲದೇ,

ಗಾಡಿ ಓಡಿಸ್ತೀರ, ಮತ್ತೆ ನನ್ನ ಕೇಳ್ತೀರಲ್ಲಾ !”

“ಹೊಟ್ಟೆ ಪಾಡು ಸ್ವಾಮೀ. ಮತ್ತೆ ಹಂಗೇ ಅಭ್ಯಾಸ ಆಗಿದೆ ಬಿಡಿ. ಕತ್ತಲು, ಮಳೆ

ಅಂತ ಕೂತ್ರೆ ಜೀವನ ನಡೀಬೇಕಲ್ಲ?”

“ಅದುಸರಿ ಬಿಡಿ. ಆದ್ರೆ ಗಾಡಿ ಚೆನ್ನಾಗಿ ನಡೆಸ್ತೀರಾ. ನನಗೆ ಕತ್ತಲೇಲಿ ಕಾಣೋದೇ ಇಲ್ಲ.”

“ಎಪ್ಪತ್ತೈದು ವರ್ಷ ಆದ್ರೂ ಕಣ್ಣು ಚೆನ್ನಾಗಿದೆ, ಕೈಕಾಲು ಘಟ್ಟಿ ಇದೆ. ಹೆಂಗೆ ಹೇಳಿ?” ಎಂದು

ಕೇಳಿ, ನನ್ನ ಉತ್ತರಕ್ಕೆ ಕಾಯದೆ 

“ರಾಗಿ ಅಂಬಲಿ ಸ್ವಾಮೀ, ರಾಗಿ ಅಂಬಲಿ” ಎಂದ. ಮತ್ತೆ ಮುಂದುವರೆಯುತ್ತಾ 

“ನಾ ಸಣ್ಣವನಿದ್ದಾಗ ಊಟಕ್ಕೆ ರಾಗಿ ಅಂಬಲಿ. ನಾವು ಜಮೀನಲ್ಲಿ ಕೆಲಸ ಮಾಡುತ್ತಿದ್ದರೆ,

ನಮ್ಮಮ್ಮ ಮಡಕೇಲಿ ಅಂಬಲಿ ತರ್ತಾ ಇದ್ಲು. ರಾತ್ರೀಗೆ ಕುಸಲಕ್ಕಿ ಅನ್ನ. ರಾತ್ರಿ ಉಳಿದ

ಅನ್ನಕ್ಕೆ ನೀರುಹಾಕಿಟ್ಟು ಬೆಳಗ್ಗೆ ಕೆಲಸಕ್ಕೆ ಹೊರಡೋ ಮುಂಚೆ, ಮಜ್ಜಿಗೆ ಬೆರೆಸಿ ತಿನ್ನೋದು.

ಹಿಂಗೇ ಬೆಳೆದೆ ಸ್ವಾಮೀ. ನಾವು ಬೆಳೆದಿದ್ ಅಕ್ಕಿ, ನಾವು ಬೆಳೆದ ರಾಗಿ. ಕಲಬೆರಕೆ

ಊಟ ಅಲ್ಲ. ಅದಕ್ಕೇ ಇವತ್ತೂ ಹೀಗಿದ್ದೀನಿ ನೋಡಿ” 

“ಆವಾಗಿನ ಊಟ ಏನೋ ಒಳ್ಳೆದಾಯ್ತು. ಈಗೇನು ತಿಂತಿದೀರಿ ಹೇಳಿ” 

“ಈಗ ? ನನ್ನ ಕರ್ಮ ತಿಂತಿದೀನಿ ಸ್ವಾಮೀ, ನನ್ನ ಕರ್ಮ. ಅದನ್ನ ಏನು ಕೇಳ್ತೀರಿ”

ಎಂದು ರಿಕ್ಷಾ ಇಂಜಿನ್ ಆಫ್ ಮಾಡಿದ.   


ನಾನು ರಿಕ್ಷಾದಿಂದ ಇಳಿದು, ಅವನಿಗೆ ಹಣಕೊಟ್ಟ ನಂತರ ಪರ್ಸು ಕೈಯಲ್ಲಿಯೇ

ಹಿಡಿದು, ಛತ್ರಿ ಕಂಕುಳಲ್ಲಿಟ್ಟು ನಿಂತಿದ್ದೆ. ಮಳೆಹನಿಯೊಂದಿಗೆ ಪಕ್ಕದಲ್ಲಿದ್ದ ಮರದ

ಮೇಲಿಂದಲೂ ನೀರು ತೊಟ್ಟಿಕ್ಕುತ್ತಿತ್ತು. ಇವನೊಡನೆ ಮಾತಾಡಲು ಶುರುಮಾಡಿ

ತಪ್ಪುಮಾಡಿದೆನೇನೋ ಎನ್ನಿಸಿತು. ಆದರೆ ಅವ ತನ್ನ ಕರ್ಮದ ಕಥೆ ಹೇಳಲು

ತಯಾರಾಗಿದ್ದಂತೆ ಕಂಡಿತು. ಆದ್ದರಿಂದ, ಅವನಿಂದ ಬಿಡಿಸಿಕೊಳ್ಳುವ ಪ್ರಯತ್ನ

ಮಾಡದೆ ಛತ್ರಿ ಬಿಡಿಸಿಕೊಂಡು ನಿಂತೆ.   

 

“ಚೆಂಗಮ್ ಸ್ವಾಮೀ ನನ್ನೂರು. ತಮಿಳುನಾಡು. ತಿರುವಣ್ಣಾಮಲೈ ಹತ್ರ. ನಾವೆಲ್ಲಾ

ಬೇರೆಯವರ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದೆವು. ಅವರು ಜಮೀನು

ಕೊಟ್ಟುಬಿಟ್ರು, ನಮಗೆ ಊಟಕ್ಕಿಲ್ಲ ಆಯ್ತು. ಬೆಂಗಳೂರಿಗೆ ಬಂದೆ. ಹದಿನೇಳು

ವರ್ಷ ನನಗೆ. ಸಿಮೆಂಟ್ ಗೋದಾಮಿನಲ್ಲಿ ಸಿಮೆಂಟ್ ಚೀಲ ಅನ್ ಲೋಡಿಂಗ್ ಕೆಲಸ.

ಇನ್ನೂರು ಚೀಲ ಎತ್ತಿ ಹಾಕಿದ್ರೆ ಮೂರು ರೂಪಾಯಿ ಕೂಲಿ. ಅಲ್ಲೇ ಗೋಡೌನಿನಲ್ಲೇ

ಮಲಗೋದು. ಹಂಗೆ ಮೂರುವರ್ಷ ಕೆಲಸ ಮಾಡಿ ಆಮೇಲೆ ಗಾರೆಕೆಲಸದವರಿಗೆ

ಹೆಲ್ಪರ್ ಆಗಿ ಸೇರಿಕೊಂಡೆ. ದಿನಕ್ಕೆ ಆರು ರೂಪಾಯಿ ಕೂಲಿ. ಐದು ವರುಷ

ಕೆಲಸಮಾಡಿ ಆದಮೇಲೆ ರಿಕ್ಷಾ ಓಡಿಸೋದು ಕಲಿತು ರಿಕ್ಷಾ ಬಾಡಿಗೆಗೆ ತಗೊಂಡು

ಓಡಿಸಕ್ಕೆ ಶುರುಮಾಡಿದೆ. ಮೂರು ವರುಷ ಬೇರೆಯವರ ಗಾಡಿ ಓಡಿಸಿ ಆದಮೇಲೆ

ಸಾಲಮಾಡಿ ಸ್ವಂತ ಗಾಡಿ. ನಲವತ್ತು ವರುಷದ ಮೇಲಾಯಿತು ಸ್ವಾಮೀ ರಿಕ್ಷಾ

ಶುರುಮಾಡಿ. ಇಟ್ಟಮಡುವಿನಲ್ಲಿ ಚಿಕ್ಕ ಸೈಟು ತೊಗೊಂಡು ಗುಡಿಸಿಲು ಹಾಕಿಕೊಂಡಿದ್ದೆ.

ಆಮೇಲೆ ಸುತ್ತ ಶೀಟು ಇಟ್ಟು ಶೆಡ್ ಕಟ್ಟಿ, ಈಗ ಗೋಡೆ ಕಟ್ಟಿ ತಾರಸಿ ಹಾಕಿದೀನಿ.

ಮನೇಲಿ ಹೆಂಡತಿ ಮಗ ಇದಾರೆ.” 


“ಬಿಡಿ ಹಾಗಾದ್ರೆ. ಈಗ ಚೆನ್ನಾಗಿದೀರಲ್ಲ ಸಂತೋಷ.” 


“ಏನು ಚೆನ್ನ ಸ್ವಾಮೀ, ಪೂರ್ತಿ ಕೇಳಿ ಆಮೇಲೆ ಹೇಳಿ.”


ನನಗೆ ತಡವಾಗುತ್ತಿತ್ತು. ಮೈ ಅರ್ಧ ತೋಯ್ದು ಚಳಿಯಾಗುತ್ತಿತ್ತು. ಪಕ್ಕದಲ್ಲಿದ್ದ

ಹಣ್ಣಿನ ಗಾಡಿಗೆ ನಾವು ಅಡ್ಡವಾಗಿ ನಿಂತಿದ್ದರಿಂದ ಅವನು ನಮ್ಮನ್ನು ಕೆಕ್ಕರಗಣ್ಣಿನಿಂದ

ನೋಡುತ್ತಿದ್ದ. ಆದರೆ ರಿಕ್ಷಾದವನ ಕಥೆ ಕೇಳದೆ ಹೋಗುವಂತಿಲ್ಲವಲ್ಲ. ಹಾಗೇ ನಿಂತೆ. 


“ನನ್ನ ಹೆಂಡತಿಗೆ ಯಾರೋ ಮಾಟ ಮಾಡಿ, ಅವಳು ನನ್ನನ್ನ ಬಿಟ್ಟು ಹೋಗಿ ಬಿಟ್ಲು.

ಮಗನಿಗೆ ಮೂವತ್ತೆರಡು ವರುಷ. ನನ್ನ ಹೆಂಡತಿ ಜತೆ ಇದಾನೆ. ಮದುವೆ ಇಲ್ಲ.

ಕೆಲಸ ಇಲ್ಲ. ದಿನಾ ಪೂರ್ತಿ ಟಿ ವಿ ನೋಡ್ತಾನೆ. ಹೊಟ್ಟೇಲಿ ಬೆಂಕಿ ಬೀಳತ್ತೆ ಸ್ವಾಮೀ

ನಂಗೆ. ಏನು ಮಾಡೋದು ? ಸಾಲ ಮಾಡಿ ಅವನಿಗೆ ಅಂತ ಇನ್ನೊಂದು ರಿಕ್ಷಾ

ಕೊಂಡು ಕೊಟ್ಟೆ. ಎರಡು ತಿಂಗಳು ಓಡಿಸಿದ. ಆಮೇಲೆ ರಿಕ್ಷಾ ಮಾರಿ ಅಮ್ಮ ಮಗ

ಹಣ ತಿಂದು ಬಿಟ್ರು. ನಾನು ಸಾಲ ತೀರಿಸ್ತಾ ಇದ್ದೀನಿ. ನಾನು ಕಟ್ಟಿದ ಮನೇಲಿ

ಅವರಿದ್ದಾರೆ. ನಾನು ಬೇರೆ ರೂಮು ಬಾಡಿಗೆ ಹಿಡಿದು ಇದ್ದೀನಿ. ಈಗ್ಲೂ ತಿಂಗಳಿಗೆ

ಐದು ಸಾವಿರ ಅವರಿಗೆ ಕೊಡ್ತೀನಿ ಸ್ವಾಮೀ. ಏನೇ ಆದ್ರೂ ಹೊಟ್ಟೇಲಿ ಹುಟ್ಟಿದ ಮಗ,

ಕಟ್ಟಿಕೊಂಡ ಹೆಂಡತಿ, ಹೆಂಗೆ ಬಿಟ್ಟು ಬಿಡೋದು ? ಪ್ರತಿ ತಿಂಗಳೂ ಎರಡನೇ

ತಾರೀಖು ಬಾಗಿಲ ಮುಂದೆ ಕಾಸಿಟ್ಟು ಬರ್ತೀನಿ. ಏನೋ ಯಾವತ್ತಾದ್ರೂ ಮತ್ತೆ

ನನ್ನ ಜತೆ ಬಂದು ಇರ್ತಾರೇನೋ ಅನ್ನೋ ಆಸೆ. ಕೆಟ್ಟ ಜನ್ಮ ಸ್ವಾಮೀ ಇದು.”  


ಇಷ್ಟುಹೇಳಿ ಅರೆಕ್ಷಣ ನಿಲ್ಲಿಸಿ ಏನೋ ಯೋಚಿಸಿ, ಉಸಿರೆಳೆದು ಕೊಂಡು

ಮುಂದುವರೆಸಿದ. “ಮೂರುಬಾರಿ ನಮ್ಮ ದೇವರಿಗೆ ಹರಕೆ ಹೊತ್ತು ಹೋಗಿ ಬಂದೆ.

ತಿರುಪತಿಗೆ  ಹೋಗಿ ಕಾಲಿಂದ ಬೆಟ್ಟ ಹತ್ತಿ ಬಂದೆ. ಏನೂ ಉಪಯೋಗ ಇಲ್ಲ

ಸ್ವಾಮೀ. ಈಗ ಮೂರುತಿಂಗಳ ಹಿಂದೆ ಒಂದಿನ ನನ್ನ ಹೆಂಡತಿ, ಮಗ ನನ್ನ ನೋಡೋಕೆ

ಅಂತ ಬಂದ್ರು. ವಾಪಸು ಬಂದಾರೇನೋ ಅಂತ ಅಂದು ಕೊಂಡೆ. ಆದ್ರೆ ಅವಳು ನನಗೆ

ಏನು ಹೇಳಿದ್ಲು ಹೇಳಿ” ಎಂದ 


“ಗೊತ್ತಾಗಲ್ಲ ಸ್ವಾಮೀ, ನೀವೇ ಹೇಳಿಬಿಡಿ” ಎಂದೆ 


“ನಿನಗೆ ಎಪ್ಪತ್ತೈದಾಯ್ತು. ನೀನಿರೋ ಗಂಟಾ ಮನೆಗೆ ತೊಂದರೆ ಇಲ್ಲ. ನೀ ಸತ್ತ

ಮೇಲೆ ನಾವೇನು ಮಾಡಬೇಕು ? ಮನೆ ನಮ್ಮ ಹೆಸರಿಗೆ ಮಾಡಿಕೊಡು, ಆಮೇಲೆ

ತೊಂದರೆ ಬೇಡ ಅಂದ್ಲು ಸ್ವಾಮೀ. ನೀವೇ ಹೇಳಿ. ಹೆಂಡತಿ ಗಂಡನಿಗೆ ಹೇಳೋ

ಮಾತಾ ಇದು?” ಅಂದ. 


ನನಗೇನೂ ಹೇಳಲು ತೋರದೆ ಸುಮ್ಮನೆ ಲೊಚಗುಟ್ಟಿದೆ. 


“ಬೆಳಗ್ಗೆ ಐದು ಘಂಟೆಗೆ ಏಳ್ತೀನಿ. ಕಸ ಗುಡಿಸಿ, ಗಾಡಿ ತೊಳೆದು, ಸ್ನಾನ ಮಾಡಿ

ದೇವರ ಪೂಜೆ ಮಾಡ್ತೀನಿ. ವಿಭೂತಿ, ಕುಂಕುಮ ಇಟ್ಟುಕೊಂಡು, ಅಲ್ಲೇ ಚಾ

ಅಂಗಡೀಲಿ ನಾಷ್ಟಾಮಾಡಿ ಕಾಫಿ ಕುಡಿದು ಗಾಡಿ ಶುರು ಮಾಡ್ತೀನಿ. ಯಾವಾಗ ಎಲ್ಲಿ

ಏನು ಸಿಕ್ಕಿದ್ರೆ ಅದೇ ತಿಂಡಿ, ಊಟ. ಈಗ ನೋಡಿ ಮನೇಗೆ ಹೋಗಿ ಅನ್ನ ಮಾಡಿಕೊಂಡು

ಊಟ ಮಾಡ್ಬೇಕು. ದೇವರು ಯಾವಾಗ ಕಣ್ಣು ಬಿಡ್ತಾನೋ” ಅಂದ. 


“ಇಷ್ಟಾದಮೇಲೂ ನಿಮಗೆ ದೇವರಮೇಲೆ ನಂಬಿಕೆ ಹೋಗಿಲ್ಲವಲ್ಲ, ಏನೋ

ಮುಂದಾದರೂ ಒಳ್ಳೆದಾಗಲಿ ಬಿಡಿ” ಎಂದೆ 


“ಇದಾನೋ ಇಲ್ಲವೋ, ನನಗೆ ಒಳ್ಳೇದು ಮಾಡ್ತಾನೋ ಇಲ್ಲವೋ, ಗೊತ್ತಿಲ್ಲ ಸ್ವಾಮೀ.

ಇದಾನೆ ಅಂತ ನಂಬಿಕೆ ಇಟ್ಕೊಂಡು ಇರೋದು ನಮ್ಕೆಲಸ. ಇದೀನಿ. ಕೈಕಾಲು

ಘಟ್ಟಿ ಇರೋವರೆಗೂ ಪರವಾಗಿಲ್ಲ. ಇರೋ ಅಷ್ಟುದಿನ ಹಿಂಗೇ ಇದ್ಬಿಡ್ತೀನಿ ಬಿಡಿ”

ಎಂದು ಹೇಳಿ ಗಾಡಿ ಸ್ಟಾರ್ಟ್ ಮಾಡಿದ. 


“ಒಳ್ಳೆದಾಗಲಿ, ಹೋಗಿಬನ್ನಿ” ಎಂದು ಹೇಳಿ ಮನೆ ಕಡೆ ತಿರುಗಿದೆ. 


ಶ್ರೀ ರಾಜರತ್ನಂ ಅವರ ‘ರತ್ನನ ಪದ’ಗಳ  ‘ದೇವ್ರು’  ನೆನಪಿಗೆ ಬಂತು. 


ಮುಚ್ಚು ನಿನ್ಬಾಯ್ ಏ ಬೇವರ್ಸಿ ಭಗವಂತನೆಸ್ರು ನಮ್ಗೆ ತಾರ್ಸಿ 

ಇಲ್ಲದ್ದೆಲ್ಲಾ ಉಟ್ಟಿಸ್ಕೊಂಡಿ ಯಾಕ್ ಸುಂಕೂಗ್ತಿ ಕಾಲಿ 

ನಮ್ಗೆ ದೇವ್ರು ಯೆಂಗವ್ನೆಂದ್ರೆ  ಮುತ್ತೈದೆಗೆ ತಾಲಿ ಮುತ್ತೈದೆಗೆ ತಾಲಿ .. ..... 


ದೇವ್ರಿಲ್ಲಾಂತ ಏಳ್ದ್ರೆ ನೀನು ದೇವ್ರವ್ನೇಂತ ಯೋಳ್ತೀನ್ನಾನು    

ನಂ ತಾಪತ್ರೇನ್ ಮುಳುಗಿಸ್ತೈತೆ ಭಗವಂತ್ನೆಸ್ರಿನ್ ಸಕ್ತಿ 

ಅದಕೆ ನಮ್ಗೆ ಭಗವಂತ್ನೆಸ್ರು ಅಂದ್ರಾಪಾಟಿ ಬಕ್ತಿ 


ದೇವ್ರ್ ಔನಂತೆ ದೇವ್ರ್ ಇಲ್ವಂತೆ 

ಯೊಳೋರು ಯೋಳ್ಳಿ ಅದಕೇನಂತೆ 

ದೇವ್ರ್ ಔನೆಂತ ನಂಕೊಳ್ಳೋದು ನಮ್ಗೆ ಜೀವ ಉಸ್ರು 

ಔನ್ನಲ್ ನಂಕೆ ಮಡಿಕೊಳ್ಳಾದು ನಮ್ಗೆ ನಮ್ದೆ ನಸ್ರು …… ……. 


ಪದವನ್ನು ಮನದಲ್ಲೇ ಗುನುಗುಟ್ಟುತ್ತ ಮನೆಗೆ ಬಂದೆ.  




 

ಶನಿವಾರ, ಜುಲೈ 22, 2023

ಡಿ ವಿ ಜಿ - ದೇವರು - ನನ್ನ ಪದ್ಯ

 

ತಮ್ಮ ‘ಮಂಕುತಿಮ್ಮನ ಕಗ್ಗ’ ದ ಮೊದಲಮಾತಿನಲ್ಲಿ ಶ್ರೀ ಡಿವಿಜಿಯವರು, ಆಸಕ್ತರು

ತಮ್ಮ ಪುಸ್ತಕವನ್ನು ಓದಬೇಕಾದ ರೀತಿಯನ್ನು ತಿಳಿಸಿದ್ದಾರೆ. ಮನಬಂದಾಗ

ಒಂದೊಂದು ಪದ್ಯವನ್ನು ಆರಿಸಿಕೊಂಡು ನಿಧಾನವಾಗಿ ಪೆಪ್ಪರಮಿಂಟಿನಂತೆ

ಚಪ್ಪರಿಸಬೇಕೆಂದು ಅವರ ಸಲಹೆ. ನನ್ನ ಮಟ್ಟಿಗೆ ಅವರ ‘ಜೀವನಧರ್ಮಯೋಗ’ವೂ

ಹಾಗೆಯೇ. ಅದನ್ನು ಒಮ್ಮೆಗೇ ಹಿಡಿದು ಕೂತು ಓದಿ ಮುಗಿಸಬೇಕಿಲ್ಲ. ಮನಬಂದಾಗ,

ಯಾವುದೋ ಒಂದು ಪುಟವನ್ನು ತೆರೆದು ಓದುತ್ತಿದ್ದರೆ ಸಾಕು. ಅದರಲ್ಲಿ ಮನತಟ್ಟುವಂಥ,

ಮೆಲುಕುಹಾಕುವಂಥ ಏನಾದರೂ ವಿಷಯವಿದ್ದೇ ಇರುತ್ತದೆ. ಆದುದರಿಂದ ನಾನು

ಅದನ್ನು ಆಗಾಗ ಅವಲೋಕಿಸುತ್ತಿರುತ್ತೇನೆ. ಮೊನ್ನೆ ತೆಗೆದ ಒಂದು ಪುಟದಲ್ಲಿ

ಡಿ ವಿ ಜಿ ಯವರು ತಮ್ಮನ್ನು ಭೇಟಿಯಾಗಲು ಬಂದಿದ್ದ ಜಪಾನೀ ಯುವಕನೊಬ್ಬನೊಡನೆ

ನಡೆಸಿದ ಸಂಭಾಷಣೆಯ ಬಗ್ಗೆ ಬರೆದಿದ್ದು ಕಂಡಿತು. 


ಸಂಸ್ಕೃತಿ, ತತ್ವ ಶಾಸ್ತ್ರಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದ ಆತ ಭಾರತೀಯ

ತತ್ವ ಶಾಸ್ತ್ರದ ಬಗ್ಗೆ ತಿಳಿದುಕೊಳ್ಳಲು ಡಿ ವಿ ಜಿ ಯವರನ್ನು ಭೇಟಿಯಾಗಿದ್ದನಂತೆ.

ಎರಡು ಮೂರುಘಂಟೆಗಳಕಾಲ ಸಂವಾದ ನಡೆಸಿ ಆತ ಹೊರಡಲು ಅನುವಾದಾಗ

ಡಿ ವಿ ಜಿ ಯವರು ಆತನಿಗೆ ‘ದೇವರು ನಿನಗೆ ಒಳ್ಳೆಯದು ಮಾಡಲಿ’ ಎಂದು

ಹರಸಿದರಂತೆ. ಆತ ‘ಹಾಗಾದರೆ ನಿಮಗೆ ದೇವರಲ್ಲಿ ನಂಬಿಕೆಯಿದೆಯೇ’ ಎಂದು

ಕೇಳಿದನಂತೆ. ಆ ಪ್ರಶ್ನೆಗೆ ಡಿ ವಿ ಜಿ ಯವರು ಉತ್ತರಿಸಿದ್ದು ಹೀಗಿದೆ. 


“ನಾನು ಈಗ ಎರಡು ಶಬ್ದಗಳ ಬಳಕೆ ಮಾಡಿದೆ. ಒಂದು ‘ದೇವರು’,

ಮತ್ತೊಂದು ‘ಒಳ್ಳೆಯದು’. ನಾವು ಏನೆಲ್ಲವನ್ನು ‘ಒಳ್ಳೆಯದು’ ಎಂದು ತಿಳಿಯುತ್ತೇವೋ

ಅದರ ಹಿಂದೆ ನಿಂತು, ಅದನ್ನು ‘ಒಳ್ಳೆಯ’ದಾಗಿಸಿದ ಶಕ್ತಿಯನ್ನು ನಾನು ದೇವರೆಂದು

ಭಾವಿಸುತ್ತೇನೆ. ನಾನು ನಿಮಗೆ ಒಂದು ಲೋಟ ಕಾಫಿಯನ್ನು ಕೊಟ್ಟೆ. ನೀವು ಅದನ್ನು

ಕುಡಿದು ಕಾಫಿ ಚೆನ್ನಾಗಿದೆ ಎಂದಿರಿ. ನಾ ಕೊಟ್ಟ ಕಾಫಿಯನ್ನು ‘ಚೆನ್ನಾಗಿ’ಸಿದ

ಶಕ್ತಿಯನ್ನು ನಾನು ದೇವರೆನ್ನುತ್ತೇನೆ.”  


‘ದೇವರು’ ಎಂಬ ಪರಿಕಲ್ಪನೆಯ ವಿವರಣೆ ಸುಲಭಸಾಧ್ಯವಲ್ಲ. ನಾವು ಕೆಲವರು

ಒಂದಲ್ಲಾ ಒಂದು ಕಾರಣದಿಂದ, ನಮ್ಮ ಸ್ವಂತ ಅರಿವಿಂದಲೋ - ಇಲ್ಲದೆಯೋ,

ದೇವರಿದ್ದಾನೆ ಎಂಬ ನಂಬಿಕೆಯನ್ನೋ, ಅಥವಾ ಇಲ್ಲವೆಂಬ ಮನಸ್ಥಿತಿಯನ್ನೋ

ಪಡೆದುಕೊಂಡು ಅದಕ್ಕೆ ತಕ್ಕಂತೆ ನಮ್ಮ ಬಾಳನ್ನು ರೂಪಿಸಿಕೊಂಡಿರುತ್ತೇವೆ. ಹೀಗೆ

ಯಾವುದೇ ಕಾರಣದಿಂದ ಧೃಡವಾಗಿ ಒಂದು ಮನಸ್ಥಿತಿಯನ್ನು ಗಳಿಸಿಕೊಂಡಿರುವವರು

ಅದೃಷ್ಟವಂತರೆಂದು ನನ್ನ ನಂಬಿಕೆ. ಡಿ ವಿ ಜಿ ಯವರ ಮಾತಿನಲ್ಲೇ ಹೇಳುವುದಾದರೆ 

“ನಂಬಿದನು ಪ್ರಹ್ಲಾದ ನಂಬದಿರ್ದನು ತಂದೆ - ಕಂಬದಿನೋ, ಬಿಂಬದಿನೋ

ಮೋಕ್ಷ ಅವರವರಿಂಗಾಯ್ತು”. 


ಅವೆರಡೂ ಇಲ್ಲದೆ “ನಂಬಿಯೂ ನಂಬದ ಇಬ್ಬಂದಿಯಾಗಿ ಸಿಂಬಳದ ನೊಣದಂತೆ”

ಒದ್ದಾಡುವವರು ನನ್ನಂಥವರು. ನಾವು ದೇವರ ಅಸ್ತಿತ್ವದ ಬಗ್ಗೆ ಒಂದು ನಿಲುವನ್ನು

ತಾಳಬೇಕಾದರೆ, ಅನೇಕ ಚಿಂತಕರ ಮೂಲಕ ನಮಗೆ ಲಭ್ಯವಿರುವ ವಿವರಣೆಗಳನ್ನು

ತಿಳಿದುಕೊಂಡು ಅದನ್ನು ಮನದಲ್ಲಿ ಮತ್ತೆ ಮತ್ತೆ ಮಂಥನ ಮಾಡಿ ನಮ್ಮದೇ ಒಂದು

ತೀರ್ಮಾನಕ್ಕೆ ಬರಬೇಕಾಗುತ್ತದೆ. ಅದು ಎಲ್ಲರಿಗೂ ಸಾಧ್ಯವಿಲ್ಲ, ಸಮಯವಿಲ್ಲ

ಅಥವಾ ಅದಕ್ಕೆ ಬೇಕಾದ ಮನಸ್ಥಿತಿಯಿಲ್ಲ. ಜತೆಗೆ ಆ ರೀತಿಯ ಚಿಂತನೆಯ

ಅವಶ್ಯಕತೆಯಿದೆಯೇ ಎಂಬುದಕ್ಕೂ ಖಚಿತವಾದ ಉತ್ತರವಿಲ್ಲ ! ಡಿವಿಜಿಯವರಂಥ

ಕೆಲವರು ಅದರ ಬಗ್ಗೆ ಚಿಂತನೆಮಾಡಿ ತಮ್ಮ ನಿಲುವನ್ನು ಸರಳವಾಗಿ ಬರೆದಿರಿಸುವ

ಪ್ರಯತ್ನ ಮಾಡಿದ್ದಾರೆ. ಆದರೆ ಅವರಿಗೂ ಕೊನೆಗೆ ದಕ್ಕಿದ್ದು “ಕಾವನೊರ್ವನಿರಲ್ಕೆ

ಜಗದ ಕಥೆಯೇಕಿಂತು?” ಎಂಬ ಪ್ರಶ್ನೆಯೇ !


ಹಾಗಾಗಿ, ಆ ತೊಂಚಾವಂಚಕ್ಕೆ ಬೀಳದೆ, ಒಂದು ಮೂರ್ತಿಯನ್ನು ದೇವರೆಂದು

ಭಾವಿಸಿ ಅದಕ್ಕೆ ಕೈಮುಗಿದು ಪೂಜೆ ಸಲ್ಲಿಸುವುದು ಸುಲಭವಾದ ಕೆಲಸ.

ಅದರಿಂದಲೇ ನಮ್ಮ ಸುತ್ತ ಮುತ್ತ ಇಷ್ಟೊಂದು ದೇವಸ್ಥಾನಗಳು, ಪೂಜೆಗಳು,

ಹಬ್ಬ ಹರಿದಿನಗಳು. 


ಗಹನವಾದ ಈ ವಿಷಯ ಒಂದು ಬದಿಗಿರಲಿ. ನಾನೇನೋ ಹೇಳಲು ಹೊರಟು

ಈ ಚಕ್ರವ್ಯೂಹದಲ್ಲಿ ಕಾಲಿಟ್ಟುಬಿಟ್ಟೆ ! ನಾನು ಈ ಬರಹವನ್ನು ಪ್ರಾರಂಭಿಸಿದ

ಉದ್ದೇಶ್ಯ ಏನೆಂದರೆ, ಈ ಕೆಳಗೆ ಕಾಣಿಸಿರುವ ನನ್ನ ಪದ್ಯ, ನಾನು ಮೇಲೆ ತಿಳಿಸಿರುವ,

ಡಿವಿಜಿ ಮತ್ತು ಜಪಾನೀ ಯುವಕನ ಮಧ್ಯೆ ನಡೆದ ಸಂಭಾಷಣೆಯಿಂದ

ಪ್ರಚೋದಿತವಾದದ್ದು ಎಂಬ ವಿಷಯವನ್ನು ತಿಳಿಸುವುದಷ್ಟೇ ! 



ಎಲ್ಲಿ ಕಾಣಲೊ ಹರಿಯೇ 

ನನ್ನ ಅರಿವಿಗೆ ಬಾರದ 

ನಿನ್ನ ಇರವನು 


ಬೆಳಗಿನಲಿ ಹೊಳೆಹೊಳೆವ    

ಎಳೆಬಿಸಲ ಕಿರಣದಲಿ 


ಪರಿಪರಿಯ ಪುಷ್ಪಗಳ    

ಪರಿಮಳದ ಘಮಲಿನಲಿ 


ಹಕ್ಕಿ ಇಂಚರದ 

ಇಂಪಾದ ಗಾನದಲಿ 


ಮುಂಜಾನೆ ಮುದವೀವ  

ತಂಗಾಳಿ ತಂಪಿನಲಿ  


ಕಂಗಳನು ತಂಗೊಳಿಪ

ನಳನಳಿಪ ಹಸುರಿನಲಿ 


ಜೀವದಲಿ ಜಡಗಳಲಿ

ತೃಣರೇಣು ಕಣಗಳಲಿ 


ಕಂಡಲ್ಲಿ, ಕಾಣದಲಿ

ಕಾಣ್ವ ಮನವಿದ್ದಲ್ಲಿ

ಬಗೆಬಗೆಯವೇಷದಲಿ 

ಬ್ರಹ್ಮಾಂಡ ರೂಪದಲಿ ! 


ಶನಿವಾರ, ಜುಲೈ 1, 2023

An explanation to my previous post / poem

Ref : My recent poem on Haridasaru - here is an explanation. I wrote this

because my son heard the recitation and said that he could not make out

anything even after repeatedly listening to the poem.  


As I have said before, I was reading a book on Haridaasa culture and thought

that it would be nice if I could connect the well known dasaru to one of their

well known compositions and make a poem out of it. 


I began with Acharya Madhwa whom the book mentions first. It says the

Dwadasha Stortra written by Madhwacharya is probably the beginning

of ‘haridasa’ culture.(though the compositions were in sanskrit and not

Kannada - hence technically do not qualify as ‘daasa’ literature) The line

quoted in my poem is from the fourth chapter of ‘dwadasha stotra’ where

Madhwacharya declares the supremacy of Maha Vishnu. 

‘Bhujaverisi’ - means with raised hands.  ghoshisuvudu - is to declare 

‘Na hare paramo, na hare sadrusha’ - there is nothing /no one greater

than or like Sri Hari. 


The second is Sri Vadiraja teertha. He has written extensively in Sanskrit,

Kannada and TuLu ( I hope to find the tuLu compositions and get the meaning

from Aishwarya, my daughter in law). he was a master in Poetry, as well as

in writing scholarly articles. I did not quote any line from his compositions

but mentioned the fact that the lord appeared in the form of a horse in front

of Vadirajaru.  His ‘Dashavatara Stuti’ which I love, was inspired by that

experience. “Kudure Vadiraajarigaaytu Krishna Sadrusha” means the

Horse was Sri krishna to Vadirajaru. 


After this is Sripadarajaru and his composition “kangaLidyaatako kaveri

Rangana NoDada”. It is very beautifully sung by Sri Bhimasena Joshi,

Doyen of Hindustani Classical. One of my favourites. 


Sri Vyasateertharu has not written many poems, though he has written

extensively on Madhwa Philosophy. The line quoted is from one of his few

compositions and is new to me. I got it from the book I am reading.

But He is the first Yati or Swamiji who greatly encouraged Haridasa culture

and both Purandara dasaru and Kanakadasaru are his disciples. 

‘dingarugaLu’ means those who were strongly devoted to a deity/ god. 

‘Deekshe’ is - initiating someone into the group/ culture


Then comes Purandara dasaru who is said to have composed Thousands

(many are not available now) of devaranamas and his “kaliyugadali

harinaamava nenedare kulakoTigaLu uddharisuvavo” is one of the famous

compositions. (pari pari - the word used in my poem, means - in many

many ways, ‘PaDi’ means HaaDi, -  ‘by singing’. ‘Puneeta’ is spiritually

pure, sinless.


Next is kanakadasaru and the first line in his “keshava nama” is “eesha

ninna charaNa bhajane aasheyinda maaduvenu” - I am sure my family

members recollect the song and are fed up of hearing it being recited

by me again and again. 


“Indu engage govinda, ninnaya paada aravindava toro”  (make your lotus

feet visible to me today, Govinda) is supposed to be the only devaranama

written by  Sri Raghavendra swamy. But he has written meanings, notes

and comments on almost all of Sri madhwa’s works. He is known to be a

very great scholar and an expert in playing the Veena. The Line “Kandarpana

Tandeya aradhisidaru rayaru” means - (kandarpa is manmatha. his tande,

father is Vishnu. Aradhisu is worship with great love and devotion)  Rayaru

worshipped Sri Hari with the song”. 


Jagannatha dasaru is another haridaasaru having a similar story like

Purandara dasaru. PD was a jeweller turned haridasa, jagannatha dasaru

was a very learned but arrogant scholar turned haridasa. ‘Harikathamrutasara’

was his magnum opus and I hope to read it in full one day.  It is a collection

of thousands of beautifully written verses, my mother’s favourite, but I will

need a dictionary for almost every single line. 


The last stanza says “ I would like to sing and dance like these great people

but I don’t know the way.(Dishe is direction or path) I have a body ( kaaya)

which can worship you but again have no clue (upaaya) how exactly to do it.

(Here I don't mean the worship we see as ‘Pooje’ in temples and what we

usually do at home - I mean the worship in real sense - with the mind

unwaveringly concentrating on the supreme being or paramaatma,

who has no body that is perceivable by us and whose qualities makeup

his body - “Vigraho yasya sarve guNa evahi” as Sri Madhwacharya

describes. (His body is his unfathomable qualities.) 


His worship as described by Sri Raghavendraru is offering every deed done

by one, both good and bad in the course of the day, to him.  This matter

is a bit complicated to comprehend and I will try to make a better

explanation once I am clear in my mind. But What we presently do as

‘Pooje’ or worship, is what has been put in place by our elders and is

being followed over generations. It is not wrong but one is expected to

rise above that and that’s what I mean when I say I don’t know how

to worship you. 


The last two lines - ‘Bantaru’ are servants,  ‘Bantarinda kalita enTakshara’ -

means some eight or ten letters learnt from your servants.   Who are his

servants? - Every one starting from Brahma and going lower in the hierarchy.  

Brahma is considered the greatest teacher, Guru. Everyone lower in the

order from PraNadevaru to the teachers who taught me in first standard

are Vishnu’s ‘banTaru’ and ‘gurugaLu’ in their own right.  


‘EnTaksharagaLa ganTu’ - packet of eight letters. It does not exactly mean

‘eight letters’ but only indicates a very limited knowledge. ‘Balasi’ - using

that limited knowledge.   ‘tanTe’ - Mischief.   ‘SrikanthaSuta’ - son Of

Srikantha   ‘tunTu’ is mischief again.  So the last lines means “bear with

this son of Srikantha who is playing mischief using the limited knowledge

obtained from his teachers”. 


I hope this helps in getting a proper understanding of what is written.

Those who still have doubts and extra patience, may ask me for more !

Thanks for the patient reading.