ಸೋಮವಾರ, ಮಾರ್ಚ್ 9, 2009

ಬೀಚಿ- ತಿಮ್ಮನ ಸ್ಕೂಲು

ಚೋರಿ ಕೇಸಿನ ವಿಚಾರಣೆಯಾಗಿ ಮುದ್ದಾಯಿಗೆ ನಾಕು ವರುಷ ಕಠಿಣ ಶಿಕ್ಷೆ ಆಯಿತು. ಪೊಲೀಸರು ಕೈ ಕಾಲಿಗೆ ಸರಪಣಿ ಗಳನ್ನು ತಗುಲಿಸಿ ಅವನನ್ನು ಜೈಲಿಗೆ ಒಯ್ಯುತ್ತಿದ್ದರು. ಕೈದಿಯು ಅಳುವುದನ್ನು ಕರೆವುದನ್ನು ಮಾಡಿ ರಸ್ತೆಯಲ್ಲಿ ಹೊರಳಾಡಿದ. ಪೊಲೀಸರು ಅವನನ್ನು ದರ ದರ ಎಳೆದರು. ರಸ್ತೆಯಲ್ಲಿ ಜನರ ಗುಂಪು ಸೇರಿತು. ಎಲ್ಲಿಂದಲೋ ಬಂದ ತಿಮ್ಮ ನೇರವಾಗಿ ಪೊಲೀಸರ ಬಳಿ ಬಂದು ಪ್ರಶ್ನೆ ಮಾಡಿದ.
"ಎಲ್ಲಿಗೆ ಸ್ವಾಮೀ ಇವನನ್ನು ಒಯ್ಯೋದು?"
"ಜೇಲಿಗೆ"
"ಜೇಲಿಗೆನಾ ಈ ರಂಪು? ಸ್ಕೂಲಿಗೆ ಒಯ್ಯುತ್ತಾರೆನೋ ಎಂದು ನೆನಸಿದ್ದೆ."

ಭಾನುವಾರ, ಮಾರ್ಚ್ 8, 2009

ಬರೀ ಹರಟೆ

ನಾನು ಓದಿರುವ ಕನ್ನಡ ಬರಹಗಳು ಅನೇಕ. ಆದರೆ ಓದಿದ್ದನ್ನು ಮನದಟ್ಟು ಮಾಡಿಕೊಂಡು ಮನದಲ್ಲಿರಿಸಿಕೊಳ್ಳುವುದು, ಮತ್ತು ಬೇಕೆಂದಾಗ ಅದನ್ನು ಉದಾಹರಿಸುವುದು ನನಗೆ ಸುಲಭವಲ್ಲ. ಯಾವುದೋ ಕಾರಣಗಳಿಂದ ಮನಸ್ಸಿನಲ್ಲಿ ಉಳಿದಿರುವ ತಿಮ್ಮನ ಮಾತುಗಳು, ಕೈಲಾಸಂ ಅವರ ನಾಟಕದ ಸಾಲುಗಳು, ರತ್ನನ ಪದಗಳು, ಹಾಗೆಯೇ ಮತ್ತೆಲ್ಲವನ್ನೂ ಇಲ್ಲಿ ಬರೆದು ಇರಿಸಿಬಿಡುತ್ತೇನೆ. ಅದರಲ್ಲೂ ಸಹ ನೆನಪಿನಲ್ಲಿ ಇರುವುದು ಕೆಲವೇ. ಮನೆಯಲ್ಲಿ ಮಕ್ಕಳಮುಂದೆ ನೂರಾರು ಬಾರಿ ಅವನ್ನು ಹೇಳಿಯಾಗಿದೆ. ನಾನು ಬೀಚಿ ಎನ್ನುತ್ತಲೇ ಅವರು ನನ್ನ ಬಾಯಿ ಮುಚ್ಚಿಸಿ ಅವೆಲ್ಲವನ್ನೂ ತಾವೇ ಹೇಳಿಬಿಡುತ್ತಾರೆ. ಇಲ್ಲಿ ಯಾರೂ ನನ್ನನ್ನು ತಡೆಯುವಹಾಗಿಲ್ಲವಲ್ಲ! ಯಾರಿಗೆ ಏನು ಹಿಡಿಸುವುದೋ ತಿಳಿಯದು. ಹಿಮಾಲಯದ ಶಿಖರವನ್ನೋ ಕೀನ್ಯಾದ ಕಾಡನ್ನೋ, ಬಹುವಾಗಿ ಮೆಚ್ಚಿ, ನನ್ನ ಪತ್ನಿಯನ್ನು ಅಲ್ಲಿ ಕರೆದೊಯ್ದು ಇರಿಸಿದರೆ, "ಇಲ್ಲೇನಿದೆ ಮಣ್ಣು. ಒಂದು ಅಂಗಡಿಯಿಲ್ಲ, ಮುಂಗಟ್ಟು ಇಲ್ಲ" ಎಂದಾಳು! ಸಮಯವಾದಾಗ ಮುಂದಿನ ಮಾತು.

ಮಗದೊಮ್ಮೆ ಮೊದಲ ಬರಹ

ಹಿಂದಿನ ಬ್ಲಾಗಿನ ಹೆಸರು ಬದಲಾಯಿಸಲು ಆಗದಾದ ಕಾರಣ ಹೊಸ ಬ್ಲಾಗನ್ನೇ ಸುರುಮಾಡಿದೆ. ಮೊದಲು ಏನು ಬರೆಯಬೇಕೆಂದು ತಿಳಿಯದೆ ಹೇಗೆಬರುವುದೆಂದು ನೋಡಲು "ಕೊರವಂಜಿ"ಯ "ಕುಹಕಿಡಿಗಳಲ್ಲೊಂದನ್ನು ಬರೆದಿದ್ದೇನೆ.
"ರೇಲ್ವೆ ಸ್ಟೇಷನ್ನಿನ ಕ್ಯಾಂಟೀನಿನಲ್ಲಿ ಕೊಟ್ಟ ಚಪಾತಿಯಲ್ಲಿ ಚಪ್ಪಲಿ ಹೊಲಿಸಿ ಕೊಂಡ ಒಬ್ಬರು 'ಬಹಳ ಬಾಳಿಕೆ ಬರುತ್ತದೆ' ಎಂದದ್ದು ಸುಳ್ಳಂತೆ"