ಭಾನುವಾರ, ಜನವರಿ 22, 2023

ಪಕ್ಕದ ಮನೆಯ, ಬೆಕ್ಕಿನ ಮರಿಯ, ಚಿಕ್ಕ ಕಥೆ



ಅದೊಂದು ಬೆಕ್ಕಿನ ಮರಿ. ಎಲ್ಲಿಂದ ಬಂತೋ ತಿಳಿಯದು. ಬಿಳಿಯ ಮೈಮೇಲೆ ಕಪ್ಪು ಚಿತ್ತಾರ

ಅಥವಾ ಕರಿಯ ಮೈ ಮೇಲೆ ಬಿಳಿಯ ಚಿತ್ತಾರ ಎನ್ನಿ. ಎರಡೂ ಸರಿಯೇ. ಒಟ್ಟಿನಲ್ಲಿ

ಕಪ್ಪು - ಬಿಳುಪು. ಮುದ್ದಾಗಿತ್ತು. ಮರಿಯಲ್ಲವೇ ? ಚಿಕ್ಕಂದಿನಲ್ಲಿ ಎಲ್ಲವೂ ಮುದ್ದೇ !

ವಿಕಾರಗಳೆಲ್ಲಾ ಕಾಣಿಸಿಕೊಳ್ಳುವುದು ವಯಸ್ಸಾದಮೇಲೆಯೇ ! ಅದಕ್ಕೇ ಬೀಚಿಯವರು

ಬರೆದರು “ಎಂತೊಳ್ಳೆ ಮರಿಕತ್ತೆ, ಚೆನ್ನಿತ್ತು ಚೆಲುವಿತ್ತು, ತನ್ನಪ್ಪನಂತಾಗಿ ಹಾಳಾಯ್ತೋ ತಿಂಮ!”.

ಅದಿರಲಿ ನಾ ಹೇಳಹೊರಟದ್ದು ಬೆಕ್ಕಿನ ಮರಿಯ ಕಥೆ. 


ನಾನು ಅದನ್ನು ಮೊದಲು ಕಂಡಾಗ, ಕ್ಷಮಿಸಿ, ನಾನು ಅದನ್ನು ಮೊದಲು ಕಾಣಲಿಲ್ಲ,

ಅದರ ಧ್ವನಿಯನ್ನು ಕೇಳಿದೆ. ಮೇಲೆ ಬರೆದ ವಿವರವೆಲ್ಲಾ ಅದನ್ನು ಕಂಡ ನಂತರ ತಿಳಿದದ್ದು.

ಮೊದಲಬಾರಿಗೆ ನನಗೆ ಅದರ ಇರುವಿಕೆಯ ಅರಿವಾದಾಗ ಅದು ನಮ್ಮ ಪಕ್ಕದ ಮನೆಯ

ಹಿಂಭಾಗದ ಯಾವುದೋ ಸಂದಿಯಲ್ಲಿ ಅಡಗಿ ಕುಳಿತಿತ್ತು. ನಮ್ಮ ಪಕ್ಕದ ಮನೆಯಾಕೆ

ಅದನ್ನು ಅಲ್ಲಿಂದ ಹೊರ ಹೊರಡಿಸುವ ಪ್ರಯತ್ನದಲ್ಲಿದ್ದರು. ಸುಮಾರು ಅರ್ಧಘಂಟೆ ಕಾಲ

ಅವರು ಅದರೊಡನೆ ಕನ್ನಡದಲ್ಲಿ, ಇಂಗ್ಲಿಷಿನಲ್ಲಿ, ತಮಿಳಿನಲ್ಲಿ, ಅಂದರೆ - ಬೆಕ್ಕಿನ ಭಾಷೆಬಿಟ್ಟು

ತಮಗೆ ತಿಳಿದ ಮಿಕ್ಕ ಎಲ್ಲ ಭಾಷೆಗಳಲ್ಲೂ, ಸಂಭಾಷಣೆ ನಡೆಸಿದರೂ ಅದು ಹೊರಬಂದಂತೆ

ಕಾಣಲಿಲ್ಲ. ಆಮೇಲೆ ಏನಾಯಿತೋ ನನಗೆ ತಿಳಿಯದು. 


ಅದಾದ ಕೆಲವುದಿನದ ನಂತರ ನಮ್ಮ ಮನೆಗೂ ಪಕ್ಕದ ಮನೆಗೂ ಮಧ್ಯೆ ಇರುವ ತಂತಿ

ಜಾಲರಿಯ ಆಚೆಬದಿಯಲ್ಲಿ ನಾನು ಅದನ್ನು ಕಂಡೆ. ನಮ್ಮ ಎರಡೂ ಮನೆಗಳ ಮಧ್ಯದಲ್ಲಿರುವ

ಕಂಪೌಂಡು ಗೋಡೆಯ ಅವರ ಕಡೆಯ ಅರ್ಧಭಾಗದಮೇಲೆ ಅದು ಕುಳಿತಿತ್ತು. ನಾನು ಸೌಜನ್ಯಕ್ಕೆಂದು

ಅದರ ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸಿ ನನ್ನ ಹೆಸರು ಹೇಳಿದೆ. ಪುಸ್ ಪುಸ್ ಎಂದೆ.

ಮ್ಯಾವ್ ಮ್ಯಾವ್ ಎಂದೆ. ಬೆಂಗಳೂರಿಗೆ ಬಂದಿದ್ದ ಕೈಲಾಸಂ ಅವರ ಬೋರೇಗೌಡನಂತೆ. ಕೇಳಿದ್ದೀರಾ ?

ನಮ್ಮ ತಿಪ್ಪಾರಳ್ಳಿ ?  “ ತಮಾಸೆ ನೋಡಕ್ ಬೋರಾ ವೊಂಟ ಲಾಲಬಾಗ್ ತೋಟಕ್ಕೆ,

ಉಲಿನ್ನೋಡಿ ಬರೆ ಆಕಿದ್ ದೊಡ್ಬೆಕ್ಕನ್ಕೊಂಡ, ಬೋನ್ನೊಳಗ್ ನುಗ್ಗಿ ಉಲಿನ್ ಸವರ್ತಾ

ಪುಸ್ ಪುಸ್ ಅಂತಿದ್ದ, ಬೋರಾ ಪುಸ್ ಪುಸ್ ಅಂತಿದ್ದ  ..... ..... “.  ಹಾಗೆ. ಆದರೆ

ಇದು ನಿಜವಾಗಿಯೂ ಬೆಕ್ಕಿನ ಮರಿಯೇ.  ಹುಲಿಯಲ್ಲ. ಮತ್ತೆ, ನಾನು ಬೋನಿನ ಹೊರಗಿದ್ದೆ

ಅಷ್ಟೇ. ಸರಿ, ಬೆಕ್ಕಿನ ಮರಿ ನನಗೆ ಉತ್ತರಿಸಲಿಲ್ಲ. ಕೈ - ಕಾಲು ಕುಲುಕಲು ಸಾಧ್ಯವಿರಲಿಲ್ಲ.

ತಂತಿ ಜಾಲರಿ ಅಡ್ಡವಿತ್ತು. ನಾನು ಒಂದರ್ಧ ನಿಮಿಷ ಅದನ್ನು ನೋಡುತ್ತಾ ನಿಂತೆ. ಅದು

ನನ್ನನ್ನು ನೋಡುತ್ತಿತ್ತು. ನಂತರ ನಾನು ಅದಕ್ಕೆ ವಿದಾಯ ಹೇಳಿ ಬಂದು ಬಿಟ್ಟೆ. 


ಒಂದೆರಡು ದಿನದ ನಂತರ ಪಕ್ಕದ ಮನೆಯಾಕೆ ಸಿಕ್ಕಿದರು. ಬೆಕ್ಕಿನ ಮರಿಯ ಬಗ್ಗೆ ತಿಳಿಸಿದರು.

ಸುಮಾರು ಹತ್ತುನಿಮಿಷ ಅದರ ಪ್ರವರ ವಿವರಗಳು ಹಾಗೂ ಅದು ಅವರ ಸುಪರ್ದಿಗೆ

ಬಂದ ಸಂಧರ್ಭವನ್ನು ವಿವರಿಸಿದರು. ವಿವರಗಳು ನಿಮಗೆ ಬೇಸರ ತರಿಸಬಹುದೇನೋ.

ಅದರ ಸಾರಾಂಶ ಹೀಗೆ. 


ಆ ಮರಿ ಹೋದವಾರ ನಾವು ಊರಿಗೆ ಹೋಗಿದ್ದ ಸಮಯದಲ್ಲಿ ಯಾವಾಗಲೋ ಬಂದು ನಮ್ಮ

ಮನೆಯ ನೀರಿನ ಮೀಟರಿನ ಡಬ್ಬಿಯಲ್ಲಿ ಹುದುಗಿತ್ತಂತೆ. ಒಂದು ರಾತ್ರಿಯಿಡೀ ಅರಚುತ್ತಿತ್ತಂತೆ.

ಮರುದಿನ ಮುಂಜಾನೆ ಆಕೆ ಬಂದು ಅದನ್ನು ಅಲ್ಲಿಂದ ಎತ್ತಿ ಹೊರಗೆ ಬಿಟ್ಟು ಅದರ ತಾಯಿ

ಬಂದು ಮರಿಯನ್ನು ಒಯ್ಯುತ್ತದೇನೋ ಎಂದು ನೋಡಿದರಂತೆ. ತಾಯಿ ಬರಲಿಲ್ಲ. ಆ ಮರಿ

ನಮ್ಮ ಮನೆಗಳ ಸುತ್ತಮುತ್ತವೇ ಓಡಾಡುತ್ತಿದ್ದು, ಪಕ್ಕದ ಮನೆಯಾಕೆ ಹಾಕಿದ ಹಾಲು

ಕುಡಿದುಕೊಂಡು ಇದ್ದಿತಂತೆ. ಕಾಲಾನುಕ್ರಮೇಣ ಆಕೆಗೆ ಅದರಮೇಲೆ ಮಮತೆ ಹುಟ್ಟಿ ಆಕೆ

ಅದನ್ನು ದತ್ತು ಪಡೆದರಂತೆ. ಹಾಗಾಗಿ ಅದು ಅವರ ಸ್ವತ್ತಾಯಿತು. 


ಇಷ್ಟೆಲ್ಲಾ ಆದದ್ದು ನಮಗೆ ತಿಳಿಯಲಿಲ್ಲ. ಏನೇ ಆಗಲಿ ಅದು ಮೊದಲು ಕಂಡಿದ್ದು ನಮ್ಮ

ಮೀಟರಿನ ಡಬ್ಬದಲ್ಲಾದ್ದರಿಂದ ಬೆಕ್ಕಿನ ಮರಿಯ ಮೇಲಿನ ಮೊದಲ ಹಕ್ಕು ನನ್ನದಿತ್ತು.

ಅವರು ಅದನ್ನು ದತ್ತು ಪಡೆಯುವ ಮೊದಲು ನನ್ನನ್ನು ಒಂದು ಮಾತು ಕೇಳಬಹುದಿತ್ತೇನೋ.

ಹೋಗಲಿ ಬಿಡಿ ಇಂಥ ಸಣ್ಣ ಸಣ್ಣ ವಿಷಯಗಳನ್ನು ಹಚ್ಚಿಕೊಂಡು ಕೂಡುವುದಲ್ಲ. ಅಷ್ಟಲ್ಲದೆ,

ನನಗೇನೂ ಬೆಕ್ಕಿನ ಮರಿ ಬೇಕಿರಲಿಲ್ಲ. 


ಈಗ ನನಗೆ ಪ್ರತಿದಿನ ಸಾಕುತಾಯಿ ಮತ್ತು ದತ್ತು ಬೆಕ್ಕಿನ ಮರಿಯ ಸಂಭಾಷಣೆ ಕೇಳುವ

ಸುಯೋಗ. ನನಗೆ ಅವರ ಮಾತನ್ನು ಕದ್ದು ಕೇಳುವ ಚಟವೇನೂ ಇಲ್ಲ. ಆದರೆ ಅದು

ಸಾಮಾನ್ಯವಾಗಿ ನಾನು ಮುಂಜಾನೆ ವಾಕಿಂಗ್ ಮುಗಿಸಿ ಬರುವ ಹೊತ್ತಿಗೆ ಶುರುವಾಗುತ್ತದೆ.

ಮತ್ತು, ಅಪ್ರಯತ್ನವಾಗಿ ನಮ್ಮ ವರಾಂಡದಲ್ಲಿ ಬಂದು ಕುಳಿತ ನನ್ನ ಕಿವಿಗೆ ಬೀಳುತ್ತದೆ.

ಬೆಂಗಳೂರಿನಲ್ಲಿ ಎರಡುಮನೆಗಳ ಮಧ್ಯೆ ಜಾಗ ಎಷ್ಟು?  ಆರಿಂಚು ಇದ್ದೀತು ! ನಮ್ಮ

ವರಾಂಡಕ್ಕೂ ಅವರ ಮನೆಗೂ ಮೂರಡಿ ದೂರವಷ್ಟೇ ! ಇಂದು ಮುಂಜಾನೆ ನನ್ನ ಕಿವಿಗೆ

ಬಿದ್ದ ಸಂಭಾಷಣೆ ಹೀಗಿತ್ತು. 


“ಮ್ಯಾವ್ ಮ್ಯಾವ್”

“ಓ ಎದ್ಬಿಟ್ಯಾ ಪುಟ್ಟ?” 

 “ಮ್ಯಾವ್ ಮ್ಯಾವ್”

“ಅದ್ಯಾಕೆ ಇಷ್ಟು ಬೇಗ ಎದ್ದೆ”

 “ಮ್ಯಾವ್ ಮ್ಯಾವ್”

“ನಿದ್ದೆ ಬರಲಿಲ್ವಾ ?”

“ಮ್ಯಾವ್ ಮ್ಯಾವ್”

“ಹಾಲು ಕೊಡಲಾ”

 “ಮ್ಯಾವ್ ಮ್ಯಾವ್”

“ಯಾಕೆ? ಹಸಿವಿಲ್ವಾ?”

“ಮ್ಯಾವ್ ಮ್ಯಾವ್”

“ಹಾಲು ಬೇಡ್ವಾ ?”

“ಮ್ಯಾವ್ ಮ್ಯಾವ್”

“ಅದೇನು ಸರಿಯಾಗಿ ಹೇಳು ಮರೀ”

“ಮ್ಯಾವ್ ಮ್ಯಾವ್”

“ಒಳಗ್ ಬರ್ತೀಯಾ ?”

“ಮ್ಯಾವ್ ಮ್ಯಾವ್”

“ಚಳಿ ಆಗತ್ತಾ ?”

“ಮ್ಯಾವ್ ಮ್ಯಾವ್”

“ತಾಳು ಕಿಟಕಿ ತೆಗೀತೀನಿ”

“ಮ್ಯಾವ್ ಮ್ಯಾವ್”

“ಬೇಡ್ವಾ”

“ಮ್ಯಾವ್ ಮ್ಯಾವ್”

“ಅದೇನದು ಹೇಳು ಕಂದಾ”

“ಮ್ಯಾವ್ ಮ್ಯಾವ್”

“ಹಾರ್ಲಿಕ್ಸ್ ಕೊಡ್ಲಾ”

“ಮ್ಯಾವ್ ಮ್ಯಾವ್”

“ಬೇಡ್ವಾ ? ಹಾಲೇ ತರ್ತೀನಿ ತಾಳು”


ಅವರು ಹಾಲು ತಂದರೋ, ಬಿಟ್ಟರೋ, ಮರಿ ಕುಡಿಯಿತೋ ಬಿಟ್ಟಿತೋ ನನಗೆ ತಿಳಿಯುವ

ಮುನ್ನ, ಮುಂಜಾನೆ ನಾನು ತರಬೇಕಾಗಿದ್ದ ಹಾಲನ್ನು ನಾನಿನ್ನೂ ತಂದಿಲ್ಲವೆಂದು ನನಗೆ

ನೆನಪಾಗಿ ನಾನು ಹೊರಗೆ ಹೊರಟುಬಿಟ್ಟೆ. ಮುಂಜಾನೆ ಏಳುವ ಹೊತ್ತಿಗೆ, ಬಿಸಿ ಕಾಫಿಗೆ

ಹೊಸ ಹಾಲಿಲ್ಲದಿದ್ದರೆ ನನ್ನಾಕೆ ತನಗೆ ಹೇಳಬೇಕೆನಿಸಿದ್ದನ್ನು ಸ್ಪಷ್ಟವಾಗಿ ನನ್ನ ಭಾಷೆಯಲ್ಲೇ,

ಪೂರ್ಣ ನನಗೆ ವಿಶದವಾಗುವಂತೆ ಹೇಳಿ ಬಿಡುತ್ತಾಳೆ. ಆದ್ದರಿಂದ ನನ್ನ ಎಚ್ಚರಿಕೆಯಲ್ಲಿ

ನಾನಿರಬೇಕಲ್ಲವೇ ? ಹಾಗಾಗಿ ನಾನು ಜಾಗ ಖಾಲಿ ಮಾಡಿದೆ. 


ಪ್ರತಿದಿನವೂ ಮೇಲೆ ತಿಳಿಸಿದ ಧಾಟಿಯಲ್ಲೇ ಅಷ್ಟಿಷ್ಟು ಸಂಭಾಷಣೆ ನನ್ನ ಕಿವಿಗೆ ಬೀಳುತ್ತಲೇ

ಇರುತ್ತದೆ. ಆ ಬೆಕ್ಕಿನ ಮರಿ ಏನು ಹೇಳಿತೆಂದು ತಿಳಿಯುವ ಕುತೂಹಲ ನನಗೆ. ಆದರೆ

ಬೆಕ್ಕಿನ ಭಾಷೆ ನನಗಿನ್ನೂ ಗೊತ್ತಾಗಿಲ್ಲ. ನಮ್ಮ ಪಕ್ಕದ ಮನೆಯಾಕೆಗೆ ತಿಳಿಯುತ್ತದೇನೋ ?

ಅವರು ಸಿಕ್ಕರೆ ಕೇಳಿನೋಡಬೇಕು. ಒಂದು ವೇಳೆ ನನಗೆ ತಿಳಿದರೆ ನಿಮಗೂ ತಿಳಿಸುತ್ತೇನೆ. 

ಶುಕ್ರವಾರ, ಜನವರಿ 6, 2023

ಗೊರೂರು ಮತ್ತು ಗೊರೂರು ರಾಮಸ್ವಾಮಯ್ಯಂಗಾರ್ಯರು


 

 

 

ಯಾವುದೋ ಕಾರಣದಿಂದ ಸಕಲೇಶಪುರಕ್ಕೆ ಹೋಗಿದ್ದೆ. ಅಲ್ಲಿಂದ ಮುಂದೆ ನಾನು ಮೈಸೂರಿಗೆ ಹೋಗಬೇಕಿತ್ತು.

ಸಕಲೇಶಪುರದಿಂದ ಹಾಸನಕ್ಕೆ ಬಂದು ಅಲ್ಲಿಂದ ಮೈಸೂರಿಗೆ ನೇರವಾಗಿ ಪ್ರಯಾಣಿಸಬಹುದಿತ್ತು.

ಆದರೆ ಹೆದ್ದಾರಿಯನ್ನು ಬಿಟ್ಟು ಆಚೆ ಈಚೆಯ ಒಳ ಪ್ರದೇಶಗಳನ್ನು ನೋಡುವ ಇಚ್ಛೆ ನನಗೆ ಇದ್ದಿದ್ದರಿಂದ

ಬೇರೆ ದಾರಿಗಳಿದ್ದರೆ ತಿಳಿಸಬೇಕೆಂದು ನಾನು ಗೂಗಲ್ ಗುರೂಜಿಯವರನ್ನು ಕೇಳಿಕೊಂಡೆ. ನಾನು

ಪ್ರಯಾಣಿಸಬಹುದಾದ ಇತರ ದಾರಿಗಳನ್ನು ತೋರಿಸುವಾಗ ಅವರು ಒಂದು ರಸ್ತೆ ಶ್ರೀ

ರಾಮಸ್ವಾಮಯ್ಯಂಗಾರ್ಯರ ಗೊರೂರಿನ ಮೂಲಕ ಹಾದುಹೋಗುತ್ತದೆಂದು ತಿಳಿಸಿದರು. 

 

ಗೊರೂರು, ಹೇಮಾವತಿ ನದಿ, ಯೋಗಾನರಸಿಂಹಸ್ವಾಮಿ ದೇವಸ್ಥಾನ, ದೇವಾಲಯದ ಮುಂದಿನ ತೋಪು,

ಜಾತ್ರೆ, ದೇವಸ್ಥಾನದ ಹುಳಿಯನ್ನ ಇವುಗಳ ಬಗ್ಗೆ ಗೊರೂರರ ಪುಸ್ತಕಗಳಲ್ಲಿ ಓದಿ, ಮನದಲ್ಲಿಯೇ ಅವುಗಳ

ಚಿತ್ರವನ್ನು ರೂಪಿಸಿಕೊಂಡು ಆನಂದಿಸಿದ್ದ ನನಗೆ ಆ ಎಲ್ಲವನ್ನೂ ಕಣ್ಣಾರೆ ನೋಡಬೇಕೆಂಬುದು ಬಹುಕಾಲದ

ಬಯಕೆ. ಜತೆಗೆ ಕರಿಯ, ಶಾಲುಸಾಬಿ, ಸೀನಪ್ಪ , ರಂಗೇಗೌಡ, ದಪ್ಪ ಹೊಟ್ಟೆಯ ಜೋಡೀದಾರರು

ಎಲ್ಲರನ್ನೂ ಕಾಣುವುದಾಗಿದ್ದರೆ ಬಹಳ ಚನ್ನವಿತ್ತು.  ಆದರೆ ನಾನು ಹುಟ್ಟಿದ್ದು ಕೊಂಚ ತಡವಾಯಿತು.

ಅದಿರಲಿ, ಗೊರೂರು ಮತ್ತು ಹೇಮಾವತಿ ನದಿ ಇನ್ನೂ ಇವೆ ಎಂದು ತಿಳಿದಾಕ್ಷಣ ನಾನು ಗೊರೂರಿನ

ಮೂಲಕ ಮೈಸೂರಿಗೆ ಹೋಗುವುದೆಂದು ತೀರ್ಮಾನಿಸಿದೆ. 

 

ಗೊರೂರು ತಲುಪುವ ಮುಂಚೆ ಗೊರೂರರ ಜೀವನದ ಒಂದು ಪ್ರಸಂಗ ತಿಳಿಸುತ್ತೇನೆ. ಶ್ರೀ ಗೊರೂರು

ರಾಮಸ್ವಾಮಯ್ಯಂಗಾರ್ಯರು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಕೂಡಾ ಪಾಸುಮಾಡಿರಲಿಲ್ಲವಂತೆ. ಆದರೆ ಅವರು

ಬರೆದ ‘ಹಳ್ಳಿಯ ಚಿತ್ರಗಳು’ ಪುಸ್ತಕ  ಬಹಳ ಜನಪ್ರಿಯವಾಗಿ, ಹೆಸರುಮಾಡಿದ ನಂತರ ಅವರನ್ನು ಒಮ್ಮೆ

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪರೀಕ್ಷಕರನ್ನಾಗಿ ನೇಮಿಸಿದರಂತೆ. ಇದು ಸುಮಾರು ೧೯೩೦ರಲ್ಲಿ. ಏನೂ ಓದಿಲ್ಲದ

ರಾಮಸ್ವಾಮಯ್ಯಂಗಾರ್ಯರು ಪರೀಕ್ಷಕರಾದ ವಿಷಯತಿಳಿದ ಕೆಲವರ ಹೊಟ್ಟೆ ಕೊಂಚ ಉರಿಯಿತಂತೆ.

ಆ ಜನ, ಪರೀಕ್ಷಕರಾಗಲು ಬೇಕಾದ ಯಾವುದೇ ಅರ್ಹತಾಪರೀಕ್ಷೆಯನ್ನು ಗೊರೂರರು ಪಾಸುಮಾಡಿಲ್ಲವೆಂದು

ತಗಾದೆ ತೆಗೆದರಂತೆ. ಗೊರೂರು ಅವರನ್ನು ಪರೀಕ್ಷಕರನ್ನಾಗಿ ನಿಯಮಿಸಿದ ಎನ್ ಎಸ್ ಸುಬ್ಬರಾಯರು,

‘ಹಳ್ಳಿಯ ಚಿತ್ರಗಳು’ ಪುಸ್ತಕವೇ ಅವರ ಅರ್ಹತೆಯೆಂದು ಹೇಳಿ, ತಗಾದೆ ತೆಗೆದವರ ಬಾಯಿಮುಚ್ಚಿಸಿದರಂತೆ.

ಆದರೂ, ಯಾವುದಾದರೂ ಒಂದು ಪರೀಕ್ಷೆ ಪ್ಯಾಸುಮಾಡುವಂತೆ ಗೊರೂರರಿಗೆ ಸೂಚಿಸಿದರಂತೆ.

ಅದರಂತೆ ಗೊರೂರರು ಮದ್ರಾಸ್ ವಿಶ್ವವಿದ್ಯಾಲಯದ ‘ಕನ್ನಡ ವಿದ್ವಾನ್’ ಪರೀಕ್ಷೆಗೆ ನೋಂದಾಯಿಸಿಕೊಂಡರಂತೆ. 

ಆ ಪರೀಕ್ಷೆಗೆ ಗೊರೂರು ಅವರೇ ಬರೆದಿದ್ದ ‘ನಮ್ಮ ಊರಿನ ರಸಿಕರು’ ಪುಸ್ತಕ  ಪಠ್ಯಪುಸ್ತಕವಾಗಿತ್ತಂತೆ.

ಗೊರೂರರು ತಮ್ಮ ಪುಸ್ತಕವನ್ನು ತಾವೇ ಪಠ್ಯವಾಗಿ ಓದಿ, ಪರೀಕ್ಷೆ ಬರೆದರಂತೆ. ಪರೀಕ್ಷೆ ಪ್ಯಾಸಾಯಿತು.

ಆದರೆ ಪರೀಕ್ಷಕರಾಗಿದ್ದ ಮುಳಿಯ ತಿಮ್ಮಪ್ಪಯ್ಯನವರು ಗೊರೂರರನ್ನು ಕುರಿತು “ನೀನು ಬರೆದ ಉತ್ತರಗಳಿಗೆ

ನಾನು ಕೊಟ್ಟ ಅಂಕ ಹೆಚ್ಚಾಯಿತು” ಎಂದರಂತೆ ! ಇದನ್ನು ನಾನು ಶ್ರೀ ಸಿ ಜೆ ವೆಂಕಟಯ್ಯನವರು ಗೊರೂರರ

ಬಗ್ಗೆ ಬರೆದ ಪುಸ್ತಕದಲ್ಲಿ ಇತ್ತೀಚಿಗೆ ನೋಡಿದೆ. 

 

ಸರಿ, ಹೇಮಾವತಿ ಜಲಾಶಯ ಮತ್ತು ನಂತರ ಗೊರೂರಿನ ಮೂಲಕ ಮೈಸೂರಿಗೆ ಪಯಣಿಸುವುದೆಂದು

ನಿರ್ಧರಿಸಿದ ನಾನು  ಸಕಲೇಶಪುರದ ಬಳಿಯ ಬಾಳ್ಳುಪೇಟೆಯ ನಂತರ ಗಾಡಿಯನ್ನು ಬಲಕ್ಕೆ ತಿರುಗಿಸಿದೆ.

ಸಣ್ಣ ಆದರೆ ಸುಸ್ಥಿತಿಯಲ್ಲಿದ್ದ ರಸ್ತೆ, ಅಕ್ಕ ಪಕ್ಕ ಅಡಿಕೆ, ತೆಂಗು ತೋಟಗಳು, ಜೋಳ ಬೆಳೆಯುತ್ತಿದ್ದ ಹಸಿರು

ಹೊಲಗಳು, ಸಣ್ಣ ಸಣ್ಣ ಕೆರೆ ಕುಂಟೆಗಳು, ಚಿಕ್ಕ ಚಿಕ್ಕ ಗುಡ್ಡಗಳಿಂದ ಕೂಡಿದ ಪರಿಸರ ಬಹಳ ಆಹ್ಲಾದಕರವಾಗಿತ್ತು.

“ಅಲ್ಲಿಗಲ್ಲಿಗೆ ಬೆಳೆದ ಬೆಳೆಗಳಿಂ ಮೆಳೆಗಳಿಂ - ಅಲ್ಲಿಗಲ್ಲಿಗೆ ವನಸ್ಥಳಗಳಿಂ ಕೊಳಗಳಿಂ” ಎಂಬಂತೆ ! ಮಗ್ಗೆ ಎಂಬ

ಗ್ರಾಮದ ನಂತರ ರಸ್ತೆ ಕೊಂಚ ಕೊಂಚ ಹಾಳಾಗಿದ್ದರೂ ಗಾಡಿ ಚಲಿಸಲು ತೊಂದರೆ ಇರಲಿಲ್ಲ. ಹೇಮಾವತಿ

ಜಲಾಶಯವನ್ನು ದಾಟಿದ ನಂತರ ಮತ್ತೂ ಹಾಳಾದ ರಸ್ತೆಯ ಸ್ಥಿತಿ ಕಂಡು ನನಗೇಕೆ ಈ ಗೊರೂರಿನ ಭ್ರಮೆ

ಎನ್ನಿಸಿದರೂ ಊರು ಅಲ್ಲಿಂದ ಹೆಚ್ಚು ದೂರವಿರಲಿಲ್ಲವಾದ್ದರಿಂದ ಮುಂದುವರಿದೆವು. ಬಾಳ್ಳುಪೇಟೆಯಿಂದ ಹೊರಟ

ಎರಡುತಾಸಿನ ಒಳಗೆ ನಾವು ಗೊರೂರು ತಲುಪಿದೆವು. ಈಗ ಹೆದ್ದಾರಿಯೂ ಗೊರೂರಿನ ಪಕ್ಕದಲ್ಲೇ ಹಾಯುತ್ತದೆ.

ಹಳೆಯಊರಿನ ಕೆಲವುಭಾಗ, ಹೇಮಾವತಿ ನದಿ, ನರಸಿಂಹ ಸ್ವಾಮಿಯ ದೇವಸ್ಥಾನ ಮತ್ತು ದೇವಾಲಯದ

ಮುಂದಿನ ತೋಪಿನ ಒಂದು ಭಾಗ ಇನ್ನೂ ಹಾಗೆಯೇ ಉಳಿದಂತಿದೆ. ಹಾಗೂ, ಅದು ರಾಮಸ್ವಾಮಯ್ಯಂಗಾರ್ಯರ

ಕಾಲಕ್ಕೂ ಇಂದಿಗೂ ಬಹುಶಃ ಹೆಚ್ಚು ಬದಲಾಗಿಲ್ಲವೆನಿಸುತ್ತದೆ. 

 

ಗೊರೂರಿನ ಯೋಗಾನರಸಿಂಹಸ್ವಾಮಿ ದೇವಸ್ಥಾನ - ಅದರ ಜಾತ್ರೆ, ಹೇಮಾವತಿ ನದಿ - ಅದರ ಮೊಸಳೆ ಮಡುವು,

ಶಾಲುಸಾಬಿ - ಅವನ ಕಠಾರಿ ಗುರುತಿನ ರುಜು, ಸೀನಪ್ಪ - ಅವನ ಬೆಲ್ಲ ಹೆಸರುಬೇಳೆಯ ಪಾನಕ,

ಜೋಡೀದಾರರು - ಅವರ ಹೊಟ್ಟೆ ಮತ್ತು ಕುದುರೆ, ಮಣೆಗಾರರು - ಅವರ ಬಾವುಟ ಇವೆಲ್ಲದರ ಚಿತ್ರಣ

ಸುಮಧುರ ಹಾಗೂ ಮನಕ್ಕೆ ಮುದ. ಜತೆಗೆ, ಕಳೆದು ಹೋದ ಕಾಲದ ಕಥೆಗಳು ಆ ಜೀವನದ ನಿರೂಪಣೆ

ಇವುಗಳು ನನಗೆ ಬಹಳ ಪ್ರಿಯ. ಹಾಗಾಗಿ ನಾನು ಗೊರೂರರ ಚಿತ್ರಣಗಳನ್ನು ಬಹಳ ಆನಂದದಿಂದ ಮತ್ತೆ

ಮತ್ತೆ ಓದಿದ್ದೇನೆ. ಹಾಗೆ ಓದಿ ತಿಳಿದಿದ್ದ ಸ್ಥಳಗಳನ್ನು ಈಗ ನೋಡುವ ಅವಕಾಶ ಸಿಕ್ಕಿದ್ದು ಬಹಳ

ಸಂತೋಷವಾಯಿತು. 

 

ಗೊರೂರಿನ ದೇವಸ್ಥಾನ ಅಂಥ ಹೆಸರುವಾಸಿಯಾದ ಸ್ಥಳವಲ್ಲವಾದ್ದರಿಂದ ಹೆಚ್ಚು ಜನರಿರಲಿಲ್ಲ. ಅಲ್ಲಿ

ಕುಳಿತಿದ್ದ ಕೆಲವು ಹೆಂಗಳೆಯರು ಯೋಗಾನರಸಿಂಹಸ್ವಾಮಿಯು ತಮ್ಮ ಮನೆದೇವರೆಂದೂ ತಾವು ದೇವರ

ಸೇವೆಗೆಂದು ಬಂದಿರುವುದಾಗಿಯೂ ತಿಳಿಸಿ ನಮ್ಮ ಪೂರ್ವಾಪರಗಳನ್ನು ವಿಚಾರಿಸಿಕೊಂಡರು. ಗೋವಾ

ವಾಸಿಯಾದ ನಾನು ಗೊರೂರಿನ ದೇವಸ್ಥಾನವನ್ನು ಹುಡುಕಿಕೊಂಡು ಬಂದಿದ್ದ ಬಗ್ಗೆ ಕುತೂಹಲ ವ್ಯಕ್ತ ಪಡಿಸಿದರು.

ರಾಮಸ್ವಾಮಯ್ಯಂಗಾರ್ಯರ ಪುಸ್ತಕಗಳನ್ನು ಓದಿ, ಅದರಲ್ಲಿ ವಿವರಿಸಿದ್ದ ಸ್ಥಳಗಳನ್ನು ಕಾಣುವ

ಅಪೇಕ್ಷೆಯಿಂದ ನಾನು ಅಲ್ಲಿಗೆ ಬಂದದ್ದೆಂದು ತಿಳಿಸಿದೆ. ಅವರು ಯಾರೂ ಗೊರೂರು ರಾಮಸ್ವಾಮಯ್ಯಂಗಾರ್ಯರ

ಹೆಸರೇ ಕೇಳಿರಲಿಲ್ಲ ! 

 

ಗೊರೂರು ರಾಮಸ್ವಾಮಯ್ಯಂಗಾರ್ಯರ ಹೆಸರು, ಪುಸ್ತಕಗಳ ವಿಷಯ ಕೆಲವು ಕಣ್ಣುಗಳಿಗೆ ಬಿದ್ದರೆ ಅವರ

ಬಗ್ಗೆ ತಿಳಿದಿಲ್ಲದ  ನಾಲ್ಕಾರುಜನ ಅವರ ಪುಸ್ತಕಗಳ ಮೇಲೆ ಕಣ್ಣು ಹಾಯಿಸುವಂತಾಗಲೆಂದು ಆಶಿಸಿ ಗೊರೂರಿನ

ಭೇಟಿಯ ಬಗ್ಗೆ ಮೇಲ್ಕಾಣಿಸಿರುವ ಕೆಲವುಸಾಲು ಬರೆದೆ. ಜತೆಗೇ ಕೆಲವು ಚಿತ್ರಗಳನ್ನೂ ಲಗತ್ತಿಸಿದ್ದೇನೆ. ಒಂದೆರಡು

ಗುಂಪುಗಳಿಗೆ ರವಾನಿಸಿದ್ದೇನೆ. 

 










ಮೇಲಿನ ಚಿತ್ರಗಳಲ್ಲಿ ಕಾಣುವ ದೇವಸ್ಥಾನ ಗೊರೂರಿನ ಯೋಗಾನರಸಿಂಹನದು. ಕಾಣಿಸುವ ನದಿ ಗೊರೂರಿನಲ್ಲಿ

ಹರಿಯುವ  ಹೇಮಾವತಿ ನದಿ. ದೇವಸ್ಥಾನದ ಮುಂದಿನ ತೋಪು ಸಹ ಗೊತ್ತಾಗುವಂತೆಯೇ ಇದೆ. ಉಳಿದ

ಮೂರುಚಿತ್ರಗಳು ನಮ್ಮ ಪ್ರಯಾಣದ ಸಮಯದಲ್ಲಿ  ಕಂಡ ಪ್ರಕೃತಿಯ ಕೆಲವು ಚಿತ್ರಗಳು.