ಗುರುವಾರ, ಮೇ 19, 2022

ಕಾಸೆಂದರೆ ಕ್ಯಾಷು !

 



ತರಕಾರಿ, ಕೊತ್ತಂಬರಿಸೊಪ್ಪು, ಹಾಲು ತರಬೇಕೆಂದು ಅಪ್ಪಣೆಯಾಯಿತು. ಮಳೆಯಲ್ಲಿ ಹೊರಗೆ

ಕಾಲಿಡಲು ಬೇಜಾರು.  ಆದರೂ ಜಿಟಿಜಿಟಿಮಳೆಯಲ್ಲೇ ಹೊರಟೆ. ಒಂದು ಕೈಲಿ ಛತ್ರಿ, ಒಂದು ಕೈಲಿ ಚೀಲ.

ತರಕಾರಿ, ಹಾಲು ಕೊಂಡೆ. ತರಕಾರಿಯವನ ಬಳಿ ಕೊತ್ತಂಬರಿಸೊಪ್ಪು ಇರಲಿಲ್ಲ. ಸ್ವಲ್ಪ ಮುಂದೆ ರಸ್ತೆ

ಪಕ್ಕದಲ್ಲಿ ಸೊಪ್ಪುಮಾರುತ್ತಿದ್ದಾಕೆಯ ಬಳಿ ಕೊತ್ತಂಬರಿ ಕೇಳಿದೆ. ಒಂದು ಕಟ್ಟಿಗೆ ನಲವತ್ತು ರೂಪಾಯಿ.

ನನಗೆ ಸ್ವಲ್ಪವೇ ಕೊತ್ತಂಬರಿ ಬೇಕಿದ್ದರಿಂದ ಹತ್ತು ರೂಪಾಯಿನಷ್ಟು ಮಾತ್ರ ಕೊಡಲು ಸಾಧ್ಯವೇ ಎಂದು

ಕೇಳಿದೆ. ಆಕೆ ಗೊಣಗುತ್ತ ಕಟ್ಟು ಬಿಡಿಸಿ ಒಂದಿಷ್ಟು ಕೊತ್ತಂಬರಿ ಸೊಪ್ಪು ಕೈಯಲ್ಲಿರಿಸಿದಳು. ಛತ್ರಿ, ಚೀಲ,

ಮಾಸ್ಕು ಇತ್ಯಾದಿ ಹೊಂದಿಸಿಕೊಳ್ಳುವ ಗಡಿಬಿಡಿಯಲ್ಲಿ ಪರ್ಸು ತೆಗೆದುಕೊಳ್ಳುವುದನ್ನು ಮರೆತಿದ್ದೆ. ನಗದು

ಹಣವಿಲ್ಲವೆಂದು ತಿಳಿಸಿದ್ದರಿಂದ ಸೊಪ್ಪಿನಾಕೆ ತನ್ನ ಸೊಪ್ಪಿನ ಕಟ್ಟುಗಳ ಮಧ್ಯದಿಂದ ಪೇ ಫೋನ್ ಕೋಡಿನ

ಚಿತ್ರ ಹುಡುಕಿ ತೆಗೆದು ಕೊಟ್ಟಳು. “ಇದ್ಕೇ ಕಟ್ಟಿ” ಎಂದಳು. 


ಛತ್ರಿ, ಚೀಲಗಳನ್ನು ಹಿಡಿದಿದ್ದ ಕೈಗಳಲ್ಲೇ ಮೊಬೈಲಿಗೂ ಅವಕಾಶ ಕಲ್ಪಿಸಿ ಗೂಗಲ್ ಪೇ ಮಾಡಲೆಂದು

ಪರದಾಡುತ್ತಿದ್ದೆ. ಆ ಸಮಯದಲ್ಲಿ, ಕೋಲೆ ಬಸವನನ್ನು ಹಿಡಿದು ಭಿಕ್ಷೆ ಬೇಡುತ್ತಿದ್ದ ಹೆಣ್ಣುಮಗಳೊಬ್ಬಳು

ನನ್ನ ಹಿಂದೆ ಬಸವನನ್ನು ಪಾರ್ಕಿಂಗ್ ಮಾಡಿ ಹಣ ಬೇಡಿದಳು. ನನ್ನ ಬಳಿ ನಗದು ಏನೂ ಇರಲಿಲ್ಲವಾದ್ದರಿಂದ

ಇಲ್ಲವೆಂದು ತಲೆಯಾಡಿಸಿದೆ.  ಆದರೆ ಆಕೆ ಮುಂದೆ ಹೋಗದೆ ಅಲ್ಲಿಯೇ ನಿಂತು ಮತ್ತೆ ಮತ್ತೆ ಬೇಡಹತ್ತಿದಳು.

ಅಗಾಧವಾದ ಬಸವ ನನ್ನ ಹಿಂದೆ ನಿಂತು ಕತ್ತು ಅಲ್ಲಾಡಿಸುತ್ತಿದ್ದ. ಮೊದಲೇ ಚೀಲ, ಛತ್ರಿ, ಮೊಬೈಲುಗಳನ್ನು

ಸಂಭಾಳಿಸುವುದಕ್ಕೆ ಪರದಾಡುತ್ತಿದ್ದ ನಾನು ಈಗ ಬಸವನ ಕೊಂಬನ್ನೂ ಗಮನದಲ್ಲಿಡಬೇಕಾಯಿತು. 


ಆಗ ಸೊಪ್ಪುಮಾರುವಾಕೆ ನನ್ನ ಸಹಾಯಕ್ಕೆ ಬಂದಲು. ಮುಂದೆಹೋಗದೆ ನನ್ನನ್ನು ಕಾಡುತ್ತಿದ್ದ

ಕೋಲೆಬಸವನ ಒಡತಿಯನ್ನುದ್ದೇಶಿಸಿ “ಮುಂದಕ್ಕೋಗಮ್ಮಾ, ಈ ಸ್ವಾಮೇರ ಹತ್ರ ಕಾಸೇ ಇಲ್ಲ. ನೋಡು,

ಕೊತ್ತಂಬ್ರಿ ಸೊಪ್ಗೆ ಹತ್ರೂಪಾಯಿ ಇಲ್ಲಾಂತ ನನಗೇ ಫೋನ್ ಪೇ ಮಾಡ್ತಾ ಅವ್ರೆ, ನಿನಗೇನು ಕೊಡ್ತಾರೆ?” ಎಂದಳು !! 


ಕೈಲಿ ಕ್ಯಾಷಿದ್ದರೆ ಅದು ಕಾಸು 

ಮೊಬೈಲಿನ ಥೈಲಿಯೊಳು 

ವೀಸ ಹಣ ಇದ್ದೊಡೇನು?

ಕಾಸಿಲ್ಲದೆ ಮಾನ ಲಾಸೇ - ಸರ್ವಜ್ಞ !











ಭಾನುವಾರ, ಮೇ 8, 2022

‘ಕಾಂಕ್ರೀಟ್ ಕಾಡಿನ ಮಾನವಹೃದಯಗಳು’ - ಮತ್ತೊಂದು ಕಂತು.

ಸ್ವಚ್ಛವಾದ ಪರಿಸರದಲ್ಲಿ ಜೀವಿಸಬೇಕೆಂಬುದು ನನಗೆ ಈ ಜನ್ಮದಲ್ಲಿ ಎಟುಕದ ಕನಸು. ಈ ನನ್ನ ನಗರದ

ಬಹುತೇಕ ಸಹವಾಸಿಗಳಿಗೆ ಸ್ವಚ್ಛತೆಯ ಪ್ರಜ್ಞೆಯೇ ಇಲ್ಲದಿರುವುದು ಕಂಡು ನನಗೆ ಬಹಳ ಖೇದವಾಗುತ್ತದೆ.

ಆದರೆ ಆ ಪ್ರಜ್ಞೆಯಿಲ್ಲದ ಅವರು ತಮ್ಮ ಕೊಳಚೆಯಲ್ಲೇ ತಾವು ಸಂತೋಷವಾಗಿದ್ದಾರೆ ! ಶುಚಿತ್ವದ

ಪ್ರಜ್ಞೆಯಿರುವುದೇ ನನ್ನ ಅಸಂತೋಷಕ್ಕೆ ಕಾರಣವಾಯಿತಲ್ಲವೇ ! 


ತನ್ನ ಅನೇಕ ಜನ್ಮಗಳ ಬಗ್ಗೆ ತಿಳುವಳಿಕೆಯಿದ್ದ ಒಬ್ಬ ಗುರು ಇದ್ದನಂತೆ. ಅದೇನೋ ಕಾರಣದಿಂದ

ಮರುಜನ್ಮದಲ್ಲಿ ತಾನು ಒಂದು ಹಂದಿಯಾಗಿ ಜನಿಸಿ ಬದುಕುವನಿದ್ದೇನೆಂದು ಅವನಿಗೆ ತಿಳಿದಿತ್ತಂತೆ.

ಆ ಅರಿವಿನಿಂದ ಅವನಿಗೆ ತನ್ನ ಮುಂದಿನ ಜನ್ಮ ಬಹಳ ಅಸಹ್ಯವೆನಿಸಿ ಆದಷ್ಟುಬೇಗ ಅದರಿಂದ

ಮುಕ್ತಿಹೊಂದಲು ಅವನು ನಿರ್ಧರಿಸಿದನಂತೆ. ತಾನು ತೀರಿಕೊಂಡ ಕೆಲಕಾಲದ ನಂತರ ಇಂತಲ್ಲಿ

ತಾನು ಹಂದಿಯಾಗಿರುತ್ತೇನೆಂದೂ, ತನ್ನನ್ನು ಹುಡುಕಿ ತಾನು ಹಂದಿಯರೂಪದಲ್ಲಿ ಕಂಡ ತಕ್ಷಣ

ತನ್ನನ್ನು ಕೊಲ್ಲಬೇಕೆಂದೂ ತನ್ನ ಶಿಷ್ಯರಿಗೆ ಅವನು ನಿರ್ದೇಶಿಸಿದನಂತೆ. 


ಅವನ ಮರಣದ ನಂತರ ಅವನ ಶಿಷ್ಯರು ಅವನ ನಿರ್ದೇಶನದಂತೆ ವರಾಹರೂಪಿ ಗುರುವನ್ನು

ಗುರುತಿಸಿದರಂತೆ. ಆ ಹಂದಿ ತನ್ನ ಸಂಸಾರದೊಂದಿಗೆ ಒಂದು ಕೊಳಚೆಯ ಕೂಪದಲ್ಲಿ

ಓಲಾಡಿಕೊಂಡಿತ್ತಂತೆ. ಅದನ್ನು ತಕ್ಷಣ ಕೊಲ್ಲಲು ಶಿಷ್ಯರು ತಯಾರಾಗುತ್ತಿದ್ದಂತೆ ಹಂದಿ

“ಕೊಲ್ಲಬೇಡಿ, ಕೊಲ್ಲಬೇಡಿ” ಎಂದು ಕೇಳಿಕೊಂಡಿತಂತೆ. “ನಾನು ನನ್ನ ಹಿಂದಿನ ಗುರುವಿನ ಜನ್ಮಕ್ಕಿಂತ

ಈ ಹಂದಿಯ ಜನ್ಮದಲ್ಲಿ ಬಹಳವೇ ಸಂತೋಷದಿಂದಿದ್ದೇನೆ. ನನ್ನನ್ನು ಹೀಗೆಯೇ ಇರಲುಬಿಡಿ” ಎಂದು

ಹಂದಿರೂಪಿ ಗುರು, ಶಿಷ್ಯರಿಗೆ ಸೂಚನೆ ಕೊಟ್ಟನಂತೆ! ಆ ಕೋರಿಕೆಯನ್ನು ಮನ್ನಿಸಿ, ಹಂದಿಯನ್ನು

ಕೊಳಚೆಯಲ್ಲಿ ಬಿಟ್ಟು ಕೈಮುಗಿದು, ಶಿಷ್ಯರು ವಾಪಸಾದರಂತೆ. 


ಬೀಡಾ ಅಂಗಡಿಯಮುಂದೆ, ಬೋಂಡಾ ಅಂಗಡಿಯಮುಂದೆ, ಅಥವಾ ಯಾವುದೋ ದರ್ಶಿನಿಯಮುಂದೆ

ನಿಂತೋ, ಪಕ್ಕದಲ್ಲೇ ಮೆಟ್ಟಲಿನ ಮೇಲೋ, ಫುಟ್ ಪಾತಿನಮೇಲೋ, ಮತ್ತೆಲ್ಲೋ ಸಿಕ್ಕಿದೆಡೆ ಕೂತೋ,

ಸ್ನೇಹಿತರೊಂದಿಗೆ ಮಾತುಕತೆಯಾಡುತ್ತಾ, ಬೋಂಡಾ, ಪಾನಿಪುರಿ ತಿಂದು ಖಾಲಿ ಪೊಟ್ಟಣ ಅಲ್ಲೇ

ಬದಿಗೆಸೆದು, ತಂಬಾಕು, ಬೀಡಾ ಜಗಿದು ಕೂತಲ್ಲೇ ಸುತ್ತ ಮುತ್ತ ಉಗುಳುತ್ತಾ ಆನಂದವಾಗಿ

ಕಾಲಕಳೆಯುವ ಜನರನ್ನು ಕಂಡಾಗ ನನಗೆ ಈ ಕಥೆ ನೆನಪಾಗುತ್ತದೆ. ಅಂಥ ಸುಖದಿಂದ

ವಂಚಿತನಾದ ನನ್ನ ಬಗ್ಗೆ ನನಗೇ ವ್ಯಥೆಯಾಗುತ್ತದೆ ! 


ಏನೋ ವಿಷಯದ ಬಗೆಗೆ ಚಿಕ್ಕದಾದೊಂದು ಬರಹ ಬರೆಯ ಹೊರಟು ಮತ್ತೇನೋ ಕಥೆ ಹೇಳಲು

ತೊಡಗಿದೆ! ಉಪಕಥೆ ಪಕ್ಕಕ್ಕಿರಲಿ. ಸಿಕ್ಕಸಿಕ್ಕಲ್ಲಿ  ತಾಜ್ಯಬಿಸಾಡುವ, ಎಗ್ಗಿಲ್ಲದೆ ರಸ್ತೆಯಲ್ಲಿ, ಅಲ್ಲಿ

ಇಲ್ಲಿ ಉಗುಳುವ, ಗಲೀಜು ಮಾಡುವ ಜನರನ್ನು ಕಂಡರೆ ನನ್ನ ಮನಸ್ಸು ಚಿಟಿಚಿಟಿಗುಟ್ಟುತ್ತದೆ.

ನನ್ನ ಮನೆಯ ಪಕ್ಕದಲ್ಲೇ ಇರುವ ಅಂಗಡಿಯವರು ಕಾಫಿ, ಚಹಾ, ಕಬ್ಬಿನಹಾಲು ಇತ್ಯಾದಿ ಖಾದ್ಯ

ಪದಾರ್ಥ ಮಾರುತ್ತಾರೆ. ಜತೆಗೇ ಕಡಲೆಬೀಜ, ಬಿಸ್ಕತ್ತು, ಚಿಪ್ಸ್ ಮುಂತಾದುವು ಸಹಾ. ಗಿರಾಕಿಗಳು

ಉಪಯೋಗಿಸಿ ಬಿಸುಡುವ ತಾಜ್ಯವಸ್ತುಗಳಿಗೆಂದು ಅಂಗಡಿಯವರು ಒಂದು ಡಬ್ಬವನ್ನಿಟ್ಟಿದ್ದಾರೆ.

ಆದರೆ ಆ ಗಿರಾಕಿಗಳು ಅಲ್ಲಿ ನಿಂತು ಮಾತನಾಡುತ್ತ, ತಿಂದು, ಕುಡಿದು ಮಾಡಿ, ಕಸದ ಡಬ್ಬವನ್ನು

ನಿರ್ಲಕ್ಷಿಸಿ, ರಸ್ತೆಯಮೇಲೆ ಕಾಗದದ ಲೋಟ, ಚಿಪ್ಸ್ ನ ಪ್ಯಾಕೆಟ್ಗಳನ್ನು ಎಸೆದು ಹೋಗುತ್ತಾರೆ.

ಹಾಗಾಗಿ ನಮ್ಮ ರಸ್ತೆಯ ಮೇಲೆ ಸದಾ ಒಂದಷ್ಟು ಖಾಲಿ ಪ್ಲಾಸ್ಟಿಕ್ ಕವರಗಳು, ಪೇಪರ

ಕಪ್ಪುಗಳು ನಲಿದಾಡುತ್ತಿರುತ್ತವೆ. 


ಅವರಿವರು ಬಿಸಾಕಿದ ಕಾಗದ, ಪ್ಲಾಸ್ಟಿಕ್ ವಸ್ತುಗಳನ್ನು ರಸ್ತೆಯಿಂದ ತೆಗೆದು ಒಂದೆಡೆ ಸೇರಿಸಿ ಕಸ

ಎತ್ತುವರು ಬಂದಾಗ ಕೊಡುವ ಹುಚ್ಚುಕೆಲಸವನ್ನು ನಾನು ಆಗಾಗ ಮಾಡುತ್ತೇನೆ. ಜನರು ಎಸೆಯುವ

ಕಸದೊಂದಿಗೆ ಮನೆಯ ಮುಂದಿನ ಮರದಿಂದ ಉದುರಿದ ತರಗೆಲೆ, ಕಡ್ಡಿಗಳೂ ಸೇರುತ್ತವೆ. ಪೂರ್ತಿ

ರಸ್ತೆಗುಡಿಸುವ ಹುಚ್ಚುತನಕ್ಕೆ ನಾನು ಹೋಗಿಲ್ಲವಾದರೂ ಪ್ರತಿಮುಂಜಾನೆ ನನ್ನ ಮನೆಯ

ಮುಂಭಾಗದಲ್ಲಿ ರಸ್ತೆಬದಿಯಲ್ಲಿ ಶೇಖರವಾಗಿರುವ ತರಗೆಲೆ ಇತ್ಯಾದಿಗಳನ್ನು ಮಾತ್ರ ಗುಡಿಸಿ

ಒಂದೆಡೆ ಗುಡ್ಡೆ ಹಾಕುತ್ತೇನೆ. ಮುನಿಸಿಪಾಲಿಟಿಯ ಕಸಒಯ್ಯುವವರು ಮನಬಂದಾಗ 

ಒಮ್ಮೊಮ್ಮೆ ಅದನ್ನು ಕೊಂಡೊಯ್ಯುತ್ತಾರೆ. 


ನಿನ್ನೆ ಬೆಳಗ್ಗೆ ಎಂದಿನಂತೆಯೇ ರಸ್ತೆಬದಿಯ ಕಸಗುಡಿಸುತ್ತಿದ್ದೆ. ನಾನಿನ್ನೂ ಗುಡಿಸುತ್ತಿರುವಂತೆಯೇ

ಕೈಯಲ್ಲಿ ಲೋಟಹಿಡಿದು ಕಾಫಿ ಕುಡಿಯುತ್ತಾ, ಮೊಬೈಲಿನಲ್ಲಿ ಮಾತಾಡುತ್ತಾ ಬಂದ ಒಬ್ಬ ವ್ಯಕ್ತಿ,

ಕಾಫಿ ಕುಡಿದು ಮುಗಿಸಿ, ಲೋಟವನ್ನು ನಾನು ಆಗತಾನೆ ಗುಡಿಸಿದ್ದ ಜಾಗದಲ್ಲಿ ಒಗೆದ. 

“ಅಲ್ರೀ, ನಿಮ್ಮೆದುರಿಗೇ ಕಸಗುಡಿಸುತ್ತಿದ್ದೇನೆ.  ಖಾಲಿ ಲೋಟವನ್ನು ಕಸದ ಡಬ್ಬದಲ್ಲಿ ಹಾಕುವುದುಬಿಟ್ಟು

ನಾನು ಈಗತಾನೇ ಗುಡಿಸಿದೆಡೆ ಎಸೆಯುತ್ತೀರಲ್ಲಾ” ಎಂದೆ. 


“ರಸ್ತೆ ಏನು ನಿಮ್ಮ ಅಪ್ಪನದೇನ್ರೀ” ಎಂದೋ, “ಹೇಗೂ ಗುಡಿಸುತ್ತಿದ್ದೀರಲ್ಲಾ ಅದನ್ನೂ ಗುಡಿಸಿ” ಎಂದೋ,

ಉದ್ಧಟತನದ ಉತ್ತರವನ್ನು ಪ್ರತೀಕ್ಷಿಸುತ್ತಿದ್ದೆ. 

“ತಪ್ಪಾಯ್ತು ಸಾರ, ಕ್ಷಮಿಸಿ” ಎಂಬ ಉತ್ತರಕೇಳಿ ಅವಾಕ್ಕಾದೆ. ಆ ವ್ಯಕ್ತಿ ತಾನು ಬಿಸುಟಿದ್ದ ಲೋಟ

ತೆಗೆದು ಸಮೀಪದಲ್ಲಿದ್ದ ಕಸದರಾಶಿಯಲ್ಲಿ ಹಾಕಿ ಮುನ್ನಡೆದ. 

ಅದೇ ರಾತ್ರಿ ಊಟವಾದನಂತರ ಹಾಗೆಯೇ ಮನೆಯಮುಂದೆ ಅತ್ತಿತ್ತ ಠಳಾಯಿಸುತ್ತಿದ್ದೆ. ಅಂಗಡಿ

ಮುಚ್ಚುವ ಕಾರ್ಯದಲ್ಲಿದ್ದ ಅಂಗಡಿಯಾತ ಹೊರಬಂದು ನನ್ನನ್ನುದ್ದೇಶಿಸಿ ಕೈಮುಗಿದು “ಬೆಳಗ್ಗೆ  ನೀವು

ರಸ್ತೆ ಗುಡಿಸಿದ್ದನ್ನು ನೋಡಿದೆ ಸಾರ, ನಮ್ಮ ಅಂಗಡಿ ಸುತ್ತಮುತ್ತ ಕ್ಲೀನಾಗಿದೆಯಲ್ಲವೇ? ನಮ್ಮಿಂದಾದಷ್ಟು

ಪ್ರಯತ್ನ ನಾವು ಮಾಡುತ್ತೇವೆ” ಎಂದ ! ಇಂಥ ಕಾರ್ಯ, ವಿಷಯಗಳ ಬಗೆಗೆ ಯಾರೂ

ಲಕ್ಷ್ಯನೀಡುವುದಿಲ್ಲವೆಂದು ಭಾವಿಸಿದ್ದ ನನಗೆ ಆಶ್ಚರ್ಯವಾಯಿತು. ನನ್ನನ್ನು ತಲೆಕೆಟ್ಟವನೆಂದು

ಭಾವಿಸದೇ ನನ್ನ ಸಣ್ಣ ಕೆಲಸಕ್ಕೆ ಕೊಂಚ ಬೆಲೆಕಟ್ಟುವವರೂ ಇರುವುದು ಕಂಡು ಸಂತೋಷವಾಯಿತು.

ಜತೆಗೆ, ಹೃದಯವಂತಿಕೆಯಿಲ್ಲವೆಂದು ನಾನು ಭಾವಿಸಿದ್ದ  ಕಾಂಕ್ರೀಟ್ ಕಾಡಿನಲ್ಲಿ  ಹೃದಯದ ಬಡಿತ

ಕೇಳಿ ಸಮಾಧಾನವಾಯಿತು.