ಶುಕ್ರವಾರ, ಸೆಪ್ಟೆಂಬರ್ 29, 2017

ಮೈಸೂರು ಮತ್ತು ದಸರಾ - ಒಂದು ನೆನಪು.

ಮೈಸೂರಿನ ದಸರಾ ಲಾಗಾಯ್ತಿನಿಂದಲೂ ಪ್ರಸಿದ್ಧವಾದ ಉತ್ಸವ.  ನಮ್ಮ ಸಣ್ಣವಯಸ್ಸಿನಿಂದಲೂ ನಮಗೆ ದಸರಾ ಎಂದರೆ ಮೈಸೂರಿನ ಜಂಬೂಸವಾರಿ ಮನದಲ್ಲಿ ಮೂಡುತ್ತಿತ್ತು. ಅದರ ಜತೆಜತೆಗೇ ಚಾಮುಂಡಿ ಬೆಟ್ಟ, ಪ್ರಾಣಿಸಂಗ್ರಹಾಲಯ, ಅರಮನೆ, ಕುಕ್ಕರಹಳ್ಳಿ ಕೆರೆ  ಮತ್ತು ಕೃಷ್ಣರಾಜಸಾಗರ. ಎಲ್ಲವೂ ನನ್ನ ಬಾಲ್ಯದ ಅತಿ ಸುಂದರ ನೆನಪುಗಳು. ಹಾಗಾಗಿ ಅಂದಿನಿಂದಲೂ ಮೈಸೂರೆಂದರೆ ನನಗೆ ಮನಸ್ಸಿಗೆ ಮುದ. ಈಗಲೂ ಹಾಗೆಯೇ. ವಿರಳವಾಗಿ ವಿಸ್ತಾರಗೊಂಡಿರುವ ನಗರ, ಅಗಲವಾದ ರಸ್ತೆಗಳು, ಜನದಟ್ಟಣೆ, ವಾಹನ ದಟ್ಟಣೆ ಇಲ್ಲದೆ ನಾನು ನೋಡಿರುವ ಊರುಗಳಲ್ಲಿ ವಾಸಕ್ಕೆ ಬಹಳ ಯೋಗ್ಯವೆಂದು ನನಗೆ ಅನಿಸುವುದು, ಮೈಸೂರು.

ನನ್ನ ಹುಟ್ಟೂರು ಬೆಂಗಳೂರು. ನಮ್ಮ ಸಂಸಾರ, ನೆಂಟರಿಷ್ಟರು, ಸ್ನೇಹಿತರೆಲ್ಲಾ ಬೆಂಗಳೂರೇ. ಬೆಂಗಳೂರು ಬಿಟ್ಟರೆ ನಮ್ಮ ವಾರಿಗೆಯ ಮಕ್ಕಳಿದ್ದ ನಮ್ಮ ಹತ್ತಿರದ ಸಂಭಂದಿಗಳಿದ್ದದ್ದು ಮೈಸೂರಿನಲ್ಲಿ. ಹಾಗಾಗಿ ನಮಗೆ ಬೇಸಗೆಯರಜಾ  ಹಾಗೂ ದಸರಾರಜಕ್ಕೆ ತಾಣ ಮೈಸೂರು. ನನ್ನ ಸೋದರಮಾವನವರು ಹಾಗು ದೊಡ್ಡಮ್ಮನವರು ಇಬ್ಬರೂ ಇದ್ದದ್ದು ಮೈಸೂರಿನಲ್ಲಿ. ಸರಸ್ವತಿಪುರದಲ್ಲಿ. ಮೈಸೂರಿನಲ್ಲಿ ನಮ್ಮ ವಾಸ ಅವರಮನೆಗಳಲ್ಲೇ. ನನ್ನ ಸೋದರಮಾವ ಶ್ರೀ ಜೆ ಆರ್ ಲಕ್ಷ್ಮಣರಾಯರು ರಸಾಯನಶಾಸ್ತ್ರದ ಪ್ರಾಧ್ಯಾಪಕರು. ಮಹಾರಾಜಾ ಕಾಲೇಜು, ಮಾನಸ ಗಂಗೋತ್ರಿಗಳಲ್ಲಿ ಸೇವೆ ಸಲ್ಲಿಸಿದರು.  ಅದರಿಂದಾಗಿ ಸರಸ್ವತಿಪುರ, ಮಾನಸಗಂಗೋತ್ರಿ, ಕುಕ್ಕನಹಳ್ಳಿಕೆರೆ ಸುತ್ತಮುತ್ತಲಿನ ಜಾಗಗಳೆಲ್ಲ ನನಗೆ ಸ್ವಂತ ಊರಿನಷ್ಟೇ ಪರಿಚಯ ಮತ್ತು ನನ್ನ ಮನಸ್ಸಿಗೆ ಅಷ್ಟೇ ಆತ್ಮೀಯ.

ಸರಸ್ವತಿಪುರದಲ್ಲಿ ನನ್ನ ಮಾವನವರಿದ್ದ ಮನೆಯ ಮುಂದೆ ಅಗಲವಾದ  ರಸ್ತೆ. ರಸ್ತೆಯ ಎರಡೂಬದಿಗೆ ಒತ್ತಾಗಿ  ಬೆಳೆದ ಮರಗಳು. ಮರಗಳ ತುಂಬಾ ಮೈನಾ, ಗೊರವಂಕ, ಗಿಣಿ, ಗುಬ್ಬಚ್ಚಿ, ಮತ್ತಿತರ ಹಕ್ಕಿಗಳು ತುಂಬಿಕೊಂಡು ಕಲರವ. ರಸ್ತೆ ತುಂಬಾ ನೆರಳು. ಅದರ ಪಕ್ಕಕ್ಕೆ ಅಗ್ನಿಶಾಮಕ ದಳದ ವಿಶಾಲ ಮೈದಾನ. ನಲವತ್ತು ವರುಷಗಳ ಹಿಂದೆ ರಸ್ತೆಯಲ್ಲಿ ಆಗೊಂದು ಈಗೊಂದು ಕಾರು ಕಂಡರೆ ಹೆಚ್ಚು. ಪಕ್ಕದಲ್ಲೇ ಮೈದಾನವಿದ್ದರೂ ರಸ್ತೆಯೇ ನಮಗೆ ಆಟಕ್ಕೆ ಸ್ಥಳ. ದಿನದ ಮುಕ್ಕಾಲು ಪಾಲು ಸಮಯ ನಾವು ರಸ್ತೆಯಲ್ಲೇ ಕಳೆಯುತ್ತಿದ್ದೆವು. ನಾನು ಸೈಕಲು ನಡೆಸಲು ಕಲಿತಿದ್ದು ಆ ರಸ್ತೆಯಲ್ಲೇ!

ನನ್ನ ಮಾವನವರಿದ್ದದ್ದು ಪ್ರಸಿದ್ಧ ರಂಗ ಕಲಾವಿದ  ಹಾಗೂ  ‘ಸುರುಚಿ’ಪ್ರಕಾಶನದ ಮಾಲೀಕರಾಗಿದ್ದ ಸಿಂಧುವಳ್ಳಿ ಅನಂತಮೂರ್ತಿ ಯವರ ಮನೆಯ ಹಿಂಭಾಗದ ಔಟ್ ಹೌಸಿನಲ್ಲಿ. ಎರಡೂ ಸಂಸಾರಗಳಿಗೆ ಮಧುರ ಭಾಂಧವ್ಯವಿದ್ದು ಎದುರುಬದುರಾಗಿದ್ದ ಇವರ ಹಿಂಬಾಗಿಲು ಅವರ ಮುಂಬಾಗಿಲು ಸದಾ ತೆರೆದೇ ಇರುತ್ತಿದ್ದವು. ಆಟವಾಡಿ ಸಾಕಾದಾಗ ಮನೆಯೊಳಗೆ ನುಗ್ಗಿ ಒಂದು ಮೂಲೆಯಲ್ಲಿ ಸದಾ ನೇತಾಡುತ್ತಿರುತ್ತಿದ್ದ ರಸಬಾಳೆ ಗೊನೆಯಿಂದ ಹಣ್ಣು ಕಿತ್ತು ತಿಂದು, ಅನಂತಮೂರ್ತಿಯವರ ಮನೆ ಸೇರಿ ಅವರ ಗ್ರಂಥಭಂಡಾರದ ಒಂದು ಪುಸ್ತಕ ಹಿಡಿದು ಕೂತರೆ ನನಗೆ ಸಮಯದ ಪರಿವೆಯೇ ಇರುತ್ತಿರಲಿಲ್ಲ. ಬಹುಶಃ ನಾನು ಮೊದಲಬಾರಿಗೆ ‘ಪೋಲಿಕಿಟ್ಟಿ’ ಓದಿದ್ದು ಅಲ್ಲಿಯೇ ಎಂದು ನೆನಪು. ಮತ್ತೂ ಬೇಕಾದರೆ ಹತ್ತಿರದಲ್ಲೇ ಮಾನಸ ಗಂಗೋತ್ರಿಯ ಗ್ರಂಥಾಲಯವಿತ್ತು. ಅಲ್ಲಿ ನೂರಾರು ಹಳೆಯ ‘ಕಸ್ತೂರಿ’ ಮಾಸಪತ್ರಿಕೆಗಳನ್ನು ಒಟ್ಟುಮಾಡಿ ಇಟ್ಟಿದ್ದರು. ಕಸ್ತೂರಿ ಪತ್ರಿಕೆಯ ಲೇಖನಗಳ ಕೊನೆಯಲ್ಲಿರುತ್ತಿದ್ದ ಕಿರುಲೇಖನಗಳು ಹಾಗೂ ಸ್ಥಿರಶೀರ್ಷಿಕೆಗಳಾದ ‘ಇದುವೇ ಜೀವ ಇದು ಜೀವನ’ ಮುಂತಾದುವು ನನಗೆ ಬಹಳ ಇಷ್ಟವಾಗಿದ್ದವು. ಘಂಟೆಗಟ್ಟಲೆ ಇವನ್ನು ಓದುತ್ತಾ ಗಂಗೋತ್ರಿಯ ಗ್ರಂಥಾಲಯದಲ್ಲಿ ನಾನು ಕಾಲ ಕಳೆದಿದ್ದೇನೆ. ಇವೆಲ್ಲಾ ನನ್ನ ಚಿಕ್ಕಂದಿನ ಬಹಳ ಸಂತೋಷಕರ ಅನುಭವಗಳು.

ಮೈಸೂರಿಗೆ ಅನೇಕಬಾರಿ ದಸರೆಯ ಸಮಯದಲ್ಲೇ ಹೋಗಿದ್ದರೂ ಸಹ, ನಾವು ದಸರಾ ವಸ್ತುಪ್ರದರ್ಶನ ಅಥವಾ ಮೆರವಣಿಗೆಗೆ ಹೋದದ್ದು ಬಹಳ  ಕಡಿಮೆ. ಜಂಬೂಸವಾರಿಯಂತು ನಾನು ನೋಡಿದ್ದು ಒಮ್ಮೆಯೇ! ಅದು ಇಂದಿರಾಗಾಂಧಿಯವರು ಮಹಾರಾಜರ ಸವಲತ್ತುಗಳನ್ನು ಕಿತ್ತುಕೊಳ್ಳುವ ಮುಂಚೆ. ಆಗಿನ್ನೂ ಜಂಬೂಸವಾರಿಗೆ ಮೈಸೂರು ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರೇ ಅಂಬಾರಿಯಮೇಲೆ ಕೂಡುತ್ತಿದ್ದರು. ನಾನು, ನನ್ನ ತಮ್ಮ ಹಾಗು ನಮ್ಮ ಸೋದರಸಂಭಂದಿಗಳು ಕೆಲವರನ್ನು ನಮ್ಮ ತಂದೆಯವರು ಜಂಬುಸವಾರಿ ನೋಡಲೆಂದು ಕರೆದೊಯ್ದಿದ್ದರು. ಆಗ ಅದಕ್ಕೆ ಈಗಿರುವಷ್ಟು ಜನಸಂದಣಿ ಇರುತ್ತಿರಲಿಲ್ಲ. ರಸ್ತೆಯಬದಿಯ ಒಂದು ಮರದ ಕೆಳಗೆ ವಿರಾಮವಾಗಿ ನಿಂತು ನಾವು ಜಂಬೂಸವಾರಿಗಾಗಿ ಕಾಯ್ದೆವು.  

ದಸರಾ ಮೆರವಣಿಗೆ  ನಮ್ಮಿಂದ ಅರ್ಧ ಕಿಲೋಮೀಟರಿನಷ್ಟು ದೂರವಿದ್ದಾಗಲೇ ಮಳೆಹನಿಹಾಕಲು  ಶುರುವಾಯಿತು. ಸವಾರಿ ನಮ್ಮಮುಂದೆ ಹಾಯುತ್ತಿದ್ದಂತೆ ಜೋರುಮಳೆ. ನಾವು ಮರದ ಕೆಳಗೇ ಒತ್ತೊತ್ತಾಗಿ ನಿಂತೆವು. ಮಳೆ ಹೆಚ್ಚಾಯಿತು. ಮರದ ಕೊಂಬೆಗಳಿಗೆ ಗೆದ್ದಲು ಕಟ್ಟಿತ್ತು. ಗೆದ್ದಲುಗೂಡಿನ ಮಣ್ಣು ಮಳೆಗೆ ತೋಯ್ದು ನಮ್ಮ ತಲೆಗಳ ಮೇಲೆ ತೊಪ್ಪ ತೊಪ್ಪನೆ ಬೀಳತೊಡಗಿತು. ನಮ್ಮ ತಂದೆಯವರು ಉಟ್ಟ ಪಂಚೆಬಿಚ್ಚಿ, ಚಡ್ಡಿಯಲ್ಲಿ ನಿಂತರು. ಪಂಚೆಯ ನಾಕೂ ತುದಿಗಳನ್ನು ವಿಸ್ತರಿಸಿ ನಾಕುಜನ ಎತ್ತರವಿದ್ದವರು ಚಪ್ಪರದಂತೆ ತಲೆಯಮೇಲೆ ಹರಡಿ ಹಿಡಿದರು. ನಾವು ಮಕ್ಕಳೆಲ್ಲಾ ಮಧ್ಯದಲ್ಲಿ. ಈರೀತಿ ನಾವು ಜಂಬುಸವಾರಿ ವೀಕ್ಷಿಸಿ ನಂತರ ಹಾಗೆಯೇ ನಿಧಾನವಾಗಿ ನಡೆಯುತ್ತಾ ಮನೆತಲುಪಿದೆವು. ಜಂಬುಸವಾರಿ ನೋಡಬಂದಿದ್ದವರಿಗೆ ನಮ್ಮ ಈ  ಸವಾರಿ  ಜಂಬೂಸವಾರಿಗಿಂತ  ಆಕರ್ಷಣೀಯವಾಗಿತ್ತೇನೋ !

ಮಹಾರಾಜರ ಸವಲತ್ತುಗಳು ಹೋದಮೇಲೆ ಮಹಾರಾಜರು ಅಂಬಾರಿಯಮೇಲೆ ಕೂಡಲಿಲ್ಲ ಎಂದು ನನ್ನ ಗ್ರಹಿಕೆ. ಮಹಾರಾಜರಿಲ್ಲದೆ, ಮೆರವಣಿಗೆ ನಿಲ್ಲಿಸಲಾರದೆ ಒಮ್ಮೆ ರಾಜ್ಯಪಾಲರನ್ನು ಕೂಡಿಸಿ ಜಂಬೂಸವಾರಿ ನಡೆಸಲಾಯಿತೆಂದು ನೆನಪು. ಅದರ ಬಗೆಗೆ ಬಹಳ ವಾದವಿವಾದಗಳಾದನಂತರ ಕೊನೆಗೆ ಚಾಮುಂಡೇಶ್ವರಿಯ ವಿಗ್ರಹವನ್ನು ಅಂಬಾರಿಯಲ್ಲಿಟ್ಟು ಮೆರವಣಿಗೆ ಮಾಡಲಾಗುತ್ತಿದೆ. ಈಗ ಇದು ಪೂರ್ತಿ ಸರಕಾರೀ ಕಾರ್ಯಕ್ರಮ.

ಈಚೆಗಿನ ದಿನಗಳಲ್ಲಿ ಬೆಂಗಳೂರು - ಮೈಸೂರಿನ ರಸ್ತೆ ಪ್ರಯಾಣ ನೆನಸಿಕೊಂಡರೆ ದಸರೆಯೂ ಬೇಡ, ಮೈಸೂರೂ  ಬೇಡ ಎನಿಸುತ್ತದೆ. ಹಾಗಾಗಿ, ನಾನು ನನ್ನ ನನ್ನ ಬಾಲ್ಯದ ನೆನಪುಗಳಲ್ಲೇ ಕಳೆದುಹೋಗಬಯಸುತ್ತೇನೆ !

ಭಾನುವಾರ, ಸೆಪ್ಟೆಂಬರ್ 17, 2017

ನಿಸ್ಸಾರ ಅಹಮದ್ - ನಾನು ಗ್ರಹಿಸಿದಂತೆ

ಈ ಬಾರಿಯ ದಸರಾ ಉತ್ಸವವನ್ನು ಉದ್ಘಾಟಿಸಲು ಕರ್ನಾಟಕ ಆಹ್ವಾನಿಸಿದೆ. ಈ ಸಂಧರ್ಭದಲ್ಲಿ ನಿಸ್ಸಾರರ ಬಗೆಗೆ ನನ್ನ  ಒಂದು ಬರಹ :


“ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯಹರಿದ್ವರ್ಣವನದ ತೇಗ  ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯೆ ನಿತ್ಯೋತ್ಸವ. ನಿನಗೆ ನಿತ್ಯೋತ್ಸವ ತಾಯೆ ನಿತ್ಯೋತ್ಸವ.”

ಕೇಳಿದವರೆಲ್ಲರ ಮನಮುಟ್ಟಿ, ಬಾಯಲ್ಲಿ ಗುಣುಗುಟ್ಟಿ, ಬಹಳ ಜನಪ್ರಿಯವಾದ ಈ ಭಾವಗೀತೆ, ಅದರ ಕವಿ ಮಾನ್ಯ ನಿಸ್ಸಾರ ಅಹಮದ್ದರನ್ನು  “ನಿತ್ಯೋತ್ಸವ ಕವಿ” ಎಂದೇ ಗುರುತಿಸಲು ಕಾರಣವಾಯಿತು.  

ನಿತ್ಯೋತ್ಸವ ಗೀತೆಯನ್ನು ನಿಸ್ಸಾರ ಅಹಮದ್ದರು ಬರೆದದ್ದು ಯಾವಾಗಲೋ  ತಿಳಿಯದು. ಆದರೆ ನಾನು ಅದನ್ನು ಮೊದಲಬಾರಿ ಕೇಳಿದ್ದು ೧೯೭೨ ರ ಆಗಸ್ಟ್ ಹದಿನಾಲ್ಕರ ರಾತ್ರಿ ೧೨ ಘಂಟೆಗೆ. ಆ ದಿನಾಂಕ ಅಷ್ಟು ನಿಖರವಾಗಿ ನೆನಪಿರಲು ಕಾರಣವಿದೆ. ೧೯೭೨, ನಮ್ಮ  ಸ್ವಾತಂತ್ರ್ಯೋತ್ಸವದ ರಜತ ವರ್ಷ. ಅದು ವಿಶೇಷವಾದದ್ದರಿಂದ ನಮ್ಮ ಕಾಲೇಜಿನಲ್ಲಿ (ನ್ಯಾಷನಲ್ ಕಾಲೇಜು ಬೆಂಗಳೂರು) ಪ್ರತಿ ವರುಷದಂತೆ ಆಗಸ್ಟ್ ಹದಿನೈದರ ಬೆಳಗ್ಗೆ ಸ್ವಾತಂತ್ರ್ಯೋತ್ಸವ ವನ್ನು ಆಚರಿಸುವ ಬದಲು ಹದಿನಾಲ್ಕರ ರಾತ್ರಿ ಹನ್ನೆರಡು  ಘಂಟೆಗೆ ಸಮಾರಂಭವನ್ನು  ಏರ್ಪಡಿಸಲಾಗಿತ್ತು. ಸಮಾರಂಭದ ಅಂಗವಾಗಿ ‘ನಿತ್ಯೋತ್ಸವ’ ಗೀತೆಯನ್ನು ಶ್ರೀ  ಮೈಸೂರು ಅನಂತಸ್ವಾಮಿಯವರ ನಿರ್ದೇಶನದಲ್ಲಿ  ಒಂದು ಸಮೂಹ ಗಾನವಾಗಿ ಹಾಡಲಾಯಿತು.  ಮಧ್ಯರಾತ್ರಿಯ ನಿಶ್ಶಬ್ದದಲ್ಲಿ ಆ ಸಮೂಹಗಾನ, ಜಲಪಾತದ ಮುಂದೆ ನಿಂತು ಅದು  ಭೋರ್ಗರೆಯುವ ಶಬ್ದವನ್ನು ಕೇಳುವಂತಹದೇ ಆನಂದವನ್ನು ನನಗೆ ತಂದುಕೊಟ್ಟಿತ್ತು.

ಅದಕ್ಕೆ ಎರಡುವರುಷ  ಹಿಂದೆ ನಮ್ಮ ಹೈಸ್ಕೂಲಿನಲ್ಲಿ (ನ್ಯಾಷನಲ್ ಹೈಸ್ಕೂಲು) ಒಮ್ಮೆ ಅನಂತಸ್ವಾಮಿಯವರ ಗಾಯನ ಏರ್ಪಾಟಾಗಿದ್ದಾಗ ಅವರು “ಕುರಿಗಳು ಸಾರ ಕುರಿಗಳು” ಮತ್ತು “ನಾಡ ದೇವಿಯೇ” ಗೀತೆಗಳನ್ನು ಹಾಡಿದ್ದರು. ಗೀತೆಗಳು ಬಹಳ ಮೆಚ್ಚಿಗೆಯಾದರೂ ಅವುಗಳ ಕರ್ತೃ ನಿಸ್ಸಾರ ಅಹಮದ್ದರೆಂದು ಆಗ ನನಗೆ ತಿಳಿದಿರಲಿಲ್ಲ.

ನಂತರ  ಶ್ರೀ ನಿಸ್ಸಾರ ಅಹಮದ್ದರೇ ನಮ್ಮ ಕಾಲೇಜಿನಲ್ಲಿ ಒಮ್ಮೆ ತಮ್ಮ ಕವನಗಳ ಬಗ್ಗೆ  ಮಾತನಾಡಿದರು. ಆದಿನ  ಅವರು ತಮ್ಮ “ರಾಮನ್ ಸತ್ತ ದಿನ”, “ ಸಂಜೆ ಐದರ ಮಳೆ” ಮತ್ತು “ಮಾಸ್ತಿ” ಕವನಗಳನ್ನು ವಾಚನ ಮಾಡಿದ್ದು ನೆನಪಿದೆ.

ನಾನು ಬಹು ಸಣ್ಣ ವಯಸ್ಸಿನಿಂದಲೇ ಪುಸ್ತಕಗಳನ್ನೋದಲು ಪ್ರಾರಂಭಮಾಡಿದ್ದೆನಾದರೂ ನನ್ನ ಓದೆಲ್ಲಾ ಕಥೆ, ಕಾದಂಬರಿಗಳು, ಹಾಸ್ಯಬರಹಗಳು ಮುಂತಾಗಿ ಗದ್ಯಕ್ಕೆ ಸೀಮಿತವಾದದ್ದು. ಕವನ, ಕಾವ್ಯಗಳ ಸೌಂದರ್ಯವನ್ನು ಗುರುತಿಸುವ ಹಾಗೂ ಆಸ್ವಾದಿಸುವ ರಸಿಕತೆ ನನಗೆ ಇಲ್ಲವೆನಿಸುತ್ತದೆ. ಅಷ್ಟಾಗಿಯೂ ನನಗೆ ಕೆಲವು ಕವಿಗಳ, ಕವಿತೆಗಳ ಪರಿಚಯ ಆಗಿದ್ದು, ಅವುಗಳ ರಸಾಸ್ವಾದನೆ ಸಾಧ್ಯವಾದದ್ದು ಭಾವಗೀತೆಗಳ ಮುಖಾಂತರ. ಕೇಳಿದ ಗೀತೆಗಳು  ಹಿಡಿಸಿದರೆ ನಂತರ ಅದನ್ನೋದಿ ಮನನ ಮಾಡಿಕೊಳ್ಳುವುದು ನನ್ನ ಅಭ್ಯಾಸ. ‘ನಿತ್ಯೋತ್ಸವ’ ಕವನ ಸಂಕಲನದ ಅನೇಕ ಕವನಗಳು  ಭಾವಗೀತೆಗಳಾಗಿರುವುದರಿಂದ ಈ ಎಲ್ಲ ಗೀತೆಗಳ ಪರಿಚಯ ನನಗಾಯಿತು. “ಬೆಣ್ಣೆ ಕದ್ದ ನಮ್ಮ ಕೃಷ್ಣ”, “ನನ್ನ ನಲವಿನ ಬಳ್ಳಿ”, “ನಾದವಿರದ ಬದುಕು”, “ಎಲ್ಲ ಮರೆತಿರುವಾಗ” “ನಾ ನಿನ್ನ ಕಂಡಾಗ” ಮುಂತಾದ  ಅನೇಕ ಕವನಗಳು ಅನಂತಸ್ವಾಮಿಯವರ ಕಂಠದ ಮೂಲಕ ನನ್ನ ಮಿದುಳಿಗೆ ತಲುಪಿದವು.  

ಸರಳವಾದ ಸಾಲುಗಳು, ಪದಗಳು ಏನುಹೇಳುತ್ತವೋ ಅದೇ ಅರ್ಥ, ತಲೆಗೆ ಹೆಚ್ಚು ಕೆಲಸಕೊಡದೆ ಓದುತ್ತಾ ಓದುತ್ತಾ ಆನಂದಪಡುವಂಥ ಕವನಗಳಾದರೆ  ನಾನೂ ಅವುಗಳನ್ನು ಓದಿ ಸಂತೋಷಪಡಬಲ್ಲೆ. ನಿಸ್ಸಾರರ ಅನೇಕ ಕವನಗಳು ಸರಳವಾದ ಪದಪುಂಜ ಮತ್ತು ನವಿರಾದ ಹಾಸ್ಯದಿಂದ ‘ಕಾವ್ಯ ಪ್ರಯೋಗ ಪರಿಣಿತಮತಿ’ ಗಳಲ್ಲದ ನನ್ನಂಥವರೂ ಸಹ ಸುಲಭವಾಗಿ ಆಸ್ವಾದಿಸುವಂತಿವೆ. “ಗಾಂಧಿಬಜಾರಿನ ಒಂದು ಸಂಜೆ”, “ಅಮ್ಮ ಆಚಾರ ಮತ್ತು ನಾನು”, “ಪುರಂದರ ದಾಸರು”,  “ಅಭಿವಂದನೆ ನಿಮಗೆ”, “ನಗ್ತೀರಾ ನನ್  ಹಿಂದೆ”, “ಗೃಹಪ್ರವೇಶದ ಉಡುಗೊರೆ”, “ಲಾಲಬಾಗಿನಲ್ಲಿ ಎಚ್ಛೆನ್” ಇವುಗಳು ಅಂಥ ಕವನಗಳಲ್ಲಿ ಕೆಲವು.  ಅವರ ಸಾಲುಗಳ ಸೊಬಗನ್ನು  ವಿವರಿಸುವ ಸಾಮರ್ಥ್ಯ ನನಗಿಲ್ಲ. ಈ ಕೆಳಗಿನ ಕೆಲವು ಉದಾಹರಣೆಗಳನ್ನು ನೋಡಿದರೆ ನಿಮಗೇ ತಿಳಿದೀತು.

ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ, ನ್ಯಾಷನಲ್ ಕಾಲೇಜಿನ  ಪ್ರಿನ್ಸಿಪಾಲ, ಸುಪ್ರಸಿದ್ಧ ವಿಚಾರವಾದಿ ಮತ್ತು ಗಾಂಧಿವಾದಿ ಶ್ರೀ ಹೆಚ್ ನರಸಿಂಹಯ್ಯ ನವರು ಲಾಲಬಾಗ್ ಪ್ರೇಮಿ. ಪ್ರತಿದಿನ ಮುಂಜಾನೆ ಲಾಲ್ ಬಾಗ್ ನಲ್ಲಿ ವಾಯುವಿಹಾರದೊಂದಿಗೆ ಅವರ ದಿನಚರಿ ಸುರು. ಬಹುದಿನಗಳ ಅಂತರದಲ್ಲಿ ಹೆಚ್ ಎನ್ ರವರು ಲಾಲ್ ಬಾಗಿನಲ್ಲಿ ಕಂಡಾಗ ಅವರು ಕೊಟ್ಟ ವಿವರಣೆಯನ್ನು ನಿಸ್ಸಾರರು ತಮ್ಮ ‘ಕೆಂಪುತೋಟದಲ್ಲಿ ಎಚ್ಛೆನ್’ ಕವನದಲ್ಲಿ ಹೇಳುವ ರೀತಿ,

“ಈಚೆಗೇಕೋ ಮುದುಕ ಪಾದಬೆಳಸಿಲ್ಲವೀ ಎಡೆಗೆ
ಗೊಟಕ್ಕೆಂದು ಪಯಣಿಸಿದನೋ ಹೇಗೆ ಮೇಲುಗಡೆಗೆ?
ಎನ್ನುವ ಈ ತರುಲತೆಗಳನುಮಾನ ನೀಗಲಿಕ್ಕೆಂದೇ
ಮಳೆಯಿದ್ದರೂ ಈ ಸಂಜೆ ಇಲ್ಲಿಗೆ ಬಂದೆ.”

ಹಾಗೆಯೇ ನಿಸ್ಸಾರರ ‘ಪುರಂದರ ದಾಸರು’ ಕವನದ ಕೆಲವುಸಾಲುಗಳನ್ನು ನೋಡಿ,

ಮೈಮರೆತು ಹರಿಸ್ಮರಣೆ ಮಾಡಿದರು, ಹಾಡಿದರು
ಹತ್ತುಜನ ಕೂಡಿದರು ಹರಿಭಕ್ತರು .
ಈವೊತ್ತು ಈ ಕೊಂಪೆ, ನಾಳೆ ದೂರದ ಹಂಪೆ
ಹರಿಯಿಂಪ, ನರುಗಂಪ ಹರಡಿದ್ದರು.

ಮತ್ತು, ನಾಡದೇವಿಯೇ ಕವನದ ಎರಡೇ ಸಾಲು

ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಬೇಧ ತಾಯೀ!
ಒಂದೆ ನೆಲದ ರಸಹೀರಲೇನು? ಸಿಹಿ,ಕಹಿಯ ರುಚಿಯ ಕಾಯಿ   

ಆಗಿಂದಾಗ್ಗೆ ಏನಾದರೂ ಲೇಖನಗಳನ್ನು ಬರೆದು ನನ್ನ “ಬ್ಲಾಗ್” ನಲ್ಲಿ ಪ್ರಕಟಿಸುವುದು ನನ್ನದೊಂದು ಹವ್ಯಾಸ. ಅಂತಹ ಒಂದು ಲೇಖನಕ್ಕೆ ನನಗೆ ಬಹಳ ಮೆಚ್ಚಿಗೆಯಾಗಿದ್ದ ನಿಸ್ಸಾರರ ‘ಗೃಹಪ್ರವೇಶದ ಉಡುಗೊರೆ’ ಕವನವನ್ನು ನಾನು ಉಪಯೋಗಿಸಿಕೊಳ್ಳಬೇಕಿತ್ತು. ನಾನು ಅದನ್ನೋದಿ ವರುಷಗಳೇ  ಕಳೆದಿದ್ದವು. ನನಗೆ ಅದರ ಶೀರ್ಷಿಕೆ ಯಾಗಲೀ, ಯಾವ ಸಂಕಲನದಲ್ಲಿದೆ ಎಂಬುದಾಗಲೀ ನೆನಪಿರಲಿಲ್ಲ. ಹಾಗಾಗಿ ನನಗೆ ಅದು ಸಿಕ್ಕಲಿಲ್ಲ. ನಾನು ಬೆಂಗಳೂರಿಗೆ ಹೋಗಿದ್ದಾಗ ನಮ್ಮ ಮನೆಯ ಸಮೀಪದಲ್ಲೇ ವಾಸವಿದ್ದ ನಿಸ್ಸಾರ ಅಹಮದ್ದರನ್ನು ಅವರ ನಿವಾಸದಲ್ಲಿ ಭೇಟಿಮಾಡಿ ಕವನದ ವಸ್ತು ಮತ್ತು ನನಗೆ ನೆನಪಿದ್ದ ಕೆಲವು ಸಾಲುಗಳನ್ನು ಅವರಿಗೆ ತಿಳಿಸಿ, ನನಗೆ ಆ ಕವನ  ಬೇಕಿತ್ತೆಂದು ಕೇಳಿದೆ. ಸಾಹಿತ್ಯ ಪ್ರಪಂಚದ ಅಂಥ ದೊಡ್ಡವ್ಯಕ್ತಿ, ಮೊದಲು ನನ್ನ ಬರಹದ ಬಗೆಗೆ ಆಸಕ್ತಿಯಿಂದ ವಿಚಾರಿಸಿ, ವಿಶ್ವಾಸದಿಂದ ಮಾತನಾಡಿಸಿ, ಕೆಲನಿಮಿಷಗಳ ತರುವಾಯ ಆ ಕವನವನ್ನು ನೆನಪಿಸಿಕೊಂಡರು.
“ಅದು ಈಗ ಅಚ್ಚಿನಲ್ಲಿದೆಯೋ ಇಲ್ಲವೋ ತಿಳಿಯದು. ಸಪ್ನಾ ಪುಸ್ತಕದ ಮಳಿಗೆಯಲ್ಲಿ ನನ್ನ ಸಮಗ್ರ ಕವಿತೆಗಳ ಸಂಕಲನವಿದೆ. ಅದರಲ್ಲಿ ನಿಮಗೆ ದೊರಕಬಹುದು. ಒಂದುವೇಳೆ ಸಿಗದಿದ್ದರೆ ತಿಳಿಸಿ. ಖಂಡಿತಾ ಹೇಗಾದರೂ ಮಾಡಿ ತಮಗೆ ಅದನ್ನು ಕಳುಹಿಸಿಕೊಡುತ್ತೇನೆ” ಎಂದು ಹೇಳಿದರು. “ಫೋನ್ ಮುಖಾಂತರ ತಿಳಿಸಿದರೂ ಸಾಕು” ಎಂದು ಹೇಳಿ ನಂಬರ ಕೊಟ್ಟರು.  ಅವರ ಸರಳತೆ, ಸಜ್ಜನಿಕೆಗೆ ನಾನು ಮಾರುಹೋದೆ.

ಅಪರೂಪಕ್ಕೊಮ್ಮೆ ನಮ್ಮ ಸರಕಾರ “ಭಲೇ, ಇದು ಸರಿಯಾದ ಕೆಲಸ” ಎನ್ನುವಂಥ  ಕೆಲಸವನ್ನು ಮಾಡಿಬಿಡುತ್ತದೆ. ಶ್ರೀ ಕೆ ಎಸ ನಿಸಾರ ಅಹಮದ್ದರನ್ನು ಈ ಬಾರಿಯ ದಸರಾ ಉತ್ಸವನ್ನು ಉದ್ಹಾಟಿಸಲು ಆಹ್ವಾನಿಸಿರುವುದು ಅಂಥದ್ದೊಂದು. ಈ ಸಂಧರ್ಭದಲ್ಲಿ ಅಹಮದ್ದರ ಬಗೆಗೆ ಒಂದು ಲೇಖನ ಬರೆಯೋಣವೆನ್ನಿಸಿತು.  ನಿಸ್ಸಾರರ, ಅವರ ಕವನಗಳ ಪರಿಚಯ ನನ್ನಷ್ಟೂ ಇಲ್ಲದ ಕೆಲವರಿಗೆ, ಈ ಬರಹದ ಮೂಲಕ ಅವರ ಪರಿಚಯವಾಗಿ, ನಿಸ್ಸಾರರ ಕವನಗಳ ಸೊಬಗನ್ನು ಹೆಚ್ಚುಜನ ಸವಿಯುವಂತಾದರೆ ಈ ಪ್ರಯತ್ನ ಸಾರ್ಥಕವೆಂದು ತಿಳಿಯುತ್ತೇನೆ.