ಸೋಮವಾರ, ಸೆಪ್ಟೆಂಬರ್ 26, 2022

ದಸರಾ


ನಮ್ಮ ಚಿಕ್ಕಂದಿನಲ್ಲಿ ದಸರಾಹಬ್ಬಕ್ಕೆ ಶಾಲೆಗೆ ರಜೆ. ಅದಕ್ಕೆ ಮುಂಚೆ ಮುಂಚೆ ನಾವು

‘ಚಿಕ್ಕ ಪರೀಕ್ಷೆ’ ಎಂದು ಕರೆಯುತ್ತಿದ್ದ ಮಧ್ಯಕಾಲೀನ ಪರೀಕ್ಷೆ ಮುಗಿದಿರುತ್ತಿತ್ತು. ಹಾಗಾಗಿ

ದಸರಾರಜೆಯಲ್ಲಿ ವಿದ್ಯಾಭ್ಯಾಸಕ್ಕೂ ರಜೆ. 


ದಸರಾ ಎಂದಕೂಡಲೇ ಹಬ್ಬಕ್ಕೆ ಬೊಂಬೆಗಳನ್ನು ಜೋಡಿಸುವ ಖುಷಿ ನಮಗೆ. ಮನೆಯಲ್ಲಿದ್ದ

ಮೇಜು, ಬೆಂಚು, ಟೀಪಾಯಿ ಎಲ್ಲವನ್ನೂ ಜೋಡಿಸಿ ಎರಡು - ಮೂರು  ಮೆಟ್ಟಲುಗಳನ್ನಾಗಿ ಮಾಡಿ,

ಅದರಮೇಲೊಂದು ವಸ್ತ್ರಹಾಸಿ, ಮಧ್ಯದಲ್ಲಿ ಪಟ್ಟದ ಗೊಂಬೆಗಳನ್ನಿಟ್ಟು ಅದರ ಸುತ್ತ

ಮನೆಯಲ್ಲಿರುತ್ತಿದ್ದ ಎಲ್ಲ ಗೊಂಬೆಗಳು ಮತ್ತು ಆಟದಸಾಮಾನುಗಳನ್ನು ಓರಣವಾಗಿ

ಜೋಡಿಸಿಡುತ್ತಿದ್ದೆವು. ನಂತರ ಸರಸ್ವತೀಪೂಜೆಯದಿವಸ ಸರಸ್ವತಿಯ ವಿಗ್ರಹ, ಆಯುಧಪೂಜೆಗೆ

ಚಾಕು, ಕತ್ತರಿ, ಮಚ್ಚು, ಸ್ಕ್ರೂ ಡ್ರೈವರ್, ಎಲ್ಲಕ್ಕೂ ಜಾಗಮಾಡಿ ಇಡುವ, ಪೂಜಿಸುವ,

ಸಂಭ್ರಮವೇ ಸಂಭ್ರಮ.  ಹತ್ತುದಿನದ ಚಟುವಟಿಕೆಯ ನಂತರ ಅದೆಲ್ಲವನ್ನೂ ತೆಗೆದು

ಪೆಟ್ಟಿಗೆಗೆ ಸೇರಿಸಿ, ಶಾಲೆಯ ಚೀಲ ಹುಡುಕಿ, ಪುಸ್ತಕ ಜೋಡಿಸಿಕೊಂಡು, ಜೋಲುಮುಖದಿಂದ

ಮತ್ತೆ ಶಾಲೆಯಕಡೆ ನಡೆಯುವುದು.  


ನಾನು ಬೆಳೆದಂತೆ ಅನೇಕ ವರುಷಗಳ ಕಾಲ ಎಲ್ಲ ಮನೆಗಳಲ್ಲೂ ದಸರೆಯ ಸಂಭ್ರಮ

ಬಹಳವೇ ಇಳಿಮುಖವಾಗಿ ಹೋಗಿತ್ತು. ಗೊಂಬೆಗಳ ಪ್ರದರ್ಶನ ನಿಂತೇಹೋಗಿ,

ಪೂಜೆಗೋಸ್ಕರ ಎರಡು ಪಟ್ಟದ ಗೊಂಬೆಗಳು ಹಾಗೂ ಸರಸ್ವತಿಯ ವಿಗ್ರಹ ಮಾತ್ರ

ಒಂದು ಮೇಜಿನಮೇಲೆ ಕಾಣುತ್ತಿದ್ದವು. 


ಈಗ ಕೆಲವು ವರುಷಗಳಿಂದ ಮತ್ತೆ ದಸರಾಗೊಂಬೆಗಳನ್ನು ಕೊಳ್ಳುವುದು, ವಿಧ ವಿಧವಾಗಿ

ಅಲಂಕರಿಸಿ ಜೋಡಿಸಿ ಪ್ರದರ್ಶನ ಮಾಡುವುದು ಮುಂತಾದ ಚಟುವಟಿಕೆಗಳು ಕಾಣಬರುತ್ತಿವೆ.

ಈ ನಮ್ಮ ಸಂಪ್ರದಾಯ ಮತ್ತೆ ಉತ್ತೇಜಿತವಾಗಿ ಮನೆಮನೆಗಳಲ್ಲೂ ಕಾಣುತ್ತಿರುವುದು ನನಗೆ

ಬಹಳ ಸಂತೋಷದ ವಿಷಯ. ಅದರೊಂದಿಗೆ  ದಸರಾ ಹತ್ತಿರಬಂದಂತೆ ಅಂಗಡಿಗಳಲ್ಲಿ,

ರಸ್ತೆಪಕ್ಕಗಳಲ್ಲಿ, ಗೊಂಬೆಗಳ ಮಾರಾಟದ ಬಿರುಸು ಸಹ ಕಾಣುತ್ತಿದೆ. ಮೊನ್ನೆ ಹಾಗೆಯೇ



ಒಂದು ಅಂಗಡಿಯಲ್ಲಿ ಮಾರಾಟಕ್ಕಿದ್ದ ಗೊಂಬೆಗಳನ್ನು ಕಂಡಾಗ ಮನದಲ್ಲಿ ಮೂಡಿತು ಕೆಳಗಿನ ಪದ್ಯ.  



ಗೊಂಬೆಯಂಗಡಿಯಲ್ಲಿ ಕಂಡಿತು 

ದಸರಾಗೊಂಬೆ ಪ್ರದರ್ಶನ

ನೆಲದಿಂದ ಸೂರಿನವರೆಗೆ 

ಗೊಂಬೆಗಳ ಸೋಪಾನ 


ರಾಮ ಆಂಜನೇಯರ 

ಪ್ರೀತಿಪೂರ್ವಕ ಆಲಿಂಗನ 

ನೋಡುವನು ಶೇಷತಲ್ಪದಲೊರಗಿ

ಅನಂತಶಯನ


ಪಕ್ಕದಲ್ಲೆ ಬಾಲ ಕೃಷ್ಣನ 

ಕಾಳಿಂಗ ಮರ್ದನ 

ಈ ಪಕ್ಕ ಭಾರ್ಯೆ ನಡೆಸಿಹಳು  

ಮಹಿಷಾಸುರ ಮರ್ದನ


ಮೇಲೆ ಶ್ವೇತಧಾರಿಣಿ 

ಸರಸತಿಯ ವೀಣಾವಾದನ

ಆಲಿಸುತ್ತ ಮೈಮರೆತಿಹನು  

ರಾಮಬಂಟ ಹನುಮಾನ


ಕೆಳಗೆ ಸಾಲಿನಲ್ಲಿ ನಡೆದಿದೆ 

ಭೂಸುರರ ಭೂರಿಭೋಜನ

ಅದಕೆ ವೀಕ್ಷಕ ನಮ್ಮ 

ಗಣಪ, ಮೂಷಿಕ ವಾಹನ


ಅತ್ತ ನೋಡಿದರೆ, ಅವನಪ್ಪ 

ಶಿವ, ಧ್ಯಾನಮಗ್ನ 

ಇತ್ತ ಕಮಲನೇತ್ರನ ನಾಭಿಯಲಿ 

ಶಿವನ ಅಪ್ಪನ ಜನನ ! 


ಕೊಳುವವರ ಕಿಸೆಯೆಡೆಗೆ 

ಮಾರುವವರ ಗಮನ 

ನಾಡಹಬ್ಬದ ಸಂಭ್ರಮ 

ನಾಡಿಗೆ ನಿತ್ಯನೂತನ !