ಗುರುವಾರ, ಅಕ್ಟೋಬರ್ 25, 2018

ಮುಳ್ಳುಕೊನೆಯಮೇಲೆ ಮೂರು ಕೆರೆಯಕಟ್ಟಿ ......


ಮುಳ್ಳುಕೊನೆಯಮೇಲೆ ಮೂರು ಕೆರೆಯಕಟ್ಟಿ ಎರಡುತುಂಬದು  ಒಂದು  ತುಂಬಲೇ ಇಲ್ಲ. 
ತುಂಬಲಿಲ್ಲದಕೆರೆಗೆ ಬಂದರು ಮೂವರು ಒಡ್ಡರು - ಇಬ್ಬರು ಕುಂಟರು ಒಬ್ಬನಿಗೆ ಕಾಲೇ ಇಲ್ಲ. 
ಕಾಲಿಲ್ಲದ ಒಡ್ಡಗೆ ಕೊಟ್ಟರು ಮೂರು ಎಮ್ಮೆಗಳ - ಎರಡುಬರಡು, ಒಂದಕ್ಕೆ ಕರುವೇ ಇಲ್ಲ. 
ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರುಹೊನ್ನುಗಳ - ಎರಡು ಸವಕಲು, ಒಂದು ಸಲ್ಲಲೇ ಇಲ್ಲ. 
ಸಲ್ಲದಿದ್ದ ಹೊನ್ನಿಗೆ ಬಂದರು ಮೂವರು ನೋಟಗಾರರು - ಇಬ್ಬರು ಕುರುಡರು. ಒಬ್ಬನಿಗೆ ಕಣ್ಣೇ ಇಲ್ಲ. 
ಕಣ್ಣಿಲ್ಲದ ನೋಟಗಾರಗೆ ಕೊಟ್ಟರು ಮೂರು ಊರುಗಳ - ಎರಡು ಹಾಳು, ಒಂದಕ್ಕೆ ಒಕ್ಕಲೇ ಇಲ್ಲ. 
ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು  - ಇಬ್ಬರು ಚೊಂಚರು ಒಬ್ಬನಿಗೆ ಕೈಯೇ ಇಲ್ಲ. 
ಕೈಯಿಲ್ಲದ ಕುಂಬಾರನು ಮಾಡಿದ ಮೂರು ಮಡಕೆಗಳ, ಎರಡು ಒಡಕು ಒಂದಕೆ ಬುಡವೇ ಇಲ್ಲ. 
ಬುಡವಿಲ್ಲದ ಮಡಕೆಗೆ ಹಾಕಿದರು ಮೂರು ಅಕ್ಕಿಕಾಳ - ಎರಡು ಬೇಯದು ಒಂದು ಬೇಯಲೇ ಇಲ್ಲ. 
ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು - ಇಬ್ಬರು  ಉಣ್ಣರು, ಒಬ್ಬನಿಗೆ ಹಸಿವೇ  ಇಲ್ಲ. 
ಹಸಿವಿಲ್ಲದ ನೆಂಟಗೆ ಕೊಟ್ಟರು ಮೂರು ಟೊಣಪೆಗಳ - ಎರಡು ತಾಗದು ಒಂದು ತಾಗಲೇ ಇಲ್ಲ. 
ತಾಕಲಿಲ್ಲದ ಟೊಣಪೆಯ ತಾಕಿಸಿ ಸದ್ಗತಿಯ ನೀಯಬೇಕು ಪುರಂದರ ವಿಠಲ 


ಪುರಂದರದಾಸರ ಈ ಪದ್ಯ  ಬಹಳ ಅರ್ಥಪೂರ್ಣವಾಗಿದ್ದು, ಭಕ್ತಿ, ಅಧ್ಯಾತ್ಮ ತತ್ವಗಳ ಸಾರವನ್ನು ತಿಳಿಸಿಕೊಡುತ್ತದೆ ಎಂದು   ಪಂಡಿತರ ಅಭಿಪ್ರಾಯ. ಅನೇಕರು ಈ ಪದ್ಯವನ್ನು ವಿಶ್ಲೇಷಿಸಿ, ಅರ್ಥ ತಿಳಿಸಿದ್ದಾರೆ.
ಬೀದಿ ಬೀದಿ  ಸುತ್ತಾಡಿಕೊಂಡು ತಮ್ಮ ಪದ್ಯಗಳನ್ನು ಹಾಡುತ್ತಾ ಅದರ ಮೂಲಕ ಜನರಿಗೆ ಭಕ್ತಿಮಾರ್ಗ ತೋರಿಸುವುದು  ದಾಸರ ಉದ್ದೇಶ್ಯವಾಗಿದ್ದರಿಂದ, ಪದ್ಯಗಳಲ್ಲಿ  ಜನರನ್ನು ಆಕರ್ಷಿಸುವಂಥ ಪದಗಳು ಮತ್ತು ಅವುಗಳ ಜೋಡಣೆ ಮುಖ್ಯವಾಗಿತ್ತು.  ಈ "ಮುಳ್ಳು ಕೊನೆ" ಯಂಥ ಅನೇಕ ಪದ್ಯಗಳು  ಅಂಥ ರಚನೆಯಿಂದ ಜನರ ಮನಸೆಳೆಯುವಂಥವು. ಒಮ್ಮೆ ಮನಸ್ಸಿಗೆ ತಾಗಿದರೆ ನಂತರ ಅರ್ಥ ತಿಳಿಯುವ ಕುತೂಹಲ ಮೂಡುತ್ತದೆ.  ಅರ್ಥವಿವರಣೆಯೊಂದಿಗೆ ಉಪದೇಶ.
ಕೆಲವು ಬಾರಿ ಪದಗಳ  ಜೋಡಣೆ, ವ್ಯಾಕರಣ, ಹೆಚ್ಚುಕಮ್ಮಿಯಾಗಿರಬಹುದು. ಅದನ್ನು ಅವಗಾಣಿಸಿ ಪದಗಳ ಭಾವ, ಉಪದೇಶ ತಿಳಿಯುವುದು ಅಗತ್ಯ.
ಮನುಷ್ಯನ ಮೋಕ್ಷಸಾಧನೆಗೆ ಇರುವ ಸಾಧಕ ಬಾಧಕಗಳನ್ನು ದಾಸರು ಮೇಲಿನ ಪದ್ಯದಲ್ಲಿ ತಿಳಿಸಿದ್ದಾರೆ. ಅಲ್ಲಿ ಇಲ್ಲಿ ಓದಿ ತಿಳಿದುಕೊಂಡ ಅರ್ಥವನ್ನು ನನ್ನ ಮಾತಿನಲ್ಲಿ ನಾನು ಬರೆದಿದ್ದೇನೆ.


ಮುಳ್ಳು ಕೊನೆಯಮೇಲೆ  ಮೂರು ಕೆರೆಯಕಟ್ಟಿ ಎರಡುತುಂಬದು  ಒಂದು  ತುಂಬಲೇ ಇಲ್ಲ. 

"ಮುಳ್ಳು ಕೊನೆ" ಎಂಬುದು ಜೀವ. ನಮ್ಮ ಪುರಾಣಗಳ ಪ್ರಕಾರ "ಜೀವ" ದ ಗಾತ್ರ, ಕುದುರೆಯ ಬಾಲದ ಒಂದು ಕೂದಲಿನ ತುದಿಯನ್ನು ನೂರುಭಾಗಗಳಾಗಿ ಛೇದಿಸಿ, ಅದರಲ್ಲೊಂದೊಂದನ್ನೂ ಮತ್ತೆ ಸಾವಿರ ಭಾಗ ಮಾಡಿದರೆ ಎಷ್ಟಾಗುತ್ತದೋ ಅಷ್ಟು. ಆಡುಮಾತಿನಲ್ಲಿ, ಅದನ್ನು  ಮುಳ್ಳು ಕೊನೆಯಷ್ಟು ಎಂದು ಹೇಳಲಾಗಿದೆ. ಆ ನಮ್ಮ ಜೀವವೆಂಬ ಮುಳ್ಳು ಕೊನೆಯಮೇಲೆ  ಅನಿರುದ್ಧ ದೇಹ, ಲಿಂಗದೇಹ ಮತ್ತು ಸ್ಥೂಲದೇಹ ಎಂಬ ಮೂರುದೇಹಗಳು ಇವೆ.  ಅವನ್ನೇ  "ಮೂರುಕೆರೆಯ ಕಟ್ಟಿ" ಎಂದಿರುವುದು.  ಆ ಮೂರರಲ್ಲಿ ಮೊದಲೆರಡು ದೇಹಗಳು ಸೂಕ್ಷ್ಮದೇಹಗಳು. ನಮ್ಮ ಅವಗಾಹನೆಗೆ ಬಾರದವು. (ಅವಕ್ಕೆ ಸಂಭಂದಿಸಿದ ವಿವರಗಳು ಲಭ್ಯವಿವೆ. ಆಸಕ್ತಿಯುಳ್ಳವರು ತಿಳಿದುಕೊಳ್ಳಬಹುದು)  ಅವು  ಮೋಕ್ಷಸಾಧನೆಯ ಕಾರ್ಯಮಾಡಿ ಫಲವನ್ನು ತುಂಬಿಸಿಕೊಳ್ಳಲಾರವು.  ಆದ್ದರಿಂದ "ಎರಡು ತುಂಬದು". ಸ್ಥೂಲದೇಹದಿಂದ, ಅಂದರೆ ನಮಗೆ ತಿಳಿಯಬರುವ, ನಾವು ಹೊಂದಿರುವ ದೇಹದಿಂದ, ಸಾಧನೆಮಾಡ ಬಹುದಿತ್ತು. ಆದರೆ ಈ ದೇಹ ಅದನ್ನು ಮಾಡಲಿಲ್ಲ. ಆದ್ದರಿಂದ "ಒಂದು ತುಂಬಲೇಇಲ್ಲ".

ತುಂಬಲಿಲ್ಲದಕೆರೆಗೆ ಬಂದರು ಮೂವರು ಒಡ್ಡರು - ಇಬ್ಬರು ಕುಂಟರು ಒಬ್ಬನಿಗೆ ಕಾಲೇ ಇಲ್ಲ. 

ಆ ಸ್ಥೂಲದೇಹಕ್ಕೆ ಮೂರು  ಸ್ಥಿತಿಗಳು ಬರುತ್ತವೆ - "ಮೂವರು ಒಡ್ಡರು" - ಬಾಲ್ಯ, ಯೌವನ. ವೃದ್ಧಾಪ್ಯಗಳು.  ಬಾಲ್ಯ, ವೃದ್ಧಾಪ್ಯಗಳು, ಬುದ್ಧಿಬಲ ಅಥವಾ ದೇಹಬಲದ ಕೊರತೆಗಳಿಂದಾಗಿ ಸಾಧನೆಯ ಮಾರ್ಗದಲ್ಲಿ ನಡೆಯಲು ಸಾಧ್ಯವಿಲ್ಲದವು. ಆದ್ದರಿಂದ ಅವು "ಕುಂಟು". ಹಾಗಾಗಿ "ಇಬ್ಬರು ಕುಂಟರು". ಯೌವ್ವನದಲ್ಲಿ ಸಾಧನೆಯ ಮಾರ್ಗವನ್ನನುಸರಿಸಲು ಸಾಧ್ಯವಿತ್ತು. ಆದರೆ ಈ ಜೀವ ಅದನ್ನು ಅನುಸರಿಸಲಿಲ್ಲ. ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಿದ್ದರೂ ನಡೆಯಲಿಲ್ಲ. ಹಾಗಾಗಿ ಕಾಲಿದ್ದೂ ಇಲ್ಲದಂತಾಯಿತು. ಅದಕ್ಕೇ "ಒಬ್ಬನಿಗೆ ಕಾಲೇ ಇಲ್ಲ."

ಕಾಲಿಲ್ಲದ ಒಡ್ಡಗೆ ಕೊಟ್ಟರು ಮೂರು ಎಮ್ಮೆಗಳ - ಎರಡುಬರಡು, ಒಂದಕ್ಕೆ ಕರುವೇ ಇಲ್ಲ. 

ಯೌವ್ವನಾವಸ್ಥೆಯಲ್ಲಿದ್ದ ದೇಹಕ್ಕೆ ಅದನ್ನು ಮೋಹದಲ್ಲಿ  ಸಿಲುಕಿಸುವ ಮೂರು ಸಾಧನಗಳು ಒದಗಿಕೊಂಡವು. ಈಶಣ ತ್ರಯಗಳೆಂದು ಅವಕ್ಕೆ ಹೆಸರು.  ಸತಿ, ಸುತ, ಸಂಪತ್ತು.  ಅವನ್ನು "ಮೂರು ಎಮ್ಮೆಗಳು" ಎಂದರು.  (ದೇಹ ಹೆಣ್ಣಾಗಿದ್ದರೆ ಪತಿ, ಸುತ, ಸಂಪತ್ತು ಎಂದುಕೊಳ್ಳಲು ಅಡ್ಡಿಯಿಲ್ಲ. ಇದು ನನ್ನ ವಾಕ್ಯ. ದಾಸರು ಒಪ್ಪುತ್ತಾರೋ ಇಲ್ಲವೋ ತಿಳಿಯದು.) ಅವುಗಳಲ್ಲಿ ಪತಿ/ಸತಿ, ಸುತರು ಮೋಕ್ಷಸಾಧನೆಗೆ ಅಡ್ಡಿಯೆಂದು ಎಲ್ಲ ವ್ಯಾಖ್ಯಾನಕಾರರ ಮತ. ನನಗೆ ಪೂರ್ಣ ಒಪ್ಪಿಗೆಯಿಲ್ಲ. ಅಥವಾ ತಿಳಿದಿಲ್ಲ. ಇರಲಿ. ಒಟ್ಟಿನಲ್ಲಿ ಅವೆರಡೂ ಮೋಕ್ಷಪಥಕ್ಕೆ ಅಡ್ಡಿ ಅಥವಾ ಉಪಯೋಗಕ್ಕೆ ಬಾರವು  ಎಂಬ ಭಾವನೆ.  ಆದ್ದರಿಂದ "ಎರಡು ಬರಡು". ಮೂರನೆಯದಾದ ಸಂಪತ್ತನ್ನು ಸದ್ವಿನಿಯೋಗಮಾಡಿ ಪುಣ್ಯ ಸಂಪಾದಿಸಬಹುದಿತ್ತು. ಆದರೆ ಸಂಪತ್ತು ಇದ್ದೂ ಸದ್ವಿನಿಯೋಗವಾಗಲಿಲ್ಲ. ಸತ್ಫಲ ನೀಡದ  ಸಂಪತ್ತು, ಹಾಲು ಕೊಡದ ಎಮ್ಮೆಯಂತೆ. ಕರುವಿಲ್ಲದ ಎಮ್ಮೆ ಹಾಲುಕೊಡಲಾರದು. ಆದ್ದರಿಂದ "ಒಂದಕ್ಕೆ ಕರುವೇ ಇಲ್ಲ".


ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರುಹೊನ್ನುಗಳ - ಎರಡು ಸವಕಲು, ಒಂದು ಸಲ್ಲಲೇ ಇಲ್ಲ. 

ಸಂಪತ್ತನ್ನು ಉಪಯೋಗಿಸುವ ರೀತಿಗಳು ಮೂರಿದ್ದವು. "ಮೂರು  ಹೊನ್ನುಗಳು". ಸತ್ ಕರ್ಮ ಅಥವಾ ಸದುಪಯೋಗಗೊಳಿಸುವುದು, ದುಷ್ ಕರ್ಮ ಅಥವಾ ವೃಥಾ ವ್ಯಯಿಸುವುದು. ಮೂರನೆಯದು, ಸುಮ್ಮನೆ ಕೂಡಿಡುವುದು.  ದುರ್ವ್ಯಯವಾದ  ಅಥವಾ ಸುಮ್ಮನೆ ಕೂಡಿಟ್ಟ ಧನ ಮೋಕ್ಷದೆಡೆಗೆ ಒಯ್ಯಲಾರದು. ಅವುಗಳಿಂದ ಏನೂ ದೊರಕದು. ಸವಕಲು ನಾಣ್ಯದಂತೆ. ಹಾಗಾಗಿ "ಎರಡು ಸವಕಲು".  ಧನ ಸದ್ವಿನಿಯೋಗ ವಾಗಿದ್ದಿದ್ದರೆ ಮೋಕ್ಷಸಾಧನೆಗೆ ಸಲ್ಲುತ್ತಿತ್ತು. ಆದರೆ ಆಗಲಿಲ್ಲ. ಅದರಿಂದ "ಒಂದು ಸಲ್ಲಲೇ ಇಲ್ಲ".


ಸಲ್ಲದಿದ್ದ ಹೊನ್ನಿಗೆ ಬಂದರು ಮೂವರು ನೋಟಗಾರರು - ಇಬ್ಬರು ಕುರುಡರು. ಒಬ್ಬನಿಗೆ ಕಣ್ಣೇ ಇಲ್ಲ. 

ಸಂಚಿತ, ಆಗಾಮಿ ಮತ್ತು ಪ್ರಾರಬ್ಧಕರ್ಮ ಫಲಗಳು ಗಳು, ಜೀವ, ತನ್ನ ಜನ್ಮಗಳಲ್ಲಿ ಮಾಡಿದ ಕರ್ಮಗಳಿಗೆ ಕನ್ನಡಿ ಇದ್ದಂತೆ. ಜನ್ಮಾಂತರಗಳಲ್ಲಿ ಮಾಡಿದ ಎಲ್ಲ ಕಾರ್ಯಗಳ ಫಲ ಅವುಗಳಮೂಲಕ ಪ್ರಚುರವಾಗುತ್ತದೆ.  ಅವುಗಳನ್ನು ಅನುಭವಿಸಬೇಕಾದ್ದು/ನೋಡಬೇಕಾದ್ದು ಜೀವನೇ ಆದರೂ ಆ ಕರ್ಮಗಳನ್ನೇ "ಮೂವರು ನೋಟಗಾರರು" ಎಂದರು. ಹಿಂದೆ ಮಾಡಿದ ಕರ್ಮಗಳ ಫಲವನ್ನು ಕಂಡು ಎಚ್ಚೆತ್ತುಕೊಳ್ಳಬೇಕೆಂಬ ಭಾವನೆ.  ಸಂಚಿತ, ಆಗಾಮಿ ಕರ್ಮಗಳು ಜೀವದ ಅವಗಾಹನೆಗೆ ಬಾರದವು. ಜೀವ ಅವನ್ನು ಕಾಣಲು ಸಾಧ್ಯವಿಲ್ಲ. ಆದ್ದರಿಂದ "ಇಬ್ಬರು ಕುರುಡರು". ಪ್ರಾರಬ್ಧ ಕರ್ಮದ ಫಲಗಳು ಜೀವನಿಗೆ ಕಾಣಸಿಗುವವು. ಅದನ್ನು ಕಂಡು ಎಚ್ಛೆತ್ತುಕೊಳ್ಳುವ ಕಣ್ಣಿದ್ದರೆ ಎಚ್ಚರಗೊಂಡು, ಜೀವನು ಸಾಗುತ್ತಿರುವ ಪಥ  ಬದಲಾಯಿಸಿಕೊಳ್ಳಬಹುದು.  ಅದನ್ನು ಕಂಡೂ  ಎಚ್ಚರಗೊಳ್ಳದಿದ್ದರೆ ಕಣ್ಣಿದ್ದೂ ಇಲ್ಲದಂತೆ. ಆದ್ದರಿಂದ "ಒಬ್ಬನಿಗೆ ಕಣ್ಣೇ ಇಲ್ಲ."


ಕಣ್ಣಿಲ್ಲದ ನೋಟಗಾರಗೆ ಕೊಟ್ಟರು ಮೂರು ಊರುಗಳ - ಎರಡು ಹಾಳು, ಒಂದಕ್ಕೆ ಒಕ್ಕಲೇ ಇಲ್ಲ. 

ಒಂದು ಜೀವಕ್ಕೆ ಲಭ್ಯವಿರುವ ಗುಣಗಳು ಮೂರು. ಅವು ಸತ್ವ, ರಜ, ತಮೋ ಗುಣಗಳು. ಕಣ್ಣಿಲ್ಲದ ನೋಟಗಾರನಿಗೆ ಸಿಕ್ಕ "ಮೂರು  ಊರುಗಳು".  ಆ ಮೂರರಲ್ಲಿ  ತಮೋ, ರಜೋ ಗುಣಗಳು ಸತ್ಫಲ ನೀಡಲಾರವು . ಆದ್ದರಿಂದ "ಎರಡು ಹಾಳು". ಸತ್ವ ಗುಣದ ಮೂಲಕ ಜೀವ ಮೇಲೇರಬಹುದು. ಆದರೆ ಅದನ್ನು ಅರಿತುಕೊಂಡು, ಉಪಯೋಗಿಸಿಕೊಳ್ಳದಿದ್ದರೆ  ಅದಿದ್ದೂ ಇಲ್ಲದಂತಾಯಿತು. ಊರಿದ್ದೂ "ಒಕ್ಕಲೇ ಇಲ್ಲ".

ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು  - ಇಬ್ಬರು ಚೊಂಚರು ಒಬ್ಬನಿಗೆ ಕೈಯೇ ಇಲ್ಲ. 

ಈ ಜಗತ್ತನ್ನು, ಸಂಸಾರವನ್ನು, ಸೃಷ್ಟಿಸಿ ನಡೆಸುವ "ಮೂವರು ಕುಂಬಾರರು" ಬ್ರಹ್ಮ, ವಿಷ್ಣು, ಮಹೇಶ್ವರರು. ಜೀವದ ಮೂರು ಗುಣಗಳಿಗೆ ಅವರು ಅಭಿಮಾನಿ ದೇವತೆಗಳು. ಯಾವಜೀವನೂ ಪೂರ್ಣವಾಗಿ ಒಂದೇಗುಣವನ್ನು ಪಡೆದವನಲ್ಲ. ಪ್ರತಿಯೊಬ್ಬರಲ್ಲೂ ಈ ಮೂರುಗುಣಗಳು ವ್ಯಕ್ತವಾಗಿರುತ್ತವೆ. ವ್ಯಕ್ತವಾಗುವ ಪ್ರಮಾಣ ಬೇರೆ ಬೇರೆ ಅಷ್ಟೇ. ಅಭಿಮಾನಿದೇವತೆಗಳ ಕೃಪೆಯಿಂದ ಸತ್ವಗುಣದ ಪ್ರಮಾಣವನ್ನು ವೃದ್ಧಿಗೊಳಿಸಿಕೊಂಡು ಸತ್ ಮಾರ್ಗದಲ್ಲಿ ಮುನ್ನಡೆಯಬಹುದು. ಆದರೆ  (ಮಧ್ವ ಸಿದ್ಧಾಂತದಂತೆ) ಬ್ರಹ್ಮ ಮಹೇಶ್ವರರು ಸ್ವತಂತ್ರರಲ್ಲ. ಶ್ರೀಹರಿಯ ಇಚ್ಛೆಗನುಸಾರವಾಗಿ ನಡೆಯತಕ್ಕವರು. ಅವನ ಕೃಪೆಯಿಲ್ಲದಿದ್ದರೆ ಅವರೂ ಅಂಗಹೀನರೇ. ಆದ್ದರಿಂದ "ಇಬ್ಬರು ಚೊಂಚರು".
ಶ್ರೀಹರಿಯ ಕೃಪಾಹಸ್ತ ಚಾಚಿದರೆ ಯಾವುದೂ ಅಸಾಧ್ಯವಲ್ಲ. ಆದರೆ ಶ್ರೀಹರಿಯ ಕೃಪೆಗೆ ಪಾತ್ರನಾಗುವಂಥ ಯಾವುದೇ ಕಾರ್ಯ ಈ ಜೀವ ಮಾಡಲಿಲ್ಲವಾದ್ದರಿಂದ ಆತನ ಕೈ ನಮ್ಮೆಡೆಗೆ ಚಾಚಲಾರದು. ಕೈಯಿದ್ದೂ ಇಲ್ಲದಂತೆ. ಆದ್ದರಿಂದ "ಒಬ್ಬನಿಗೆ ಕೈಯೇ ಇಲ್ಲ"


ಕೈಯಿಲ್ಲದ ಕುಂಬಾರನು ಮಾಡಿದ ಮೂರು ಮಡಕೆಗಳ, ಎರಡು ಒಡಕು ಒಂದಕೆ ಬುಡವೇ ಇಲ್ಲ. 

ಕೈಯಿಲ್ಲದ ಕುಂಬಾರನು, ತನ್ನ ಕೈಚಾಚಲು ಅನುವಾಗುವಂಥ ಜೀವನವನ್ನು ಜೀವನು ನಡೆಸಲೆಂದು  ಜ್ಞಾನ, ಭಕ್ತಿ, ವೈರಾಗ್ಯಗಳೆಂಬ "ಮೂರು  ಮಡಕೆಗಳ " ಮಾಡಿ  ನೀಡಿದ. ಸಾಧನಾ ತ್ರಯಗಳೆಂದು ಅವುಗಳ ಹೆಸರು. ಈ ಕಲಿಗಾಲದಲ್ಲಿ  ಜ್ಞಾನ, ವೈರಾಗ್ಯಗಳನ್ನು ಗಳಿಸುವುದು ಸುಲಭಸಾಧ್ಯವಲ್ಲ.  ಒಡಕುಮಡಕೆಯಲ್ಲಿ ನೀರು ತುಂಬಿಸಿದಂತೆ. ಆದ್ದರಿಂದ "ಎರಡು ಒಡಕು". ಭಕ್ತಿ ಎಂಬುದು ಸುಲಭದಲ್ಲಿ ಕೈಗೆಟಕುವಂತಹುದು.  ಭಗವಂತನಲ್ಲಿ ಪ್ರೀತಿ, ಅವನ ಕೃಪೆಗಳಿಸುವ ಕಾರ್ಯಗಳಲ್ಲಿ  ಶ್ರದ್ಧೆ, ಎಂಬ ಬುಡವಿದ್ದರೆ ಭಕ್ತಿಯೆಂಬ ಮಡಕೆ ತುಂಬಿಸಲು ಸಾಧ್ಯ.  ಆದರೆ ಭಕ್ತಿಎಂಬ ಮಡಕೆಯನ್ನು ತುಂಬಿಸುವ ಪ್ರಯತ್ನವಾಗಲೇ ಇಲ್ಲ. ಅದರಲ್ಲಿ ತೊಟ್ಟೂ ತುಂಬಲಿಲ್ಲ. ಬುಡವೇ ಇಲ್ಲದ ಮಡಕೆಯಂತೆ.  ಹಾಗಾಗಿ "ಒಂದಕ್ಕೆ ಬುಡವೇ ಇಲ್ಲ".

ಬುಡವಿಲ್ಲದ ಮಡಕೆಗೆ ಹಾಕಿದರು ಮೂರು ಅಕ್ಕಿಕಾಳ - ಎರಡು ಬೇಯದು ಒಂದು ಬೇಯಲೇ ಇಲ್ಲ. 

ಭಕ್ತಿಯಲ್ಲೂ ಮೂರುವಿಧಗಳು.  ಸಾತ್ವಿಕ ಭಕ್ತಿ, ತಾಮಸಿಕ ಭಕ್ತಿ, ರಾಜಸಭಕ್ತಿ ಗಳು. "ಮೂರು  ಅಕ್ಕಿಕಾಳು" ಗಳು.  ರಾಜಸ ಭಕ್ತಿ, ತಾಮಸಭಕ್ತಿಗಳ ಮೂಲಕ ಮೋಕ್ಷಗಳಿಸುವ ಪ್ರಯತ್ನ  ಫಲ ನೀಡಲಾರದು.  ಬಹಳವೇ ಕಷ್ಟಸಾಧ್ಯವಾದದ್ದು. "ಎರಡು ಬೇಯದು". ಸಾತ್ವಿಕ ಭಕ್ತಿಯನ್ನು ಬೇಯಿಸಿ  ಜೀವವನ್ನು ಪಕ್ವ ಗೊಳಿಸುವ ಪ್ರಯತ್ನವೇ ಆಗಲಿಲ್ಲ. "ಒಂದು ಬೇಯಲೇ ಇಲ್ಲ".

ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು - ಇಬ್ಬರು  ಉಣ್ಣರು, ಒಬ್ಬನಿಗೆ ಹಸಿವೇ  ಇಲ್ಲ. 


ಸಾತ್ವಿಕ ಭಕ್ತಿಯನ್ನು ಬೆಳೆಸಲು ಸಹಕರಿಸುವಂಥ "ಮೂವರು ನೆಂಟರು" ಪ್ರತಿಜೀವರೊಡನೆಯೂ ಇದ್ದಾರೆ. ಕಾಯ, ವಾಕ್, ಮನಸ್ಸು. ಈ ಮೂವರೂ ಭಕ್ತಿರಸವನ್ನುಂಡು ಸ್ಪಂದಿಸಿ ಸಹಕರಿಸಿದರೆ ಮೋಕ್ಷಫಲ ಸಿಗುವ ಸಾಧ್ಯತೆ ಉಂಟು. ಆದರೆ ಕಾಯ ಹಾಗು ವಾಕ್ ಇವೆರಡೂ ಮನದ ಅಪ್ಪಣೆಯಿಲ್ಲದೆ ಭಕ್ತಿರಸ ಉಣ್ಣಲಾರವು.  ಆದ್ದರಿಂದ "ಇಬ್ಬರು ಉಣ್ಣರು".  ಮನಕ್ಕೆ ಅದು ಸಾಧ್ಯ. ಆದರೆ ಆ ಮನಸ್ಸಿಗೆ ಭಕ್ತಿರಸವುಣ್ಣುವ "ಹಸಿವೇ ಇಲ್ಲ".

ಹಸಿವಿಲ್ಲದ ನೆಂಟಗೆ ಕೊಟ್ಟರು ಮೂರು ಟೊಣಪೆಗಳ - ಎರಡು ತಾಗದು ಒಂದು ತಾಗಲೇ ಇಲ್ಲ. 

ಹಸಿವಿಲ್ಲದ ಮನಸ್ಸಿಗೆ ಪೆಟ್ಟು ಕೊಟ್ಟರಾದರೂ ಬುದ್ಧಿಕಲಿಯಬಹುದೆಂದು ಅತೀತ, ಅನಾಗತ,ಮತ್ತು ವರ್ತಮಾನ ಜನ್ಮಗಳೆಂಬ "ಮೂರು  ಟೊಣಪೆ", ಪೆಟ್ಟು, ಗಳನ್ನು ಕೊಟ್ಟರು. ಪ್ರತಿ ಜನ್ಮವೂ ಆಯಾ ಜನ್ಮಕ್ಕೆ ತಕ್ಕಂಥ ತಾಪದ ಪೆಟ್ಟು ತಿನ್ನಿಸಿ ಬುದ್ಧಿಕಲಿಸುವಂಥದ್ದು. ಆದರೆ ಜೀವಕ್ಕೆ ಅತೀತ, ಅನಾಗತ ಜನ್ಮಗಳ  ಅರಿವೇ ಆಗಲಾರದಾದ್ದರಿಂದ "ಎರಡು ತಾಕದು", ವರ್ತಮಾನ ಜನ್ಮದ ಪೆಟ್ಟು ತಾಕಿಯೂ ಅರಿವು ಬರಲಿಲ್ಲವಾಗಿ ಅದು ತಾಕಿಯೂ ತಾಕದಂತೆ. ಒಂದು "ತಾಕಲೇ ಇಲ್ಲ".

ತಾಕಲಿಲ್ಲದ ಟೊಣಪೆಯ ತಾಕಿಸಿ ಸದ್ಗತಿಯ ನೀಯಬೇಕು ಪುರಂದರ ವಿಠಲ 

ಈ ಮಾನವ ಜನ್ಮದ ಸಂಸಾರ ತಾಪವನ್ನು, ಅದರ ಕಾರಣ, ಫಲಗಳನ್ನು, ಮನದಟ್ಟುಮಾಡಿಸಿ, ಸಂಸಾರದಲ್ಲಿ ವಿರಕ್ತಿಮೂಡಿಸಿ, ಭಕ್ತಿಮಾರ್ಗದಲ್ಲಿ ನಡೆಸಿ, ಸದ್ಗತಿಯನ್ನು ನೀಡಬೇಕೆಂದು ಪುರಂದರ ವಿಠ್ಠಲ ನಲ್ಲಿ, ಪುರಂದರ ದಾಸರು ಬಿನ್ನವಿಸಿಕೊಂಡಿದ್ದಾರೆ.






ಭಾನುವಾರ, ಅಕ್ಟೋಬರ್ 7, 2018

ಇರುವೆ ನೀನೆಲ್ಲೆಲ್ಲೂ ಇರುವೆ

ಹೊರದೇಶದಲ್ಲಿರುವ ನನ್ನ ತಮ್ಮನ ಮಗ ತನ್ನ ಊರು, ಮನೆ, ಪರಿಸರ, ಕಾಲೇಜು, ಶಿಕ್ಷಕರು, ಸಹಪಾಠಿಗಳು ಇವುಗಳೆಲ್ಲದರ  ಬಗೆಗೆ ಆಗಿಂದಾಗ್ಗೆ ನಮಗೆ ತಿಳಿಸಿ ಬರೆಯುತ್ತಿರುತ್ತಾನೆ. ಹಾಗೆಯೇ ಈಚೆಗೊಮ್ಮೆ ಬರೆದಾಗ ತನ್ನ ಸ್ನೇಹಿತನೊಬ್ಬನ ವಿಚಾರ ತಿಳಿಸಿದ. ಅವನ ಸ್ನೇಹಿತ  ತನ್ನ ಕೋಣೆಯಲ್ಲಿ ಒಂದು ಗಾಜಿನಪೆಟ್ಟಿಗೆಯಲ್ಲಿ ಇರುವೆಗಳನ್ನು ಸಾಕುತ್ತಾನಂತೆ. ಅದರ ಮೂಲಕ ಆ ಇರುವೆಗಳು ಬದುಕುವ ರೀತಿ, ಅವುಗಳು ಗೂಡು ಕಟ್ಟುವ ಕೌಶಲ್ಯ , ರಾಣಿ ಮತ್ತಿತರ ಇರುವೆಗಳ ನಡವಳಿಕೆ, ಆಹಾರ ಪದ್ಧತಿ ಇವುಗಳನ್ನೆಲ್ಲಾ ಅಭ್ಯಾಸಮಾಡುವುದು ಅವನ ಸ್ನೇಹಿತನ ಹವ್ಯಾಸವಂತೆ.

ಇದನ್ನು ಓದಿದ ನನ್ನ ತಮ್ಮನ ತಮಾಷೆಯ ಪ್ರತಿಕ್ರಿಯೆ ಹೀಗಿತ್ತು.

"ನಾವು ಶಾಂತಿನಗರದಲ್ಲಿ (ಬೆಂಗಳೂರಿನಲ್ಲಿ ನಾವಿದ್ದ ಮನೆ) ವಸತಿಗೆ ಹೋದಾಗ, ಇರುವೆಗಳು ತಮ್ಮ ಬಡಾವಣೆಯ ಮಧ್ಯೆ ನಮಗೆ ಮನೆಕಟ್ಟಲು ಅವಕಾಶಕೊಟ್ಟು, ನಾವು ಮನೆ ಕಟ್ಟುವ ಪದ್ಧತಿ, ನಮ್ಮ ರೀತಿ ನೀತಿಗಳು ಮತ್ತು ನಮ್ಮ ನಡವಳಿಕೆಯನ್ನು ಅಭ್ಯಾಸ ಮಾಡುತ್ತಿದ್ದವು. ಆ ಬಡಾವಣೆಯ ಮೂರುಕೋನಗಳಲ್ಲಿ ಬಿಳಿ, ಕೆಂಪು ಮತ್ತು ಕಪ್ಪು ಇರುವೆಗಳು ತಮ್ಮ ತಮ್ಮ ಸಾಮ್ರಾಜ್ಯ ಕಟ್ಟಿಕೊಂಡಿದ್ದವು."

ನನ್ನ ತಮ್ಮ ತಮಾಷೆಗೆಂದು ಹಾಗೆ ಬರೆದಿದ್ದರೂ ಅದು ಹೆಚ್ಚುಕಮ್ಮಿ ನಿಜವೇ ಆಗಿತ್ತು. ಹಿಂದೆ ಹೊಲವಾಗಿದ್ದ ಪ್ರದೇಶವನ್ನು  ಬಡಾವಣೆಯನ್ನಾಗಿಮಾಡಿ ಅಲ್ಲಿ ಮನೆಗಳು ಕಟ್ಟಲು ಪರವಾನಗಿ ಕೊಟ್ಟಿದ್ದ ಜಾಗ ಅದು. ಅಲ್ಲಿ ಮನೆಕಟ್ಟಿದ  ಮೊದಲಿಗರಲ್ಲಿ ನಾವೊಬ್ಬರು. ಮನೆಯ ಸುತ್ತಲೂ ಇನ್ನೂ ಹೊಲಗಳ ಅವಶೇಷ ಉಳಿದಿತ್ತು. ಮಧ್ಯೆ ಮಧ್ಯೆ ಹತ್ತಾರು ದೊಡ್ಡ ದೊಡ್ಡ ಹುತ್ತಗಳೂ ಇದ್ದವು. ಅಂದಮೇಲೆ ಅದು ನಿಜವಾಗಿ ಇರುವೆಗಳ ಸಾಮ್ರಾಜ್ಯವೇ.

ನಮ್ಮ ಮನೆಯ ಅಡಿಪಾಯ ಮಾತ್ರ ಸಿಮೆಂಟಿನಿಂದ ಕಟ್ಟಿದ್ದು. ಇಟ್ಟಿಗೆಯ ಗೋಡೆಗಳು ಮಣ್ಣಿನಿಂದಲೇ ಜೋಡಿಸಲ್ಪಟ್ಟಿದ್ದವು. ನಮ್ಮ ಮನೆಯ ಕೆಳಗೇ ಇರುವೆಗಳ ಕಾಲೋನಿ ಇತ್ತೋ ಏನೋ . ನಾವು ಆ ಮನೆಸೇರಿದ ಕೆಲವೇ ದಿನಗಳೊಳಗೆ ಇರುವೆಗಳು ವಾಸದ ಕೋಣೆಯ ಗೋಡೆಯತುಂಬೆಲ್ಲಾ ಸಣ್ಣ ಸಣ್ಣ  ತೂತುಗಳನ್ನು ಮಾಡಿ ಅದರಿಂದ ಹೊರಗೆ ಒಳಗೆ ಓಡಾಡುತ್ತಿದ್ದವು.  ಅದರಿಂದಲೇ  ನನ್ನ ತಮ್ಮ "ಇರುವೆಗಳು  ನಮ್ಮ ನಡವಳಿಕೆಯನ್ನು ಅಭ್ಯಾಸಮಾಡುತ್ತಿದ್ದವು" ಎಂದದ್ದು. ನಮ್ಮ ಮನೆಯಲ್ಲೋ ಆಗ ಕುರ್ಚಿ ಸೋಫಾಗಳಿರಲಿಲ್ಲ. ನಮ್ಮ ಹಾಲಿನಲ್ಲಿ - ಲಿವಿಂಗ್ ರೂಮ್ - ಒಂದು ಚಾಪೆ ಹಾಸಿರುತ್ತಿದ್ದೆವು. ಯಾರು ಬಂದರೂ ಅದರಮೇಲೆಯೇ ಕೂಡುವುದು. ಹಾಗೆ ಯಾರಾದರೂ ಬಂದು ಕೂತು ಬೆನ್ನನ್ನು ಗೋಡೆಗೆ ಒರಗಿಸಿದರೆ ನಿಮಿಷಾರ್ಧದಲ್ಲಿ ಇರುವೆಗಳು ಅವರ ಬೆನ್ನು ಕತ್ತನ್ನೆಲ್ಲಾ ಆವರಿಸಿ ಕಚ್ಚುತ್ತಿದ್ದವು.

ಇರುವೆಗಳನ್ನು ನಿವಾರಿಸಲೆಂದು ನಮ್ಮ ಸೋದರತ್ತೆ, ಬಹಳ ಸಣ್ಣ ವಯಸ್ಸಿನಲ್ಲೇ ತಮ್ಮ ಪತಿಯನ್ನು ಕಳೆದುಕೊಂಡು ನಮ್ಮೊಡನಿದ್ದವರು, ಆ ತೂತುಗಳಿಗೆಲ್ಲಾ ಸೀಮೆಯೆಣ್ಣೆ ಹಾಕುತ್ತಿದ್ದರು. ಒಮ್ಮೆ ಸೀಮೆಎಣ್ಣೆ ಬಿದ್ದರೆ ಹಲವಾರು ದಿನಗಳ ಕಾಲ ಇರುವೆಗಳು ಅಲ್ಲಿ ಸುಳಿಯುತ್ತಿರಲಿಲ್ಲ.

ಆದರೆ ಆ ಕಾಲ ಸೀಮೆಎಣ್ಣೆಯ ರೇಷನ್ನಿನ ಕಾಲ. ನಮಗೆ ನಿಗದಿಯಾಗಿದ್ದ ಸೀಮೆಎಣ್ಣೆಯ ಪ್ರಮಾಣ ನಮ್ಮ ಮನೆಯ ಅಡಿಗೆ ಒಲೆಗೇ ಸಾಲುತ್ತಿರಲಿಲ್ಲ. ಜತೆಗೆ ಆ ಎಣ್ಣೆ ನಮಗೆ ಬೇಕೆಂದಾಗ ಸಿಕ್ಕುತ್ತಿರಲಿಲ್ಲ. ರೇಷನ್ನಿನಲ್ಲಿ ಕೊಡುತ್ತಿದ್ದ ಎಣ್ಣೆಯನ್ನು ಸೀಮೆಎಣ್ಣೆ ಗಾಡಿ ರೇಷನ್ನಿನ ಅಂಗಡಿಮುಂದೆ ಬಂದಾಗ ಕ್ಯೂ ನಿಂತು ಕೊಳ್ಳಬೇಕಿತ್ತು. ಗಾಡಿ ಯಾವಾಗ ಬರುತ್ತದೆಂಬುದು ಯಾರಿಗೂ ಗೊತ್ತಿರುತ್ತಿರಲಿಲ್ಲ. ರೇಷನ್ ಅಂಗಡಿಯ ಶೆಟ್ಟಿ ಅದನ್ನು ತಿಳಿದುಕೊಂಡಿರುತ್ತಿದ್ದ. ಆದರೆ ಅವನ ಅಂಗಡಿಗೆ ಬರಿಯ ರೇಷನ್ ಗಾಗಿ ಮಾತ್ರ ಹೋಗುತ್ತಿದ್ದ ನಮಗೆ ಅದನ್ನು ತಿಳಿಸುತ್ತಿರಲಿಲ್ಲ. ಸೀಮೆಯೆಣ್ಣೆಯ ಗಾಡಿಯ ಬಗ್ಗೆ ಸುದ್ದಿ ಬೇಕಾದರೆ ಮನೆಗೆ ಬೇಕಾದ ಇತರೇ ಸಾಮಾನುಗಳೆಲ್ಲವನ್ನೂ ಅವನ ಬಳಿಯೇ ಕೊಳ್ಳಬೇಕಿತ್ತು ! ಅವನ ಬಳಿ ಮನೆ ಸಾಮಾನು ಕೊಂಡರೆ ಅವನು ನಮ್ಮ ಸೀಮೆಎಣ್ಣೆ ಡಬ್ಬವನ್ನು ತನ್ನೊಡನೆ ಇಟ್ಟುಕೊಂಡಿದ್ದು, ಗಾಡಿ ಬರುವ ಹೊತ್ತಿನಲ್ಲಿ ಅವನ ಅಂಗಡಿಯ ಮುಂದೆ ಮೂಡುತ್ತಿದ್ದ ಡಬ್ಬಗಳ ಸಾಲಿನಲ್ಲಿ ಮುಂದೆ ಇಟ್ಟಿರುತ್ತಿದ್ದ.

ಆದರೆ ಅವನ ಅಂಗಡಿಯ ಬೇಳೆಯಲ್ಲಿ ಹುಳ, ಅಕ್ಕಿ ಮುಗ್ಗಲುವಾಸನೆ, ಬೆಲ್ಲ ಅಂಟು ಎಂದೆಲ್ಲಾ ಅಮ್ಮ ತಗಾದೆ ಮಾಡಿ ಅವನ ಬಳಿ ನಮ್ಮ ಮನೆಸಾಮಾನು ಕೊಳ್ಳುತ್ತಿರಲಿಲ್ಲ. ಹಾಗಾಗಿ ನಾವು ಅತ್ತಿತ್ತ ಓಡಾಡುವಾಗ, ಶಾಲೆಗೆ ಹೋಗುವಾಗ, ಬರುವಾಗ ಅಂಗಡಿಯ ಮೇಲೆ ಕಣ್ಣಿಟ್ಟಿದ್ದು ಅಲ್ಲಿ ಡಬ್ಬಗಳ ಸಾಲು ಶುರುವಾಗುವ ಸುಳಿವು ಕಂಡಾಕ್ಷಣ ಡಬ್ಬ ಇಟ್ಟು, ಗಾಡಿಬರುವವರೆಗೂ ಕಾವಲು ನಿಂತು ಎಣ್ಣೆ ಕೊಳ್ಳಬೇಕಿತ್ತು. ನಾವು ಅಲ್ಲಿ ಡಬ್ಬ ಇಟ್ಟು ಮನೆಗೆ ಬಂದರೆ ಮತ್ತೊಮ್ಮೆ ಹೋಗುವ ಹೊತ್ತಿಗೆ ನಮ್ಮ ಡಬ್ಬ ಸಾಲಿನ ಕೊನೆಯಲ್ಲಿರುತ್ತಿತ್ತು!


ಸೀಮೆಎಣ್ಣೆಗೆ ಹೀಗೆ ಪರದಾಟವಾದ್ದರಿಂದ ನಮ್ಮ ಅತ್ತೆ ಇರುವೆಗಳ ತೂತಿಗೆ ಸುಣ್ಣ ತುಂಬಲು ಪ್ರಾರಂಭಿಸಿದರು. ಸದಾ ಒಂದು ತೆಂಗಿನ ಕರಟದಲ್ಲಿ ಸುಣ್ಣ ಕಲಸಿ ತಯಾರಿರುತ್ತಿತ್ತು. ಗೋಡೆಯಲ್ಲಿ ತೂತು ಕಂಡಾಕ್ಷಣ ಅತ್ತೆ ಅದಕ್ಕೆ ಸುಣ್ಣ ತುಂಬಿ ಮುಚ್ಚುತ್ತಿದ್ದರು. ಆದರೇನು? ಮಾರನೆಯ ದಿನ ಅಲ್ಲಿ ಮತ್ತೆ ತೂತಾಗಿ ಇರುವೆಗಳು ಸಾಲಿಟ್ಟಿರುತ್ತಿದ್ದವು. ಹಾಗಾಗಿ ಇರುವೆಗಳಿಗೂ ನಮ್ಮತ್ತೆಗೂ ಸದಾ ಮುಗಿಯದ ಸ್ಫರ್ದೆ.

ಇರುವೆಗಳಿಗೆ ನಮ್ಮ ಮನೆಯ ಎಲ್ಲ ಜಾಗಗಳಿಗಿಂತ ಬಹಳ ಇಷ್ಟವಾದ ಜಾಗ ನಮ್ಮ ನೀರೊಲೆ. ಬಚ್ಚಲು ಮನೆಯ ಒಂದು ಮೂಲೆಯಲ್ಲಿ ದೊಡ್ಡ ತಾಮ್ರದ ಹಂಡೆಯೊಂದನ್ನು ಇರಿಸಿ ಸುತ್ತಲೂ ಕಟ್ಟೆ ಕಟ್ಟಿ ಅದರ ಬುಡದಲ್ಲಿ ಸೌದೆಯೊಟ್ಟಿ ಬೆಂಕಿಹಾಕಲು ಅನುವುಮಾಡಲಾಗಿತ್ತು. ದಿನಾ ರಾತ್ರಿ ಹಂಡೆಗೆ ನೀರುತುಂಬಿ ಬೆಳಗ್ಗೆ ಎದ್ದಾಕ್ಷಣ ಒಲೆಗೆ ಸೌದೆ ತುಂಬಿ ಉರಿಹಾಕುತ್ತಿದ್ದೆವು. ಆ ಒಲೆಯೊಳಗೆ ಕೆಂಪಿರುವೆಗಳು ಗೂಡುಮಾಡಿಕೊಂಡಿದ್ದವು. ಒಲೆಗೆ ಸೌದೆ ಒಟ್ಟುವಾಗ ಎಚ್ಚರ ಇಲ್ಲದಿದ್ದರೆ ನಮ್ಮ ಕೈಗೆಲ್ಲಾ ಕೆಂಪಿರುವೆ ಹತ್ತಿಕೊಂಡು ಒಲೆಯಬದಲು ನಮ್ಮ ಮೈಯಲ್ಲಿ ಉರಿಯೇಳುತ್ತಿತ್ತು !

ಚಳಿಗಾಲದಲ್ಲಿ ಈ ನೀರೊಲೆಯ ಮುಂದೆ ಕೂತು ಮೈಕಾಯಿಸುವುದು ಒಂದು ಬಹಳ ಹಿತವಾದ ಅನುಭವ. ಬೆಳಗ್ಗೆ ಎದ್ದ ತಕ್ಷಣ ಬಚ್ಚಲುಮನೆಯಲ್ಲಿ ಒಲೆಯಮುಂದೆ ಕೂತರೆ ಎದ್ದು ಹೊರಹೋಗುವ ಮನಸ್ಸೇ ಬರುತ್ತಿರಲಿಲ್ಲ. ಎಲ್ಲರ ಸ್ನಾನವಾದಮೇಲೆ ಒಲೆಯಲ್ಲಿ ಉಳಿದ ಬೂದಿಯಲ್ಲಿ ಒಂದೆರಡು ಈರುಳ್ಳಿ ಆಲೂಗಡ್ಡೆಗಳನ್ನು ಹಾಕಿ ಮುಚ್ಚುತ್ತಿದ್ದೆವು. ಒಂದರ್ಧ ಘಂಟೆಯನಂತರ ಅವುಗಳನ್ನು ಹೊರತೆಗೆದು ಸುಟ್ಟ ಸಿಪ್ಪೆ ಸುಲಿದು ತಿನ್ನುವುದು ಅದೆಂಥ ರುಚಿಯೋ !

ಇರುವೆಗಳಿಂದ ಶುರುವಾದ ಬರಹ ಎತ್ತಲೋ ಹೋಯಿತು. ನಮ್ಮ ಮನೆಕಟ್ಟಿದ ಮೊದಮೊದಲಲ್ಲಿ ನಮಗೆ ಕಾಣುತ್ತಿದ್ದ ಕರಿ, ಕೆಂಪು ಇರುವೆಗಳ ಜತೆ ಬಿಳಿ ಇರುವೆಗಳು - ಗೆದ್ದಲು - ಕಂಡಾಗ ನಮ್ಮ ತಂದೆಯವರಿಗೆ ಬಹಳವೇ ಘಾಬರಿಯಾಯಿತು. ಗೆದ್ದಲು ನಮ್ಮ ಮನೆಗೇನೂ ಹತ್ತಿರಲಿಲ್ಲ. ನಮ್ಮ ಮನೆಮುಂದಿದ್ದ ಸೀಬೆಗಿಡದ ಕಾಂಡದಲ್ಲಿ ಒಣಗಿದ್ದ ಒಂದು ಕೊಂಬೆಯಮೇಲೆ ಗೆದ್ದಲಿನ ಗೂಡು ಕಾಣಿಸಿಕೊಂಡಿತು. ತಂದೆಯವರು ತಕ್ಷಣ ಅದನ್ನು ಕೆರೆದು ಹಾಕಿ ಅಲ್ಲಿ ಸುತ್ತಲೂ ಅಗೆದು ಡಿ ಡಿ ಟಿ ಪುಡಿಹಾಕಿದರು. ಆದರೇನು? ಕೆಲವೇದಿನಗಳಲ್ಲಿ ಗೆದ್ದಲು ಮತ್ತೊಂದೆಡೆ ಕಂಡಿತು. ಮತ್ತೆ ಅದೇ ಕೆಲಸ. ಅಗೆತ ಮತ್ತು ಡಿ ಡಿ ಟಿ. ನಮ್ಮ ಅತ್ತೆಯವರಿಗೆ ಮನೆಯೊಳಗಿನ ಇರುವೆಗಳೊಡನೆ ಹೋರಾಟವಾದರೆ ತಂದೆಯವರಿಗೆ ಹೊರಗೆ ಗೆದ್ದಲುಗಳೊಡನೆ ಕಾದಾಟ. ಸಾಲಮಾಡಿ ಜಾಗಕೊಂಡು, ಸಾಲಮಾಡಿ ಕಟ್ಟಿದ್ದ ಮನೆ. ಮಣ್ಣಿನಗೋಡೆ . ಇನ್ನೂ ಹದಿನೈದು ವರುಷ ಕಂತು ತೀರಿಸಬೇಕಿರುವಾಗ ಗೆದ್ದಲುಹತ್ತಿ ಗೋಡೆ ಬಾಗಿಲು ಬಿದ್ದರೆ ಗತಿಯೇನು ಎಂಬುದು ಅವರ ಚಿಂತೆ. ಆ ಆತಂಕ ನಮಗೆ ಆಗ ಅರ್ಥವಾಗುತ್ತಿರಲಿಲ್ಲ.

ತಿಳಿದವರು ಕೆಲವರನ್ನು ಕೇಳಿ ತಂದೆಯವರು ಮನೆಯ ಸುತ್ತಲೂ ಮೂರು ಅಡಿ ಅಗಲ, ಆರು ಆಡಿ ಆಳದ ಕಂದಕ ಅಗೆಸಿದರು. ಕಂದಕದ ಬುಡದಲ್ಲಿ ಯಾವುಯಾವುದೋ ಕೀಟನಾಶಕಗಳನ್ನು ಬೆರೆಸಿ ಹರಡಿ, ಕಂದಕವನ್ನು ಮರಳಿನಿಂದ ತುಂಬಿ ಮುಚ್ಚಿಸಿದರು. ಆ ಕೆಲಸ ನಡೆಯುತ್ತಿರುವಾಗ ನಮಗೆ ಆಟವಾಡಲು ಮರಳುರಾಶಿ, ನೋಡಿ ಕೌತುಕಪಡಲು ಗೆದ್ದಲುಗೂಡು, ರಾಣಿಗೆದ್ದಲು ಮತ್ತು ಮನೆಯಿಂದ ಹೊರಗೆ ಒಳಗೆ ಓಡಾಡಲು ಇಟ್ಟಿದ್ದ ಹಲಗೆಗಳ ಸೇತುವೆಯಮೇಲೆ ಪದೇಪದೇ ನಡೆದಾಡುವ ಸಂಭ್ರಮ ! ಒಟ್ಟಿನಲ್ಲಿ ಆ ಕೆಲಸ ಮುಗಿದನಂತರ ಐವತ್ತು ವರುಷ ನಾವು ಆಮನೆಯಲ್ಲಿದ್ದೆವು. ಗೆದ್ದಲು ಮತ್ತೆ ಕಾಣಬರಲಿಲ್ಲ. ಇರುವೆಗಳ ಕಾಟವೂ ಕೊಂಚ ಕಡಿಮೆಯಾಯಿತು.

ಈಗ ನಾವಿರುವುದು ಸಿಮೆಂಟಿನಿಂದ ಕಟ್ಟಿದ ಮನೆ. ನಮ್ಮ ಕಿಟಕಿಗಳೆಲ್ಲಾ ಅಲ್ಯೂಮಿನಿಯಂ ಲೋಹದ್ದು. ಗೆದ್ದಲಿನ ಭಯವಿಲ್ಲ. ಆದರೆ ಇರುವೆಗಳು ನಮ್ಮನ್ನು ಕಾಡುವುದು ತಪ್ಪಿಲ್ಲ. ಯಾವುದೇ ತಿಂಡಿ ಪದಾರ್ಥ ಅಪ್ಪಿತಪ್ಪಿ ಮುಚ್ಚಳ ಘಟ್ಟಿಯಾಗಿ ಮುಚ್ಚದೆ ಇಟ್ಟಿದ್ದರೆ ಇರುವೆಸಾಲಿಡುವುದು ಖಂಡಿತ. ಈಗ ಅವುಗಳೊಡನೆ ಕಾದಾಡುವ ಬಾರಿ ನನ್ನ ಪತ್ನಿಯದು. ಅಡಿಗೆ ಮನೆಯ ಬಡು ಗಳನ್ನೆಲ್ಲಾ ಆಕೆ ಪದೇಪದೇ ಒದ್ದೆಬಟ್ಟೆಯಿಂದ ಒರೆಸಿಡುತ್ತಾಳೆ. ಇರುವೆಗಳನ್ನು ದೂರವಿಡುವವೆಂದು ಹೆಸರಾದ ರಾಮರೇಖೆ, ಲಕ್ಷ್ಮಣರೇಖೆ ಮುಂತಾಗಿ ಹೆಸರಿರುವ ಸೀಮೆಸುಣ್ಣದಂಥ ಕಡ್ಡಿಗಳನ್ನು ತಂದು ಬಡುಗಳ ಅಂಚುಗಳಲ್ಲಿ ಗೆರೆಯೆಳೆಯುತ್ತಾಳೆ. ಕೀಟನಾಶಕ ಪುಡಿಗಳುದುರಿಸುತ್ತಾಳೆ. ಆದರೆ ಇರುವೆಗಳು ಅದುಹೇಗೋ ಅದೆಲ್ಲವನ್ನು ನಿವಾರಿಸಿಕೊಂಡು ಡಬ್ಬಗಳಿಗೆ ದಾಳಿಯಿಡುತ್ತವೆ. ಪ್ಲಾಸ್ಟಿಕ್ ನ ಡಬ್ಬವನ್ನೇ ತೂತುಕೊರೆದು ಒಳನುಗ್ಗುತ್ತವೆ. ಬೇಸಗೆಯಲ್ಲಂತೂ ಅವುಗಳ ಕಾಟ ಹೇಳತೀರದು. ಕೊನೆಗೆ ನನ್ನ ಪತ್ನಿ ನಮ್ಮ ಡೈನಿಂಗ್ ಟೇಬಲಿನ ನಾಲ್ಕುಕಾಲುಗಳ ತಳಕ್ಕೆ ನಾಲ್ಕು ಬಟ್ಟಲುಗಳನ್ನಿಟ್ಟು ಅದರಲ್ಲಿ ನೀರುತುಂಬಿ, ಟೇಬಲ್ಲಿನ ಮೇಲೆ ತಿಂಡಿ ಪದಾರ್ಥಗಳನ್ನಿಟ್ಟು "ಈಗ ಇವು ಏನು ಮಾಡುತ್ತವೋ ನೋಡುತ್ತೇನೆ. ಈ ಇರುವೆಗಳು ಏನು ಮಾಡಿದರೂ ನೀರಿನಲ್ಲಿ ಈಜಿಕೊಂಡು ಬರುವ ವಿದ್ಯೆಯನ್ನಂತೂ ಇನ್ನೂ ಕಲಿಯಲಿಲ್ಲ" ಎಂದು ಇರುವೆಗಳಿಗೆ ಸವಾಲೆಸೆದಳು. ಇರುವೆಗಳು ಸೋಲೊಪ್ಪಿಕೊಂಡೆವೆನಿಸುತ್ತದೆ. ಅದಾಗಿ ಹದಿನೈದು ದಿನವಾದರೂ ಮೇಜಿನ ಮೇಲೆ ಇರುವೆಗಳು ಕಾಣಲಿಲ್ಲ. ನನ್ನ ಪತ್ನಿ ತಾನು ಗೆದ್ದೆನೆಂದು ಬೀಗಿದಳು.

ತಿಂಗಳುಗಳಿಂದ ಸಿಹಿತಿಂಡಿ ಮಾಡದೇ ಹೆದರಿಕೊಂಡಿದ್ದವಳು ನನ್ನ ಮಗನ ಹುಟ್ಟುಹಬ್ಬಕ್ಕೆಂದು ಗುಲಾಬ್ ಜಾಮೂನ್ ಮಾಡಿ ಧೈರ್ಯವಾಗಿ ಮೇಜಿನಮೇಲಿಟ್ಟು ರಾತ್ರಿ ನಿರಾಳವಾಗಿ ನಿದ್ದೆ ಮಾಡಿದಳು. ಮಾರನೇ ದಿವಸ ಮುಂಜಾನೆ ಎದ್ದು ನೋಡಿದರೆ ಆಘಾತ ! ಮೇಜಿನಮೇಲೆ ಜಾಮೂನಿನ ಬೋಗುಣಿಯೇ ಕಾಣದಂತೆ ಇರುವೆಗಳು ಮುತ್ತಿಕೊಂಡಿದ್ದವು. ನನ್ನಾಕೆಯನ್ನು ಸುಧಾರಿಸಲು ನನಗೆ ಅರ್ಧದಿನ ಬೇಕಾಯಿತು. ಇಂಗ್ಲಿಷಿನಲ್ಲಿ ಟ್ಯಾಕ್ಟಿಕಲ್ ರಿಟ್ರೀಟ್ ಎಂಬ ಪದವಿದೆ. ಯುದ್ಧಭೂಮಿಯಿಂದ ಕೊಂಚ ಹಿಮ್ಮೆಟ್ಟಿ ಅವಕಾಶಕ್ಕಾಗಿ ಕಾಯುವುದು. ಇರುವೆಗಳು ಹಾಗೆ ಕಾದಿದ್ದವೇನೋ. ನನ್ನಾಕೆ ತಾನು ಗೆದ್ದೆನೆಂಬ ಧೈರ್ಯದಿಂದ ಜಾಮೂನುಮಾಡಿ ಮೇಜಿನಮೇಲಿಟ್ಟು, ತನ್ನ ಸ್ನೇಹಿತೆಗೆ ಆಬಗ್ಗೆ ಮೊಬೈಲಿನಿಂದ ಮೆಸೇಜ್ ಕಳುಹಿಸಿ, ಮೊಬೈಲನ್ನು ಚಾರ್ಜುಮಾಡಲೆಂದು ಮೇಜಿನಮೇಲೆಯೇ ಇಟ್ಟು ಚಾರ್ಜರ್ ಅನ್ನು ಮೇಜಿನಪಕ್ಕದ ಪ್ಲಗ್ ಪಾಯಿಂಟಿಗೆ ತಗುಲಿಸಿ ಹೋಗಿದ್ದಳು. ಸಮಯಕಾದಿದ್ದ ಇರುವೆಗಳು ಗೋಡೆಹತ್ತಿ , ಪ್ಲಗ್ ಪಾಯಿಂಟ್ ತಲುಪಿ, ಚಾರ್ಜರಿನ ತಂತಿಯಮೆಲಿಂದ ಮೊಬೈಲಿಗಿಳಿದು, ಮೇಜನ್ನು ಆಕ್ರಮಿಸಿಕೊಂಡವು ! ಈ ಮಾನವರು ಏನೇಮಾಡಿದರು ಒಂದಲ್ಲ ಒಂದುಕಡೆ ಎಚ್ಚರ ಕಳೆದುಕೊಳ್ಳುತ್ತಾರೆಂದು ಅವಕ್ಕೆ ತಿಳಿಯದೇ ?

ನಾವು ಇರುವೆಗಳನ್ನು ಪೆಟ್ಟಿಗೆಯಲ್ಲಿಟ್ಟು ಅವುಗಳ ಜೀವನಕ್ರಮವನ್ನು ನೋಡಿ ಕಲಿಯತೊಡಗಿದ್ದೇವೆ. ಅವುಗಳ ಗೂಡುಗಳಲ್ಲಿ ಸಣ್ಣ ಸಣ್ಣ ಕ್ಯಾಮರಾಗಳನ್ನು ಅಳವಡಿಸಿ ಅವು ಬಾಳುವ ರೀತಿಯನ್ನು ಅಭ್ಯಾಸಮಾಡುತ್ತೇವೆ. ಆದರೆ ನೋಡಿ, ನಾವು ಮಾನವರು ಈ ಭೂಮಿಯಮೇಲೆ ಕಾಣಿಸಿಕೊಂಡದ್ದು ಎರಡು ಲಕ್ಷವರುಷಗಳ ಹಿಂದೆ ಎಂದು ಅಂದಾಜು. ಇರುವೆಗಳು ಭೂಮಿಯಮೇಲೆ ಕಾಣಿಸಿಕೊಂಡದ್ದು ತೊಂಭತ್ತೆರಡು ದಶಲಕ್ಷಗಳಿಗೂ ಮೊದಲಂತೆ ! ನಾವು ಅವುಗಳ ಜೀವನವನ್ನು ಈಚೆಗೆ, ಇಪ್ಪತ್ತೋ , ಮೂವತ್ತೋ , ಐವತ್ತೋ ವರುಷಗಳಿಂದ ಅಭ್ಯಾಸಮಾಡುತ್ತಿದ್ದೇವೆ. ಅವು ನಮ್ಮನ್ನು, ನಾವು ಭೂಮಿಯಮೇಲೆ ಕಾಣಿಸಿಕೊಂಡಾಗಿನಿಂದ ಅಂದರೆ ಎರಡು ಲಕ್ಷ ವರುಷಗಳಿಂದ ನೋಡುತ್ತಿವೆ ! ನಾವು ಅವುಗಳಿಗೆ ಸಾಟಿಯೇ ?

ಗುರುವಾರ, ಜುಲೈ 26, 2018

'ಉಪನಯನ'


ಪೂಜೆ, ಯಜ್ಞ, ಯಾಗಾದಿ ಧಾರ್ಮಿಕ ಆಚರಣೆಗಳಲ್ಲಿ ಮತ್ತು ವಿವಾಹ, ಉಪನಯನ, ಶ್ರಾಧ್ದ ಮೊದಲಾದ  ಸಾಮಾಜಿಕ/ಧಾರ್ಮಿಕ ಸಂಧರ್ಭಗಳಲ್ಲಿ ನಾವು ತಲೆತಲಾಂತರಗಳಿಂದ ನಮಗೆ ತಿಳಿದುಬಂದಿರುವ ಪದ್ದ್ಧತಿಗಳನ್ನು ಅನುಸರಿಸಿಕೊಂಡು ಬಂದಿರುತ್ತೇವೆ. ಅವುಗಳ ಔಚಿತ್ಯ, ಅರ್ಥ ನಮಗೆ ತಿಳಿದಿರಬಹುದು, ತಿಳಿದಿಲ್ಲದೆಯೂ ಇರಬಹುದು. ಅವುಗಳಿಗೆ ಧಾರ್ಮಿಕ ನಂಬಿಕೆ ಗಳ ಹಿನ್ನೆಲೆ ಅಷ್ಟೇ ಅಲ್ಲದೆ, ಅವುಗಳ ಆಚರಣೆ ಪ್ರಾರಂಭವಾದ ಕಾಲದಲ್ಲಿ ಕಾರ್ಯೋಚಿತ ವಾಗಿದ್ದ ಕಾರಣಗಳು ಇರಬಹುದೆಂದು ನನ್ನ ಅನಿಸಿಕೆ. ಉಪನಯನದ ಬಗ್ಗೆ ಆ ರೀತಿಯಾಗಿ ಚಿಂತಿಸಿದಾಗ ಹೊಳೆದ ವಿಚಾರವನ್ನು ಒಂದು ಸಣ್ಣ ಕಥೆಯರೂಪದಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ. ಇದನ್ನೊಂದು ಕಾಲ್ಪನಿಕ ಬರಹವಾಗಿ ಭಾವಿಸಬಹುದು.




ಬರುವ ಕಾರ್ತಿಕ ಮಾಸಕ್ಕೆ ಸುಯುಕ್ತಿಗೆ ಎಂಟುವರ್ಷ ತುಂಬುತ್ತದೆ. ಎಂಟು ವರುಷ ಅವನು ಕುಟೀರದ  ಸುತ್ತಮುತ್ತ ಓಡಾಡಿಕೊಂಡು, ಕರು, ನಾಯಿ, ಬೆಕ್ಕುಗಳೊಡನೆ  ಆಡಿಕೊಂಡು, ಆಗೀಗ ಜತೆಗೆ ಸಿಗುವ ಇತರ ಹುಡುಗರೊಡನೆ ಮರಹತ್ತಿ ಕೀಚು, ಕಾಯಿ, ಹಣ್ಣು ಕಿತ್ತು ತಿಂದುಕೊಂಡು, ಹತ್ತಿರದ ಹೊಂಡದಲ್ಲಿ ಈಜಾಡಿಕೊಂಡು, ಮಿಕ್ಕ ಸಮಯ ಅಮ್ಮನ ಹಿಂದೆ ಸುತ್ತಾಡಿಕೊಂಡು  ಕಾಲಕಳೆದಿದ್ದಾನೆ.

ತಂದೆ ದಿನನಿತ್ಯ ಮಾಡುವ ಕಾರ್ಯಗಳನ್ನು ಅನುಕರಿಸಿ ಆಡುತ್ತಾ ಕಡ್ಡಿಗಳನ್ನು ಸೇರಿಸಿ ಅಗ್ನಿಯಿಲ್ಲದೆ ಹೋಮ ಮಾಡುತ್ತಾನೆ. ಕೇಳಿ ಕೇಳಿಯೇ  ಬಾಯಿಪಾಠವಾಗಿರುವ ಕೆಲವು ಮಂತ್ರಗಳನ್ನು  ತನಗಿಷ್ಟಬಂದಂತೆ ಹೇಳಿಕೊಳ್ಳುತ್ತಾನೆ. ಕುಟೀರದ ಸಮೀಪದಲ್ಲಿ ತೆರವುಮಾಡಿರುವ  ಜಾಗದಲ್ಲಿ ತನ್ನ ತಂದೆ ಅಗೆತಮಾಡಿ ಹಣ್ಣು, ತರಕಾರಿ ಗಿಡಗಳ ಆರೈಕೆ ಮಾಡುವಾಗ ಇವನೂ ಚಿಕ್ಕ ಬುಟ್ಟಿಯಲ್ಲಿ ಮಣ್ಣು ಹೊತ್ತೊಯ್ಯುತ್ತಾನೆ, ಗೊಬ್ಬರ ತುಂಬಿ ತರುತ್ತಾನೆ. ಎಲ್ಲವೂ ಅವನಿಗೆ ಆಟವೇ!

ಈಗ ಎಂಟು ತುಂಬಿದರೆ ಅವನು ಪಾಠಕ್ಕಾಗಿ ಗುರುಕುಲಕ್ಕೆ ಹೋಗಬೇಕು. ಅಲ್ಲಿ ಹೇಗಿರುತ್ತಾನೋ, ಏನುಮಾಡುತ್ತಾನೋ ಎಂದು ತಾಯಿಗೆ ಚಿಂತೆ ಶುರುವಾಗಿದೆ. ಆದರೆ ಗುರುಕುಲಕ್ಕೆ ಹೋಗಬೇಕಾದ್ದು ಕಡ್ಡಾಯ. ತಂದೆಯೇ ಸುಯುಕ್ತಿಗೆ  ಪಾಠಕಲಿಸಲು ಸಮರ್ಥನಾಗಿದ್ದರೂ ಆತ ಗುರುವಾಗಲಾರ. ತಂದೆಯೊಡನೆ ಸದರ ಹೆಚ್ಚು. ಕ್ರಮವಾದ, ಶಿಸ್ತುಬಧ್ಧವಾದ ಕಲಿಕೆ ಅವನೊಡನೆ ಸಾಧ್ಯವಿಲ್ಲ. ಆದ್ದರಿಂದ ಗುರುಕುಲವೇ ಸರಿ. ಸುಯುಕ್ತಿ ಹೋಗಬೇಕಾಗಿರುವ  ಗುರುಗಳ ಆಶ್ರಮ ಇವರ ಕುಟೀರದಿಂದ ಕೊಂಚ ದೂರವೇ. ಕಾಡಿನೊಳಗಿನ ಹಾದಿ. ಗುರುಗಳ ಆಶ್ರಮವೂ ಕಾಡಿನೊಳಗೆಂದೇ  ಹೇಳಬಹುದು. ಗುರು ಮತ್ತು ಗುರುಪತ್ನಿ ಬಹಳ ಒಳ್ಳೆಯವರೇ ಆದರೂ ಮನೆಯಲ್ಲಿರುವ ಮುಚ್ಚಟೆ ಅಲ್ಲಿ ಸಿಗಲಾರದು. ಜತೆಗೆ ಅಲ್ಲಿ ಇವನಂತೆಯೇ ಇತರ ಹುಡುಗರೂ ಇರುತ್ತಾರೆ. ಇವನು ಅಲ್ಲಿ ಹತ್ತರಲ್ಲಿ ಹನ್ನೊಂದು.

ಇನ್ನು ಕೆಲವೇ ದಿನಗಳಲ್ಲಿ ಅವನ ಉಪನಯನದ ಮುಹೂರ್ತವಿದೆ. ಅದಾಗುತ್ತಿದ್ದಂತೆ  ಗುರುಕುಲಕ್ಕೆ ಹೊರಡುವುದೇ. ಎಂಟುವರುಷದ ವರೆಗೆ ಸಮಯ ಬರಿಯ ತುಂಟಾಟದಲ್ಲೇ ಕಳೆಯಿತು. ಇನ್ನು ಮುಂದೆ ಕ್ರಮವಾದ, ಕಠಿಣವಾದ ದಿನಚರಿ. ಗುರುಗಳ ಮನೆ ಕೆಲಸ, ನೀರುತರುವುದು, ಅಗ್ನಿಕಾರ್ಯದ ಪರಿಕರಗಳನ್ನು ತಯಾರಿಸಿಡುವುದು, ಹೋಮಕುಂಡವನ್ನು ತಯಾರುಮಾಡುವುದು ಅಷ್ಟೇಅಲ್ಲದೆ ದನಕರುಗಳ ಆರೈಕೆ, ತರಕಾರಿ ತೋಟದ ಕೆಲಸಗಳು ಎಲ್ಲ ಕೆಲಸಗಳಲ್ಲೂ  ಕೈಗೂಡಿಸಬೇಕು. ಸಮಿತ್ತು ಸಂಗ್ರಹಿಸಲು ಕಾಡಿನೊಳಗೂ ಹೋಗಬೇಕು. ಅದೆಲ್ಲದರ ಜತೆಗೆ ವಿದ್ಯಾಭ್ಯಾಸವಾಗಬೇಕು . ಬೇಕೆನಿಸಿದಾಗ ಬೇಕೆನಿಸಿದ್ದನ್ನು ತಿನ್ನುವಂತಿಲ್ಲ. ಊಟ ತಿಂಡಿ ಎಲ್ಲ ಕ್ಲುಪ್ತ ಸಮಯಕ್ಕೆ, ಹೊಟ್ಟೆ ತುಂಬಲು ಮಾತ್ರ. ತಾಯಿ ಹಾಲುಕಾಸಿದಾಗ ಕೆನೆತೆಗೆದು ಬಾಯಿಗಿಡುವಂತೆ ಅಲ್ಲಿ ಯಾರೂ  ತಿನ್ನಿಸುವವರಿಲ್ಲ. ಹಲಸಿನ ತೊಳೆ ಬಿಡಿಸಿ, ಬೀಜ ತೆಗೆದು ಬಾಯಿಗಿಡುವವರಿಲ್ಲ. ಅಲ್ಲಿಯದು ಎಂಟುವರುಷದ ಹುಡುಗನಿಗೆ ಕಠಿಣವೆನಿಸುವ ಜೀವನವೇ. ನಿಜಕ್ಕೂ ಎರಡನೆಯ ಹುಟ್ಟೇ. ಉಪನಯನದೊಂದಿಗೆ ಅದರ  ಪ್ರಾರಂಭ. ಅದಕ್ಕೇ ಉಪನಯನವಾಗಿ ಗುರುಕುಲಕ್ಕೆ ಹೊರಟ ಹುಡುಗನನ್ನು 'ದ್ವಿಜ' (ಎರಡನೇಬಾರಿ ಜನಿಸಿದವನು) ಎನ್ನುತ್ತಾರೋ ಏನೋ.

ಇದನ್ನೇ ಯೋಚಿಸುತ್ತಾ ನಿಟ್ಟುಸಿರುಬಿಟ್ಟು, ಆಡುತ್ತಿರುವ ಕಂದನನ್ನು ಕಣ್ಣುತುಂಬಿಕೊಂಡು, ತಾಯಿ ಉಪನಯನದ ತಯಾರಿಗೆ ತೊಡಗಿದಳು. 'ಮಾತೃ ಭೋಜನ'ಕ್ಕೆ ತಿನಿಸುಗಳನ್ನು ಅಣಿಮಾಡಬೇಡವೇ? ತಯಾರಿ ನಡೆಯುತ್ತಿದ್ದಂತೆಯೇ 'ಉಪನಯನ' ಎಂಬ ಪದದ ಚಿಂತನೆ ಶುರುವಾಯಿತು. ಉಪನಯನ ಸಂಸ್ಕಾರವೇನು? ವಿದ್ಯಾರ್ಜನೆಗಾಗಿ ಮನೆಬಿಟ್ಟು ಹೊರಡಲಿರುವ ಮಗನನ್ನು ತಂದೆಯಾದವನು ಹತ್ತಿರಕರೆದು ಕೂಡಿಸಿಕೊಂಡು ಬುದ್ಧಿಮಾತುಗಳನ್ನು ಹೇಳುವುದಷ್ಟೇ? ಅದು ಈಗಾಗಲೇ ವರುಷದಿಂದ ನಡೆಯುತ್ತಲೇ ಇದೆ.  ಅಪ್ಪ ಸಂಧ್ಯಾವಂದನೆ ಮಾಡುವಾಗ, ದಿನದ ಅಭ್ಯಾಸಕ್ಕಾಗಿ ಗ್ರಂಥಗಳನ್ನು ಓದಲು ಕುಳಿತಾಗ, ಮಗು ಜತೆಯಲ್ಲಿ ಕುಳಿತು, "ಅದನ್ನು ಮಾಡುವುದೇಕೆ? ಇಷ್ಟು ಗ್ರಂಥಗಳೇಕೆ? ಅಷ್ಟು ಓದುವುದೇಕೆ?" ಇತ್ಯಾದಿ ಪ್ರಶ್ನೆ ಮಾಡುತ್ತದೆ. ಆ ಸಂಧರ್ಭಗಳನ್ನು ಉಪಯೋಗಿಸಿಕೊಂಡು ಅಪ್ಪ ಮಗುವಿನ ತಲೆಯಲ್ಲಿ ಜ್ಞಾನಾರ್ಜನೆಯ ಬೀಜ ಬಿತ್ತಲು ಪ್ರಯತ್ನಿಸುತ್ತಾನೆ. "ಮಗೂ ನಮಗೆ  ಧನಬಲವಿಲ್ಲ, ತೋಳ್ಬಲವಿಲ್ಲ, ನಮಗಿರುವುದು ಬುದ್ಧಿಬಲ ಮಾತ್ರ. ಅದರಿಂದ ನಾವು ಜೀವನ ಸಾಗಿಸಬೇಕು. ಜ್ಞಾನ ಗಳಿಸುವುದು, ಇತರರಿಗೆ ತಿಳಿಸಿಕೊಡುವುದು ನಮ್ಮ ಧರ್ಮ. ಅದಕ್ಕೇ ನಾವು ಭಗವಂತನಲ್ಲಿ ನಮಗೆ ಹೆಚ್ಚು ಹೆಚ್ಚು ಜ್ಞಾನ ದಯಪಾಲಿಸೆಂದು ಪದೇ ಪದೇ ಕೇಳಿಕೊಳ್ಳುವುದು ಮತ್ತು ಜ್ಞಾನಾರ್ಜನೆಯೇ ನಮ್ಮನ್ನು ಕಾಪಾಡುವುದೆಂದು ನಮಗೆ ನಾವೇ ಮನದಟ್ಟು ಮಾಡಿಕೊಳ್ಳುವುದು."

"ಆ ಸಣ್ಣ ಮಗುವಿಗೆ ನಿಮ್ಮದು ಇದೇನು ಉಪದೇಶ" ವೆಂದು ತಾಯಿ ಆಕ್ಷೇಪಿಸುತ್ತಾಳೆ. "ಅದು ನಿಜಸ್ಥಿತಿ. ಮಗು ಎಷ್ಟುಬೇಗ ಅದನ್ನು ಮನದಟ್ಟು ಮಾಡಿಕೊಂಡರೆ ಅಷ್ಟು ಒಳ್ಳೆಯದು. ನಾಳೆ ಉಪನಯನದಲ್ಲಿ ಅದನ್ನೇ ಅಲ್ಲವೇ ಹೇಳುವುದು" ಎನ್ನುತ್ತಾನೆ ತಂದೆ.

ಇವೆಲ್ಲವನ್ನೂ ಯೋಚಿಸುತ್ತಾ ತಾಯಿ ಮಾತೃಭೋಜನದ  ತಿನಿಸುಗಳ ತಯಾರಿಗೆ ತೊಡಗಿದಳು. ಉಪನಯನದ ದಿವಸ ತಾನು ತೊಡೆಯಮೇಲೆ ಕುಳ್ಳಿರಿಸಿಕೊಂಡು ತಿನಿಸುವ ಊಟವೇ ಮಗುವಿಗೆ ತನ್ನ ಕೈಯಿನ ಕೊನೆಯ ಊಟವಲ್ಲವೇ? ಮಗನಿಗೆ  ಏನೇನು ಪದಾರ್ಥಗಳು ಇಷ್ಟವೋ ಅವನ್ನೆಲ್ಲಾ ಮಾಡಿಡಬೇಕು. ನಂತರ ಎಂದಿಗೆ ಆ ತಿನಿಸುಗಳು ಅದಕ್ಕೆ ಮತ್ತೆ ಸಿಗುವುದೋ ತಿಳಿದವರಾರು? ಉಪನಯನವಾಗಿ ಊಟವಾದೊಡನೆ ಗುರುಕುಲಕ್ಕೆ ಹೊರಡುವುದೆಂದು ಆಗಲೇ ನಿರ್ಧಾರವಾಗಿದೆ. ಮತ್ತೆ ತಾನು ಮಗನನ್ನು ಕಾಣುವ ಹೊತ್ತಿಗೆ ಅವನು ಯುವಕನಾಗಿರುತ್ತಾನೆ.  ಅವನು ತನ್ನ ತೊಡೆಯಮೇಲೆ ಕೂತು ಬೇಡಿ ತಿನ್ನುವುದುಂಟೇ? ತನ್ನ ತುತ್ತನ್ನು ಕಸಿದು ಬಾಯಿಗಿಟ್ಟುಕೊಳ್ಳುವುದುಂಟೇ? ನೆನಸಿಕೊಂಡಂತೆ ತಾಯಿಗೆ ಅಳುವೇ ಬಂತು. ಆದರೆ ಎಲ್ಲವೂ ಮಗುವಿನ ಉಧ್ಧ್ದಾರಕ್ಕಾಗಿಯೇ ಅಲ್ಲವೇ ಎಂದು ಸಮಾಧಾನ ಮಾಡಿಕೊಂಡು ಆಕೆ ಕೆಲಸ ಮುಂದುವರೆಸಿದಂತೆಯೇ  ಯೋಚನೆಗಳೂ ಮುಂದುವರೆದವು.

ಈ ಸುತ್ತಮುತ್ತಲಿನ ಹುಡುಗರು ಸುಮ್ಮನಿರುವುದಿಲ್ಲ. ಏನಾದರೂ ಕೀಟಲೆಯೇ. ಮಗನಿಗೆ ಯಾರು ಏನು ಹೇಳಿದರೋ ತಿಳಿಯದು. ಹುಡುಗ ಅಮ್ಮನನ್ನು ಕೇಳಿದ "ಗುರುಕುಲದಲ್ಲಿ ರಾತ್ರಿ ಕುಟೀರದ ಹೊರಗೆ ಮಲಗಬೇಕಂತೆ ಹೌದೇ ಅಮ್ಮ? ಹಾವು ಕಾಲಿಗೆ ಸುತ್ತಿಕೊಳ್ಳುತ್ತದಂತೆ ನಿಜವೇ?"  ಮತ್ತೊಮ್ಮೆ " ಗುರುಗಳ ಆಶ್ರಮದ ಬಳಿ ಹುಲಿ ಬರುತ್ತದಂತೆ ಹೌದೇ?". ಆ ತಾಯಿಗೂ ಅದೇ ಹೆದರಿಕೆಗಳು ಕಾಡುತ್ತವೆ. ತನ್ನ  ಹೆದರಿಕೆಯನ್ನು ಗಂಡನೊಂದಿಗೆ ಹೇಳಿಕೊಂಡಳು ತಾಯಿ. "ಹತ್ತಾರು ಹುಡುಗರು ಗುರುವಿನ ಬಳಿ ಇರುವಾಗ ಎಲ್ಲರಿಗೂ ತಮಗೆ ಬೇಕಂತೆ ಸ್ಥಳ ವ್ಯವಸ್ಥೆ ಆಗುವುದು ಹೇಗೆ? ಕೆಲವು ದೊಡ್ಡಹುಡುಗರು ಜಗಲಿಯಮೇಲೋ ಅಂಗಳದಲ್ಲೋ ರಾತ್ರಿ ಮಲಗಬಹುದು. ಅನೇಕ ಹುಡುಗರು ಅಲ್ಲಿ  ಇದ್ದು ಕಲಿತುಬಂದದ್ದನ್ನು ನಾವು ಕಂಡಿಲ್ಲವೇ? ಕಾಡಿನ ಬಳಿ ಇರುವ ಆಶ್ರಮದ ಬಳಿ ಹಾವು, ಹುಲಿ ಕಾಣುವುದು ಸಹಜವೇ. ಅಂಥ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ತಿಳಿಸಿಕೊಡೋಣ. ಜತೆಗೆ ಮಂತ್ರದಂಡವೆಂದು  ದಂಡ ಒಂದನ್ನು ತಯಾರಿಸಿಡುತ್ತೇನೆ.  ಹುಡುಗನಿಗೆ ಧೈರ್ಯ ಬಂದೀತು." ಹೇಳಿದ ತಂದೆ.

"ಹಾಗೇ ಮರೆತಿದ್ದೆ ನೋಡಿ. ಬೇಸಗೆಯಲ್ಲಿ ಅಲ್ಲಿಯ ತೊರೆ ಬತ್ತುತ್ತದಂತೆ. ದೂರದಿಂದ ನೀರು ತರಬೇಕಂತೆ. ಇವನ ಬಳಿ ಕುಡಿಯುವ ನೀರಿನ ಪಾತ್ರೆ ಒಂದಿರುವುದು ಒಳ್ಳೆಯದೇನೋ. ಒಂದು ಸರಿಯಾದ ಕಮಂಡಲವನ್ನೂ ತಂದಿಡಿ" ತಾಯಿ ಸೇರಿಸಿದಳು.

ಉಪನಯನದ ದಿನ ಬಂದೇ ಬಿಟ್ಟಿತು. ಅದೊಂದು ವಿಶಿಷ್ಟ ದಿನವೆಂದು ಮಗುವಿಗೆ ಮನದಟ್ಟಾಗಬೇಕಲ್ಲವೇ? ಮುಂಜಾನೆಯಿಂದಲೇ ಅಭ್ಯಂಜನ, ದೇವತಾ ಪೂಜೆ, ಹೋಮ ಹವನ ಪ್ರಾರಂಭವಾದವು. ಮಗುವಿಗೆ ಅಭ್ಯಂಜನವಾದನಂತರ ಮೌಂಜಿ (ಉಡುದಾರ) ಯನ್ನು ಘಟ್ಟಿಯಾಗಿ ಬಿಗಿದ ನಂತರ ಕೌಪೀನ ಕಟ್ಟಿದ ತಂದೆ, ಕೌಪೀನವನ್ನು ಸದಾ ಧರಿಸಿರುವಂತೆ ಎಚ್ಚರಿಕೆ ನೀಡಿದ.

ಕೌಪೀನವನ್ನು ಕಟ್ಟುವುದು ಸಾಂಕೇತಿಕವಾದ ಆದರೆ ಬಹು ಮಹತ್ವವುಳ್ಳ ಒಂದು ಕಾರ್ಯ.  ಗುರುಕುಲದ ವಾಸ ಮಗುವಿಗೆ ಅನೇಕ ವರುಷಗಳ ಕಾಲ ಇರತಕ್ಕದ್ದು. ಇನ್ನು ನಾಕೈದು ವರುಷಗಳಲ್ಲಿ ಮಗ ದೊಡ್ಡವನಾಗಿ ಮನಸ್ಸು ಅತ್ತಿತ್ತ ತಿರುಗುವ ಸಾಧ್ಯತೆ ಇರುತ್ತದೆ. ಆ ಸಮಯದಲ್ಲಿ ಚಿತ್ತ ಚಂಚಲವಾಗದಂತೆ ಮನಸ್ಸನ್ನು ಧೃಡವಾಗಿರಿಸಿಕೊಂಡು ವಿಧ್ಯಾಭ್ಯಾಸದೆಡೆಗೆ ಗಮನ ನೀಡುವುದು ಬಹಳ ಮುಖ್ಯ. ಅದನ್ನು ಸರಿಯಾಗಿ ಮನದಟ್ಟಾಗುವಂತೆ ಗುರುವು ತಿಳಿಸುತ್ತಾನಾದರೂ ತಂದೆಯಾಗಿ ತಾನು ಆ ವಿಚಾರದಲ್ಲಿ ಬುದ್ಧಿವಾದವನ್ನು ಪ್ರಾರಂಭಿಸುವುದು ತನ್ನ ಕರ್ತವ್ಯ.

ಮತ್ತೆ ಮಗ ತನ್ನ ಕೈಗೆ ಸಿಕ್ಕುತ್ತಾನೋ ಇಲ್ಲವೋ ತಿಳಿಯದ ತಾಯಿ ಮುದ್ದಿನಿಂದ ಮಗುವನ್ನು ಪಕ್ಕದಲ್ಲಿ  ಕುಳ್ಳಿರಿಸಿಕೊಂಡು ಕಣ್ಣಲ್ಲಿ ಜಿನುಗುತ್ತಿದ್ದ ನೀರನ್ನು ಮರೆಮಾಚಿಕೊಂಡು, ನಗುತ್ತಾ ಭೋಜನಮಾಡಿಸಿದಳು. ನಂತರ ಮಗನನ್ನು ತೊಡೆಯಮೇಲೆಕುಳ್ಳಿರಿಸಿಕೊಂಡ ಅಪ್ಪ ಕಿವಿಯಲ್ಲಿ "ಭರ್ಗೋ  ದೇವಸ್ಯ ಧೀಮಹಿ, ಧಿಯೋ ಯೋನಃ ಪ್ರಚೋದಯಾತ್" ಉಸುರಿ ತಾನು ಅನೇಕ ಬಾರಿಹೇಳಿದ್ದ ಜ್ಞಾನಾರ್ಜನೆಯ  ಮಹತ್ವವನ್ನು ಮತ್ತೊಮ್ಮೆ ವಿಧ್ಯುಕ್ತವಾಗಿ ತಿಳಿಸಿಕೊಟ್ಟ. ಗಾಯತ್ರಿ ಮಂತ್ರದ ಮಹತ್ವವೆಂದರೆ ಅದೇ ಅಲ್ಲವೇ? ಸರ್ವಶಕ್ತ ಭಗವಂತನನ್ನು ನನಗೆ ಹಣಕೊಡು, ಮನೆ ಕೊಡು, ಸಂತಾನ ಕೊಡು, ಅದು ಕೊಡು, ಇದು ಕೊಡು ಎಂದು ಕೇಳದೆ ಜ್ಞಾನ ಪಡೆದುಕೊಳ್ಳುವಂತೆ ನನ್ನ ಬುದ್ಧಿಯನ್ನು  ಪ್ರಚೋದಿಸು ಎಂದು ಕೇಳಿಕೊಳ್ಳುವುದು. ಅದರಿಂದಲೇ ಗಾಯತ್ರಿ ಎಂದರೆ ಮತ್ತ್ತೆಲ್ಲ ಮಂತ್ರಗಳಿಗಿಂತ ಶ್ರೇಷ್ಠ ವಾದ ಮಂತ್ರವೆಂದು ಹೆಸರಾಗಿರುವುದಲ್ಲವೇ?

ಮಗನಿಗೆ ಗಾಯತ್ರಿ ಉಪದೇಶಮಾಡಿ, ದಂಡ - ಕಮಂಡಲಗಳನ್ನು ಕೈಗಿತ್ತದ್ದಾಯಿತು. ಉಪನಯನದ ಕಾರ್ಯಗಳು ಮುಗಿದು ಹುಡುಗ ಹೊರಟು  ನಿಂತರೆ ಅವನ ಮುಖದಲ್ಲಿ ಅದೇನೋ ಹೊಸ ತೇಜಸ್ಸು ಬಂದಂತೆ ತಾಯಿಯ ಭಾವನೆ. ಒಂದು ಕಣ್ಣಿನಲ್ಲಿ ಸಂತಸ, ಒಂದರಲ್ಲಿ ದುಃಖ ಎನ್ನುವ ಪರಿಸ್ಥಿತಿಯಲ್ಲಿ ತಂದೆಯೊಡನೆ ಗುರುಕುಲಕ್ಕೆ ಹೊರಟ ಮಗನನ್ನು ಕಣ್ತುಂಬಿಕೊಳ್ಳುತ್ತಾ, ಕಣ್ಣೊರೆಸಿಕೊಳ್ಳುತ್ತಾ ನಿಂತಳು ತಾಯಿ.

 ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ ವಾಮನಾವಾತಾರವನ್ನು ಬಣ್ಣಿಸಿರುವಂತೆ  "ಮೀನಾಂಕ ನಿರ್ಮಲ ನಿಶಾನಾಥ ಕೋಟಿ ಲಸಮಾನಾತ್ಮ ಮೌಂಜಿ ಗುಣ ಕೌ - ಪೀನಾಚ್ಛ ಸೂತ್ರ ಪದ ಯಾನಾತ ಪತ್ರ ಕರಕಾನಮ್ಯ ದಂಡ ವರ ಭೃತ್ "    "ಮನ್ಮಥನಂಥ ನಿರ್ಮಲ ಸೌಂದರ್ಯದ, ಕೋಟಿಚಂದ್ರರಿಗಿಂತ ಮಿಗಿಲಾದ ತೇಜಸ್ಸಿನ, ಜನಿವಾರ, ಕೌಪೀನ ಧರಿಸಿ, ಕೈಯಲ್ಲಿ ಕಮಂಡಲ ಮತ್ತು ವಂದನೆಗೆ ಯೋಗ್ಯವಾದ ದಂಡವನ್ನು ಹಿಡಿದ, ಧ್ಯಾನಕ್ಕೆ ಅರ್ಹವಾದ ವಾಮನ ಮೂರ್ತಿ"ಯನ್ನು ಆ ತಾಯಿ ಮಗನಲ್ಲಿ ಕಂಡಿರಬಹುದೇನೋ!!















ಗುರುವಾರ, ಜನವರಿ 4, 2018

ಅಚ್ಚುಮಾವ


ನಾವು ಶಾಂತಿನಗರದ ನಮ್ಮ ಮನೆಗೆ ಪ್ರವೇಶಮಾಡಿದ್ದು ಸಾವಿರದ ಒಂಭೈನೂರಾ ಅರವತ್ತೆರಡರಲ್ಲಿ.  ನಮ್ಮ ಮನೆಯಮುಂದೆ ಆಗಿನ್ನೂ ಕಚ್ಚಾರಸ್ತೆ. ಹಿಂಭಾಗದಲ್ಲಿ ತೆಂಗಿನತೋಟ, ರಾಗಿಹೊಲ ಮತ್ತು ಹುಲ್ಲುಗಾವಲು. ಬೆಂಗಳೂರಿನಲ್ಲಿ ಜಟಕಾ ಕಾಲ ಮುಗಿದು ಆಟೋರಿಕ್ಷಾದ ಆಧಿಪತ್ಯ ಪ್ರಾರಂಭವಾಗುತ್ತಿದ್ದ ಸಮಯ. ಆದರೆ ಹೊಸಬಡಾವಣೆಯ ನಮ್ಮ ಮನೆಯಮುಂದೆ ವಾಹನ ಸಂಚಾರ ಎಂಬುದೇ ಇರಲಿಲ್ಲವೆನ್ನಬಹುದು. ಮನೆಗೆ ಬರುವವರೆಲ್ಲಾ ಸಾಮಾನ್ಯವಾಗಿ ಕೊಂಚದೂರದ ಬಸ್ ಸ್ಟಾಪ್ನಲ್ಲಿ ಇಳಿದು ನಡೆದುಬರುತ್ತಿದ್ದರು. ಮನೆಯ ಮುಂದೆ ಆಟೋ ಶಬ್ದ ಕೇಳಿದರೆ ಕುತೂಹಲದಿಂದ ಹೊರಗೋಡುತ್ತಿದ್ದೆವು. ಬೂದುಬಣ್ಣದ ಪ್ಯಾಂಟು, ತಿಳಿಬಣ್ಣದ ಷರಟು, ಸೋಡಾಗಾಜಿನ ಕನ್ನಡಕದ ಅಚ್ಚುಮಾವನ ಆಕೃತಿ ರಿಕ್ಷಾದಿಂದ ಇಳಿದರೆ ಮರುಕ್ಷಣ ಮನೆಯೆಲ್ಲಾ ಸಂಭ್ರಮದಿಂದ ತುಂಬಿಹೋಗುತ್ತಿತ್ತು. ಮೈಸೂರಿನಲ್ಲಿ ಅಧ್ಯಾಪಕರಾಗಿದ್ದ ಅಚ್ಚುಮಾವ ಒಂದಲ್ಲ ಒಂದು ಕಾರಣದಿಂದ ತಿಂಗಳಿಗೊಮ್ಮೆಯೋ ಎರಡುಬಾರಿಯೋ ಯೂನಿವರ್ಸಿಟಿ ಕೆಲಸಕ್ಕೋ ಮತ್ಯಾವುದೋ ಸಂಘ ಸಂಸ್ಥೆಗಳ ಕೆಲಸಕ್ಕೋ ಬೆಂಗಳೂರಿಗೆ ಬಂದುಹೋಗುತ್ತಿದ್ದರು. ಹಾಗೆ ಬಂದಾಗಲೆಲ್ಲಾ ಅವರ ಬಿಡಾರ ನಮ್ಮ ( ತಮ್ಮ ತಂಗಿಯ ) ಮನೆಯಲ್ಲಿ  ಅಥವಾ ಜಯನಗರದ ಅವರ ತಮ್ಮನ (ವಿಜಿಮಾವ) ಮನೆಯಲ್ಲಿ. ಎರಡು ಮೂರುದಿನದ ಕೆಲಸದಮೇಲೆ ಬಂದರೆ ಎರಡೂ ಮನೆಗಳಲ್ಲಿ ಒಂದೊಂದು  ದಿನ ಉಳಿಯುತ್ತಿದ್ದುದುಂಟು. 

ಅಣ್ಣಯ್ಯ ಬಂದನೆಂಬ ಸಡಗರದಿಂದ ಅಮ್ಮ ಸಂಧರ್ಭಕ್ಕೆ ತಕ್ಕಂತೆ ಹೆಚ್ಚಿನದೇನಾದರೂ ತಿಂಡಿಗೋ ಅಡಿಗೆಗೋ  ತೊಡಗುತ್ತಿದ್ದರು. ಉಟವೋ ತಿಂಡಿಯೋ ಮುಗಿಸಿ ಮಾವ ತಮ್ಮ ಕೆಲಸಕ್ಕೆ ಹೊರಟರೆ ಅವರು ರಾತ್ರಿ ತಿರುಗಿ ಬರುವುದನ್ನು ನಾವು ಉತ್ಸುಕತೆಯಿಂದ ಎದುರುನೋಡುತ್ತಿರುತ್ತಿದ್ದೆವು.  ಅಪ್ಪ ಮಾವ ಇಬ್ಬರೂ ರಾತ್ರಿ ಮನೆಗೆ ಬಂದನಂತರ ಊಟ ಮುಗಿಸಿ ವಿರಾಮವಾಗಿ ಕೂತು ಏನಾದರೂ ವಿಷಯ ತೆಗೆದು ಮಾತಿಗೆ ತೊಡಗುತ್ತಿದ್ದರು.  ರಾಜಕೀಯವಾಯಿತು, ಸಾಹಿತ್ಯ - ಸಾಹಿತಿಗಳಿಗೆ ಸಂಭಂದಿಸಿದ ವಿಷಯವಾಯಿತು, ಯಾವುದಾದರೂ ಹೊಸ ವಿಜ್ಞಾನದ, ತಂತ್ರಜ್ಞಾನದ ವಿಷಯವಾಯಿತು, ಅದೇನೇ ಇರಲಿ  ವಿಷಯ ಅರ್ಥವಾಗದಿದ್ದರೂ ನಾವು ಯಾವೊದೋ ಮೋಡಿಗೆ ಒಳಗಾದವರಂತೆ ಅವರ ಮುಂದೆ ಕೂತು ಅವರ ಮಾತು ಕೇಳುತ್ತಿದ್ದೆವು. ನಮ್ಮನ್ನು ಮೋಡಿಮಾಡುತ್ತಿದ್ದದ್ದು ಏನೆಂದು ಆಗ ನಮಗೆ ತಿಳಿದಿರಲಿಲ್ಲ.  ನಾನು ಈಗ ಯೋಚಿಸಿದರೆ - ಅಚ್ಚು ಮಾವನ  ಮಾತಿನ ಧಾಟಿ, ಉಚ್ಚಾರ, ತಿಳುವಳಿಕೆಯ ಸ್ಪಷ್ಟತೆ, ಪದಗಳಿಗೆ ಹುಡುಕಾಡಿ ತಡವರಿಸದ ಓಘ, ವಿಷಯದ ಬಗ್ಗೆ ವಿವರವಾಗಿ ತಿಳಿದುಕೊಂಡು ತಮ್ಮ ವಿಚಾರವನ್ನು ಅನುಮಾನ, ಗೊಂದಲಕ್ಕೆಡೆಯಿಲ್ಲದಂತೆ ಸರಳವಾಗಿ ಆದರೆ ನಿಖರವಾಗಿ ಮಂಡಿಸುತ್ತಿದ್ದ  ರೀತಿ, ಎಲ್ಲ ಸೇರಿ ನಮ್ಮನು ಹಿಡಿದಿರಿಸುತ್ತಿತ್ತೆಂದು ಕಾಣುತ್ತದೆ.

ಮಾವನವರ ಮಾತಿನ ಶೈಲಿ, ಅವರು ವಿಚಾರಪೂರ್ಣವಾಗಿ ಮಂಡಿಸುತ್ತಿದ್ದ ವಾದ, ಮಂಡಿಸುತ್ತಿದ್ದ ವಿಷಯದಲ್ಲಿ ಅವರಿಗಿರುತ್ತಿದ್ದ  ಖಚಿತ ನಿಲುವು ಮತ್ತು ಮಾತಿನ ಮಧ್ಯೆ ಬರುತ್ತಿದ್ದ, ಅನೇಕ ವ್ಯಕ್ತಿಗಳಿಗೆ ಸಂಭಂದಿಸಿದ ಕಿರುಗಥೆಗಳು, ಉಪಕಥೆಗಳು ನಮ್ಮನ್ನು ಮಂತ್ರಮುಗ್ಧರನ್ನಾಗಿ ಮಾಡಿ, ಮತ್ತೆಲ್ಲವನ್ನೂ ಮರೆತು ಅವರ ಮಾತು ಕೇಳುತ್ತಾ ನಿಲ್ಲುವಂತೆ ಮಾಡುತ್ತಿತ್ತು. ಅವರ ಮೊಮ್ಮಗಳು ಶ್ರುತಿ ತನ್ನ ತಾತನ ಬಗ್ಗೆ ಬರೆಯುತ್ತಾ "greatest narrator of anecdotes" ಎಂದಿದ್ದಾಳೆ. ಅದರಲ್ಲಿ ಅನುಮಾನವೇ ಇಲ್ಲ! ಇವೇ ಲಕ್ಷಣಗಳು ಅವರ ಬರವಣಿಗೆಯಲಿದ್ದದ್ದು ಕೂಡ. ಅದರಿಂದಲೇ  ಸಾಮಾನ್ಯವಾಗಿ ಕಷ್ಟವೆನಿಸುವ ವಿಜ್ಞಾನ ಹಾಗು ತಂತ್ರಜ್ಞಾನದ ಲೇಖನಗಳು ಅವರ ಲೇಖನಿಯಿಂದ ಸಾಮಾನ್ಯರಿಗೂ ಸಹ  ಮನದಟ್ಟಾಗುವ ಮತ್ತು ಓದಬೇಕೆನ್ನಿಸುವ ರೀತಿಯಲ್ಲಿ ಹೊರಬೀಳುತ್ತಿದ್ದದ್ದು.

ಅಚ್ಚುಮಾವ ವಾಪಸು ಊರಿಗೆ ಹೊರಟರೆ "ಅಯ್ಯೋ ಹೊರಟೇಬಿಟ್ಟರೇ" ಎನಿಸುತ್ತಿತ್ತು.

ತಮ್ಮ ಮಗಳು ಬೃಂದಾ ಬೆಂಗಳೂರಿನಲ್ಲಿ ಮನೆಮಾಡಿದ ನಂತರ ಮಾವ ನಮ್ಮ ಮನೆಗೆ ಬಂದಿರುವುದು ಕಡಿಮೆಯಾಯಿತಾದರೂ ಆ ಹೊತ್ತಿಗೆ ನಾನೂ ಬೆಂಗಳೂರುಬಿಟ್ಟು ನೌಕರಿಗಾಗಿ ಗೋವಾಕ್ಕೆ ಬಂದುಬಿಟ್ಟಿದ್ದೆ. ನಾನು ಗೋವಾದಲ್ಲಿ ಮನೆಮಾಡಿದ್ದ ಕಣಕೋಣ ಮತ್ತು ಪೋಂಡ ಎರಡೂ ಜಾಗಗಳಿಗೆ ಅಚ್ಚುಮಾವ ಬಂದು ನನ್ನ ಮನೆಯಲ್ಲಿ ಎರಡುದಿನ ಉಳಿದು ಹೋದದ್ದು ನನ್ನ ಸೌಭಾಗ್ಯ. ಕಣಕೋಣಕ್ಕೆ ಬರುವುದು ಆಗ ಸುಲಭವಾಗಿರಲಿಲ್ಲ. ಮೊದಲು ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣ. ನಂತರ ಬೆಂಗಳೂರಿನಿಂದ ಲೋಂಡಾಕ್ಕೆ ರಾತ್ರಿಪೂರ್ತಿ ರೈಲು ಪ್ರಯಾಣ. ಮರುಬೆಳಗ್ಗೆ ಲೋಂಡಾ ತಲುಪಿ ಅಲ್ಲಿ ಕಾದುಕೂತು ಮಧ್ಯಾಹ್ನ ಒಂದಕ್ಕೆ ಅಲ್ಲಿಗೆ ಬರುತ್ತಿದ್ದ ಮುಂಬೈ - ಗೋವಾ  ರೈಲಿನಲ್ಲಿ ಪ್ರಯಾಣಿಸಿ ಸಂಜೆ ನಾಲ್ಕಕ್ಕೆ ಮಡಗಾಂವ್ ತಲುಪುವುದು.  ಅಲ್ಲಿಂದ ಬಸ್ಸು ಹಿಡಿದು, ಕಿಕ್ಕಿರುತ್ತಿದ್ದ ಬಸ್ಸಿನಲ್ಲಿ ಒಂದೂವರೆಘಂಟೆ ಒದ್ದಾಡಿ  ಸಂಜೆ ಆರಕ್ಕೆ ಕಣಕೋಣ ತಲುಪಬೇಕಾದ್ದು. ನನ್ನ ಮೇಲಿನ ಮಮತೆ, ಅಭಿಮಾನದಿಂದ ಅತ್ತೆ, ಮಾವ ಅಷ್ಟು ಪ್ರಯಾಸಪಟ್ಟು ಅಲ್ಲಿಗೆ  ಬಂದು, ನಲ್ಲಿನೀರು, ಬಚ್ಚಲು, ಪಾಯಖಾನೆಯಿಲ್ಲದ ನನ್ನ ಕೋಣೆಯಲ್ಲಿ ನನ್ನೊಡನೆ ನಾಲ್ಕುದಿನ ಕಳೆದರು. 

ಈಚಿನ ವರುಷಗಳಲ್ಲಿ ಮಾವನವರ ಪ್ರಯಾಣ ಪೂರ್ತಿ ನಿಂತುಹೋಗಿ ಅವರು ಮೈಸೂರು ಬಿಟ್ಟು ಬರುತ್ತಿರಲಿಲ್ಲ. ನನಗೆ ಹೆಣ್ಣುಕೊಟ್ಟ ಮಾವನವರು  ಮೈಸೂರಿನಲ್ಲಿ ನೆಲಸಿದ್ದುದರಿಂದ ನಾನು ವರುಷಕ್ಕೊಮ್ಮೆ ಅಥವಾ ಎರಡುಬಾರಿಯಾದರೂ ಮೈಸೂರಿಗೆ ಹೋಗಿ ಬರುತ್ತಿದ್ದೆ. ಮೈಸೂರಿಗೆ ಹೋದಾಗಲೆಲ್ಲಾ ನಾನು ನಸುಕಿನಲ್ಲೇ ಎದ್ದು ನನ್ನ ವಾಯುಸಂಚಾರ ಮುಗಿಸಿ ಸಮೀಪದಲ್ಲೇ ಇದ್ದ ಅಚ್ಚುಮಾವನವರ ಮನೆಗೆ ಬರುವಹೊತ್ತಿಗೆ ಮಾವ ಬೆಳಗ್ಗೆದ್ದು ನಿತ್ಯಕರ್ಮಗಳನ್ನು ಮುಗಿಸಿ ಕಾಫಿಮಾಡಿ ಮುಂದಿಟ್ಟುಕೊಂಡಿರುತ್ತಿದ್ದರು. ಆ ಸಮಯದಲ್ಲಿ ಅವರೊಡನೆ ಕೂತು ಸರಸ ಸಂಭಾಷಣೆಯಲ್ಲಿ ಕಳೆಯುತ್ತಿದ್ದ ಒಂದು ಒಂದೂ ವರೆಘಂಟೆಗಳ ಸಮಯ ನಾನು ಮತ್ತೆ ಮತ್ತೆ ನೆನಪಿಸಿಕೊಂಡು ಸಂತೋಷಪಡುವಂಥಾದ್ದು.

ಆಗಾಗ ಏನಾದರೂ ಅದು ಇದೂ ಬರೆಯುವುದು ನನ್ನದೊಂದು ಹವ್ಯಾಸ. ನಾನು ಕೆಲಸಕ್ಕೆ ಸೇರಿದ ಹೊಸತರಲ್ಲಿ ದಂತ ವೈದ್ಯಕೀಯದ ವಿಷಯವಾಗಿ "ನಿಮ್ಮ ಹಲ್ಲು" ಎಂಬ ಕಿರುಹೊತ್ತಿಗೆಯೊಂದನ್ನು ಬರೆದೆ. ಅದರ ಮೊದಲ ಅಧ್ಯಾಯ ಬರೆದು ಮಾವನವರಿಗೆ ಕಳಿಸಿ ಅವರ ಅನಿಸಿಕೆ ಏನೆಂದು ತಿಳಿಸಬೇಕಾಗಿ ಕೇಳಿದ್ದೆ. ಅದನ್ನು ಓದಿ ಸಂತೋಷಪಟ್ಟು, ಪ್ರತಿ ವಾಕ್ಯವನ್ನು ಸರಿಯಾಗಿ ತಿದ್ದಿ, ತಾವು ತಿದ್ದಿರುವುದನ್ನು ನೋಡಿಕೊಂಡು ಅದೇರೀತಿ ನಾನು ಪೂರ್ತಿ ಹೊತ್ತಿಗೆಯನ್ನು ಪರಿಶೀಲಿಸಿ ಬರೆದು ಕಳುಹಿಸಬೇಕೆಂದು ಹೇಳಿದರು. ಆ ನನ್ನ ಕಿರುಹೊತ್ತಿಗೆ ಕರ್ಣಾಟಕ  ರಾಜ್ಯ ವಿಜ್ಞಾನ ಪರಿಷತ್ತಿನ  ಮೂಲಕ ಪ್ರಕಟಣೆಗೊಂಡಿತು.  ಅದು ಪ್ರಕಟಣೆಯಾದ ಹೊಸತರಲ್ಲಿ ನಾನೊಮ್ಮೆ ಮೈಸೂರಿಗೆ ಹೋಗಿದ್ದೆ. ನಾನು ಮಾವನವರಲ್ಲಿಗೆ ಹೋದಾಗ ಅವರು ತಮ್ಮ ಸ್ನೇಹಿತರು ಕೆಲವರೊಂದಿಗೆ ಮಾತನಾಡುತ್ತಾ ಕುಳಿತಿದ್ದರು. ಶ್ರೀ ಪ್ರಭುಶಂಕರ ಮತ್ತಿತರು ಇದ್ದರೆಂದು ನನ್ನ ನೆನಪು. ನಾನು ಒಳಹೊಕ್ಕೊಡನೆ ಮಾವ "ಇವನೇ ನೋಡಿ ನನ್ನ ಸೋದರಳಿಯ. ಪುಸ್ತಕ ಬರೆದು ಬರಹಗಾರ ಎನಿಸಿಕೊಂಡಿದ್ದಾನೆ. ತಮಾಷೆಯಲ್ಲ, ನಿಜವಾಗಲೂ ತುಂಬಾ ಚನ್ನಾಗಿ ಬರೆದಿದ್ದಾನೆ" ಎಂದು ಆ ಖ್ಯಾತನಾಮರ ಎದುರು ನನ್ನ ಪ್ರಶಂಸೆ ಮಾಡಿದರು. ನನ್ನ ಬರವಣಿಗೆಗೆ ದೊರಕಿದ ಪ್ರಶಸ್ತಿ ಅದು.

ಪ್ರೀತಿ, ಪ್ರಶಂಸೆ ಎಲ್ಲ ಅದಕ್ಕೆ ಬಾಧ್ಯರಾಗಿದ್ದರೆ ಮಾತ್ರ. ಸೋದರಳಿಯ ಎಂಬ ಕುರುಡು ಮಮತೆಗಲ್ಲ. ಅವರ ನೆನಪಿನ ಅಲೆಗಳು ಪುಸ್ತಕದ ಒಂದು ಘಟನೆ ನನಗೆ ಬಹಳ ಹಿಡಿಸಿದ್ದರಿಂದ ನಾನು ಅದನ್ನು ಇಂಗ್ಲಿಷಿಗೆ ತರ್ಜುಮೆ ಮಾಡಲು ಆಶಿಸಿ,  ಅದನ್ನು ಬರೆದು ಅಚ್ಚುಮಾವನವರಿಗೆ  ಒಪ್ಪಿಸಿದೆ.  ಅದರ ಮೇಲೆ ಕಣ್ಣಾಡಿಸಿ, ಕಟುವಾಗಿ, "ಇದು ನಾನು ಬರೆದ ಲೇಖನದ ತರ್ಜುಮೆ ಅಲ್ಲವೇ ಅಲ್ಲ. ನಿನ್ನ ಮನಸ್ಸಿಗೆ ಏನುಬಂತೋ ಅದನ್ನು ಬರೆದುಕೊಂಡಿದ್ದೀ" ಎಂದುಬಿಟ್ಟರು. ಮತ್ತೊಮ್ಮೆ ಬರೆದು ತೋರಿಸುವ ಧೈರ್ಯ ಬರಲಿಲ್ಲ. ಶ್ರೀ ರಾಜರತ್ನಂ ಅವರ ಬರವಣಿಗೆಯ ಕಸರತ್ತಿನಲ್ಲಿ ಪಳಗಿದ್ದ ಮಾವ ಬರವಣಿಗೆಯ ಅಚ್ಚುಕಟ್ಟಿನ ವಿಷಯದಲ್ಲಿ ನಿಷ್ಠುರ ಎನಿಸುವಷ್ಟು ಕಟ್ಟುನಿಟ್ಟಾಗಿದ್ದರು. ಅಂಥ ಮನೋಭಾವನೆಯ ಫಲವೇ ಅವರ "ಬರವಣಿಗೆಯ ವ್ಯಾಧಿಗಳು" ಲೇಖನ.

ಕೊನೆಯಬಾರಿ ನಾನು ಅಚ್ಚುಮಾವನವರನ್ನು ನೋಡಿದ್ದು ಆರುತಿಂಗಳ ಹಿಂದೆ. ವಯೋಸಹಜವಾದ ತೊಂದರೆಗಳಿಂದ ಬಾಧಿತರಾಗಿದ್ದರೂ ಸಹ ಮುಖದಮೇಲಿನ ಕಿರುನಗೆ ಕೊರಗಿರಲಿಲ್ಲ. ಬರಹ ಒಂದೆರಡು ವರುಷಗಳಿಂದ ನಿಂತುಹೋಗಿದ್ದಿರಬೇಕು. ಆದರೆ ಓದುವುದು ಮಾತ್ರ ನಿಲ್ಲುವಂತಿರಲಿಲ್ಲ. ಕೈಯಲ್ಲೊಂದು ಪುಸ್ತಕ ಯಾವಾಗಲೂ ಇದ್ದಿರಲೇಬೇಕು. ನನ್ನನ್ನು ಕಂಡಾಗಲೆಲ್ಲಾ,  ಐವತ್ತಾರನೇ ಇಸವಿಯಲ್ಲಿ ನನ್ನ ಜನನವಾದಾಗ  ತಮಗೆ ಬೆಂಗಳೂರಿನಿಂದ ಶಿವಮೊಗ್ಗೆಗೆ ವರ್ಗ ವಾದದ್ದನ್ನು ನೆನಪಿಸಿಕೊಂಡು ಆ ಬಗ್ಗೆ  ಹೇಳುತ್ತಿದ್ದರು. ಮೊನ್ನೆ ಜೂನ್ ತಿಂಗಳಲ್ಲಿ  ಭೇಟಿಯಾದಾಗಲೂ ಅದನ್ನು ಹೇಳಿ ಕೊಂಚಹೊತ್ತಿಗೆ ಕಣ್ಣೆವೆ ಮುಚ್ಚಿ ನಿದ್ದೆಗೆ ಜಾರಿದರು. ಈಗ ನಮ್ಮ ನಡುವಿನಿಂದಲೇ ಜಾರಿ ನಮಗೆ ಇನ್ನಿಲ್ಲವಾದರು.

ನನ್ನ ತಾಯಿಯ ಅಣ್ಣ ಅಕ್ಕಂದಿರ ಪೈಕಿ ಹಿರಿಯ ಜೀವವೊಂದು ನಮ್ಮ ಮತ್ತು ಆ ಹಿಂದಿನ ತಲೆಮಾರಿನ ತಂತಾಗಿ ಉಳಿದಿದ್ದು ಈಗ ಇಲ್ಲವಾಗಿದೆ. ನಾನು ಕಂಡಂತೆ ಅವರ ತಲೆಮಾರಿನಲ್ಲಿ, ಅದರಲ್ಲೂ ಆ ಸಹೋದರ ಸಹೋದರಿಯರೆಲ್ಲರಲ್ಲೂ  ಸಹಜವಾಗಿದ್ದ ಗುಣಗಳು - ಸ್ಥಿರವಾದ ಮನಸ್ಥಿತಿ, ಸೌಜನ್ಯಯುಕ್ತ ಸಂಭಾವಿತ ನಡವಳಿಕೆ, ಚುರುಕು ಬುದ್ಧಿ ಮತ್ತು ಎಲ್ಲರೀತಿಯಲ್ಲೂ ಅಚ್ಚುಕಟ್ಟಾದ ಜೀವನ. ಈ ಗುಣಗಳ ಒಂದಂಶವಾದರೂ ನಮಗೆ ಹಾದುಬಂದಿದ್ದರೆ ನಾವು ಧನ್ಯರು.

ತಮ್ಮ ಜೀವನದ ಬಹುಭಾಗವನ್ನು ಬರವಣಿಗೆಗೆ, ಅದರಲ್ಲೂ ಕನ್ನಡದ ಬರಹಕ್ಕೆ ಮುಡಿಪಿಟ್ಟಿದ್ದ ಮಾವನ ನೆನಪಿಗೆಂದು ಬರಹವೊಂದನ್ನು ಬರೆದಿಡುವುದು ಸಮಂಜಸವಾದ ಶ್ರದ್ಧಾಂಜಲಿ ಎಂದು ಅನ್ನಿಸಿದ್ದರಿಂದ ನಾಲ್ಕುಸಾಲು ಬರೆದೆ. ಸೋದರಳಿಯನಾಗಿ ನಾನು ಅಚ್ಚುಮಾವನನ್ನು ಕಂಡಿದ್ದರಲ್ಲಿ ಎಷ್ಟನ್ನು ಬರಹಕ್ಕೆ ತಂದಿಡಲು ನನಗೆ ಸಾಧ್ಯವಾಯಿತೋ ಅಷ್ಟನ್ನು ಇಲ್ಲಿ ತಂದಿಡುವ ಪ್ರಯತ್ನ ಮಾಡಿದ್ದೇನೆ. ಒಂದು ಸಣ್ಣ ಚೌಕಟ್ಟಿನೊಳಗೆ ಸಂಪೂರ್ಣವಾಗಿ ಅವರ ವ್ಯಕ್ತಿತ್ವವನ್ನು ಚಿತ್ರಿಸುವುದು ನನ್ನಿಂದ ಸಾಧ್ಯವಾಗದ ವಿಷಯ. ಈ ನನ್ನ ಬರಹದಲ್ಲಿ ಬರವಣಿಗೆಯ ವ್ಯಾಧಿಗಳು ಯಾವುದೂ ಕಂಡುಬರದಿದ್ದರೆ ನಾನು ಅವರ ಸೋದರಳಿಯನೆಂದು ಹೇಳಿಕೊಳ್ಳಲು ಅರ್ಹನೆಂದುಕೊಳ್ಳಬಹುದು!