ಗುರುವಾರ, ಅಕ್ಟೋಬರ್ 25, 2018

ಮುಳ್ಳುಕೊನೆಯಮೇಲೆ ಮೂರು ಕೆರೆಯಕಟ್ಟಿ ......


ಮುಳ್ಳುಕೊನೆಯಮೇಲೆ ಮೂರು ಕೆರೆಯಕಟ್ಟಿ ಎರಡುತುಂಬದು  ಒಂದು  ತುಂಬಲೇ ಇಲ್ಲ. 
ತುಂಬಲಿಲ್ಲದಕೆರೆಗೆ ಬಂದರು ಮೂವರು ಒಡ್ಡರು - ಇಬ್ಬರು ಕುಂಟರು ಒಬ್ಬನಿಗೆ ಕಾಲೇ ಇಲ್ಲ. 
ಕಾಲಿಲ್ಲದ ಒಡ್ಡಗೆ ಕೊಟ್ಟರು ಮೂರು ಎಮ್ಮೆಗಳ - ಎರಡುಬರಡು, ಒಂದಕ್ಕೆ ಕರುವೇ ಇಲ್ಲ. 
ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರುಹೊನ್ನುಗಳ - ಎರಡು ಸವಕಲು, ಒಂದು ಸಲ್ಲಲೇ ಇಲ್ಲ. 
ಸಲ್ಲದಿದ್ದ ಹೊನ್ನಿಗೆ ಬಂದರು ಮೂವರು ನೋಟಗಾರರು - ಇಬ್ಬರು ಕುರುಡರು. ಒಬ್ಬನಿಗೆ ಕಣ್ಣೇ ಇಲ್ಲ. 
ಕಣ್ಣಿಲ್ಲದ ನೋಟಗಾರಗೆ ಕೊಟ್ಟರು ಮೂರು ಊರುಗಳ - ಎರಡು ಹಾಳು, ಒಂದಕ್ಕೆ ಒಕ್ಕಲೇ ಇಲ್ಲ. 
ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು  - ಇಬ್ಬರು ಚೊಂಚರು ಒಬ್ಬನಿಗೆ ಕೈಯೇ ಇಲ್ಲ. 
ಕೈಯಿಲ್ಲದ ಕುಂಬಾರನು ಮಾಡಿದ ಮೂರು ಮಡಕೆಗಳ, ಎರಡು ಒಡಕು ಒಂದಕೆ ಬುಡವೇ ಇಲ್ಲ. 
ಬುಡವಿಲ್ಲದ ಮಡಕೆಗೆ ಹಾಕಿದರು ಮೂರು ಅಕ್ಕಿಕಾಳ - ಎರಡು ಬೇಯದು ಒಂದು ಬೇಯಲೇ ಇಲ್ಲ. 
ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು - ಇಬ್ಬರು  ಉಣ್ಣರು, ಒಬ್ಬನಿಗೆ ಹಸಿವೇ  ಇಲ್ಲ. 
ಹಸಿವಿಲ್ಲದ ನೆಂಟಗೆ ಕೊಟ್ಟರು ಮೂರು ಟೊಣಪೆಗಳ - ಎರಡು ತಾಗದು ಒಂದು ತಾಗಲೇ ಇಲ್ಲ. 
ತಾಕಲಿಲ್ಲದ ಟೊಣಪೆಯ ತಾಕಿಸಿ ಸದ್ಗತಿಯ ನೀಯಬೇಕು ಪುರಂದರ ವಿಠಲ 


ಪುರಂದರದಾಸರ ಈ ಪದ್ಯ  ಬಹಳ ಅರ್ಥಪೂರ್ಣವಾಗಿದ್ದು, ಭಕ್ತಿ, ಅಧ್ಯಾತ್ಮ ತತ್ವಗಳ ಸಾರವನ್ನು ತಿಳಿಸಿಕೊಡುತ್ತದೆ ಎಂದು   ಪಂಡಿತರ ಅಭಿಪ್ರಾಯ. ಅನೇಕರು ಈ ಪದ್ಯವನ್ನು ವಿಶ್ಲೇಷಿಸಿ, ಅರ್ಥ ತಿಳಿಸಿದ್ದಾರೆ.
ಬೀದಿ ಬೀದಿ  ಸುತ್ತಾಡಿಕೊಂಡು ತಮ್ಮ ಪದ್ಯಗಳನ್ನು ಹಾಡುತ್ತಾ ಅದರ ಮೂಲಕ ಜನರಿಗೆ ಭಕ್ತಿಮಾರ್ಗ ತೋರಿಸುವುದು  ದಾಸರ ಉದ್ದೇಶ್ಯವಾಗಿದ್ದರಿಂದ, ಪದ್ಯಗಳಲ್ಲಿ  ಜನರನ್ನು ಆಕರ್ಷಿಸುವಂಥ ಪದಗಳು ಮತ್ತು ಅವುಗಳ ಜೋಡಣೆ ಮುಖ್ಯವಾಗಿತ್ತು.  ಈ "ಮುಳ್ಳು ಕೊನೆ" ಯಂಥ ಅನೇಕ ಪದ್ಯಗಳು  ಅಂಥ ರಚನೆಯಿಂದ ಜನರ ಮನಸೆಳೆಯುವಂಥವು. ಒಮ್ಮೆ ಮನಸ್ಸಿಗೆ ತಾಗಿದರೆ ನಂತರ ಅರ್ಥ ತಿಳಿಯುವ ಕುತೂಹಲ ಮೂಡುತ್ತದೆ.  ಅರ್ಥವಿವರಣೆಯೊಂದಿಗೆ ಉಪದೇಶ.
ಕೆಲವು ಬಾರಿ ಪದಗಳ  ಜೋಡಣೆ, ವ್ಯಾಕರಣ, ಹೆಚ್ಚುಕಮ್ಮಿಯಾಗಿರಬಹುದು. ಅದನ್ನು ಅವಗಾಣಿಸಿ ಪದಗಳ ಭಾವ, ಉಪದೇಶ ತಿಳಿಯುವುದು ಅಗತ್ಯ.
ಮನುಷ್ಯನ ಮೋಕ್ಷಸಾಧನೆಗೆ ಇರುವ ಸಾಧಕ ಬಾಧಕಗಳನ್ನು ದಾಸರು ಮೇಲಿನ ಪದ್ಯದಲ್ಲಿ ತಿಳಿಸಿದ್ದಾರೆ. ಅಲ್ಲಿ ಇಲ್ಲಿ ಓದಿ ತಿಳಿದುಕೊಂಡ ಅರ್ಥವನ್ನು ನನ್ನ ಮಾತಿನಲ್ಲಿ ನಾನು ಬರೆದಿದ್ದೇನೆ.


ಮುಳ್ಳು ಕೊನೆಯಮೇಲೆ  ಮೂರು ಕೆರೆಯಕಟ್ಟಿ ಎರಡುತುಂಬದು  ಒಂದು  ತುಂಬಲೇ ಇಲ್ಲ. 

"ಮುಳ್ಳು ಕೊನೆ" ಎಂಬುದು ಜೀವ. ನಮ್ಮ ಪುರಾಣಗಳ ಪ್ರಕಾರ "ಜೀವ" ದ ಗಾತ್ರ, ಕುದುರೆಯ ಬಾಲದ ಒಂದು ಕೂದಲಿನ ತುದಿಯನ್ನು ನೂರುಭಾಗಗಳಾಗಿ ಛೇದಿಸಿ, ಅದರಲ್ಲೊಂದೊಂದನ್ನೂ ಮತ್ತೆ ಸಾವಿರ ಭಾಗ ಮಾಡಿದರೆ ಎಷ್ಟಾಗುತ್ತದೋ ಅಷ್ಟು. ಆಡುಮಾತಿನಲ್ಲಿ, ಅದನ್ನು  ಮುಳ್ಳು ಕೊನೆಯಷ್ಟು ಎಂದು ಹೇಳಲಾಗಿದೆ. ಆ ನಮ್ಮ ಜೀವವೆಂಬ ಮುಳ್ಳು ಕೊನೆಯಮೇಲೆ  ಅನಿರುದ್ಧ ದೇಹ, ಲಿಂಗದೇಹ ಮತ್ತು ಸ್ಥೂಲದೇಹ ಎಂಬ ಮೂರುದೇಹಗಳು ಇವೆ.  ಅವನ್ನೇ  "ಮೂರುಕೆರೆಯ ಕಟ್ಟಿ" ಎಂದಿರುವುದು.  ಆ ಮೂರರಲ್ಲಿ ಮೊದಲೆರಡು ದೇಹಗಳು ಸೂಕ್ಷ್ಮದೇಹಗಳು. ನಮ್ಮ ಅವಗಾಹನೆಗೆ ಬಾರದವು. (ಅವಕ್ಕೆ ಸಂಭಂದಿಸಿದ ವಿವರಗಳು ಲಭ್ಯವಿವೆ. ಆಸಕ್ತಿಯುಳ್ಳವರು ತಿಳಿದುಕೊಳ್ಳಬಹುದು)  ಅವು  ಮೋಕ್ಷಸಾಧನೆಯ ಕಾರ್ಯಮಾಡಿ ಫಲವನ್ನು ತುಂಬಿಸಿಕೊಳ್ಳಲಾರವು.  ಆದ್ದರಿಂದ "ಎರಡು ತುಂಬದು". ಸ್ಥೂಲದೇಹದಿಂದ, ಅಂದರೆ ನಮಗೆ ತಿಳಿಯಬರುವ, ನಾವು ಹೊಂದಿರುವ ದೇಹದಿಂದ, ಸಾಧನೆಮಾಡ ಬಹುದಿತ್ತು. ಆದರೆ ಈ ದೇಹ ಅದನ್ನು ಮಾಡಲಿಲ್ಲ. ಆದ್ದರಿಂದ "ಒಂದು ತುಂಬಲೇಇಲ್ಲ".

ತುಂಬಲಿಲ್ಲದಕೆರೆಗೆ ಬಂದರು ಮೂವರು ಒಡ್ಡರು - ಇಬ್ಬರು ಕುಂಟರು ಒಬ್ಬನಿಗೆ ಕಾಲೇ ಇಲ್ಲ. 

ಆ ಸ್ಥೂಲದೇಹಕ್ಕೆ ಮೂರು  ಸ್ಥಿತಿಗಳು ಬರುತ್ತವೆ - "ಮೂವರು ಒಡ್ಡರು" - ಬಾಲ್ಯ, ಯೌವನ. ವೃದ್ಧಾಪ್ಯಗಳು.  ಬಾಲ್ಯ, ವೃದ್ಧಾಪ್ಯಗಳು, ಬುದ್ಧಿಬಲ ಅಥವಾ ದೇಹಬಲದ ಕೊರತೆಗಳಿಂದಾಗಿ ಸಾಧನೆಯ ಮಾರ್ಗದಲ್ಲಿ ನಡೆಯಲು ಸಾಧ್ಯವಿಲ್ಲದವು. ಆದ್ದರಿಂದ ಅವು "ಕುಂಟು". ಹಾಗಾಗಿ "ಇಬ್ಬರು ಕುಂಟರು". ಯೌವ್ವನದಲ್ಲಿ ಸಾಧನೆಯ ಮಾರ್ಗವನ್ನನುಸರಿಸಲು ಸಾಧ್ಯವಿತ್ತು. ಆದರೆ ಈ ಜೀವ ಅದನ್ನು ಅನುಸರಿಸಲಿಲ್ಲ. ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಿದ್ದರೂ ನಡೆಯಲಿಲ್ಲ. ಹಾಗಾಗಿ ಕಾಲಿದ್ದೂ ಇಲ್ಲದಂತಾಯಿತು. ಅದಕ್ಕೇ "ಒಬ್ಬನಿಗೆ ಕಾಲೇ ಇಲ್ಲ."

ಕಾಲಿಲ್ಲದ ಒಡ್ಡಗೆ ಕೊಟ್ಟರು ಮೂರು ಎಮ್ಮೆಗಳ - ಎರಡುಬರಡು, ಒಂದಕ್ಕೆ ಕರುವೇ ಇಲ್ಲ. 

ಯೌವ್ವನಾವಸ್ಥೆಯಲ್ಲಿದ್ದ ದೇಹಕ್ಕೆ ಅದನ್ನು ಮೋಹದಲ್ಲಿ  ಸಿಲುಕಿಸುವ ಮೂರು ಸಾಧನಗಳು ಒದಗಿಕೊಂಡವು. ಈಶಣ ತ್ರಯಗಳೆಂದು ಅವಕ್ಕೆ ಹೆಸರು.  ಸತಿ, ಸುತ, ಸಂಪತ್ತು.  ಅವನ್ನು "ಮೂರು ಎಮ್ಮೆಗಳು" ಎಂದರು.  (ದೇಹ ಹೆಣ್ಣಾಗಿದ್ದರೆ ಪತಿ, ಸುತ, ಸಂಪತ್ತು ಎಂದುಕೊಳ್ಳಲು ಅಡ್ಡಿಯಿಲ್ಲ. ಇದು ನನ್ನ ವಾಕ್ಯ. ದಾಸರು ಒಪ್ಪುತ್ತಾರೋ ಇಲ್ಲವೋ ತಿಳಿಯದು.) ಅವುಗಳಲ್ಲಿ ಪತಿ/ಸತಿ, ಸುತರು ಮೋಕ್ಷಸಾಧನೆಗೆ ಅಡ್ಡಿಯೆಂದು ಎಲ್ಲ ವ್ಯಾಖ್ಯಾನಕಾರರ ಮತ. ನನಗೆ ಪೂರ್ಣ ಒಪ್ಪಿಗೆಯಿಲ್ಲ. ಅಥವಾ ತಿಳಿದಿಲ್ಲ. ಇರಲಿ. ಒಟ್ಟಿನಲ್ಲಿ ಅವೆರಡೂ ಮೋಕ್ಷಪಥಕ್ಕೆ ಅಡ್ಡಿ ಅಥವಾ ಉಪಯೋಗಕ್ಕೆ ಬಾರವು  ಎಂಬ ಭಾವನೆ.  ಆದ್ದರಿಂದ "ಎರಡು ಬರಡು". ಮೂರನೆಯದಾದ ಸಂಪತ್ತನ್ನು ಸದ್ವಿನಿಯೋಗಮಾಡಿ ಪುಣ್ಯ ಸಂಪಾದಿಸಬಹುದಿತ್ತು. ಆದರೆ ಸಂಪತ್ತು ಇದ್ದೂ ಸದ್ವಿನಿಯೋಗವಾಗಲಿಲ್ಲ. ಸತ್ಫಲ ನೀಡದ  ಸಂಪತ್ತು, ಹಾಲು ಕೊಡದ ಎಮ್ಮೆಯಂತೆ. ಕರುವಿಲ್ಲದ ಎಮ್ಮೆ ಹಾಲುಕೊಡಲಾರದು. ಆದ್ದರಿಂದ "ಒಂದಕ್ಕೆ ಕರುವೇ ಇಲ್ಲ".


ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರುಹೊನ್ನುಗಳ - ಎರಡು ಸವಕಲು, ಒಂದು ಸಲ್ಲಲೇ ಇಲ್ಲ. 

ಸಂಪತ್ತನ್ನು ಉಪಯೋಗಿಸುವ ರೀತಿಗಳು ಮೂರಿದ್ದವು. "ಮೂರು  ಹೊನ್ನುಗಳು". ಸತ್ ಕರ್ಮ ಅಥವಾ ಸದುಪಯೋಗಗೊಳಿಸುವುದು, ದುಷ್ ಕರ್ಮ ಅಥವಾ ವೃಥಾ ವ್ಯಯಿಸುವುದು. ಮೂರನೆಯದು, ಸುಮ್ಮನೆ ಕೂಡಿಡುವುದು.  ದುರ್ವ್ಯಯವಾದ  ಅಥವಾ ಸುಮ್ಮನೆ ಕೂಡಿಟ್ಟ ಧನ ಮೋಕ್ಷದೆಡೆಗೆ ಒಯ್ಯಲಾರದು. ಅವುಗಳಿಂದ ಏನೂ ದೊರಕದು. ಸವಕಲು ನಾಣ್ಯದಂತೆ. ಹಾಗಾಗಿ "ಎರಡು ಸವಕಲು".  ಧನ ಸದ್ವಿನಿಯೋಗ ವಾಗಿದ್ದಿದ್ದರೆ ಮೋಕ್ಷಸಾಧನೆಗೆ ಸಲ್ಲುತ್ತಿತ್ತು. ಆದರೆ ಆಗಲಿಲ್ಲ. ಅದರಿಂದ "ಒಂದು ಸಲ್ಲಲೇ ಇಲ್ಲ".


ಸಲ್ಲದಿದ್ದ ಹೊನ್ನಿಗೆ ಬಂದರು ಮೂವರು ನೋಟಗಾರರು - ಇಬ್ಬರು ಕುರುಡರು. ಒಬ್ಬನಿಗೆ ಕಣ್ಣೇ ಇಲ್ಲ. 

ಸಂಚಿತ, ಆಗಾಮಿ ಮತ್ತು ಪ್ರಾರಬ್ಧಕರ್ಮ ಫಲಗಳು ಗಳು, ಜೀವ, ತನ್ನ ಜನ್ಮಗಳಲ್ಲಿ ಮಾಡಿದ ಕರ್ಮಗಳಿಗೆ ಕನ್ನಡಿ ಇದ್ದಂತೆ. ಜನ್ಮಾಂತರಗಳಲ್ಲಿ ಮಾಡಿದ ಎಲ್ಲ ಕಾರ್ಯಗಳ ಫಲ ಅವುಗಳಮೂಲಕ ಪ್ರಚುರವಾಗುತ್ತದೆ.  ಅವುಗಳನ್ನು ಅನುಭವಿಸಬೇಕಾದ್ದು/ನೋಡಬೇಕಾದ್ದು ಜೀವನೇ ಆದರೂ ಆ ಕರ್ಮಗಳನ್ನೇ "ಮೂವರು ನೋಟಗಾರರು" ಎಂದರು. ಹಿಂದೆ ಮಾಡಿದ ಕರ್ಮಗಳ ಫಲವನ್ನು ಕಂಡು ಎಚ್ಚೆತ್ತುಕೊಳ್ಳಬೇಕೆಂಬ ಭಾವನೆ.  ಸಂಚಿತ, ಆಗಾಮಿ ಕರ್ಮಗಳು ಜೀವದ ಅವಗಾಹನೆಗೆ ಬಾರದವು. ಜೀವ ಅವನ್ನು ಕಾಣಲು ಸಾಧ್ಯವಿಲ್ಲ. ಆದ್ದರಿಂದ "ಇಬ್ಬರು ಕುರುಡರು". ಪ್ರಾರಬ್ಧ ಕರ್ಮದ ಫಲಗಳು ಜೀವನಿಗೆ ಕಾಣಸಿಗುವವು. ಅದನ್ನು ಕಂಡು ಎಚ್ಛೆತ್ತುಕೊಳ್ಳುವ ಕಣ್ಣಿದ್ದರೆ ಎಚ್ಚರಗೊಂಡು, ಜೀವನು ಸಾಗುತ್ತಿರುವ ಪಥ  ಬದಲಾಯಿಸಿಕೊಳ್ಳಬಹುದು.  ಅದನ್ನು ಕಂಡೂ  ಎಚ್ಚರಗೊಳ್ಳದಿದ್ದರೆ ಕಣ್ಣಿದ್ದೂ ಇಲ್ಲದಂತೆ. ಆದ್ದರಿಂದ "ಒಬ್ಬನಿಗೆ ಕಣ್ಣೇ ಇಲ್ಲ."


ಕಣ್ಣಿಲ್ಲದ ನೋಟಗಾರಗೆ ಕೊಟ್ಟರು ಮೂರು ಊರುಗಳ - ಎರಡು ಹಾಳು, ಒಂದಕ್ಕೆ ಒಕ್ಕಲೇ ಇಲ್ಲ. 

ಒಂದು ಜೀವಕ್ಕೆ ಲಭ್ಯವಿರುವ ಗುಣಗಳು ಮೂರು. ಅವು ಸತ್ವ, ರಜ, ತಮೋ ಗುಣಗಳು. ಕಣ್ಣಿಲ್ಲದ ನೋಟಗಾರನಿಗೆ ಸಿಕ್ಕ "ಮೂರು  ಊರುಗಳು".  ಆ ಮೂರರಲ್ಲಿ  ತಮೋ, ರಜೋ ಗುಣಗಳು ಸತ್ಫಲ ನೀಡಲಾರವು . ಆದ್ದರಿಂದ "ಎರಡು ಹಾಳು". ಸತ್ವ ಗುಣದ ಮೂಲಕ ಜೀವ ಮೇಲೇರಬಹುದು. ಆದರೆ ಅದನ್ನು ಅರಿತುಕೊಂಡು, ಉಪಯೋಗಿಸಿಕೊಳ್ಳದಿದ್ದರೆ  ಅದಿದ್ದೂ ಇಲ್ಲದಂತಾಯಿತು. ಊರಿದ್ದೂ "ಒಕ್ಕಲೇ ಇಲ್ಲ".

ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು  - ಇಬ್ಬರು ಚೊಂಚರು ಒಬ್ಬನಿಗೆ ಕೈಯೇ ಇಲ್ಲ. 

ಈ ಜಗತ್ತನ್ನು, ಸಂಸಾರವನ್ನು, ಸೃಷ್ಟಿಸಿ ನಡೆಸುವ "ಮೂವರು ಕುಂಬಾರರು" ಬ್ರಹ್ಮ, ವಿಷ್ಣು, ಮಹೇಶ್ವರರು. ಜೀವದ ಮೂರು ಗುಣಗಳಿಗೆ ಅವರು ಅಭಿಮಾನಿ ದೇವತೆಗಳು. ಯಾವಜೀವನೂ ಪೂರ್ಣವಾಗಿ ಒಂದೇಗುಣವನ್ನು ಪಡೆದವನಲ್ಲ. ಪ್ರತಿಯೊಬ್ಬರಲ್ಲೂ ಈ ಮೂರುಗುಣಗಳು ವ್ಯಕ್ತವಾಗಿರುತ್ತವೆ. ವ್ಯಕ್ತವಾಗುವ ಪ್ರಮಾಣ ಬೇರೆ ಬೇರೆ ಅಷ್ಟೇ. ಅಭಿಮಾನಿದೇವತೆಗಳ ಕೃಪೆಯಿಂದ ಸತ್ವಗುಣದ ಪ್ರಮಾಣವನ್ನು ವೃದ್ಧಿಗೊಳಿಸಿಕೊಂಡು ಸತ್ ಮಾರ್ಗದಲ್ಲಿ ಮುನ್ನಡೆಯಬಹುದು. ಆದರೆ  (ಮಧ್ವ ಸಿದ್ಧಾಂತದಂತೆ) ಬ್ರಹ್ಮ ಮಹೇಶ್ವರರು ಸ್ವತಂತ್ರರಲ್ಲ. ಶ್ರೀಹರಿಯ ಇಚ್ಛೆಗನುಸಾರವಾಗಿ ನಡೆಯತಕ್ಕವರು. ಅವನ ಕೃಪೆಯಿಲ್ಲದಿದ್ದರೆ ಅವರೂ ಅಂಗಹೀನರೇ. ಆದ್ದರಿಂದ "ಇಬ್ಬರು ಚೊಂಚರು".
ಶ್ರೀಹರಿಯ ಕೃಪಾಹಸ್ತ ಚಾಚಿದರೆ ಯಾವುದೂ ಅಸಾಧ್ಯವಲ್ಲ. ಆದರೆ ಶ್ರೀಹರಿಯ ಕೃಪೆಗೆ ಪಾತ್ರನಾಗುವಂಥ ಯಾವುದೇ ಕಾರ್ಯ ಈ ಜೀವ ಮಾಡಲಿಲ್ಲವಾದ್ದರಿಂದ ಆತನ ಕೈ ನಮ್ಮೆಡೆಗೆ ಚಾಚಲಾರದು. ಕೈಯಿದ್ದೂ ಇಲ್ಲದಂತೆ. ಆದ್ದರಿಂದ "ಒಬ್ಬನಿಗೆ ಕೈಯೇ ಇಲ್ಲ"


ಕೈಯಿಲ್ಲದ ಕುಂಬಾರನು ಮಾಡಿದ ಮೂರು ಮಡಕೆಗಳ, ಎರಡು ಒಡಕು ಒಂದಕೆ ಬುಡವೇ ಇಲ್ಲ. 

ಕೈಯಿಲ್ಲದ ಕುಂಬಾರನು, ತನ್ನ ಕೈಚಾಚಲು ಅನುವಾಗುವಂಥ ಜೀವನವನ್ನು ಜೀವನು ನಡೆಸಲೆಂದು  ಜ್ಞಾನ, ಭಕ್ತಿ, ವೈರಾಗ್ಯಗಳೆಂಬ "ಮೂರು  ಮಡಕೆಗಳ " ಮಾಡಿ  ನೀಡಿದ. ಸಾಧನಾ ತ್ರಯಗಳೆಂದು ಅವುಗಳ ಹೆಸರು. ಈ ಕಲಿಗಾಲದಲ್ಲಿ  ಜ್ಞಾನ, ವೈರಾಗ್ಯಗಳನ್ನು ಗಳಿಸುವುದು ಸುಲಭಸಾಧ್ಯವಲ್ಲ.  ಒಡಕುಮಡಕೆಯಲ್ಲಿ ನೀರು ತುಂಬಿಸಿದಂತೆ. ಆದ್ದರಿಂದ "ಎರಡು ಒಡಕು". ಭಕ್ತಿ ಎಂಬುದು ಸುಲಭದಲ್ಲಿ ಕೈಗೆಟಕುವಂತಹುದು.  ಭಗವಂತನಲ್ಲಿ ಪ್ರೀತಿ, ಅವನ ಕೃಪೆಗಳಿಸುವ ಕಾರ್ಯಗಳಲ್ಲಿ  ಶ್ರದ್ಧೆ, ಎಂಬ ಬುಡವಿದ್ದರೆ ಭಕ್ತಿಯೆಂಬ ಮಡಕೆ ತುಂಬಿಸಲು ಸಾಧ್ಯ.  ಆದರೆ ಭಕ್ತಿಎಂಬ ಮಡಕೆಯನ್ನು ತುಂಬಿಸುವ ಪ್ರಯತ್ನವಾಗಲೇ ಇಲ್ಲ. ಅದರಲ್ಲಿ ತೊಟ್ಟೂ ತುಂಬಲಿಲ್ಲ. ಬುಡವೇ ಇಲ್ಲದ ಮಡಕೆಯಂತೆ.  ಹಾಗಾಗಿ "ಒಂದಕ್ಕೆ ಬುಡವೇ ಇಲ್ಲ".

ಬುಡವಿಲ್ಲದ ಮಡಕೆಗೆ ಹಾಕಿದರು ಮೂರು ಅಕ್ಕಿಕಾಳ - ಎರಡು ಬೇಯದು ಒಂದು ಬೇಯಲೇ ಇಲ್ಲ. 

ಭಕ್ತಿಯಲ್ಲೂ ಮೂರುವಿಧಗಳು.  ಸಾತ್ವಿಕ ಭಕ್ತಿ, ತಾಮಸಿಕ ಭಕ್ತಿ, ರಾಜಸಭಕ್ತಿ ಗಳು. "ಮೂರು  ಅಕ್ಕಿಕಾಳು" ಗಳು.  ರಾಜಸ ಭಕ್ತಿ, ತಾಮಸಭಕ್ತಿಗಳ ಮೂಲಕ ಮೋಕ್ಷಗಳಿಸುವ ಪ್ರಯತ್ನ  ಫಲ ನೀಡಲಾರದು.  ಬಹಳವೇ ಕಷ್ಟಸಾಧ್ಯವಾದದ್ದು. "ಎರಡು ಬೇಯದು". ಸಾತ್ವಿಕ ಭಕ್ತಿಯನ್ನು ಬೇಯಿಸಿ  ಜೀವವನ್ನು ಪಕ್ವ ಗೊಳಿಸುವ ಪ್ರಯತ್ನವೇ ಆಗಲಿಲ್ಲ. "ಒಂದು ಬೇಯಲೇ ಇಲ್ಲ".

ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು - ಇಬ್ಬರು  ಉಣ್ಣರು, ಒಬ್ಬನಿಗೆ ಹಸಿವೇ  ಇಲ್ಲ. 


ಸಾತ್ವಿಕ ಭಕ್ತಿಯನ್ನು ಬೆಳೆಸಲು ಸಹಕರಿಸುವಂಥ "ಮೂವರು ನೆಂಟರು" ಪ್ರತಿಜೀವರೊಡನೆಯೂ ಇದ್ದಾರೆ. ಕಾಯ, ವಾಕ್, ಮನಸ್ಸು. ಈ ಮೂವರೂ ಭಕ್ತಿರಸವನ್ನುಂಡು ಸ್ಪಂದಿಸಿ ಸಹಕರಿಸಿದರೆ ಮೋಕ್ಷಫಲ ಸಿಗುವ ಸಾಧ್ಯತೆ ಉಂಟು. ಆದರೆ ಕಾಯ ಹಾಗು ವಾಕ್ ಇವೆರಡೂ ಮನದ ಅಪ್ಪಣೆಯಿಲ್ಲದೆ ಭಕ್ತಿರಸ ಉಣ್ಣಲಾರವು.  ಆದ್ದರಿಂದ "ಇಬ್ಬರು ಉಣ್ಣರು".  ಮನಕ್ಕೆ ಅದು ಸಾಧ್ಯ. ಆದರೆ ಆ ಮನಸ್ಸಿಗೆ ಭಕ್ತಿರಸವುಣ್ಣುವ "ಹಸಿವೇ ಇಲ್ಲ".

ಹಸಿವಿಲ್ಲದ ನೆಂಟಗೆ ಕೊಟ್ಟರು ಮೂರು ಟೊಣಪೆಗಳ - ಎರಡು ತಾಗದು ಒಂದು ತಾಗಲೇ ಇಲ್ಲ. 

ಹಸಿವಿಲ್ಲದ ಮನಸ್ಸಿಗೆ ಪೆಟ್ಟು ಕೊಟ್ಟರಾದರೂ ಬುದ್ಧಿಕಲಿಯಬಹುದೆಂದು ಅತೀತ, ಅನಾಗತ,ಮತ್ತು ವರ್ತಮಾನ ಜನ್ಮಗಳೆಂಬ "ಮೂರು  ಟೊಣಪೆ", ಪೆಟ್ಟು, ಗಳನ್ನು ಕೊಟ್ಟರು. ಪ್ರತಿ ಜನ್ಮವೂ ಆಯಾ ಜನ್ಮಕ್ಕೆ ತಕ್ಕಂಥ ತಾಪದ ಪೆಟ್ಟು ತಿನ್ನಿಸಿ ಬುದ್ಧಿಕಲಿಸುವಂಥದ್ದು. ಆದರೆ ಜೀವಕ್ಕೆ ಅತೀತ, ಅನಾಗತ ಜನ್ಮಗಳ  ಅರಿವೇ ಆಗಲಾರದಾದ್ದರಿಂದ "ಎರಡು ತಾಕದು", ವರ್ತಮಾನ ಜನ್ಮದ ಪೆಟ್ಟು ತಾಕಿಯೂ ಅರಿವು ಬರಲಿಲ್ಲವಾಗಿ ಅದು ತಾಕಿಯೂ ತಾಕದಂತೆ. ಒಂದು "ತಾಕಲೇ ಇಲ್ಲ".

ತಾಕಲಿಲ್ಲದ ಟೊಣಪೆಯ ತಾಕಿಸಿ ಸದ್ಗತಿಯ ನೀಯಬೇಕು ಪುರಂದರ ವಿಠಲ 

ಈ ಮಾನವ ಜನ್ಮದ ಸಂಸಾರ ತಾಪವನ್ನು, ಅದರ ಕಾರಣ, ಫಲಗಳನ್ನು, ಮನದಟ್ಟುಮಾಡಿಸಿ, ಸಂಸಾರದಲ್ಲಿ ವಿರಕ್ತಿಮೂಡಿಸಿ, ಭಕ್ತಿಮಾರ್ಗದಲ್ಲಿ ನಡೆಸಿ, ಸದ್ಗತಿಯನ್ನು ನೀಡಬೇಕೆಂದು ಪುರಂದರ ವಿಠ್ಠಲ ನಲ್ಲಿ, ಪುರಂದರ ದಾಸರು ಬಿನ್ನವಿಸಿಕೊಂಡಿದ್ದಾರೆ.






1 ಕಾಮೆಂಟ್‌: