ಭಾನುವಾರ, ಸೆಪ್ಟೆಂಬರ್ 17, 2017

ನಿಸ್ಸಾರ ಅಹಮದ್ - ನಾನು ಗ್ರಹಿಸಿದಂತೆ

ಈ ಬಾರಿಯ ದಸರಾ ಉತ್ಸವವನ್ನು ಉದ್ಘಾಟಿಸಲು ಕರ್ನಾಟಕ ಆಹ್ವಾನಿಸಿದೆ. ಈ ಸಂಧರ್ಭದಲ್ಲಿ ನಿಸ್ಸಾರರ ಬಗೆಗೆ ನನ್ನ  ಒಂದು ಬರಹ :


“ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯಹರಿದ್ವರ್ಣವನದ ತೇಗ  ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯೆ ನಿತ್ಯೋತ್ಸವ. ನಿನಗೆ ನಿತ್ಯೋತ್ಸವ ತಾಯೆ ನಿತ್ಯೋತ್ಸವ.”

ಕೇಳಿದವರೆಲ್ಲರ ಮನಮುಟ್ಟಿ, ಬಾಯಲ್ಲಿ ಗುಣುಗುಟ್ಟಿ, ಬಹಳ ಜನಪ್ರಿಯವಾದ ಈ ಭಾವಗೀತೆ, ಅದರ ಕವಿ ಮಾನ್ಯ ನಿಸ್ಸಾರ ಅಹಮದ್ದರನ್ನು  “ನಿತ್ಯೋತ್ಸವ ಕವಿ” ಎಂದೇ ಗುರುತಿಸಲು ಕಾರಣವಾಯಿತು.  

ನಿತ್ಯೋತ್ಸವ ಗೀತೆಯನ್ನು ನಿಸ್ಸಾರ ಅಹಮದ್ದರು ಬರೆದದ್ದು ಯಾವಾಗಲೋ  ತಿಳಿಯದು. ಆದರೆ ನಾನು ಅದನ್ನು ಮೊದಲಬಾರಿ ಕೇಳಿದ್ದು ೧೯೭೨ ರ ಆಗಸ್ಟ್ ಹದಿನಾಲ್ಕರ ರಾತ್ರಿ ೧೨ ಘಂಟೆಗೆ. ಆ ದಿನಾಂಕ ಅಷ್ಟು ನಿಖರವಾಗಿ ನೆನಪಿರಲು ಕಾರಣವಿದೆ. ೧೯೭೨, ನಮ್ಮ  ಸ್ವಾತಂತ್ರ್ಯೋತ್ಸವದ ರಜತ ವರ್ಷ. ಅದು ವಿಶೇಷವಾದದ್ದರಿಂದ ನಮ್ಮ ಕಾಲೇಜಿನಲ್ಲಿ (ನ್ಯಾಷನಲ್ ಕಾಲೇಜು ಬೆಂಗಳೂರು) ಪ್ರತಿ ವರುಷದಂತೆ ಆಗಸ್ಟ್ ಹದಿನೈದರ ಬೆಳಗ್ಗೆ ಸ್ವಾತಂತ್ರ್ಯೋತ್ಸವ ವನ್ನು ಆಚರಿಸುವ ಬದಲು ಹದಿನಾಲ್ಕರ ರಾತ್ರಿ ಹನ್ನೆರಡು  ಘಂಟೆಗೆ ಸಮಾರಂಭವನ್ನು  ಏರ್ಪಡಿಸಲಾಗಿತ್ತು. ಸಮಾರಂಭದ ಅಂಗವಾಗಿ ‘ನಿತ್ಯೋತ್ಸವ’ ಗೀತೆಯನ್ನು ಶ್ರೀ  ಮೈಸೂರು ಅನಂತಸ್ವಾಮಿಯವರ ನಿರ್ದೇಶನದಲ್ಲಿ  ಒಂದು ಸಮೂಹ ಗಾನವಾಗಿ ಹಾಡಲಾಯಿತು.  ಮಧ್ಯರಾತ್ರಿಯ ನಿಶ್ಶಬ್ದದಲ್ಲಿ ಆ ಸಮೂಹಗಾನ, ಜಲಪಾತದ ಮುಂದೆ ನಿಂತು ಅದು  ಭೋರ್ಗರೆಯುವ ಶಬ್ದವನ್ನು ಕೇಳುವಂತಹದೇ ಆನಂದವನ್ನು ನನಗೆ ತಂದುಕೊಟ್ಟಿತ್ತು.

ಅದಕ್ಕೆ ಎರಡುವರುಷ  ಹಿಂದೆ ನಮ್ಮ ಹೈಸ್ಕೂಲಿನಲ್ಲಿ (ನ್ಯಾಷನಲ್ ಹೈಸ್ಕೂಲು) ಒಮ್ಮೆ ಅನಂತಸ್ವಾಮಿಯವರ ಗಾಯನ ಏರ್ಪಾಟಾಗಿದ್ದಾಗ ಅವರು “ಕುರಿಗಳು ಸಾರ ಕುರಿಗಳು” ಮತ್ತು “ನಾಡ ದೇವಿಯೇ” ಗೀತೆಗಳನ್ನು ಹಾಡಿದ್ದರು. ಗೀತೆಗಳು ಬಹಳ ಮೆಚ್ಚಿಗೆಯಾದರೂ ಅವುಗಳ ಕರ್ತೃ ನಿಸ್ಸಾರ ಅಹಮದ್ದರೆಂದು ಆಗ ನನಗೆ ತಿಳಿದಿರಲಿಲ್ಲ.

ನಂತರ  ಶ್ರೀ ನಿಸ್ಸಾರ ಅಹಮದ್ದರೇ ನಮ್ಮ ಕಾಲೇಜಿನಲ್ಲಿ ಒಮ್ಮೆ ತಮ್ಮ ಕವನಗಳ ಬಗ್ಗೆ  ಮಾತನಾಡಿದರು. ಆದಿನ  ಅವರು ತಮ್ಮ “ರಾಮನ್ ಸತ್ತ ದಿನ”, “ ಸಂಜೆ ಐದರ ಮಳೆ” ಮತ್ತು “ಮಾಸ್ತಿ” ಕವನಗಳನ್ನು ವಾಚನ ಮಾಡಿದ್ದು ನೆನಪಿದೆ.

ನಾನು ಬಹು ಸಣ್ಣ ವಯಸ್ಸಿನಿಂದಲೇ ಪುಸ್ತಕಗಳನ್ನೋದಲು ಪ್ರಾರಂಭಮಾಡಿದ್ದೆನಾದರೂ ನನ್ನ ಓದೆಲ್ಲಾ ಕಥೆ, ಕಾದಂಬರಿಗಳು, ಹಾಸ್ಯಬರಹಗಳು ಮುಂತಾಗಿ ಗದ್ಯಕ್ಕೆ ಸೀಮಿತವಾದದ್ದು. ಕವನ, ಕಾವ್ಯಗಳ ಸೌಂದರ್ಯವನ್ನು ಗುರುತಿಸುವ ಹಾಗೂ ಆಸ್ವಾದಿಸುವ ರಸಿಕತೆ ನನಗೆ ಇಲ್ಲವೆನಿಸುತ್ತದೆ. ಅಷ್ಟಾಗಿಯೂ ನನಗೆ ಕೆಲವು ಕವಿಗಳ, ಕವಿತೆಗಳ ಪರಿಚಯ ಆಗಿದ್ದು, ಅವುಗಳ ರಸಾಸ್ವಾದನೆ ಸಾಧ್ಯವಾದದ್ದು ಭಾವಗೀತೆಗಳ ಮುಖಾಂತರ. ಕೇಳಿದ ಗೀತೆಗಳು  ಹಿಡಿಸಿದರೆ ನಂತರ ಅದನ್ನೋದಿ ಮನನ ಮಾಡಿಕೊಳ್ಳುವುದು ನನ್ನ ಅಭ್ಯಾಸ. ‘ನಿತ್ಯೋತ್ಸವ’ ಕವನ ಸಂಕಲನದ ಅನೇಕ ಕವನಗಳು  ಭಾವಗೀತೆಗಳಾಗಿರುವುದರಿಂದ ಈ ಎಲ್ಲ ಗೀತೆಗಳ ಪರಿಚಯ ನನಗಾಯಿತು. “ಬೆಣ್ಣೆ ಕದ್ದ ನಮ್ಮ ಕೃಷ್ಣ”, “ನನ್ನ ನಲವಿನ ಬಳ್ಳಿ”, “ನಾದವಿರದ ಬದುಕು”, “ಎಲ್ಲ ಮರೆತಿರುವಾಗ” “ನಾ ನಿನ್ನ ಕಂಡಾಗ” ಮುಂತಾದ  ಅನೇಕ ಕವನಗಳು ಅನಂತಸ್ವಾಮಿಯವರ ಕಂಠದ ಮೂಲಕ ನನ್ನ ಮಿದುಳಿಗೆ ತಲುಪಿದವು.  

ಸರಳವಾದ ಸಾಲುಗಳು, ಪದಗಳು ಏನುಹೇಳುತ್ತವೋ ಅದೇ ಅರ್ಥ, ತಲೆಗೆ ಹೆಚ್ಚು ಕೆಲಸಕೊಡದೆ ಓದುತ್ತಾ ಓದುತ್ತಾ ಆನಂದಪಡುವಂಥ ಕವನಗಳಾದರೆ  ನಾನೂ ಅವುಗಳನ್ನು ಓದಿ ಸಂತೋಷಪಡಬಲ್ಲೆ. ನಿಸ್ಸಾರರ ಅನೇಕ ಕವನಗಳು ಸರಳವಾದ ಪದಪುಂಜ ಮತ್ತು ನವಿರಾದ ಹಾಸ್ಯದಿಂದ ‘ಕಾವ್ಯ ಪ್ರಯೋಗ ಪರಿಣಿತಮತಿ’ ಗಳಲ್ಲದ ನನ್ನಂಥವರೂ ಸಹ ಸುಲಭವಾಗಿ ಆಸ್ವಾದಿಸುವಂತಿವೆ. “ಗಾಂಧಿಬಜಾರಿನ ಒಂದು ಸಂಜೆ”, “ಅಮ್ಮ ಆಚಾರ ಮತ್ತು ನಾನು”, “ಪುರಂದರ ದಾಸರು”,  “ಅಭಿವಂದನೆ ನಿಮಗೆ”, “ನಗ್ತೀರಾ ನನ್  ಹಿಂದೆ”, “ಗೃಹಪ್ರವೇಶದ ಉಡುಗೊರೆ”, “ಲಾಲಬಾಗಿನಲ್ಲಿ ಎಚ್ಛೆನ್” ಇವುಗಳು ಅಂಥ ಕವನಗಳಲ್ಲಿ ಕೆಲವು.  ಅವರ ಸಾಲುಗಳ ಸೊಬಗನ್ನು  ವಿವರಿಸುವ ಸಾಮರ್ಥ್ಯ ನನಗಿಲ್ಲ. ಈ ಕೆಳಗಿನ ಕೆಲವು ಉದಾಹರಣೆಗಳನ್ನು ನೋಡಿದರೆ ನಿಮಗೇ ತಿಳಿದೀತು.

ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ, ನ್ಯಾಷನಲ್ ಕಾಲೇಜಿನ  ಪ್ರಿನ್ಸಿಪಾಲ, ಸುಪ್ರಸಿದ್ಧ ವಿಚಾರವಾದಿ ಮತ್ತು ಗಾಂಧಿವಾದಿ ಶ್ರೀ ಹೆಚ್ ನರಸಿಂಹಯ್ಯ ನವರು ಲಾಲಬಾಗ್ ಪ್ರೇಮಿ. ಪ್ರತಿದಿನ ಮುಂಜಾನೆ ಲಾಲ್ ಬಾಗ್ ನಲ್ಲಿ ವಾಯುವಿಹಾರದೊಂದಿಗೆ ಅವರ ದಿನಚರಿ ಸುರು. ಬಹುದಿನಗಳ ಅಂತರದಲ್ಲಿ ಹೆಚ್ ಎನ್ ರವರು ಲಾಲ್ ಬಾಗಿನಲ್ಲಿ ಕಂಡಾಗ ಅವರು ಕೊಟ್ಟ ವಿವರಣೆಯನ್ನು ನಿಸ್ಸಾರರು ತಮ್ಮ ‘ಕೆಂಪುತೋಟದಲ್ಲಿ ಎಚ್ಛೆನ್’ ಕವನದಲ್ಲಿ ಹೇಳುವ ರೀತಿ,

“ಈಚೆಗೇಕೋ ಮುದುಕ ಪಾದಬೆಳಸಿಲ್ಲವೀ ಎಡೆಗೆ
ಗೊಟಕ್ಕೆಂದು ಪಯಣಿಸಿದನೋ ಹೇಗೆ ಮೇಲುಗಡೆಗೆ?
ಎನ್ನುವ ಈ ತರುಲತೆಗಳನುಮಾನ ನೀಗಲಿಕ್ಕೆಂದೇ
ಮಳೆಯಿದ್ದರೂ ಈ ಸಂಜೆ ಇಲ್ಲಿಗೆ ಬಂದೆ.”

ಹಾಗೆಯೇ ನಿಸ್ಸಾರರ ‘ಪುರಂದರ ದಾಸರು’ ಕವನದ ಕೆಲವುಸಾಲುಗಳನ್ನು ನೋಡಿ,

ಮೈಮರೆತು ಹರಿಸ್ಮರಣೆ ಮಾಡಿದರು, ಹಾಡಿದರು
ಹತ್ತುಜನ ಕೂಡಿದರು ಹರಿಭಕ್ತರು .
ಈವೊತ್ತು ಈ ಕೊಂಪೆ, ನಾಳೆ ದೂರದ ಹಂಪೆ
ಹರಿಯಿಂಪ, ನರುಗಂಪ ಹರಡಿದ್ದರು.

ಮತ್ತು, ನಾಡದೇವಿಯೇ ಕವನದ ಎರಡೇ ಸಾಲು

ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಬೇಧ ತಾಯೀ!
ಒಂದೆ ನೆಲದ ರಸಹೀರಲೇನು? ಸಿಹಿ,ಕಹಿಯ ರುಚಿಯ ಕಾಯಿ   

ಆಗಿಂದಾಗ್ಗೆ ಏನಾದರೂ ಲೇಖನಗಳನ್ನು ಬರೆದು ನನ್ನ “ಬ್ಲಾಗ್” ನಲ್ಲಿ ಪ್ರಕಟಿಸುವುದು ನನ್ನದೊಂದು ಹವ್ಯಾಸ. ಅಂತಹ ಒಂದು ಲೇಖನಕ್ಕೆ ನನಗೆ ಬಹಳ ಮೆಚ್ಚಿಗೆಯಾಗಿದ್ದ ನಿಸ್ಸಾರರ ‘ಗೃಹಪ್ರವೇಶದ ಉಡುಗೊರೆ’ ಕವನವನ್ನು ನಾನು ಉಪಯೋಗಿಸಿಕೊಳ್ಳಬೇಕಿತ್ತು. ನಾನು ಅದನ್ನೋದಿ ವರುಷಗಳೇ  ಕಳೆದಿದ್ದವು. ನನಗೆ ಅದರ ಶೀರ್ಷಿಕೆ ಯಾಗಲೀ, ಯಾವ ಸಂಕಲನದಲ್ಲಿದೆ ಎಂಬುದಾಗಲೀ ನೆನಪಿರಲಿಲ್ಲ. ಹಾಗಾಗಿ ನನಗೆ ಅದು ಸಿಕ್ಕಲಿಲ್ಲ. ನಾನು ಬೆಂಗಳೂರಿಗೆ ಹೋಗಿದ್ದಾಗ ನಮ್ಮ ಮನೆಯ ಸಮೀಪದಲ್ಲೇ ವಾಸವಿದ್ದ ನಿಸ್ಸಾರ ಅಹಮದ್ದರನ್ನು ಅವರ ನಿವಾಸದಲ್ಲಿ ಭೇಟಿಮಾಡಿ ಕವನದ ವಸ್ತು ಮತ್ತು ನನಗೆ ನೆನಪಿದ್ದ ಕೆಲವು ಸಾಲುಗಳನ್ನು ಅವರಿಗೆ ತಿಳಿಸಿ, ನನಗೆ ಆ ಕವನ  ಬೇಕಿತ್ತೆಂದು ಕೇಳಿದೆ. ಸಾಹಿತ್ಯ ಪ್ರಪಂಚದ ಅಂಥ ದೊಡ್ಡವ್ಯಕ್ತಿ, ಮೊದಲು ನನ್ನ ಬರಹದ ಬಗೆಗೆ ಆಸಕ್ತಿಯಿಂದ ವಿಚಾರಿಸಿ, ವಿಶ್ವಾಸದಿಂದ ಮಾತನಾಡಿಸಿ, ಕೆಲನಿಮಿಷಗಳ ತರುವಾಯ ಆ ಕವನವನ್ನು ನೆನಪಿಸಿಕೊಂಡರು.
“ಅದು ಈಗ ಅಚ್ಚಿನಲ್ಲಿದೆಯೋ ಇಲ್ಲವೋ ತಿಳಿಯದು. ಸಪ್ನಾ ಪುಸ್ತಕದ ಮಳಿಗೆಯಲ್ಲಿ ನನ್ನ ಸಮಗ್ರ ಕವಿತೆಗಳ ಸಂಕಲನವಿದೆ. ಅದರಲ್ಲಿ ನಿಮಗೆ ದೊರಕಬಹುದು. ಒಂದುವೇಳೆ ಸಿಗದಿದ್ದರೆ ತಿಳಿಸಿ. ಖಂಡಿತಾ ಹೇಗಾದರೂ ಮಾಡಿ ತಮಗೆ ಅದನ್ನು ಕಳುಹಿಸಿಕೊಡುತ್ತೇನೆ” ಎಂದು ಹೇಳಿದರು. “ಫೋನ್ ಮುಖಾಂತರ ತಿಳಿಸಿದರೂ ಸಾಕು” ಎಂದು ಹೇಳಿ ನಂಬರ ಕೊಟ್ಟರು.  ಅವರ ಸರಳತೆ, ಸಜ್ಜನಿಕೆಗೆ ನಾನು ಮಾರುಹೋದೆ.

ಅಪರೂಪಕ್ಕೊಮ್ಮೆ ನಮ್ಮ ಸರಕಾರ “ಭಲೇ, ಇದು ಸರಿಯಾದ ಕೆಲಸ” ಎನ್ನುವಂಥ  ಕೆಲಸವನ್ನು ಮಾಡಿಬಿಡುತ್ತದೆ. ಶ್ರೀ ಕೆ ಎಸ ನಿಸಾರ ಅಹಮದ್ದರನ್ನು ಈ ಬಾರಿಯ ದಸರಾ ಉತ್ಸವನ್ನು ಉದ್ಹಾಟಿಸಲು ಆಹ್ವಾನಿಸಿರುವುದು ಅಂಥದ್ದೊಂದು. ಈ ಸಂಧರ್ಭದಲ್ಲಿ ಅಹಮದ್ದರ ಬಗೆಗೆ ಒಂದು ಲೇಖನ ಬರೆಯೋಣವೆನ್ನಿಸಿತು.  ನಿಸ್ಸಾರರ, ಅವರ ಕವನಗಳ ಪರಿಚಯ ನನ್ನಷ್ಟೂ ಇಲ್ಲದ ಕೆಲವರಿಗೆ, ಈ ಬರಹದ ಮೂಲಕ ಅವರ ಪರಿಚಯವಾಗಿ, ನಿಸ್ಸಾರರ ಕವನಗಳ ಸೊಬಗನ್ನು ಹೆಚ್ಚುಜನ ಸವಿಯುವಂತಾದರೆ ಈ ಪ್ರಯತ್ನ ಸಾರ್ಥಕವೆಂದು ತಿಳಿಯುತ್ತೇನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ