ಶುಕ್ರವಾರ, ಮೇ 8, 2026

ಉದರವೈರಾಗ್ಯವಿದು’

 ನಾನು ಪ್ರೈಮರಿ ಶಾಲೆಯಲ್ಲಿದ್ದಾಗ - ನಾಲ್ಕನೆಯದೋ ಐದನೆಯದೋ

ತರಗತಿ ಇರಬಹುದು, ನಮಗೆ ಕನ್ನಡ ಪಠ್ಯ ಪುಸ್ತಕದಲ್ಲಿ ಇರುತ್ತಿದ್ದ ಪದ್ಯಗಳನ್ನು

ಬಾಯಿಪಾಠ ಮಾಡಬೇಕಿತ್ತು. ನಮ್ಮ ಪುಸ್ತಕವನ್ನು ಸಂಕಲನ ಮಾಡಿದ

ಪುಣ್ಯಾತ್ಮರು ಯಾರೋ ತಿಳಿಯದು. ಆತನೋ ಆಕೆಯೋ ಅದರಲ್ಲಿ

ಪುರಂದರ ದಾಸರ ಗೀತೆಯೊಂದನ್ನು ಸೇರಿಸಿದ್ದರು. ಅದಾಗಿ ಅರುವತ್ತು

ವರುಷಗಳ ಮೇಲಾಯಿತು, ಆಗ ನಾನು ಬಾಯಿಪಾಠಮಾಡಿದ ಗೀತೆ

ನನ್ನ ಜೀವನವಿಡೀ ನನ್ನ ಮನದಿಂದ ಮರೆಯಾಗದೆ  ಉಳಿದುಬಂದಿದೆ.

ಕೇಳಿ ನಮ್ಮ ಹತ್ತನೆಯ ಗೀತೆ ಶ್ರೀ ಪುರಂದರದಾಸರ ರಚನೆ

‘ಉದರವೈರಾಗ್ಯವಿದು’.   ರಾಗ  ನಾದನಾಮಕ್ರಿಯ,  ಆದಿ ತಾಳ.

ಇಲ್ಲಿಯ ಡಿಸ್ಕ್ರಿಪ್ಷನ್ ವಿಭಾಗದಲ್ಲಿ ಗೀತೆಯ ಸಾಹಿತ್ಯ ಲಭ್ಯವಿದೆ. 




ದಾಸರು ಯಾರನ್ನು ಉದ್ದೇಶಿಸಿ ಈ ಗೀತೆಯನ್ನು

ರಚಿಸಿದರೋ ತಿಳಿಯದು. ನಾವು ನೀವು ಅವರು

ಇವರು ಯಾರಾದರೂ ಆಗಬಹುದು. ಗೀತೆಯಲ್ಲಿ

ತಿಳಿಸಿರುವಂಥ  ಡಾಂಭಿಕತನ ಇರುವ ಯಾರಾದರೂ

ಸರಿಯೇ. ‘ಉದರವೈರಾಗ್ಯ’ ಎನ್ನುವ ಪದ ಉದರದಲ್ಲಿನ

ವೈರಾಗ್ಯ ಮತ್ತು ಉದರಕ್ಕಾಗಿ ವೈರಾಗ್ಯ ಇವೆರಡನ್ನೂ

ಸೂಚಿಸುವ ಪದ. ಉದರದಲ್ಲಿ ಬಿದ್ದದ್ದು ಮಲವಾಗಿ

ಹೊರಗೆ ಹೋಗುವುದಷ್ಟೇ ತಾನೇ. ಅದು ಕೆಲವೇ

ಘಳಿಗೆಗಳ ಕಾಲ ಉದರದೊಳಗೆ ಉಳಿಯುವುದು.

ಆದರೆ ಮಿದುಳಿಗೆ ಇಳಿದದ್ದಾದರೆ ತಲೆಯೊಳಗೆ

ಸ್ಥಿರವಾಗಿ ಉಳಿಯುವುದು. ಆದ್ದರಿಂದ ಕ್ಷಣಕಾಲದ

ತೋರಿಕೆಯ ವೈರಾಗ್ಯವನ್ನು ದಾಸರು ಉದರವೈರಾಗ್ಯ

ಎಂದರು. ಪದ್ಯದ ಸಾಲುಗಳೆಲ್ಲಾ ಹೀಗೆಯೇ ಅತ್ಯಂತ

ಸರಳ ಆದರೆ ಅಷ್ಟೇ ಅರ್ಥಪೂರ್ಣವಾದವು. 



ಮುಂಜಾನೆಯ ಚಳಿಯಲ್ಲಿ ನಡುಗುತ್ತಾ ಕೊರೆವ

ನೀರಲ್ಲಿ ಎಷ್ಟುಬಾರಿ ಮುಳುಗೆದ್ದರೇನು ? ಮೈಮೇಲಿನ

ಕೊಳೆ  ತೊಳೆದುಹೋಗಬಹುದು. ಆದರೆ ಮನದೊಳಗಿನ

ಕೊಳೆಯ ಗತಿ? ಅದನ್ನು ಉಳಿಸಿಕೊಂಡು - ಮದ ಮತ್ಸರ

ಮೋಹ ಒಳಗೆ ತುಂಬಿಟ್ಟುಕೊಂಡು - ಚರ್ಮದ ಮೇಲಿನ ಕೊಳೆ ತೊಳೆದುಕೊಂಡರೆ ಬಂದದ್ದೇನು? ಎನ್ನುವುದು  ಮೊದಲ

ಚರಣದ ಭಾವ.   


ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದನ್ನು ಕೇಳಿದ್ದೇವೆ.

‘ಪತ್ರಂ ಪುಷ್ಪಮ್ ಫಲಂ ತೋಯಂ ಯೋ ಮೇ ಭಕ್ತ್ಯಾ

ಪ್ರಯಚ್ಛತಿ ತದಹಂ ಭಕ್ತ್ಯೋಪಹೃತಮಶ್ನಾಮಿ ಪ್ರಯತಾತ್ಮನಃ’

ಎಂದ ಕೃಷ್ಣ. ಅಂದರೆ, ಎಲೆ, ಹೂವು, ಹಣ್ಣು, ನೀರು

ಏನಾದರಾಗಲೀ, ನಿಜಭಕ್ತರು ಭಕ್ತಿಪೂರ್ವಕವಾಗಿ

ಕೊಟ್ಟದ್ದನು ನಾನು ಸ್ವೀಕರಿಸುತ್ತೇನೆ ಎಂದ. ಇಲ್ಲಿ ಕೊಟ್ಟ

ವಸ್ತು ಏನು, ಎಷ್ಟು ಎಂಬುದು ಮುಖ್ಯವಲ್ಲ, 

‘ಭಕ್ತಿಪೂರ್ವಕವಾಗಿ’ ಎಂಬ ಪದ ಮುಖ್ಯವಾದದ್ದು.

ಆ ಭಕ್ತಿಯಿಲ್ಲದೆ ನೂರು ವಿಗ್ರಹಗಳನ್ನಿಟ್ಟು, ಇನ್ನೂರು

ದೀಪಗಳನ್ನು ಬೆಳಗಿಸಿದರೂ ಸಹ ಅದು ‘ವಂಚನೆಯ

ಘನಪೂಜೆ’ ಅಷ್ಟೇ. ಇದು ಎರಡನೆಯ ಚರಣ.  


ಪುರಂದರದಾಸರ ಗುರುಗಳಾದ ವ್ಯಾಸತೀರ್ಥರ

ಕಾಲದಲ್ಲಿ, ವ್ಯಾಸರ ಪ್ರಭಾವದಿಂದ ಸನ್ಯಾಸಕ್ಕೆ

ಹಿರಿಮೆ ದೊರೆತು ಸನ್ಯಾಸಿಗಳ ಬಗ್ಗೆ ಜನರಲ್ಲಿ

ಗೌರವಾದರಗಳು ಹೆಚ್ಚಿದವಂತೆ. ಆದರೆ ಜನರಮನದಲ್ಲಿ

ಹರಿದಾಸರು ಮತ್ತು ಸನ್ಯಾಸಿಗಳ ಬಗ್ಗೆ ಇದ್ದ ಗೌರವವನ್ನು

ದುರುಪಯೋಗ ಮಾಡಿಕೊಂಡವರು ಅನೇಕರಿದ್ದರೆಂದೂ

ಅಂಥವರನ್ನು ಕಂಡು ವ್ಯಾಸತೀರ್ಥರೂ

ಬೇಸರಗೊಂಡಿದ್ದರೆಂದೂ ಓದಿದ್ದೇನೆ. ಅದನ್ನು

ಅರಿತಿದ್ದರಿಂದಲೇ ಮೂರನೆಯ ಚರಣದಲ್ಲಿ

‘ಕರದೊಳು ಜಪಮಣಿ, ಬಾಯೊಳು ಮಂತ್ರವು,

ಅರಿವೆಯ ಮುಸುಕನು ಮೊರೆಗೆ ಹಾಕಿ’ ಎಂಬ

ಸಾಲುಗಳನ್ನು ದಾಸರು ಹಾಡಿದರೆನೋ ?   


ಒಟ್ಟಿನಲ್ಲಿ ಪುರಂದರದಾಸರು ಯಾರನ್ನೂ ಬಿಟ್ಟವರಲ್ಲ.

ಅವರು ಶ್ರೀ ಹರಿಯನ್ನು ನಂಬಿದವರು. ಯಾರದೂ

ಅಂಕೆ, ಅಂಜಿಕೆಯಿಲ್ಲದವರು. ನಮ್ಮ ನಿಮ್ಮ ತಪ್ಪು

ತೋರಿಸಿದರು, ದಾಸರೆಂದು ಕರೆದುಕೊಂಡವರ ತಪ್ಪು

ತೋರಿಸಿದರು, ಸನ್ಯಾಸಿಗಳು ಅಥವಾ

ಮಠಾಧಿಪತಿಗಳೆನಿಸಿಕೊಂಡವರ ತಪ್ಪನ್ನೂ ತೋರಿಸಿದರು.  


ಕೊನೆಯಲ್ಲಿ ಬೂಟಕತನವನ್ನು ಬಿಟ್ಟು, ತಿಳಿದವರೊಡನೆ

ಸೇರಿಕೊಂಡು, ಅಹಂಭಾವವನ್ನು ಕಳೆದುಕೊಂಡು,

ಎಲ್ಲವೂ ಶ್ರೀಹರಿಯ ಇಚ್ಛೆಯಂತೆ ಎಂದು ನಂಬಿಕೊಂಡು, ಪುರಂದರವಿಠ್ಠಲನನ್ನು ಕಾಣಿರೆಂದು ಹೇಳುತ್ತಾ ದಾಸರು

ಗೀತೆಯನ್ನು  ಕೊನೆಗಾಣಿಸಿದ್ದಾರೆಂದು ತಿಳಿಸಿ

‘ಕೃಷ್ಣಾರ್ಪಣ’ ಎನ್ನುತ್ತೇನೆ.


ಭಾನುವಾರ, ಮೇ 3, 2026

ತನು ನಿನ್ನದು, ಜೀವನ ನಿನ್ನದು.

ದಾಸಪಂಥವೆಂದು ಹೆಸರಾದ, ಹರಿಸೇವೆಯೇ ಜೀವನವಾದ, ಜೀವನ

ಶೈಲಿಯನ್ನು ಅನುಸರಿಸಿ ನಡೆದ ಮಹಾನುಭಾವರು ಅನೇಕರಿದ್ದಾರೆ.

ಆ ಅನೇಕರಲ್ಲಿ ಬಹುತೇಕ ಕನ್ನಡ ನಾಡಿನ ಎಲ್ಲರೂ ಕೇಳಿ ಬಲ್ಲ,

ಎರಡು ಹೆಸರುಗಳು ಶ್ರೀ ಪುರಂದರ ದಾಸರು ಮತ್ತು ಶ್ರೀ ಕನಕದಾಸರು.

ವಜ್ರಾಭರಣಗಳ ವ್ಯಾಪಾರ ತ್ಯಜಿಸಿ ದಾಸರಾದವರೊಬ್ಬರು,

ಸೇನೆಯಲ್ಲಿನ ಉತ್ತಮಸ್ಥಾನವನ್ನು  ತ್ಯಜಿಸಿ ದಾಸರಾದವರೊಬ್ಬರು.

ಇಬ್ಬರೂ ಸಮಕಾಲೀನರು, ಶ್ರೀ ವ್ಯಾಸ ತೀರ್ಥರ ಶಿಷ್ಯರು. ನಮ್ಮ

ದಾಸ ಸಾಹಿತ್ಯ ಸಿರಿಯ ಮೊದಲ ಎಂಟು  ಗೀತೆಗಳು ಶ್ರೀ ಪುರಂದರ ದಾಸರ

ರಚನೆಗಳು. ಈಗ ಮೊದಲಬಾರಿಗೆ ಶ್ರೀ ಕನಕದಾಸರ ರಚನೆಯೊಂದನ್ನು

ಪ್ರಸ್ತುತಪಡಿಸುತ್ತಿದ್ದೇವೆ. ಕೇಳಿ, ಗೀತೆ, ತನು ನಿನ್ನದು, ಜೀವನ ನಿನ್ನದು.  



ಕನಕದಾಸರ ಕೀರ್ತನೆಗಳಲ್ಲಿ ಬಹುಶಃ ಎಲ್ಲರೂ ಕೇಳಿರುವ ಮತ್ತು

ಅನೇಕ ಸಂಧರ್ಭಗಳಲ್ಲಿ ಉಲ್ಲೇಖಗೊಂಡಿರುವ ಗೀತೆ ತನು

ನಿನ್ನದು ಜೀವನ ನಿನ್ನದು. ಕನ್ನಡಬಲ್ಲ ಯಾರಿಗಾದರೂ ಕೇಳಿದಾಕ್ಷಣ

ಭಾವ ತಿಳಿಯುವಂಥ ಗೀತೆ. ಕನಕದಾಸರ ಬಗ್ಗೆ ಒಂದು ಕಥೆಯನ್ನು

ನಾವೆಲ್ಲಾ ಕೇಳಿದ್ದೇವೆ. ವ್ಯಾಸತೀರ್ಥರು ಒಮ್ಮೆ ತಮ್ಮ ಶಿಷ್ಯರೊಡನೆ

ಹಾಗೆಯೇ ಮಾತುಕತೆ ನಡೆಸಿದ್ದಾಗ ಚೇಷ್ಟೆಗೆಂಬಂತೆ ಅಲ್ಲಿ

ನೆರೆದಿರುವವರಲ್ಲಿ ವೈಕುಂಠಕ್ಕೆ ಹೋಗಲು ಅರ್ಹರು ಯಾರೆಂದು

ಕೇಳಿದರಂತೆ. ಆಗ ಕನಕದಾಸರು ‘ನಾನು ಹೋದರೆ ಹೋಗಬಹುದು’

ಎಂದು ಹೇಳಿದರೆನ್ನುತ್ತದೆ ಕಥೆ.  ಇಲ್ಲಿ ‘ನಾನು’ ಎಂದರೆ ಅಹಂಭಾವ.

ನಾನು ಹೋದರೆ ಎಂದರೆ, ಅಹಂಭಾವ  ನಮ್ಮನ್ನು ಬಿಟ್ಟುಹೋದರೆ

ನಾವು ಪರಮಾತ್ಮನೆಡೆಗೆ ನಡೆಯಬಹುದೆಂದು ದಾಸರಮಾತಿನ ಅರ್ಥ. 

ಆ ಭಾವನೆಗೆ ಒತ್ತಾಸೆಯಾಗುವ ಗೀತೆ ಇದು. 


ನಾನು ನೋಡಿದ್ದು, ಕೇಳಿದ್ದು, ಸವಿದದ್ದು, ಅನುಭಸಿದ್ದು - ಅದು

ಶ್ಲಾಘನೀಯವಾದದ್ದಾಗಲೀ, ಆಕ್ಷೇಪಾರ್ಹವಾದದ್ದಾಗಲಿ - ಎಲ್ಲವೂ

ನೀ ಕೊಟ್ಟ ಇಂದ್ರಿಯಗಳಮೂಲಕ. ಅವುಗಳನ್ನು ಕೊಟ್ಟವನು ನೀನು,

ಅವುಗಳಿಂದ ಕಾರ್ಯ ನಡೆಸುವವನು ನೀನು ಮತ್ತು ಅವುಗಳ

ಕಾರ್ಯದ ಫಲವನ್ನು ಅನುಭವಿಸುವವನೂ ನೀನೆ. ನನ್ನದು

ಎಂಬುದು ಏನೂ ಇಲ್ಲ - ಎನ್ನುವುದು ಈ ಗೀತೆಯ ಸಾರಾಂಶ.

ನಾನು ಎನ್ನುವುದರಿಂದ ನನ್ನದು ಅಲ್ಲವೇ ? ನನ್ನದು ಏನೂ

ಇಲ್ಲವೆನ್ನುವುದರ ಮುಂದಿನ ಹೆಜ್ಜೆ ‘ನಾನು’ ಎಂಬುದೇ ಇಲ್ಲ

ಎನ್ನುವುದು! ಇದನ್ನೇ ಅಷ್ಟಾಂಗ ಯೋಗದಲ್ಲಿ ‘ಸಮಾಧಿ’ ಎಂದರು

ಮತ್ತು ಇದನ್ನೇ ನವವಿಧ ಭಕ್ತಿಯ ಕೊನೆಯಮೆಟ್ಟಲಾಗಿ

‘ಆತ್ಮ ನಿವೇದನೆ’ ಎಂದರು. 


ಭೀಷ್ಮಾಚಾರ್ಯರು ವಿಷ್ಣುಸಹಸ್ರನಾಮದಲ್ಲಿ ಹೇಳಿದ್ದೂ ಇದೇ. ಅಲ್ಲಿ

ಅವರು ಪರಮಾತ್ಮನನ್ನು ‘ಅಕ್ಷರ’ ಎಂದು ಕರೆದಿದ್ದಾರೆ. ಅಕ್ಷ ಎಂದರೆ

ಇಂದ್ರಿಯಗಳು. ‘ರ’ ಎನ್ನುವುದು ‘ರಮಯತಿ’ ಎಂಬ ಸಂಸ್ಕೃತ

ಪದದ ಸಂಕ್ಷಿಪ್ತ ರೂಪ. ರಮಯತಿ ಎಂದರೆ ಅನುಭವಿಸುವುದು

ಅಥವಾ ಸುಖ ಪಡುವುದು ಎಂದು ಅರ್ಥ. ಎಲ್ಲ ಜೀವಿಗಳ ಎಲ್ಲ

ಇಂದ್ರಿಯಗಳಿಂದಲೂ ಅನುಭವಿಸುವವನು ಅಕ್ಷರ. ‘ಅಕ್ಷೇಷು,

ಜೀವಾತ್ಮಾನಾಮ್ ಇಂದ್ರಿಯೇಷು - ರಮತಃ - ಇತಿ ಅಕ್ಷರಂ’

ಎನ್ನುತ್ತದೆ ಛಾಂದೋಗ್ಯೋಪನಿಷತ್ತು. ಆ ನಾಮಕ್ಕೆ ಅನುಗುಣವಾಗುವಂತೆ,

ತಮ್ಮ ಈ ಗೀತೆಯ ಮೂಲಕ - ಇಂದ್ರಿಯ, ಕಾರ್ಯ,

ಅನುಭವ ಎಲ್ಲವೂ ನಿನ್ನದು ಸ್ವಾಮೀ, ನನ್ನದು ಎಂಬುದಿಲ್ಲ -

ಎಂದು ಪರಮಾತ್ಮನಲ್ಲಿ  ಕನಕದಾಸರು ನಿವೇದಿಸಿಕೊಳ್ಳುತ್ತಿದ್ದಾರೆ

ಎಂದು ತಿಳಿಸುತ್ತಾ ‘ಕೃಷ್ಣಾರ್ಪಣ’ ಎನ್ನುತ್ತೇನೆ. 

ಶನಿವಾರ, ಏಪ್ರಿಲ್ 25, 2026

ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ


ಶ್ರೀ ಪುರಂದರದಾಸರ ಪದಗಳಬಗ್ಗೆ ತಿಳಿದವರನೇಕರು ಅವುಗಳನ್ನು ಅನೇಕ

ರೀತಿಗಳಲ್ಲಿ ವಿಂಗಡಿಸಿದ್ದಾರೆ. ಕೀರ್ತನೆ, ಮುಂಡಿಗೆ, ಉಗಾಭೋಗ, ಸುಳಾದಿ,

ನಿಂದನಾಸ್ತೋತ್ರ, ಹರಿ ಕೀರ್ತನೆ, ಅನ್ಯದೇವತಾ ಕೀರ್ತನೆ ಇತ್ಯಾದಿ ಇತ್ಯಾದಿ.

ತಲೆಬರಹ ಏನೇ ಇರಲಿ, ದಾಸರ ರಚನೆಗಳ ವಸ್ತು, ಭಕ್ತಿ - ಧರ್ಮ - ನೀತಿ.  

ಭಗವಂತನನ್ನು ಆರಾಧಿಸುವ ಅಥವಾ ಧರ್ಮಮಾರ್ಗದಲ್ಲಿ ಸಾಗುವ

ಬಗೆಯನ್ನು ದಾಸರು ನೇರವಾದ ಮಾತುಗಳಲ್ಲಿ ತಿಳಿಸುತ್ತಾರೆ. ಇಂದು ಪ್ರಸ್ತುತ

ಪಡಿಸಲಿರುವ ಪದದಲ್ಲಿ ಅದೇ ಮುಕ್ತಿಮಾರ್ಗದಲ್ಲಿ ಸಾಗುವ ಪರಿಯನ್ನು ‘ಹೀಗೆ

ಮಾಡಬೇಕು’ ಎಂದು ಹೇಳದೆ, ‘ತಾನು ಈ ರೀತಿ ಮಾಡಿದೆ’ ಎಂಬ ರೀತಿಯಲ್ಲಿ

ಹೇಳಿ, ನಾವು ಹಿಡಿಯಬೇಕಾದ ಹಾದಿಯನ್ನು ಪರೋಕ್ಷವಾಗಿ ತೋರಿಸಿದ್ದಾರೆ.

ಕೊಂಚ ಅಪರೂಪದ ಗೀತೆ. ಕೇಳೋಣ, ‘ಒಂಭತ್ತು ಬಾಗಿಲೊಳು ಒಂದೇ

ದೀವಿಗೆ ಹಚ್ಚಿ’. ಆನಂದ ಭೈರವಿ ರಾಗ, ಏಕ ತಾಳ. 


‘ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ ನಂಬಿಕಿಲ್ಲದ ಸಂಸಾರ

ಮಾಡಿದೆನೆ’ ಎಂದು ಗೀತೆ ಪ್ರಾರಂಭವಾಗುತ್ತದೆ. ಒಂಭತ್ತು ಬಾಗಿಲಿರುವುದು

ನವದ್ವಾರಗಳನ್ನು ಹೊಂದಿರುವ ನಮ್ಮ ದೇಹ. ‘ದೀವಿಗೆ’ ಎಂದರೆ ದೀಪ.

ದೀಪವೆಂದರೆ ಪ್ರಕಾಶ. ನಮ್ಮ ದೇಹಕ್ಕೆ ಸಂಬಂಧಿಸಿದಂತೆ ಪ್ರಕಾಶಮಯವಾದದ್ದು

‘ಬುದ್ಧಿ’. ಒಂದೇ ದೀವಿಗೆ ಹಚ್ಚಿ ಎಂದರೆ ‘ಒಂದೇ ಬುದ್ಧಿಯಿಂದ ಅಥವಾ ಸ್ಥಿರವಾದ

ಬುದ್ಧಿಯಿಂದ’ ಎಂದು ಅರ್ಥ. ‘ನಂಬಿಕೆಯಿಲ್ಲದ ಸಂಸಾರ’  ಎಂದರೆ ಈ ಇಹ

ಸಂಸಾರದಲ್ಲಿ ಆಸಕ್ತಿ ಇಲ್ಲದಿರುವುದು, ಆಸಕ್ತಿ ಇಲ್ಲವೆಂದರೆ ಅದು ವೈರಾಗ್ಯ

ಎಂದಾಯಿತು.. ಮಾನವ ದೇಹಪಡೆದು, ಸ್ಥಿರವಾದ ಬುದ್ಧಿಯಿರಿಸಿಕೊಂಡು,

ವಿರಕ್ತಿ ಭಾವದಿಂದ ಸಂಸಾರ ನಡೆಸಿದೆ ಎನ್ನುವುದು ಮೊದಲ ಚರಣದ ಅರ್ಥ. 


‘ತನುವೆಂಬ ಕಲ್ಲಿನೊಳು ಮನವೆಂಬ ಧಾನ್ಯವತುಂಬಿ’ ಎನ್ನುವುದು ಸರಳವಾದ

ಸಾಲು. ಆದರೆ ಧಾನ್ಯವನ್ನು  ತುಂಬಿ ಮಾಡಿದ್ದೇನು?  ‘ವನವನೆದು ನವಬೇಳೆ

ಬೀಸಿದೆನೆ’. ನವ ವಿಧ ಭಕ್ತಿಯನ್ನು ನವಬೇಳೆಗಳು ಎಂದಿದ್ದಾರೆ..   ಶ್ರವಣ,

ಮನನ, ಕೀರ್ತನ, ಅರ್ಚನ, ಪಾದಸೇವನ, ವಂದನ, ದಾಸ್ಯ, ಸಖ್ಯ,

ಆತ್ಮನಿವೇದನಗಳು ಸೇರಿ ನವವಿಧ ಭಕ್ತಿ. ಎಲ್ಲವೂ ಕೇಳಿದೊಡನೆ ಅರ್ಥ

ತಿಳಿಯುವ ಪದಗಳು. ಈ ನವವಿಧ ಭಕ್ತಿಯನ್ನು ವನವನೆದು ಅಂದರೆ

ಜರಡಿಯಾಡಿ, ಬೀಸಿ, ದೇಹದಲ್ಲಿ ತುಂಬಿದೆ ಎನ್ನುವುದು ಎರಡನೇ ಚರಣದ

ಸಾರಾಂಶ. 


ಅಷ್ಟಕರ್ತೃಗಳೆಂಬ ಅಷ್ಟನವಧಾನ್ಯವ ತಂದು ಕುಟ್ಟಿ ಕುಟ್ಟಿ ಕಜ್ಜಾಯ ಮಾಡಿದೆನೆ.

ನಮ್ಮ ದೇಹದಿಂದ ಯಾವುದೇ ಕಾರ್ಯವಾಗಬೇಕಾದರೆ ಅಷ್ಟಕರ್ತೃಗಳ

ಸಹಕಾರವಿಲ್ಲದೆ ಸಾಧ್ಯವಿಲ್ಲ. ಕರ್ತೃ ಎಂದರೆ ಮಾಡುವವನು. ನಾವು ಮಾಡುವ

ಕೆಲಸವನ್ನು ಸಾಧ್ಯಮಾಡುವ  ಅಷ್ಟಕರ್ತೃಗಳು ಭೂತ, ತನ್ಮಾತ್ರ, ಗುಣ, ಕಾಲ,

ಜ್ಞಾನೇಂದ್ರಿಯ, ಕರ್ಮೇಂದ್ರಿಯ, ಅಂತಃಕರಣ, ಮತ್ತು ಪ್ರವೃತ್ತಿ. ಸ್ವಚ್ಛವಾದ

ಭಕ್ತಿಯನ್ನು ಈ ಅಷ್ಟಕರ್ತೃಗಳ ಸಹಾಯದಿಂದ ಭಗವದಾರಾಧನೆಯ ರೂಪಕ್ಕೆ

ತಂದೆ ಎನ್ನುವುದು ‘ಕುಟ್ಟಿ ಕುಟ್ಟಿ ಕಜ್ಜಾಯಮಾಡಿದೆನೆ’ ಎಂಬ ಸಾಲಿನ ಅರ್ಥ. 


ಪಾತ್ರೆಯಾಯಿತು, ಧಾನ್ಯವಾಯಿತು, ಇಚ್ಛೆಯಾಯಿತು. ಅಡುಗೆಗೆ ಬೆಂಕಿ ಬೇಕಲ್ಲವೇ ?

ಶಮ, ದಮ, ತಪಸ್ಸು, ಶೌಚ, ಕ್ಷಾಂತಿ, ಜ್ಞಾನ, ವಿಜ್ಞಾನ, ಆರ್ಜವ ಎಂಬ ಎಂಟು

ಕಟ್ಟಿಗೆಗಳು. ಶಮ ಎಂದರೆ ಶಾಂತಿ ಅಥವಾ ಸಮಾಧಾನ ಸ್ಥಿತಿ,  ದಮ ಎಂದರೆ

ಇಂದ್ರಿಯ ನಿಗ್ರಹ, ತಪಸ್ಸು ಎಂದರೆ - ಏಕಾಗ್ರತೆ, ಶೌಚ ಎನ್ನುವುದು - ಮಾನಸಿಕ,

ದೈಹಿಕ ಸ್ವಚ್ಛತೆ, ಕ್ಷಾಂತಿ ಎಂದರೆ ಸಹನೆ, ಜ್ಞಾನ ಎಂದರೆ ತಿಳುವಳಿಕೆ, ವಿಜ್ಞಾನ -

ವಿಶೇಷ ತಿಳುವಳಿಕೆ ಮತ್ತು ಆರ್ಜವ ಎಂದರೆ ಸಹಿಷ್ಣುತೆ - ಈ ಎಂಟು ಕಟ್ಟಿಗೆಗಳನ್ನುರಿಸಿ

ನಿಷ್ಠೆಯಿಂದ  ‘ಅನ್ನವ ಮಾಡಿದೆ’ ಎಂದರೆ ಪರಮಾತ್ಮನನ್ನು ಆರಾಧನೆ ಮಾಡಿದೆ

ಎನ್ನುತ್ತಾರೆ ದಾಸರು.  


ಇಷ್ಟಾಗುವಾಗ ಗಂಡ ಬಂದು ಮಡಕೆ ಒಡೆದು ಮೂಲೆಗೆ ಹಾಕಿದ.  ಯಾವ ಗಂಡ ?

ಇಲ್ಲೊಂದು ಕುತೂಹಲಕರ ವಿಷಯ. “ಲಕ್ಷ್ಮೀದೇವಿ ನಾರಾಯಣನಿಗೆ ಮಾತ್ರ ಪತ್ನಿ,

ಆದರೆ ನಾರಾಯಣ ಎಲ್ಲ ಸ್ತ್ರೀಯರಿಗೂ ಗಂಡ, ಅಷ್ಟೇ ಅಲ್ಲ ಆ ಎಲ್ಲ ಸ್ತ್ರೀಯರ

ಗಂಡಂದಿರಿಗೂ ಗಂಡ” ಇದು ನನ್ನ ಹೇಳಿಕೆಯಲ್ಲ, ಶ್ರೀ ಬನ್ನಂಜೆ ಗೋವಿಂದಾಚಾರ್ಯರ

ಹೇಳಿಕೆ. ಆ ಗಂಡ ಬಂದು,  ‘ಮಡಿಕೆಯ ಒಡೆದು’ ಅಂದರೆ ಸಂಸಾರಯೋಗವನ್ನು

ಮುರಿದು ಒಗೆದು,  ‘ಉಡುವ ಸೀರೆಯ ಸೆಳೆದು’ ಅಂದರೆ ಜೀವವನ್ನು ಸುತ್ತುವರಿದಿದ್ದ

ಮಾಯೆಯ ಆವರಣವನ್ನು ಕಳೆದು, ಗಿಡದ ತೊಪ್ಪಲ ಸುತ್ತಿ, ಗಿಡವೆಂದರೆ ಪರಮಾತ್ಮನ

ಪ್ರತೀಕವಾದ ಅಶ್ವತ್ಥ ವೃಕ್ಷ. ಅದರ ತೊಪ್ಪಲ ಸುತ್ತಿ ಎಂದರೆ ಜ್ಞಾನವ ನೀಡಿ ಅಥವಾ

ಸಾಕ್ಷಾತ್ಕಾರದ ಕೃಪೆಮಾಡಿ ಎಂದು ಅರ್ಥ- ‘ತಿರುಗಿ ಬಾರದ ಹಾಂಗೆ ಮಾಡಿದನೆ’

ಎಂದರೆ ಸಾಕ್ಷಾತ್ಕಾರ ನೀಡಿ ಮರುಜನ್ಮವಿಲ್ಲದಂತೆ ಮಾಡಿದ ಅಥವಾ ಮುಕ್ತಿಗೊಳಿಸಿದ

ಎಂಬ ಭಾವ. 


ಈ ರೀತಿಯ ನಂಬಿಕೆಯಿಂದ ಸಂಸಾರನಡೆಸಿ ‘ಪುರಂದರ ವಿಠಲನ ದಾಸರ ಸೇರಿದೆನೆ’ 

ಎಂದು ದಾಸರು ತಮ್ಮ ರಚನೆಯನ್ನು ಕೊನೆಗಾಣಿಸಿದರು. ಅಂದರೆ, ಈ ರೀತಿಯ

ಜೀವನದ ಮೂಲಕ ಇತರ ಮುಕ್ತಿಯೋಗ್ಯರನ್ನು ಸೇರಿಕೊಂಡೆ ಎಂದು ಹೇಳಿ, ನೀವು

ಇಂಥ ಸಂಸಾರ ನಡೆಸಿ ಮುಕ್ತಿಯೋಗ್ಯರಾಗಿ - ಎಂದು ನಮಗೆ ತಿಳಿಯಹೇಳಿದ್ದಾರೆ

ಪುರಂದರ ದಾಸರು. 


ಕೃತಿಗೆ ತಕ್ಕಂತೆ ವಿವರಣೆ, ಅದಕ್ಕೆ ತಕ್ಕಂತೆ ನನ್ನ ಮಾತು, ಕೊಂಚ ಉದ್ದವಾಯಿತು.

ಅರ್ಥವಾಗುವಂತೆ ಹೇಳಿದ್ದೇನೆಂದು ನಂಬಿಕೊಂಡಿದ್ದೇನೆ. ಕೃಷ್ಣಾರ್ಪಣವಾಗಲಿ. 

ಶುಕ್ರವಾರ, ಏಪ್ರಿಲ್ 17, 2026

ಪಾಪೋಸು ಹೋದುವಲ್ಲಾ

ಶತಮಾನಗಳ ಹಿಂದೆ ಒಮ್ಮೆ ತಿರುಪತಿ

ಕ್ಷೇತ್ರದಲ್ಲಿ ಕಾರಣಾಂತರಗಳಿಂದ

ನಿತ್ಯಪೂಜೆಮಾಡುವವರು ಯಾರೂ ಇಲ್ಲವಾದಾಗ

ಶ್ರೀ ವ್ಯಾಸರಾಜ ಸ್ವಾಮಿಗಳು ತಿರುಪತಿಯಲ್ಲೇ

ನೆಲಸಿ ದೈನಂದಿನ ಪೂಜಾ ಕಾರ್ಯವನ್ನು

ನಡೆಸಿಕೊಂಡು ಬಂದರೆಂದು ಹೇಳುತ್ತಾರೆ.

ತಮ್ಮ ಗುರುಗಳು ಆದರದಿಂದ ಪೂಜಿಸಿದ

ದೇವನಮೇಲೆ ಪುರಂದರದಾಸರಿಗೂ ಬಹಳ

ಭಕ್ತಿಯಿದ್ದದ್ದು ಸಹಜವೇ. ಆದ್ದರಿಂದಲೇ ಅವರು

ಕೂಡ ಅನೇಕಬಾರಿ ತಿರುಪತಿ ಯಾತ್ರೆ ಮಾಡಿ

ಗಿರಿರಾಜನನ್ನು ಆರಾಧಿಸಿದ್ದರೆಂದು ಕೇಳಿದ್ದೇವೆ.

ಹಾಗೊಮ್ಮೆ ಅವರು ದೇವಸ್ಥಾನದ ಒಳಗೆ

ಹರಿಕಥೆಕೇಳಿ ಹೊರ ಬಂದಾಗ ಅವರ ಪಾದರಕ್ಷೆಗಳು

ಅವರು ಹೊರಗೆ ಇಟ್ಟಿದ್ದ  ಎಡೆಯಲ್ಲಿ

ಇರಲಿಲ್ಲವೆಂದೂ ಆ ಸಮಯದಲ್ಲಿ ಅವರು

‘ಪಾಪೋಸು ಹೋದುವಲ್ಲಾ’ ಎಂಬ ಗೀತೆಯನ್ನು

ರಚಿಸಿದರೆಂದೂ ಹೇಳುತ್ತಾರೆ. ಪಾಪೋಸು

ಎಂದರೆ ಪಾದರಕ್ಷೆ ಅಥವಾ ಚಪ್ಪಲಿ. ಅದನ್ನು

ಉದ್ದೇಶಿಸಿ ಪ್ರಾರಂಭಿಸಿದ ಗೀತೆಯನ್ನು ತಮ್ಮ

ಪದಬಳಕೆಯ ಚಮತ್ಕಾರದಿಂದ ದಾಸರು ಒಂದು

ಸುಂದರ ರಚನೆಯಾಗಿಸಿದರು. ಆ ಗೀತೆಯನ್ನು

ಮೊದಲು ಕೇಳೋಣ. ರಾಗ ಅಭೋಗಿ, ಮಿಶ್ರನಡೆ. 



‘ಪಾಪೋಸು ಹೋದುವಲ್ಲಾ, ಅಪಾರದಿನಗಳಿಂದ

ಅರ್ಜನೆಮಾಡಿದ ಪಾಪೋಸು ಹೋದುವಲ್ಲಾ’

ಎಂದು ಪ್ರಾರಂಭವಾಗುತ್ತದೆ ಗೀತೆ. ಪಾಪೋಸು

ಎಂದರೆ ಪಾದರಕ್ಷೆ ಎಂದೆ. ದೇವಸ್ಥಾನದಿಂದ

ತಾವು ಹೊರಬಂದಾಗ ತಮ್ಮ ಪಾದರಕ್ಷೆಗಳು

ಮಾಯವಾಗಿದ್ದನ್ನು ಕಂಡ ದಾಸರು ಚಪ್ಪಲಿ

ಕಳೆಯಿತೆಂದು ಪರಿತಪಿಸಲಿಲ್ಲ. ಸರ್ವಸ್ವವನ್ನೂ

ದಾನಮಾಡಿ ಹರಿದಾಸರಾದವವರಿಗೆ ಪಾದರಕ್ಷೆ

ಒಂದು ಲೆಕ್ಕವೇ ?  ಆ ಪಾಪೋಸೆಂಬ ಪದವನ್ನು

ಪಾಪ ಮತ್ತು ಓಸು ಎಂದು ವಿಭಾಗ ಮಾಡಿ

‘ಕೂಡಿಕೊಂಡಿದ್ದ ಪಾಪಗಳೆಲ್ಲಾ’ ಎನ್ನುವ ಅರ್ಥ

ತಂದು, ಪರಮಾತ್ಮನ ದಿವ್ಯಮೂರ್ತಿಯ ದರ್ಶನ

ಮತ್ತು ಹರಿಕಥಾ ಶ್ರವಣದಿಂದ, ತಮ್ಮ

ಪಾಪಗಳೆಲ್ಲಾ ಹೋದುವೆಂದು ಕುಣಿದಾಡಿದರು.

ಬಹಳ ಸರಳ ರಚನೆ. ಅದರ ಭಾವತಿಳಿಯಲು

ಸಹಾಯ ಬೇಕಿಲ್ಲ. ‘ಉರಗಾದ್ರಿಯಲಿ ಸ್ವಾಮಿ

ಪುಷ್ಕರಿಣಿ ಮೊದಲಾದ ತೀರ್ಥಗಳ ಸ್ನಾನ ಮಾಡಿ ಹರಿದಾಸರೊಡಗೂಡಿ ಗಿರಿರಾಯನ  ದರುಶನದಿ

ಮೈಮರೆತಿರಲು - ಪಾಪೋಸು ಹೋದುವಲ್ಲಾ’.

ಬಹಳ ಸುಂದರವಾದ ಸಾಲುಗಳು.  ಉರಗಾದ್ರಿ

ಎಂದರೆ ಶೇಷಾಚಲ ಅಥವಾ ತಿರುಮಲ.

ಗಿರಿರಾಯನೆಂದರೆ ವೆಂಕಟೇಶ್ವರ. 



ಅಷ್ಟೇ ಸರಳವಾದ ಎರಡನೇ ಚರಣದಲ್ಲಿ

ಬರುವ ‘ಪರಮ ಪಾಪಿಗಳ ಪಾಲಾಗಿ ಹೋದುವು’

ಎಂಬ ವಾಕ್ಯದಲ್ಲಿ ಕೊಂಚ ಹೆಚ್ಚಿನ ಅರ್ಥವಿದೆ.

‘ಪಾಪಗಳೆಲ್ಲಾ ಹೋದವು’ ಅಷ್ಟೇ ಅಲ್ಲ, ಅವು

‘ಪರಮಪಾಪಿಗಳ ಪಾಲಾಗಿ ಹೋದವು’.

‘ಪರಮಪಾಪಿಗಳ ಪಾಲಾಗಿ’ ಏಕೆ ? ಅದಕ್ಕೆ

ವಿವರಣೆ ಹೀಗಿದೆ. 

ನಮ್ಮ ಸತ್ಕರ್ಮಫಲದಲ್ಲಿ ಒಂದಿಷ್ಟು ಪಾಲು

ಆಂದರೆ ಪುಣ್ಯದ ಕೆಲವು ಪಾಲು ನಮಗಿಂತ

ಉತ್ತಮರಾದ ಎಲ್ಲಜೀವರಿಂದ ಹಿಡಿದು

ಜೀವೋತ್ತಮನಾದ ಮುಖ್ಯಪ್ರಾಣನವರೆಗೂ,

ಹಾಗೂ ದುಷ್ಕರ್ಮಗಳ ಮೂಲಕ ಗಳಿಸಿದ

ಪಾಪದ  ಪಾಲು ನಮಗಿಂತ ಕೆಳದರ್ಜೆಯ

ಜೀವರಿಂದ ಹಿಡಿದು ಮಹಾ ಅಧಮನಾದ

ಕಲಿಯ ವರೆಗೂ ಎಲ್ಲರಿಗೂ ಹಂಚಿಕೆಯಾಗುತ್ತದೆ

ಎನ್ನುತ್ತದೆ ಶಾಸ್ತ್ರ. ಇದು ಸುಲಭವಾಗಿ

ತಿಳಿಯಬೇಕಾದರೆ  - ಸರಕಾರೀ ಆಫೀಸುಗಳಲ್ಲಿ

ಕೊಟ್ಟ ಲಂಚ ಅತಿ ಕೆಳದರ್ಜೆಯ ಕಾರಕೂನನಿಂದ 

ಹಿಡಿದು ಮಂತ್ರಿಗಳವರೆಗೂ ಹಂಚಿಕೆಯಾಗುತ್ತದೆಂದು ಹೇಳುತ್ತೇವಲ್ಲವೇ, ಹಾಗೆ ಎಂದುಕೊಳ್ಳಿ.

ನಮ್ಮ ಕರ್ಮಗಳನ್ನೆಲ್ಲಾ - ಅವು

ಸತ್ಕರ್ಮಗಳಾಗಲೀ, ದುಷ್ಕರ್ಮಗಳಾಗಲೀ

- ಶ್ರೀಹರಿಗೆ ಅರ್ಪಣೆಮಾಡಿದರೆ ನಮಗೆ

ಸಂದಾಯವಾಗಬೇಕಾದ ಪುಣ್ಯದಲ್ಲಿ

ಹೆಚ್ಚಿನಭಾಗವನ್ನು ಅವನು ನಮಗೆ ನೀಡಿ

ಕೊಂಚಮಾತ್ರವನ್ನು ಉಳಿದವರಿಗೆ ಹಂಚುತ್ತಾನಂತೆ.

ಅದೇ ನಮಗೆ ಪಾಪಗಳಿಕೆಯಾಗಿದ್ದರೆ

ಹೆಚ್ಚಿನಭಾಗವನ್ನು ಇತರ ಪಾಪಿಗಳಿಗೆ ಹಂಚಿ

ಸ್ವಲ್ಪಮಾತ್ರವನ್ನು ನಮಗೆ ಉಳಿಸುತ್ತಾನಂತೆ

ಕರುಣಾಮಯನಾದ ಶ್ರೀಹರಿ. ನಮ್ಮ ಒಳಿತೇ

ಅವನ ಕರ್ಮವಲ್ಲವೇ. ಇದು ನಮ್ಮ ನಂಬಿಕೆ.

ಈಗ ನಾವು ತಿಳಿಯಬೇಕಾದದ್ದು ಇಷ್ಟೇ.

ದಾಸರು ಗಿರಿರಾಯನ  ದರ್ಶನಮಾಡಿ ತಮ್ಮ

ಕರ್ಮಗಳನ್ನೆಲ್ಲಾ ಅವನಿಗೆ ಅರ್ಪಿಸಿದರು.

ಅದರಲ್ಲಿದ್ದ ಪಾಪವನ್ನೆಲ್ಲಾ ಅವನು ಇತರ

ಪರಮ ಪಾಪಿಗಳಿಗೆ ಹಂಚಿಬಿಟ್ಟ. ಅದ್ದರಿಂದಲೇ

ದಾಸರು ತಮ್ಮ ಪಾಪಗಳೆಲ್ಲಾ ಪರಮಪಾಪಿಗಳ

ಪಾಲಾಗಿ ಹೋದವು ಎಂದು ಹಾಡಿದರು. 


ಮುಂದಿನ ಚರಣದಲ್ಲಿ ದಾಸರು ಪಾಪಗಳನ್ನು  

‘ಮಾಯಾದೇವಿ ಮೆಚ್ಚಿ ಕೊಟ್ಟದ್ದು’ ಎಂದಿದ್ದಾರೆ.

ದುಷ್ಕರ್ಮಗಳಿಂದ ಪಾಪಗಳಿಕೆ. ಸಂಸಾರಮೋಹ

ಅಥವಾ ಮಾಯೆಯ ಸೆಳೆತದಿಂದ ದುಷ್ಕರ್ಮಗಳು.

ಅದ್ದರಿಂದ ಕೊನೆಯ ಚರಣದಲ್ಲಿ ಪಾಪವನ್ನು

‘ಮಾಯಾದೇವಿ ಮೆಚ್ಚಿಕೊಟ್ಟದ್ದು’ ಎಂದರು

ದಾಸರು. ಪಾಪ ನಮ್ಮ ಆಸ್ತಿಯಾಯಿತು.

ಆಸ್ತಿಯ ಭಾಗ ಪಡೆಯುವವರು,

ದಾಯಾದಿಗಳಲ್ಲವೇ?  ಆದ್ದರಿಂದ ತಮ್ಮ

ಪಾಪವನ್ನು ಕೊಂಡೊಯ್ದ ಪರಮಪಾಪಿಗಳನ್ನು

ತಮ್ಮ ಆಸ್ತಿಯನ್ನು ನೋಡಿ ಸಹಿಸದ

ದಾಯಾದಿಗಳು ಎಂದರು ದಾಸರು. 


‘ಪುರಂದರವಿಠ್ಠಲನ ಮಾಯದಿಂದ ಮಾಯವಾದವು

ಮಾಯಾದೇವಿ ಮೆಚ್ಚಿಕೊಟ್ಟಿದ್ದ ಪಾಪೋಸುಗಳು’

ಎಂದು ದಾಸರು ತಮ್ಮ ಗೀತೆಯನ್ನು ಮುಗಿಸಿದರು.

ಇಷ್ಟನ್ನು ಹೇಳಿ, ನನ್ನ ಈ ಕರ್ಮವನ್ನು ನಾನೂ

ಇಲ್ಲಿಂದಲೇ ಗಿರಿರಾಜನಿಗರ್ಪಿಸಿ  ‘ಕೃಷ್ಣಾರ್ಪಣ’

ಎನ್ನುತ್ತೇನೆ.