ನಾನು ಪ್ರೈಮರಿ ಶಾಲೆಯಲ್ಲಿದ್ದಾಗ - ನಾಲ್ಕನೆಯದೋ ಐದನೆಯದೋ
ತರಗತಿ ಇರಬಹುದು, ನಮಗೆ ಕನ್ನಡ ಪಠ್ಯ ಪುಸ್ತಕದಲ್ಲಿ ಇರುತ್ತಿದ್ದ ಪದ್ಯಗಳನ್ನು
ಬಾಯಿಪಾಠ ಮಾಡಬೇಕಿತ್ತು. ನಮ್ಮ ಪುಸ್ತಕವನ್ನು ಸಂಕಲನ ಮಾಡಿದ
ಪುಣ್ಯಾತ್ಮರು ಯಾರೋ ತಿಳಿಯದು. ಆತನೋ ಆಕೆಯೋ ಅದರಲ್ಲಿ
ಪುರಂದರ ದಾಸರ ಗೀತೆಯೊಂದನ್ನು ಸೇರಿಸಿದ್ದರು. ಅದಾಗಿ ಅರುವತ್ತು
ವರುಷಗಳ ಮೇಲಾಯಿತು, ಆಗ ನಾನು ಬಾಯಿಪಾಠಮಾಡಿದ ಗೀತೆ
ನನ್ನ ಜೀವನವಿಡೀ ನನ್ನ ಮನದಿಂದ ಮರೆಯಾಗದೆ ಉಳಿದುಬಂದಿದೆ.
ಕೇಳಿ ನಮ್ಮ ಹತ್ತನೆಯ ಗೀತೆ ಶ್ರೀ ಪುರಂದರದಾಸರ ರಚನೆ
‘ಉದರವೈರಾಗ್ಯವಿದು’. ರಾಗ ನಾದನಾಮಕ್ರಿಯ, ಆದಿ ತಾಳ.
ಇಲ್ಲಿಯ ಡಿಸ್ಕ್ರಿಪ್ಷನ್ ವಿಭಾಗದಲ್ಲಿ ಗೀತೆಯ ಸಾಹಿತ್ಯ ಲಭ್ಯವಿದೆ.
ದಾಸರು ಯಾರನ್ನು ಉದ್ದೇಶಿಸಿ ಈ ಗೀತೆಯನ್ನು
ರಚಿಸಿದರೋ ತಿಳಿಯದು. ನಾವು ನೀವು ಅವರು
ಇವರು ಯಾರಾದರೂ ಆಗಬಹುದು. ಗೀತೆಯಲ್ಲಿ
ತಿಳಿಸಿರುವಂಥ ಡಾಂಭಿಕತನ ಇರುವ ಯಾರಾದರೂ
ಸರಿಯೇ. ‘ಉದರವೈರಾಗ್ಯ’ ಎನ್ನುವ ಪದ ಉದರದಲ್ಲಿನ
ವೈರಾಗ್ಯ ಮತ್ತು ಉದರಕ್ಕಾಗಿ ವೈರಾಗ್ಯ ಇವೆರಡನ್ನೂ
ಸೂಚಿಸುವ ಪದ. ಉದರದಲ್ಲಿ ಬಿದ್ದದ್ದು ಮಲವಾಗಿ
ಹೊರಗೆ ಹೋಗುವುದಷ್ಟೇ ತಾನೇ. ಅದು ಕೆಲವೇ
ಘಳಿಗೆಗಳ ಕಾಲ ಉದರದೊಳಗೆ ಉಳಿಯುವುದು.
ಆದರೆ ಮಿದುಳಿಗೆ ಇಳಿದದ್ದಾದರೆ ತಲೆಯೊಳಗೆ
ಸ್ಥಿರವಾಗಿ ಉಳಿಯುವುದು. ಆದ್ದರಿಂದ ಕ್ಷಣಕಾಲದ
ತೋರಿಕೆಯ ವೈರಾಗ್ಯವನ್ನು ದಾಸರು ಉದರವೈರಾಗ್ಯ
ಎಂದರು. ಪದ್ಯದ ಸಾಲುಗಳೆಲ್ಲಾ ಹೀಗೆಯೇ ಅತ್ಯಂತ
ಸರಳ ಆದರೆ ಅಷ್ಟೇ ಅರ್ಥಪೂರ್ಣವಾದವು.
ಮುಂಜಾನೆಯ ಚಳಿಯಲ್ಲಿ ನಡುಗುತ್ತಾ ಕೊರೆವ
ನೀರಲ್ಲಿ ಎಷ್ಟುಬಾರಿ ಮುಳುಗೆದ್ದರೇನು ? ಮೈಮೇಲಿನ
ಕೊಳೆ ತೊಳೆದುಹೋಗಬಹುದು. ಆದರೆ ಮನದೊಳಗಿನ
ಕೊಳೆಯ ಗತಿ? ಅದನ್ನು ಉಳಿಸಿಕೊಂಡು - ಮದ ಮತ್ಸರ
ಮೋಹ ಒಳಗೆ ತುಂಬಿಟ್ಟುಕೊಂಡು - ಚರ್ಮದ ಮೇಲಿನ ಕೊಳೆ ತೊಳೆದುಕೊಂಡರೆ ಬಂದದ್ದೇನು? ಎನ್ನುವುದು ಮೊದಲ
ಚರಣದ ಭಾವ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದನ್ನು ಕೇಳಿದ್ದೇವೆ.
‘ಪತ್ರಂ ಪುಷ್ಪಮ್ ಫಲಂ ತೋಯಂ ಯೋ ಮೇ ಭಕ್ತ್ಯಾ
ಪ್ರಯಚ್ಛತಿ ತದಹಂ ಭಕ್ತ್ಯೋಪಹೃತಮಶ್ನಾಮಿ ಪ್ರಯತಾತ್ಮನಃ’
ಎಂದ ಕೃಷ್ಣ. ಅಂದರೆ, ಎಲೆ, ಹೂವು, ಹಣ್ಣು, ನೀರು
ಏನಾದರಾಗಲೀ, ನಿಜಭಕ್ತರು ಭಕ್ತಿಪೂರ್ವಕವಾಗಿ
ಕೊಟ್ಟದ್ದನು ನಾನು ಸ್ವೀಕರಿಸುತ್ತೇನೆ ಎಂದ. ಇಲ್ಲಿ ಕೊಟ್ಟ
ವಸ್ತು ಏನು, ಎಷ್ಟು ಎಂಬುದು ಮುಖ್ಯವಲ್ಲ,
‘ಭಕ್ತಿಪೂರ್ವಕವಾಗಿ’ ಎಂಬ ಪದ ಮುಖ್ಯವಾದದ್ದು.
ಆ ಭಕ್ತಿಯಿಲ್ಲದೆ ನೂರು ವಿಗ್ರಹಗಳನ್ನಿಟ್ಟು, ಇನ್ನೂರು
ದೀಪಗಳನ್ನು ಬೆಳಗಿಸಿದರೂ ಸಹ ಅದು ‘ವಂಚನೆಯ
ಘನಪೂಜೆ’ ಅಷ್ಟೇ. ಇದು ಎರಡನೆಯ ಚರಣ.
ಪುರಂದರದಾಸರ ಗುರುಗಳಾದ ವ್ಯಾಸತೀರ್ಥರ
ಕಾಲದಲ್ಲಿ, ವ್ಯಾಸರ ಪ್ರಭಾವದಿಂದ ಸನ್ಯಾಸಕ್ಕೆ
ಹಿರಿಮೆ ದೊರೆತು ಸನ್ಯಾಸಿಗಳ ಬಗ್ಗೆ ಜನರಲ್ಲಿ
ಗೌರವಾದರಗಳು ಹೆಚ್ಚಿದವಂತೆ. ಆದರೆ ಜನರಮನದಲ್ಲಿ
ಹರಿದಾಸರು ಮತ್ತು ಸನ್ಯಾಸಿಗಳ ಬಗ್ಗೆ ಇದ್ದ ಗೌರವವನ್ನು
ದುರುಪಯೋಗ ಮಾಡಿಕೊಂಡವರು ಅನೇಕರಿದ್ದರೆಂದೂ
ಅಂಥವರನ್ನು ಕಂಡು ವ್ಯಾಸತೀರ್ಥರೂ
ಬೇಸರಗೊಂಡಿದ್ದರೆಂದೂ ಓದಿದ್ದೇನೆ. ಅದನ್ನು
ಅರಿತಿದ್ದರಿಂದಲೇ ಮೂರನೆಯ ಚರಣದಲ್ಲಿ
‘ಕರದೊಳು ಜಪಮಣಿ, ಬಾಯೊಳು ಮಂತ್ರವು,
ಅರಿವೆಯ ಮುಸುಕನು ಮೊರೆಗೆ ಹಾಕಿ’ ಎಂಬ
ಸಾಲುಗಳನ್ನು ದಾಸರು ಹಾಡಿದರೆನೋ ?
ಒಟ್ಟಿನಲ್ಲಿ ಪುರಂದರದಾಸರು ಯಾರನ್ನೂ ಬಿಟ್ಟವರಲ್ಲ.
ಅವರು ಶ್ರೀ ಹರಿಯನ್ನು ನಂಬಿದವರು. ಯಾರದೂ
ಅಂಕೆ, ಅಂಜಿಕೆಯಿಲ್ಲದವರು. ನಮ್ಮ ನಿಮ್ಮ ತಪ್ಪು
ತೋರಿಸಿದರು, ದಾಸರೆಂದು ಕರೆದುಕೊಂಡವರ ತಪ್ಪು
ತೋರಿಸಿದರು, ಸನ್ಯಾಸಿಗಳು ಅಥವಾ
ಮಠಾಧಿಪತಿಗಳೆನಿಸಿಕೊಂಡವರ ತಪ್ಪನ್ನೂ ತೋರಿಸಿದರು.
ಕೊನೆಯಲ್ಲಿ ಬೂಟಕತನವನ್ನು ಬಿಟ್ಟು, ತಿಳಿದವರೊಡನೆ
ಸೇರಿಕೊಂಡು, ಅಹಂಭಾವವನ್ನು ಕಳೆದುಕೊಂಡು,
ಎಲ್ಲವೂ ಶ್ರೀಹರಿಯ ಇಚ್ಛೆಯಂತೆ ಎಂದು ನಂಬಿಕೊಂಡು, ಪುರಂದರವಿಠ್ಠಲನನ್ನು ಕಾಣಿರೆಂದು ಹೇಳುತ್ತಾ ದಾಸರು
ಗೀತೆಯನ್ನು ಕೊನೆಗಾಣಿಸಿದ್ದಾರೆಂದು ತಿಳಿಸಿ
‘ಕೃಷ್ಣಾರ್ಪಣ’ ಎನ್ನುತ್ತೇನೆ.