ಶನಿವಾರ, ಡಿಸೆಂಬರ್ 30, 2017

‘ಮಾನವ ಸ್ವಭಾವ’

ಮೊನ್ನೆಯ ಮುಂಜಾನೆಯ ಒಂದು ಪ್ರಸಂಗದಿಂದ ಪ್ರೇರಿತವಾದ ಕಿರುಬರಹ. ನಿತ್ಯ ಮುಂಜಾನೆ ಈಜಲು ಹೋಗುವುದು ನನ್ನ ಅಭ್ಯಾಸ. ನಮ್ಮೂರಿನ ಸರಕಾರೀ ಈಜುಕೊಳ ಸಾಮಾನ್ಯವಾಗಿ ಸುಸ್ಥಿತಿಯಲ್ಲಿರುತ್ತದಾದರೂ ವರುಷದಲ್ಲಿ ಒಂದೆರಡು ತಿಂಗಳು ಒಂದಲ್ಲಾ ಒಂದು ಕಾರಣದಿಂದ ಮುಚ್ಚಿರುತ್ತದೆ. ಈಜುಕೊಳ ಮುಚ್ಚಿದ ಹತ್ತು ಹದಿನೈದು ದಿನ ನಾನು ಮತ್ತೇನಾದರೂ ಚಟುವಟಿಕೆಯಲ್ಲಿ ತೊಡಗುತ್ತೇನೆ. ಈ ಬಾರಿಯೂ ಹಾಗೆಯೇ ಆಯಿತಾದರೂ ಮುಚ್ಚಿ ತಿಂಗಳಾದರೂ ಕೊಳ ದುರಸ್ತಿಯಾಗದೇ ದೊಡ್ಡಪ್ರಮಾಣದ ಕಾರ್ಯಾಚರಣೆ ಪ್ರಾರಂಭವಾದದ್ದು ಕಂಡುಬಂತು. ಈಜುವ ಅಭ್ಯಾಸ ನನ್ನನ್ನು ಘಟ್ಟಿಯಾಗಿ ಹಿಡಿದಿರುವುದರಿಂದ ಕೊಂಚದೂರವಾದರೂ ಸರಿಯೆಂದು ನಾನು ನಮ್ಮೂರಿನ ಈಶ್ವರದೇವಾಲಯದ ಕೊಳದ ಹಾದಿಹಿಡಿದೆ. ನಾಗೇಶ್ವರನ ಕೊಳದ ಶಾಂತ ಪರಿಸರದಲ್ಲಿ ಮುಂಜಾನೆ ಒಂದು ಅರ್ಧಘಂಟೆ ಈಜಾಡಿ, ಶಿವನಿಗೆ ಅಡ್ಡಬಿದ್ದು ಹಿಂತಿರುಗುವುದು ಪರಿಪಾಠವಾಯಿತು. ಮೊನ್ನೆ ಹಾಗೆಯೇ ಈಜುಮುಗಿಸಿ ಮೇಲೆಬರುತ್ತಿದ್ದಾಗ ಸ್ನೇಹಿತ ದೇಸಾಯರು ಎದುರಿಗೆ ಕಂಡರು. ದೇವಾಲಯದ ಪಕ್ಕಕ್ಕೇ ದೇಸಾಯರ ಮನೆ. ನನಗೂ ಅವರಿಗೂ ಹತ್ತಾರು ವರುಷಗಳ ಪರಿಚಯ.

 “ಇದೇನ್ರಿ ಡಾಕ್ಟರೇ ನೀವು ಇಲ್ಲಿ?”
“ಈಜಲು ಬಂದಿದ್ದೆ ದೇಸಾಯರೇ”
 “ಅಷ್ಟುದೂರದಿಂದ?” (ನಮ್ಮ ಮನೆ ಅಲ್ಲಿಗೆ ಸುಮಾರು ಎಂಟು ಕಿಲೋಮೀಟರು)
 “ಮತ್ತೇನು ಮಾಡೋದು ? ನಮ್ಮ ಸ್ವಿಮ್ಮಿಂಗ್ ಪೂಲ್ ಮುಚ್ಚಿದೆಯಲ್ಲ?”
 “ದಿನಾ ಬರುತ್ತೀರೇನು?”
“ಹೌದು. ವ್ಯಾಯಾಮವಾಯಿತು. ಶಾಂತಪರಿಸರ ಮನಸ್ಸಿಗೂ ಹಿತ. ಮತ್ತು ದೇವರ ದರುಶನವೂ ಆಯಿತು.”
 “ನೀವು ಅಷ್ಟು ದೂರದಿಂದ ಇಲ್ಲಿ ಈಜಲು ಚೆನ್ನವೆಂದು ಬರುತ್ತೀರಿ. ನನಗೂ ಈಜು ಇಷ್ಟವೇ. ಆದರೆ ನಾನು ಇಲ್ಲೇ ಪಕ್ಕದಲ್ಲಿದ್ದರೂ ಒಮ್ಮೆಯಾದರೂ ಕೊಳಕ್ಕೆ ಈಜಲು ಬಂದಿಲ್ಲ.”
 “ಸರಿಯೇ, ಅದೇನು ಈ ದಿನ ಬಂದದ್ದು ನೀವು?”
 “ನಮ್ಮ ಅಣ್ಣಂದಿರು ಮುಂಬಯಿಯಿಂದ ಬಂದಿದ್ದರು ನೋಡಿ. ಮುಂಜಾನೆ ಸಂಧ್ಯಾವಂದನೆಗೆ ದೇವಸ್ಥಾನದ ಕೊಳ ಬಹಳ ಪ್ರಶಸ್ತವಾಗಿದೆಯೆಂದು ಇಲ್ಲಿಗೆ ಬರಬೇಕೆಂದರು. ಅವರೊಂದಿಗೆ ನಾನೂ ಬಂದೆ. ಅವರು ನಮ್ಮಲ್ಲಿಗೆ ಬಂದಾಗಲೆಲ್ಲಾ ಸಂಧ್ಯಾವಂದನೆ ಇಲ್ಲಿಯೇ ”

 ದೇಸಾಯರೊಡನೆ ಮತ್ತೆರಡು ಕುಶಲ ಮಾತನಾಡಿ ಮನೆಗೆ ಬಂದೆ. ಇಲ್ಲಿ ಕೌತುಕವೇನೆಂದರೆ ನನಗೆ ಈಜಲು ಅವಕಾಶಬೇಕೆಂದು ನಾನು ಮನೆಯಿಂದ ಎಂಟು ಕಿಲೋಮೀಟರು ದೂರದ ಕೊಳ ಹುಡುಕಿಕೊಂಡು ಹೋಗುತ್ತೇನೆ. ಕೊಳದ ಪಕ್ಕದಲ್ಲೇ ಇರುವ ದೇಸಾಯರು ಅಲ್ಲಿಗೆ ಎಂದೂ ಈಜಲು ಬಂದದ್ದಿಲ್ಲ. ಮುಂಬಯಿಯ ಜನ ನಮ್ಮ ದೇವಾಲಯದ ಪರಿಸರ ಸಂಧ್ಯಾವಂದನೆಗೆ ಪ್ರಶಸ್ತವೆಂದು ಊರಿಗೆ ಬಂದಾಗಲೆಲ್ಲಾ ತಪ್ಪದೆ ಕೊಳಕ್ಕೆ ಬರುತ್ತಾರೆ. ನಾನು ಪ್ರತಿನಿತ್ಯ ಮುಂಜಾನೆ ಅಲ್ಲಿಗೇ ಹೋಗಿ ನೀರಿನಲ್ಲಿ ಮುಳುಗೇಳುತ್ತೇನೆ. ನನ್ನ ಜನ್ಮ ಧರ್ಮದಲ್ಲೂ ಸಂಧ್ಯಾವಂದನೆ ಒಂದು ಮುಖ್ಯ ಅಂಶ. ಆದರೆ ನಾನು ಅಲ್ಲಿ ಒಂದು ದಿನ ಸಂಧ್ಯಾವಂದನೆ ಮಾಡಿದ್ದಿಲ್ಲ! ಮಾನವ ಸ್ವಭಾವ ವೈಚಿತ್ರ್ಯ ಹೇಗಿದೆಯಲ್ಲವೇ ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ