ಶನಿವಾರ, ಏಪ್ರಿಲ್ 11, 2026

ತಾರಕ್ಕ ಬಿಂದಿಗೆ

ತಮ್ಮ ಜೀವಿತಕಾಲದಲ್ಲಿ ಪುರಂದರ ದಾಸರು

ಭಾರತದಾದ್ಯಂತ ಸಂಚಾರ ಮಾಡಿದ್ದರೆಂಬುದು ಪ್ರತೀತಿ.


ದಕ್ಷಿಣಭಾರತದಲ್ಲಿ ಅವರು ಅನೇಕ ಪುಣ್ಯ

ಕ್ಷೇತ್ರಗಳ ದರ್ಶನ ಮಾಡಿದ್ದರೆನ್ನುವುದಕ್ಕೆ

ಆಧಾರಗಳಿವೆ

ಎನ್ನುತ್ತಾರೆ. ಉತ್ತರ ಭಾರತದ ಕ್ಷೇತ್ರಗಳ ಭೇಟಿ

ಕೊಂಚಮಟ್ಟಿಗೆ ಊಹಾಪೋಹ ಹೌದಾದರೂ

ಅವರ ಅನೇಕ ಗೀತೆಗಳಲ್ಲಿ ಆ ಕ್ಷೇತ್ರಗಳ ದೈವಗಳ

ಉಲ್ಲೇಖವಿದೆ. ಆ ರೀತಿ ವಾರಣಾಸಿಯ

ಬಿಂದುಮಾಧವನನ್ನು ಹೆಸರಿಸಿರುವ, ಬಹು

ಜನಪ್ರಿಯವಾದ ಒಂದು ಗೀತೆ ‘ತಾರಕ್ಕ ಬಿಂದಿಗೆ’. 


‘ಬಿಂದಿಗೆ’ ಎನ್ನುವಲ್ಲಿ ಈ ದೇಹವನ್ನೂ, ‘ನೀರಿಗೆ

ಹೋಗುವೆ’ ಎಂಬಲ್ಲಿ ಪರಮಾತ್ಮನ ಸಾಕ್ಷಾತ್ಕಾರವನ್ನು

ಪಡೆಯುವ ಉದ್ದೇಶ್ಯವನ್ನೂ ಸೂಚಿಸಿ ದಾಸರು

ಈ ಗೀತೆಯನ್ನು ರಚಿಸಿದ್ದಾರೆಂಬುದು ಒಂದು ಅನಿಸಿಕೆ.

ದೇಹವನ್ನು ಬಿಂದಿಗೆಗೆ ಹೋಲಿಸಿ ಮಾತನಾಡುವುದು

ಸಾಮಾನ್ಯ. ಯಾರಾದರೂ ತೀರಿಕೊಂಡರೆಂದು

ಹೇಳುವುದಕ್ಕೆ ‘ಘಟ ಬಿತ್ತು’ ಎನ್ನುತ್ತೇವಲ್ಲವೇ?

ಆ ಘಟವೇ ದಾಸರ ಕೀರ್ತನೆಯಲ್ಲಿ ‘ಬಿಂದಿಗೆ’

ಯಾಗಿದೆ. ಮತ್ತೆ ಪರಮಾತ್ಮನ, ನೀರಿನ ಸಂಭಂದ

ನಮ್ಮ ಪುರಾಣಗಳಲ್ಲಿ ಅನೇಕ ಕಡೆಗಳಲ್ಲಿ ಕಾಣ

ಸಿಗುತ್ತದೆ. ಎಷ್ಟಾದರೂ ಅವನು ಕೃಪಾಸಾಗರ,

ಗುಣಸಾಗರ, ವಿದ್ಯಾಸಾಗರ ಅಲ್ಲವೇ? ಅದಲ್ಲದೆ

ಋಗ್ವೇದದಲ್ಲಿ ಕೆಲವೆಡೆ ಅವನನ್ನು ‘ಸಮುದ್ರ’ ಎಂದೇ

ಕರೆದಿದ್ದಾರೆ.  


ಮುಂದಿನದು ‘ಬಿಂದಿಗೆ ಒಡೆದರೆ ಒಂದೇಕಾಸು’. 

ಬಿಂದಿಗೆಗೆ ಅಂದರೆ ಈ ದೇಹಕ್ಕೆ ಬೆಲೆ ಅದರಲ್ಲಿ

ಪರಮಾತ್ಮನ ಸಾನ್ನಿಧ್ಯ ಇರುವವರೆಗೆ ಮಾತ್ರ.

ಅದಿಲ್ಲವಾದ ಪಾರ್ಥಿವ ಶರೀರಕ್ಕೆ ಕಾಸಿನ ಕಿಮ್ಮತ್ತೂ

ಇಲ್ಲ. ಆದ್ದರಿಂದಲೇ, ‘ಬಿಂದಿಗೆ ಒಡೆದರೆ ಒಂದೇಕಾಸು’.

ಎಂದರೆ ಇದಕ್ಕೆ ಏನೂ ಬೆಲೆಯಿಲ್ಲ ಎಂದರ್ಥ. 


‘ರಾಮನಾಮವೆಂಬ ರಸವುಳ್ಳ ನೀರಿಗೆ ತಾರೇ ಬಿಂದಿಗೆಯಾ’.

ಪರಮಾತ್ಮನ ಒಂದೊಂದು ನಾಮವೂ ಅವನ

ಒಂದೊಂದು ಗುಣಗಳನ್ನು ಸೂಚಿಸುತ್ತದೆ.

ರಾಮನಾಮವೆಂಬುದು ‘ರಸವುಳ್ಳದ್ದು’ ಅಂದರೆ

ಸುಖಪೂರ್ಣವಾದದ್ದು.  ರಾಮನೆಂದರೆ ತಾನು

ಸಂಪೂರ್ಣ ಸುಖಿಯಾಗಿದ್ದು ಇತರರಿಗೆ ಸುಖ

ನೀಡುವವನು. ಆ ರಾಮನ ಅಥವಾ ಅವನ

ಮೂಲರೂಪ ನಾರಾಯಣನ, ಸುತ್ತ ಸದಾ

ಸುಳಿದಾಡುವ ತತ್ವಾಭಿಮಾನಿ ಅಥವಾ ಪರಿವಾರ

ದೇವತೆಗಳು ಅವನ  ‘ಕಾಮಿನಿಯರು’. 

‘ಕಾಮಿನಿಯರೊಡನೆ ಏಕಾಂತವಾಡುವೆ’ ಎಂದರೆ

ಮೊದಲು ಆ  ತತ್ವಾಭಿಮಾನಿದೇವತೆಗಳನ್ನು

ಆರಾಧಿಸಿ ನಂತರ ಪರಮಾತ್ಮನೆಡೆಗೆ ಹೋಗುವುದೆಂಬ

ಸೂಚನೆ. 


ಮುಂದೆ  ‘ಗೋವಿಂದನೆಂಬ ಗುಣವುಳ್ಳ ನೀರಿಗೆ

ತಾರೇ ಬಿಂದಿಗೆಯಾ’. ‘ಗೋ’ ಎಂದರೆ ವೇದಗಳು.

ವೇದಗಳು ಎಂದರೆ ಜ್ಞಾನ. ಜ್ಞಾನ ಸಂಪಾದನೆಯ

ಮೂಲಕ ದೊರೆಯುವವನು ಜ್ಞಾನಸಾಗರನಾದ

ಗೋವಿಂದ. ಮತ್ತೆ ಅದು ‘ಆವಾವ ಪರಿಯಲ್ಲಿ

ಅಮೃತದ ನೀರು’. ಅಂದರೆ ಭಗವಂತನ ನಾಮಗಳು,

ಗುಣಗಳು, ಐಶ್ವರ್ಯ, ವೈಭವ, ಕರುಣೆ ಮತ್ಯಾವುದಕ್ಕೂ

ಆದಿಯೂ ಇಲ್ಲ. ಅಂತ್ಯವೂ ಇಲ್ಲ. ಅವನಿಗೆ ಸಂಭಂದಿಸಿದ

ಎಲ್ಲವೂ ಅಮೃತ. ಜ್ಞಾನಸಂಪಾದನೆ ಮಾಡಿ ಅಂಥ

ಗೋವಿಂದನೆಡೆಗೆ ಸಾಗುತ್ತೇನೆಂದು ಎರಡನೇ ಚರಣದ

ಅರ್ಥ. 


ಕೊನೆಯ ಚರಣದಲ್ಲಿ ವಾರಣಾಸಿಯ ಬಿಂದುಮಾಧವನನ್ನು

ಮತ್ತು ತಮ್ಮ ಅಂಕಿತ ದೈವ ಪುರಂದರ ವಿಠಲನನ್ನು

ಸ್ಮರಿಸಿಕೊಂಡು ದಾಸರು ತಮ್ಮ ಗೀತೆಯನ್ನು

ಕೊನೆಗೊಳಿಸುತ್ತಾರೆ. ಅದಕ್ಕೇನೂ ವಿವರಣೆ

ಬೇಕಿಲ್ಲವಾದ್ದರಿಂದ ನನ್ನ ಮಾತುಗಳೂ ಇಲ್ಲಿ

ಕೊನೆಯಾಗಲಿ, ನಮಸ್ಕಾರ. 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ