ಶುಕ್ರವಾರ, ಮಾರ್ಚ್ 13, 2026

raagi tandeeraa

ದಾಸಪಂಥವನ್ನು ಸ್ವೀಕರಿಸಿ, ಗಾನ ನೃತ್ಯಗಳ ಮೂಲಕ

ಭಗವಂತನನ್ನು ಆರಾಧಿಸಿದ, ದಾಸರು ಎಂದು ಸಾಮಾನ್ಯವಾಗಿ

ನಾವು ಸಂಭೋದಿಸುವ ಮಹಾನುಭಾವರು ಅನೇಕರಿದ್ದಾರೆ.

ಬಹುತೇಕ ಎಲ್ಲರಿಗೂ ತಿಳಿದಿರುವ ಹೆಸರು ಶ್ರೀ ಪುರಂದರ ದಾಸರು. 

ದಾಸರುಗಳು ರಚಿಸಿರುವ ಭಕ್ತಿಗೀತೆಗಳನ್ನು  ನಾವು

‘ದಾಸರಪದಗಳು’ ಎಂದೆವು.  ಕೇಳಿದವರಲ್ಲಿ ಭಕ್ತಿ

ಭಾವನೆಯನ್ನು ಉದ್ದೀಪನಗೊಳಿಸುವುದು ದಾಸರಪದಗಳ

ಉದ್ದೇಶ್ಯ. ಬಹುತೇಕ ದಾಸರಪದಗಳು ಬಹಳ ಸರಳವಾಗಿದ್ದು

ಅವುಗಳಿಗೆ ಅರ್ಥವಿವರಣೆ ಬೇಕಿಲ್ಲ. ಕೆಲವು ಗೀತೆಗಳ  ಕೆಲವು

ಸಾಲುಗಳಿಗೆ ವಿವರಣೆ ಬೇಕಾಗಬಹುದು ಮತ್ತೆ ಕೆಲವು ಗೀತೆಗಳ

ತಲೆಬುಡ ತಿಳಿಯದಿರಬಹುದು. ತಿಳಿದವರು ಕೆಲವರು ಅವುಗಳಿಗೆ

ತಮಗೆ ತಿಳಿದಂತೆ ಅರ್ಥ ತಿಳಿಸಿದ್ದಾರೆ. ನಮಗೆ

ಎಟಕುವಂತಿರುವ ಕೆಲವು ದಾಸರಪದಗಳ ಗಾಯನ,

ಅವುಗಳ ವ್ಯಾಖ್ಯಾನ ಒಂದೆಡೆ ದೊರೆಯುವಂತೆ

ಮಾಡುವುದು ನಮ್ಮ ಈ ಯು ಟ್ಯೂಬ್ ವಿಡಿಯೋಗಳ

ಉದ್ದೇಶ್ಯ. ಇಲ್ಲಿನ ಗಾಯನ ಬೃಂದಾ ರಾವ್ ಅವರದು,

ವಿವರಣೆ ರಘುನಂದನ ಎಂಬ ಹೆಸರಿನ ನನ್ನದು.

ತಾವು ಕೇಳಿದರೆ ಸಂತೋಷ, ತಮ್ಮ ಅನಿಸಿಕೆಯನ್ನು

ತಿಳಿಸಿದರೆ ಹೆಚ್ಚಿನ ಸಂತೋಷ. ಇನ್ನು ಮುಂದೆ  ಈ ಸಂಚಿಕೆಯ ಗಾಯನ. 




ದಾಸರದು ಭಕ್ತಿಪಂಥ. ಇತರರಲ್ಲೂ ಭಕ್ತಿಭಾವನೆಯನ್ನು

ಜಾಗೃತಗೊಳಿಸುವುದು ಅವರು  ಆಯ್ದುಕೊಂಡ ಭಗವತ್ಸೇವೆ. 

ಆದರೆ ನೀತಿಯಿಲ್ಲದ ಭಕ್ತಿಯಿಂದೇನು ಪ್ರಯೋಜನ ? ಆದ್ದರಿಂದ

ತಾವು ರಚಿಸಿದ ಅನೇಕ ಪದಗಳಲ್ಲಿ ಅವರು ನಮಗೆ

ನೀತಿಬೋಧನೆಯನ್ನೂ ಮಾಡಿದರು. ಆ ರೀತಿಯ ಪುರಂದರದಾಸರ

ಒಂದು ಪದ ‘ರಾಗಿ ತಂದೀರಾ’. 


ಯಾರಮನೆಯಲ್ಲೋ ಒಮ್ಮೆ ದಾಸರ ಜೋಳಿಗೆಗೆ ರಾಗಿ ಬಿತ್ತು.

ರಾಗಿಯನ್ನು ಕಂಡ ದಾಸರು ಆ ಕ್ಷಣದಲ್ಲೇ ‘ರಾಗಿ’ ಪದವನ್ನುಪಯೋಗಿಸಿ

ಒಂದು ಚಮತ್ಕಾರವನ್ನೇ ರಚಿಸಿದರು. ನಾಮಪದವಾದ ರಾಗಿಯನ್ನು

ಕ್ರಿಯಾಪದವಾಗಿಸಿದರು. ಭೋಧಿಸಿದರು. 


ಬಹಳ ಸರಳವಾದ ಗೀತೆ. ಕೆಲವೇ ಕೆಲವು ಸಾಲುಗಳಿಗೆ  ವಿವರಣೆ

ಬೇಕೆನಿಸಬಹುದು. ಒಂದು, ‘ಅನ್ಯವಾರ್ತೆಯ ಬಿಟ್ಟವರಾಗಿ’ ಎನ್ನುವುದು.

ಸಾಮಾನ್ಯವಾಗಿ ನಾವು ಏನೆಲ್ಲವನ್ನು ‘ವಾರ್ತೆ’ ಎನ್ನುತ್ತೀವೋ ಅದೆಲ್ಲಾ

ದಾಸರಿಗೆ ಅನ್ಯವಾರ್ತೆ. ಬೇಡವಾದ ಸುದ್ದಿ. ಯಾವ ವಿಷಯಗಳು

ನಮ್ಮ ಆಧ್ಯಾತ್ಮ ಸಾಧನೆಗೆ ಅಡ್ಡಿ ಮಾಡಿ ಮನಸ್ಸನ್ನು ಭಗವಂತನಿಂದ

ದೂರ ಸೆಳೆಯುತ್ತವೋ ಅವೆಲ್ಲಾ ‘ಅನ್ಯ ವಾರ್ತೆ’. ಆದ್ದರಿಂದ

‘ಅನ್ಯವಾರ್ತೆಯ ಬಿಟ್ಟವರಾಗಿ’. 


ಮತ್ತೊಂದು ಸಾಲು ‘ಜಾತಿಯಲ್ಲಿ ಮಿಗಿಲಾದವರಾಗಿ’ ಎನ್ನುವುದು.

ನಾವು ಹುಟ್ಟಿನಿಂದ ಹೊತ್ತುಬಂದದ್ದೇ ನಮ್ಮ ಜಾತಿಯಲ್ಲವೇ ?

ಅದನ್ನು ಬದಲಾಯಿಸುವುದೆಂತು ? ದಾಸರು ಹೇಳುವ ಜಾತಿ

ನಾವು ಜನಗಣತಿಯಲ್ಲೋ, ಜಾತಿಗಣತಿಯಲ್ಲೋ ಬರೆಯುವ

ಜಾತಿಯಲ್ಲ. ನಮ್ಮ ತತ್ವದ  ಪ್ರಕಾರ ನಮ್ಮ ಜಾತಿಯನ್ನು

ನಿರ್ಧಾರಮಾಡುವುದು ನಮ್ಮಲ್ಲಿರುವ ಗುಣಗಳ ಪ್ರಮಾಣ.

ಸತ್ವ, ರಜಸ್ಸು ಮತ್ತು ತಮೋಗುಣಗಳು ಪ್ರತಿಯೊಬ್ಬರಲ್ಲೂ

ಇರುವಂತಹವು. ಯಾರಲ್ಲಿ ಸತ್ವಗುಣಗಳ ಪ್ರಮಾಣ ಹೆಚ್ಚೊ,

ಅವರದು ಉತ್ತಮ ಜಾತಿ. ಆದ್ದರಿಂದ ನಿಮ್ಮ ಸತ್ವಗುಣದ ಪ್ರಮಾಣ

ಹೆಚ್ಚಲಿ. ನೀವು ‘ಸಾತ್ವಿಕ ಜೀವನ ನಡೆಸಿ’ ಎನ್ನುವುದು ‘ಜಾತಿಯಲ್ಲಿ

ಮಿಗಿಲಾದವರಾಗಿ’ ಎಂಬ ಸಾಲಿನ ಅರ್ಥ. 


ಮೂರನೆಯದು ‘ಗುರುತಿಗೆ ಬಾಹೋರಂಥವರಾಗಿ,

ಕರೆಕರೆ ಸಂಸಾರ ನೀಗುವರಾಗಿ’ ಎಂಬ ಸಾಲು. ನೀತಿಮಾರ್ಗದಲ್ಲಿ

ನಡೆದರೆ ನಾವು ಗುರುತಿಸಲ್ಪಡುತ್ತೇವೆ. ಯಾರಿಂದ ? ಸಮಾಜದಿಂದ

ಅಥವಾ ಸರ್ಕಾರದಿಂದ ಅಲ್ಲ. ಭಗವಂತನಿಂದ. ಅವನ ದೃಷ್ಟಿ ನಮ್ಮ

ಮೇಲೆ ಬಿದ್ದರೆ ಅದು ಮೋಕ್ಷಕ್ಕೆ ನಾಂದಿ. ಅಂದರೆ, ಈ ‘ಕರೆ ಕರೆ

ಸಂಸಾರದಿಂದ, ಅಥವಾ ಹುಟ್ಟು ಸಾವಿನ ಬಂಧನದಿಂದ ಮುಕ್ತಿ ಅಲ್ಲವೇ ?

ಹೀಗೆ  ದಾಸರು ಹಾಡಿ, ನೀತಿ ಬೋಧನೆಮಾಡಿ ತಮ್ಮದಾರಿ ಹಿಡಿದರು.

ಅವರ  ಬೋಧನೆಯಂತೆ ನಡೆಯುವುದು, ಬಿಡುವುದು, ನಮಗೆ ಬಿಟ್ಟದ್ದು !

ಸೋಮವಾರ, ಮಾರ್ಚ್ 9, 2026

daasa sahitya siri intro talk

ದಾಸಪಂಥವನ್ನು ಸ್ವೀಕರಿಸಿ, ಗಾನ ನೃತ್ಯಗಳ ಮೂಲಕ

ಭಗವಂತನನ್ನು ಆರಾಧಿಸಿದ, ದಾಸರು ಎಂದು ಸಾಮಾನ್ಯವಾಗಿ

ನಾವು ಸಂಭೋದಿಸುವ ಮಹಾನುಭಾವರು ಅನೇಕರಿದ್ದಾರೆ.

ಅದರಲ್ಲಿ ಪ್ರಮುಖರು ಶ್ರೀ ಪುರಂದರ ದಾಸರು.

ಈ ದಾಸರು ರಚಿಸಿದ ಭಕ್ತಿಗೀತೆಗಳನ್ನು  ನಾವು

‘ದಾಸರಪದಗಳು’ ಎಂದೆವು. ಕೇಳಿದವರಲ್ಲಿ ಭಕ್ತಿ

ಭಾವನೆಯನ್ನು ಉದ್ದೀಪನಗೊಳಿಸುವುದು ದಾಸರಪದಗಳ

ಉದ್ದೇಶ್ಯ. ಬಹುತೇಕ ದಾಸರಪದಗಳು ಬಹಳ ಸರಳವಾಗಿದ್ದು

ಅವುಗಳಿಗೆ ಅರ್ಥವಿವರಣೆ ಬೇಕಿಲ್ಲ. ಆದರೆ ಕೆಲವುಪದಗಳ

ರಚನೆ ಆಕರ್ಷಣೀಯವಾಗಿದ್ದರೂ ಮೇಲ್ನೋಟಕ್ಕೆ ಅವುಗಳ

ತಲೆಬುಡ ತಿಳಿಯುವುದಿಲ್ಲ. ತಿಳಿದವರು ಕೆಲವರು ತಮಗೆ

ತಿಳಿದಂತೆ ಆ ಪದಗಳಿಗೆ ಅರ್ಥ ತಿಳಿಸಿದ್ದಾರೆ. ನಮಗೆ

ಎಟಕುವಂತಿರುವ ಕೆಲವು ದಾಸರಪದಗಳ ಗಾಯನ,

ಅವುಗಳ ವ್ಯಾಖ್ಯಾನ ಒಂದೆಡೆ ದೊರೆಯುವಂತೆ

ಮಾಡುವುದು ನಮ್ಮ ಈ ಯು ಟ್ಯೂಬ್ ವಿಡಿಯೋಗಳ

ಉದ್ದೇಶ್ಯ. ಇಲ್ಲಿನ ಗಾಯನ ಬೃಂದಾ ರಾವ್ ಅವರದು,

ವಿವರಣೆ ರಘುನಂದನ ಎಂಬ ಹೆಸರಿನ ನನ್ನದು.

ತಾವು ಕೇಳಿದರೆ ಸಂತೋಷ, ತಮ್ಮ ಅನಿಸಿಕೆಯನ್ನು

ತಿಳಿಸಿದರೆ ಹೆಚ್ಚಿನ ಸಂತೋಷ. 



sound tools audio joiner



ದಾಸರ ಪದಗಳು ಅಥವಾ ರಚನೆಗಳು ಐದುಸಾವಿರವೆಂದು ಕೆಲವರ ಮತ,

ಐವತ್ತುಸಾವಿರವೆಂದು ಕೆಲವರ ಎಣಿಕೆ, ಐದು ಲಕ್ಷವೆನ್ನುವರು ಮತ್ತೆ ಕೆಲವರು. ಖಚಿತವಾಗಿ

ತಿಳಿಯದು. ಪದಗಳ ಸಾಹಿತ್ಯವೂ ಹಾಗೆಯೇ. ಭಾವ ಹೆಚ್ಚುಕಡಿಮೆ ಒಂದೇ ಇದ್ದರೂ

ಪದಗಳ ಉಪಯೋಗದಲ್ಲಿ ಅಂದರೆ ಬರಹದಲ್ಲಿ ಮತ್ತು ಹಾಡುಗಾರಿಕೆಯಲ್ಲಿ ಸಹ ಅನೇಕ

ವತ್ಯಾಸಗಳು ಕಾಣಬರುತ್ತವೆ. ದಾಸರ ಕೆಲವು ಪದಗಳು ಬಹಳ ಸರಳ. ಅದಕ್ಕೆ ಯಾರೂ

ಅರ್ಥ ತಿಳಿಸಬೇಕಿಲ್ಲ. ಕೆಲವು ಪದಗಳ ತಲೆ ಬುಡ ತಿಳಿಯುವುದಿಲ್ಲ. ಅಂಥ ರಚನೆಗಳಿಗೆ

ತಿಳಿದವರು ಕೆಲವರು ನೀಡಿರುವ  ಅರ್ಥಗಳು ಕೂಡ ಅನೇಕ. ನಮಗೆ ಎಟಕುವಂತಿರುವ

ಕೆಲವು ದಾಸರಪದಗಳ ಗಾಯನ, ಅವುಗಳ ವ್ಯಾಖ್ಯಾನ ಒಂದೆಡೆ ದೊರೆಯುವಂತೆ ಮಾಡುವುದು

ನಮ್ಮ ಈ ಯು ಟ್ಯೂಬ್ ವಿಡಿಯೋಗಳ ಉದ್ದೇಶ್ಯ. ಇಲ್ಲಿನ ಗಾಯನ ಬೃಂದಾ ರಾವ್ ಅವರದು,

ವಿವರಣೆ ರಘುನಂದನ ಎಂಬ ಹೆಸರಿನ ನನ್ನದು. ತಾವು ಕೇಳಿದರೆ ಸಂತೋಷ, ತಮ್ಮ

ಅನಿಸಿಕೆಯನ್ನು ತಿಳಿಸಿದರೆ ಹೆಚ್ಚಿನ ಸಂತೋಷ.

ಶುಕ್ರವಾರ, ಫೆಬ್ರವರಿ 13, 2026

ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲಾ

ಶ್ರೀ ಪಿ ಕಾಳಿಂಗರಾಯರ ಭೋರ್ಗರೆಯುವ ಗಾಯನದ ಮೂಲಕ

ಎಲ್ಲರಿಗೂ ಪರಿಚಿತವಾದ ಒಂದು ಪುರಂದರದಾಸರ ರಚನೆ ಅವರ 

‘ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲಾ’ ಗೀತೆ. ದಾಸರ

‘ಗೂಢಾರ್ಥ’ ಗೀತೆಗಳ ಸಾಲಿಗೆ ಸೇರುವ ಈ ಕೃತಿಯ ಹಿಂದಿನ

ಭಾವ ಬಹುಜನರಿಗೆ ತಿಳಿದಿರಲಾರದು. ದಾಸ ಸಾಹಿತ್ಯದ ಬಗ್ಗೆ

ಓದಿ, ಕೇಳಿ, ನಾನು ತಿಳಿದುಕೊಂಡದ್ದನ್ನು ಈಗ ತಮ್ಮ ಮುಂದಿರಿಸುತ್ತಿದ್ದೇನೆ. 


ಇಲ್ಲಿ ಮಾಡು ಏನು ಮತ್ತು ಅದರೊಳಗಿನ ಗೂಡು ಏನು ?

‘ಮಾಡು’ ಎಂದರೆ ಛಾವಣಿ. ಬಹು ಎತ್ತರದಲ್ಲಿರುವುದು.

ಸುಲಭದಲ್ಲಿ ಕೈಗೆ ಸಿಕ್ಕಲಾರದ್ದು. ಆದ್ದರಿಂದ ಬಹಳ ಎತ್ತರದಲ್ಲಿರುವ,

ಕಷ್ಟಪಡದೆ ಕೈಗೆ ಸಿಕ್ಕದ ಆಧ್ಯಾತ್ಮಿಕ ಜ್ಞಾನವನ್ನು ಅಥವಾ ನಮ್ಮ

ತತ್ವಜ್ಞಾನದ ಅರಿವನ್ನು, ದಾಸರು ‘ಮಾಡು’ ಎಂದರು. ಆ

‘ಮಾಡಿನೊಳಗಿನ ಗೂಡು’ ಪರಮಾತ್ಮನೆಂಬ ವಸ್ತು. ಮಾಡೇ

ಸಿಗಲಾರದಾಗ ಮಾಡಿನೊಳಗಿನ ಗೂಡು ಹೇಗೆ ದಕ್ಕೀತು ?

ಜ್ಞಾನವೇ ಇಲ್ಲದಾಗ ಪರಮಾತ್ಮನ ಸಾಕ್ಷಾತ್ಕಾರ ಎಲ್ಲಿಂದ

ಬಂದೀತು ? ಎಂಬುದು ಗೀತೆಯ ಮೊದಲ ಸಾಲಿನ ಅರ್ಥ. 

ಆದರೆ ಜ್ಞಾನ ಸಂಪಾದನೆ ಪ್ರಾರಂಭವಾದಾಗ, ನಮ್ಮ ಸುತ್ತಲಿನ

ಅಂಧಕಾರದ ಗೋಡೆ ಕಳಚಿಬಿದ್ದಾಗ  ‘ಅಜ್ಞಾನ ಮತ್ತು ಸಂಸಾರ ಮೋಹ’

ಎಂಬ ‘ಜೋಡು ಹೆಂಡಿರು’ ಅಂಜಿ ಓಡಿಹೋಗಿ ಜ್ಞಾನದ ಬೆಳಕು

ಕಾಣಬಹುದೆಂದು ಮೊದಲ ಚರಣದ ಭಾವ. 


ಆದರೆ ಈ ಜೀವ ಜ್ಞಾನಾರ್ಜನೆಗೆ ಪ್ರಯತ್ನಿಸಲೇ ಇಲ್ಲ.

ತಮಸ್ಸಿನ ನಿದ್ದೆಯಿಂದ ಎಚ್ಚರಗೊಳ್ಳಲೇ ಇಲ್ಲ! ಸಂಸಾರ

ಮೋಹದಲ್ಲೇ ಮುಳುಗಿ ಹುಚ್ಚಾಯಿತಲ್ಲಾ ! ಅಚ್ಚಿನೊಳಗೆ

ಮೆಚ್ಚು - ಮೆಚ್ಚಿನೊಳಗೆ ಅಚ್ಚು, ಸಂಸಾರದಲ್ಲಿ ನಾನು,

ನನ್ನೊಳಗೆ ಸಂಸಾರ, ಕಂಬಳಿಯೊಳಗಿನ ನುಸಿಯಂತೆ

ಒಂದರೊಳಗೊಂದು ಉಳಿದು ಬೆಳಕನ್ನೇ ಕಾಣದೆ ಹಾಳಾಗಿ

ಹೋಯಿತಲ್ಲಾ ಎಂಬ ವ್ಯಥೆ ಎರಡನೇ ಚರಣದ ಭಾವ. 


ಹೀಗೆ ಬದುಕುತ್ತಾ ಆದದ್ದೇನು? ವಯಸ್ಸಾಯಿತಷ್ಟೆ.

ಮುಪ್ಪುಬಂದಿತು. ಆದರೆ ಮುದಿಯಾಗುವಮುಂಚೆ

ಪಾಯಸವನುಂಡಿತೇ ಈ ಜೀವ ? ಕೃಷ್ಣನಾಮವೆಂಬ ಸಕ್ಕರೆ,

ವಿಠಲನಾಮವೆಂಬ ತುಪ್ಪವ ಬೆರಸಿದ ರಾಮನಾಮವೆಂಬ

ಪಾಯಸದ ರುಚಿ ಕಂಡಿತೇ ? ಇಲ್ಲ. ಅದೆಷ್ಟೋ ಸಾವಿರ ಕ್ರಿಮಿ

ಕೀಟ ಪಶು ಜನ್ಮಗಳ ನಂತರ ದೊರಕಿದ ಈ ಮಾನವ ಜನ್ಮದ,

‘ಸಾಧನಾ ಶರೀರ’ವೆಂಬ ತುಪ್ಪದ ಬಿಂದಿಗೆ ರಾಮನಾಮವೆಂಬ

ಪಾಯಸದಲ್ಲಿ ಬೀಳುವ ಬದಲು ಸಂಸಾರಮೋಹವೆಂಬ

ತಿಪ್ಪೆಯಲ್ಲಿ ಬಿದ್ದು ಹಾಳಾಯಿತಲ್ಲಾ ಎಂಬುದು ಮೂರನೇ ಚರಣದ ಭಾವ. 


ಕೊನೆಗೆ ಆದದ್ದೇನು ?  ‘ಯೋಗವು ಬಂತಲ್ಲಾ!’  ಯೋಗ ಶಬ್ದಕ್ಕೆ

ಇರುವ ಅನೇಕ ಅರ್ಥಗಳಲ್ಲಿ ‘ಕಾಲ’ ಎನ್ನುವುದೂ ಒಂದು.

ಕೊನೆಗಾಲ ಬಂತು, ಜೀವ, ದೇಹವನ್ನು  ಬಿಟ್ಟು ನಡೆಯಿತು !

ದೇಹ, ಜೀವ ಎರಡೂ ಒಂದಾಗಿದ್ದರೆ ಅದು ಬದುಕು. ಜೀವ

ಹೊರಬಿದ್ದಮೇಲೆ ದೇಹಕ್ಕೆ ಬದುಕೆಲ್ಲಿಂದ ? ದೇಹ ಬೇರೆ, ಜೀವ

ಬೇರೆ ಯಾಗಿ ಬದುಕು ವಿಭಾಗವಾಯಿತಲ್ಲಾ ! ಭೋಗಿಶಯನ

ಪುರಂದ ವಿಠಲನನ್ನು   ‘ಆಗ’, ಅಂದರೆ ದೇಹದಲ್ಲಿ ಜೀವವಿದ್ದಾಗ

ನೆನೆಯಲಿಲ್ಲವಲ್ಲಾ ಎಂಬ ಭಾವ ಕೊನೆಯ ಚರಣದ್ದು.

ಭೋಗವೆಂದರೆ ಸರ್ಪ. ಅದರಮೇಲೆ ಪವಡಿಸಿರುವವನು ಭೋಗಿ

ಶಯನ. ಒಟ್ಟಿನಲ್ಲಿ ಪಡೆಯಲು ದುಸ್ತರವಾದ ಮನುಶ್ಯ ಜನ್ಮ

ಸಿಕ್ಕಿರುವಾಗ ಅದನ್ನು ಸಂಸಾರದ ಜಂಜಾಟದಲ್ಲಿಯೇ ಸಿಲುಕಿಸಿ

ಹಾಳುಮಾಡದೆ ಅದನ್ನು ಮತ್ತಷ್ಟು ಮೇಲಕ್ಕೇರಿಸುವ ಚಿಂತನೆ,

ಅನುಷ್ಠಾನಗಳಲ್ಲಿ ತೊಡಗಿಸಿರಿ ಎಂಬುದು ಮಾಡು ಸಿಕ್ಕದಲ್ಲಾ

ಗೀತೆಯ ಒಟ್ಟು ಭಾವ. ಇದೇ ಭಾವವನ್ನು  ‘ನರಜನ್ಮ ಬಂದಾಗ

ನಾಲಿಗೆ ಇರುವಾಗ ಕೃಷ್ಣಾ ಎನಬಾರದೇ’ ಎಂಬ ಸಂದೇಶವಾಗಿ

ಕೂಡ ದಾಸರು ತಿಳಿಸಿರುವುದೆಂದು ಹೇಳುತ್ತಾ ನನ್ನ ವಿಶ್ಲೇಷಣೆಯನ್ನು

ಕೊನೆಗೊಳಿಸುತ್ತೇನೆ, ನಮಸ್ಕಾರ. 


ಶುಕ್ರವಾರ, ಸೆಪ್ಟೆಂಬರ್ 20, 2024

ಹಂದಾಡಿ ಸಂತಾನ ಗೋಪಾಲಕೃಷ್ಣಸ್ವಾಮಿ ದೇವಸ್ಥಾನ



ದಕ್ಷಿಣಕನ್ನಡ ಜಿಲ್ಲೆಯ ಹೆಸರಾಂತ ಕ್ಷೇತ್ರಗಳಾದ ಧರ್ಮಸ್ಥಳ, ಉಡುಪಿ, ಸುಬ್ರಮಣ್ಯ, ಮುಂತಾದ ಸ್ಥಳಗಳ

ಪರಿಚಯ ಎಲ್ಲರಿಗೂ ಇದೆ. ಜಿಲ್ಲೆಯ ಒಳಭಾಗಗಳಲ್ಲಿ ಸಹ ಪ್ರಸಿದ್ಧಿಗೆ ಬಾರದಿರುವ ಅನೇಕ ಪುರಾತನ

ದೇವಾಲಯಗಳಿವೆ. ಅಲ್ಲಿಯೂ ದಿನನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದು, ಹಳೆಯ ಪರಿಸರ,

ಪದ್ಧತಿಗಳನ್ನು ಉಳಿಸಿಕೊಂಡಿವೆ. ಆದರೆ ಜನಸಂದಣಿ ಮತ್ತು ಅಂಗಡಿ ಮುಂಗಟ್ಟುಗಳ ದಟ್ಟಣೆಯಿಲ್ಲದೆ

ಪ್ರಶಾಂತವಾಗಿವೆ. ಮನಸ್ಸಿಗೆ ಹಿತವೆನಿಸುವ ಅಂಥ ಅನೇಕ ದೇವಸ್ಥಾನಗಳಲ್ಲಿ ಹಂದಾಡಿಯ

‘ಹೆಗಡೆ ಶ್ರೀ ಸಂತಾನ ಗೋಪಾಲಕೃಷ್ಣ ಸ್ವಾಮಿ’ಯ ದೇವಸ್ಥಾನವೂ ಒಂದು.  


ಇಂಥ ಅನೇಕ ಪುರಾತನ ದೇವಸ್ಥಾನಗಳ ಇತಿಹಾಸವನ್ನು ತಿಳಿಯುವ ಆಸಕ್ತಿ ನಮಗಿದ್ದರೂ ಸಹ ಅವುಗಳ

ಬಗ್ಗೆ ಸರಿಯಾದ  ಮಾಹಿತಿ ಕೊಡುವ ವ್ಯವಸ್ಥೆಯಿಲ್ಲದೆ ಅನೇಕಬಾರಿ ನಿರಾಸೆಯಾಗುತ್ತದೆ. ಆದರೆ

ಗೋಪಾಲಕೃಷ್ಣ ದೇವಸ್ಥಾನದ ಆವರಣದಲ್ಲಿರುವ ಶೀಲಾ ಶಾಸನಗಳು ಮತ್ತು ಅದರ ತಿಳಿಯಾದ ಕನ್ನಡ

ತರ್ಜುಮೆಯ ಫಲಕಗಳ ಮೂಲಕ ಈ ದೇವಸ್ಥಾನದ ಬಗೆಗೆ ವಿವರವಾದ ಮಾಹಿತಿ ನಮಗೆ ಲಭ್ಯವಾಗಿದೆ.  


ಸ್ವಸ್ತಿಶ್ರೀ ಜಯಾಭ್ಯುದಯ ಶಾಲಿವಾಹನಶಕವರುಷ ೧೪೦೪ (ಕ್ರಿ ಶ ೧೪೯೪) ಸಂದು ಕಠಾರಿ ಸಾಳುವ

ನರಸಿಂಹರಾಯರ ಕುಮಾರ ಇಮ್ಮಡಿ ನರಸಿಂಹರಾಯರು ವಿಜಯನಗರ ಸಿಂಹಾಸನದಲ್ಲೂ ಸಕಲ

ಸಾಮ್ರಾಜ್ಯವನಾಳುವ ಕಾಲದಲ್ಲಿ ...... ........ ಬ್ರಂಹರ ಗ್ರಾಮದವೊಳಗೆ ಮೂಡಭಾಗದಲ್ಲಿ

ಹಂದಾಡಿಯ ಅಧಿವಾಸದೊಳಗೆ ಕೋಟೆಗೇರಿಯ.......  ಹೊಸಬಣ್ಣಸೆಟಿಯರ ಅಳಿಯ ಸಂಕುಹೆಗಡೆ

ಪ್ರತಿಷ್ಠೆಯ ಮಾಡಿಸಿದ ಶ್ರೀ ಗೋಪಿನಾಥದೇವರ ........  ಪ್ರತಿಷ್ಠೆಯಾದ ಪುಣ್ಯತಿಥಿಯಲ್ಲಿ ........

ಆಚಂದ್ರಾರ್ಕಸ್ಥಾಯಿಯಾಗಿ ದಿನಚರಿ ಶ್ರೀಬಲಿ ನಡೆವಹಾಗೆ ಧಾರೆಯೆರೆದುಕೊಟ್ಟ  ...... .........  


ಇತ್ಯಾದಿ ಇತ್ಯಾದಿಯಾಗಿ ಪ್ರಾರಂಭವಾಗುವ ಶಾಸನ, ದೇವಸ್ಥಾನಕ್ಕೆ ಅರಮನೆಯಿಂದ ಕೊಡಮಾಡಿದ

ಜಮೀನುಗಳ ಹಾಗೂ ಬಿಟ್ಟುಕೊಟ್ಟ ಆದಾಯ (ಸುಂಕ) ಗಳ ತಪಶೀಲನ್ನು ವಿವರವಾಗಿ ತಿಳಿಸುತ್ತದೆ. 


ಮೇಲೆ ತಿಳಿಸಿದಂತೆ ಸುಮಾರು ಐನೂರು ವರುಷಗಳಹಿಂದೆ ಶ್ರೀ ಸಂಕುಹೆಗಡೆ ಎಂಬುವರಿಂದ

ಪ್ರತಿಷ್ಠಾಪಿತವಾದ ಗೋಪಿನಾಥ ಅಥವಾ ಗೋಪಾಲಕೃಷ್ಣ ದೇವರು, ಮುಂದೆ ಆ ಪೀಳಿಗೆಯಲ್ಲಿ

‘ಹಂದಾಡಿಯ ನಾಲ್ಕುಮನೆ’ ಎಂದು ಹೆಸರಾದ ದೊಡ್ಡಮನೆ, ತೆಂಕುಮನೆ, ಪಳತ್ತು ಮನೆ ಮತ್ತು

ಪಡುಮನೆಗಳ ಮೂಲದೇವರಾದರು. ಈ ನಾಲ್ಕೂ ಸಂಸಾರಗಳ  ಇಂದಿನ ಪೀಳಿಗೆಯ ಸದಸ್ಯರು

ಈಗಲೂ ಆ ಗೋಪಾಲಕೃಷ್ಣದೇವರಿಗೆ ಶ್ರದ್ಧೆಯಿಂದ ನಡೆದುಕೊಂಡು ಬಂದಿದ್ದಾರೆ.


ಕಾಲಾನುಕ್ರಮದಲ್ಲಿ ಹಾಳಾಗುತ್ತ ಬಂದಿದ್ದ ಹಳೆಯ ಕಟ್ಟಡವನ್ನು ಕೆಡವಿ ಪೂರ್ಣ ಹೊಸಕಟ್ಟಡದ

ನಿರ್ಮಾಣ ಮಾಡಲಾಗಿದೆ. ಮೇಲ್ಕಾಣಿಸಿದ ಹಂದಾಡಿ ದೊಡ್ಡಮನೆಯ ಶ್ರೀ ಸಂತೋಷಕುಮಾರ

ಶೆಟ್ಟಿಯವರ ನೇತೃತ್ವದಲ್ಲಿ ಕಟ್ಟಲಾದ ಹೊಸಕಟ್ಟಡಕ್ಕೆ ತಗುಲಿದ ಐದುಕೋಟಿಗೂ ಮೀರಿದ ವೆಚ್ಚವನ್ನು

‘ನಾಲ್ಕುಮನೆ’ ಗಳ ಸದಸ್ಯರು ಹಾಗೂ ಊರಿನ ಮತ್ತು ಪರಸ್ಥಳಗಳ ಇತರ ಭಕ್ತರ ದೇಣಿಗೆಯಿಂದ

ಭರಿಸಲಾಗಿದೆ. ಹಂದಾಡಿ ಗ್ರಾಮದಲ್ಲಿ ಪವಿತ್ರವಾದ ಸೀತಾನದಿಯ ಬಲದಂಡೆಯಮೇಲೆ ಕಟ್ಟಿರುವ

ಶಿಲಾಕಟ್ಟಡ, ಚೊಕ್ಕವಾಗಿ, ಸುಂದರವಾಗಿದ್ದು ದಕ್ಷಿಣಕನ್ನಡದ ಇತರ ದೇವಸ್ಥಾನಗಳ ಮಾದರಿಯಲ್ಲೇ

ಕಟ್ಟಲ್ಪಟ್ಟಿದೆ. ಸುತ್ತಲಿನ ಪರಿಸರಕ್ಕೆ ಹೊಂದಿಕೊಂಡು ಮನಸ್ಸಿಗೆ ಮುದನೀಡುವಂತಿದೆ. ಹತ್ತಿರದಲ್ಲೇ

ಹರಿವ ನದಿ ಮತ್ತು ಅದರ ಬದಿಯ ಸ್ವಚ್ಛವಾದ ಪರಿಸರ ಹಸುರಿನಿಂದ ಕೂಡಿ ಮನಸ್ಸಿಗೆ ಆಹ್ಲಾದಕರವಾಗಿದೆ. 


ಐದುಶತಮಾನಗಳ ಹಿಂದಿನಿಂದ ಪೂಜೆಗೊಳ್ಳುತ್ತಿರುವ ಶ್ರೀ ಗೋಪಾಲಕೃಷ್ಣದೇವರ ಸುಂದರವಾದ

ಮೂಲ ವಿಗ್ರಹಕ್ಕೆ  ಧಕ್ಕೆಯಾಗದಂತೆ ಉಳಿಸಿಕೊಂಡು ಹೊಸದಾಗಿ ನಿರ್ಮಿತವಾದ ಕಟ್ಟಡದಲ್ಲಿ

ಪುನರ್ಪ್ರತಿಷ್ಠಾಪನೆ ಮಾಡಲಾಗಿದೆ. ಆ ಮೂಲಕ ದೇವಸ್ಥಾನವು, ಶ್ರೀ ಡಿ ವಿ ಜಿ ಯವರ 

ಹೊಸ ಚಿಗುರು ಹಳೆಬೇರು ಕೂಡಿರಲು ಮರ ಸೊಬಗು 

ಹೊಸಯುಕ್ತಿ ಹಳೆತತ್ವ ದೊಡಗೂಡೆ ಧರ್ಮ

ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ 

ಜಸವು ಜನಜೀವನಕೆ ಮಂಕುತಿಮ್ಮ    


ಎಂಬ ಸಾಲುಗಳನ್ನು  ನೆನಪಿಗೆ ತರುವಂತಿದೆ! 


ದೇವಸ್ಥಾನವನ್ನು ಸಂದರ್ಶಿಸುವವರ ಅನುಕೂಲಕ್ಕಾಗಿ ಉಡುಪಿ - ಕುಂದಾಪುರ ಮಾರ್ಗದಲ್ಲಿ ಬ್ರಹ್ಮಾವರದ

ಬಳಿ ಹಾಗೂ ಬ್ರಹ್ಮಾವರ - ಬಾರಕೂರಿನ ಮಾರ್ಗದಲ್ಲಿ ಸಹ ಮಾರ್ಗದರ್ಶಿ ಫಲಕಗಳನ್ನು ಸ್ಥಾಪಿಸಲಾಗಿದೆ.

ಹೆದ್ದಾರಿಯಿಂದ ಸುಮಾರು ಐದುನಿಮಿಷದ ಹಾದಿಯಾದ್ದರಿಂದ ಸುಲಭವಾಗಿ ಭೇಟಿಮಾಡಿ

ಗೋಪಾಲಕೃಷ್ಣದೇವರ ದರ್ಶನಪಡೆದು, ಕೊಂಚಕಾಲಕಳೆದು ಮನೋಲ್ಲಾಸ, ಮನಸ್ಸಮಾಧಾನಗಳನ್ನು

ಅನುಭವಿಸಬಹುದಾದ ಸ್ಥಳ ಇದಾಗಿದೆ. 

ಶುಕ್ರವಾರ, ಫೆಬ್ರವರಿ 16, 2024

ಮಧ್ವನವಮಿ - ಮಧ್ವಾಚಾರ್ಯರು - ಮತ್ತು ದ್ವಾದಶಸ್ತೋತ್ರ



ಮಾಘ ಶುದ್ಧ ನವಮಿಯಂದು ಶ್ರೀಮದಾನಂದತೀರ್ಥ ಶ್ರೀಪಾದರು ನಮಗೆ ಕಾಣದಂತಾಗಿ

ತಾವು ಪ್ರತಿ ಕ್ಷಣ ಪೂಜಿಸುತ್ತಿದ್ದ ವೇದವ್ಯಾಸದೇವರೊಡನಿರಲು ಬದರಿಕಾಶ್ರಮಕ್ಕೆ ತೆರಳಿದರು.

ಆ ದಿನವನ್ನು ನಾವು ಮಧ್ವನವಮಿ ಎನ್ನುತ್ತೇವೆ. ನಾಳೆ ಭಾನುವಾರ ಫೆಬ್ರುವರಿ ೧೯ರಂದು

ಮಧ್ವನವಮಿ. ಕೆಳಕಾಣಿಸಿರುವುದು ಈ ಸಂಧರ್ಭದಲ್ಲಿ ಆಚಾರ್ಯರ ಹೆಸರಿನಲ್ಲಿ ಒಂದು

ಬರಹ. ಈ ಸಮಯಕ್ಕೆ ನನ್ನ ಮನದಲ್ಲಿ ಮೂಡಿದ ಆಲೋಚನೆಗಳನ್ನು ಬರೆದಿರಿಸಿದ್ದೇನೆ ಅಷ್ಟೆ. 


ತಾವು ನಮ್ಮೊಡನಿದ್ದ ಕಾಲದಲ್ಲಿ ಶ್ರೀಮದಾಚಾರ್ಯರು ರಚಿಸಿದ ೩೭ ಗ್ರಂಥಗಳು

ಸರ್ವಮೂಲ ಗ್ರಂಥಗಳೆಂದು ಹೆಸರಾಗಿ ಆಚಾರ್ಯರು ನಿರೂಪಿಸಿರುವ ತತ್ವಗಳ ಅಭ್ಯಾಸಕ್ಕೆ

ಮೂಲಸಾಮಗ್ರಿಯಾಗಿವೆ. ಅವುಗಳಲ್ಲಿ ಬ್ರಹ್ಮಸೂತ್ರ ಭಾಷ್ಯ, ಅನುವ್ಯಾಖ್ಯಾನ, ಗೀತಾ ಭಾಷ್ಯ,

ಗೀತಾ ತಾತ್ಪರ್ಯ, ಮಹಾಭಾರತ ತಾತ್ಪರ್ಯನಿರ್ಣಯ, ಸದಾಚಾರಸ್ಮೃತಿ, ತಂತ್ರಸಾರಸಂಗ್ರಹ

ಮುಂತಾದ ಕೆಲವು ಹೆಸರುಗಳ ಪರಿಚಯ ನನಗುಂಟೆ ಹೊರತು, ಯಾವುದೇ

ಒಂದುಗ್ರಂಥವನ್ನಾದರೂ ಪೂರ್ಣವಾಗಿ ವ್ಯಾಸಂಗ ಮಾಡಿ ಅದರ ಸಾರವನ್ನು ತಿಳಿದುಕೊಳ್ಳುವ

ಕಾರ್ಯ  ನನ್ನಿಂದ ಆಗಿಲ್ಲ. ಹಾಗಾಗಿ, ಆಚಾರ್ಯರ ಕೃತಿಗಳಲ್ಲಿ ನಮಗೆ ಎಟಕುವಂತಿರುವ

ಕಂದುಕಸ್ತುತಿ (ಕೃಷ್ಣ ಪದ್ಯ), ನಖ ಸ್ತುತಿ, ದ್ವಾದಶ ಸ್ತೋತ್ರ ಗಳನ್ನು  ಬಾಯಿಪಾಠ ಮಾಡಿ,

ಅವುಗಳ ಅರ್ಥ ತಿಳಿದುಕೊಂಡು, ನಿತ್ಯಪಾರಾಯಣ ಮಾಡುವ ಪ್ರಯತ್ನ ನಡೆಸಿದ್ದೇನೆ. 


ಮೇಲೆ ತಿಳಿಸಿರುವ ಪ್ರಯತ್ನದಲ್ಲಿದ್ದಾಗ, ದ್ವಾದಶಸ್ತೋತ್ರದ ಶ್ಲೋಕಗಳನ್ನು ಪದ್ಯರೂಪದಲ್ಲೇ

ಕನ್ನಡದಲ್ಲಿ ಬರೆಯಬಹುದೆನಿಸಿತು. ಅದರಂತೆ ಕೆಲವು ಅಧ್ಯಾಯಗಳನ್ನು ಕನ್ನಡಕ್ಕೆ

ಪರಿವರ್ತಿಸಿದ್ದೇನೆ. ಮೊದಲ ಅಧ್ಯಾಯವನ್ನು ಇಲ್ಲಿ ಕೆಳಗೆ ಕಾಣಿಸಿದ್ದೇನೆ. ಈ ರೀತಿಯ

ಬರವಣಿಗೆ ನನ್ನ ಮನಸ್ಸಿಗೆ ತೃಪ್ತಿ ನೀಡುವುದಲ್ಲದೆ ಈ ವಿಷಯದ ಬಗೆಗೆ ನನ್ನ ತಿಳುವಳಿಕೆ

ಎಷ್ಟಿದೆ ಎಂಬುದು ಸಹ ನನಗೆ ಮನವರಿಕೆಯಾಗುತ್ತದೆ. ಇದರಿಂದ ಮತ್ತೂ ಕೆಲವರಿಗೆ

ಏನಾದರೂ  ಉಪಯೋಗವಾದರೆ ಇನ್ನೂ ಒಳ್ಳೆಯದಾಯಿತು.  


ವಂದಿಪೆನಿವಗೆ, ವಂದನಯೋಗ್ಯ ಸದಾನಂದಗೆ, ವಸುದೇವಪುತ್ರಗೆ, ದೋಷರಹಿತನಿಗೆ 

ಇಂದಿರಾಪತಿಗೆ, ವರವನೀವ ದೇವತೆಗಳಿಗೆ ತಾ ವರವನೀವನಿಗೆ ! 


ನಮಿಪೆನಾತಗೆ ದೇವತಾ ಕಿರೀಟ ಘರ್ಷಿತ ಪೀಠ ಉಳ್ಳವಗೆ, 

ಹೃದಯಾಂಧಕಾರವ ಕರಗಿಪ ಸೂರ್ಯಪ್ರಭೆ ಆತನ ಪದಪಂಕಜಗಳಿಗೆ !  


ಬಂಗಾರ ಪೀತಾಂಬರಕಾಧಾರ ಸ್ವರ್ಣ ಸರಪಳಿಯಾವೃತ 

ಜಗದಂಬಾಲಂಕೃತ ನಡುವ ಚಿಂತಿಪುದೀಶನದು 


ಜಗವನುಂಗಿಯೂ ಕೃಶವದು ಈಶನುದರವ ಚಿಂತಿಪುದು  

ಮೂರು ರೇಖೆಗಳುದರವನು ಶ್ರೀದೇವಿಯಾಲಂಗಿಸಿಹಳು ನಿತ್ಯ  


ಸ್ಮರಣೆಗೆ ತಕ್ಕುದದು ಇಂದಿರೆಯಾವಾಸಸ್ಥಾನ, ವಿಷ್ಣುವಿನ

ಸೀಮೆಯಿಲ್ಲದ ವಕ್ಷ  ಸೀಮಿತವಾದುದಾತನದೇ ಭುಜಗಳಿಂದ!


ಶಂಖ ಚಕ್ರ ಗದಾ ಪದ್ಮಾಲಂಕೃತ ಹರಿಯ ಭುಜವ ಚಿಂತಿಪುದು ಸತತ  

ವೃತ್ತ, ಸಪುಷ್ಟವವು, ಜಗದ್ರಕ್ಷಣಾ ಕಾರ್ಯಕೆಂದೇ ಇಹವು !


ಸ್ಮರಿಸು ಸದಾ, ಹೊಳೆಯುವ ಕೌಸ್ತುಭಕ್ಕೇ ಹೊಳಪನೀವುದನು 

ಅಖಿಳವೇದಗಳು ಸತತ ಹೊರಮ್ಮುವ ವೈಕುಂಠ ನಾಮನ ಕಂಠವನು !


ಸಹಸ್ರ ಚಂದ್ರಕಾಂತಿಯುಕ್ತ  ಶ್ರೀಪತಿಯ ಮುಖಕಮಲವ ಸ್ಮರಿಸು  

ಶ್ಲಾಘನೆಗೆ ಯೋಗ್ಯವದು ಭವತಾಪವನಪಹರಿಪುದದು


ಅನ್ಯರಿಗೆಟುಕದ ಪೂರ್ಣಾನಂದಸೂಸುವ ಗೋವಿಂದನ 

ಮೋಕ್ಷಪ್ರದ ಮಂದಹಾಸದಲಿರಲಿ ಸದಾಧ್ಯಾನ

    

ಭವ ತಾಪತ್ರಯ ವಿನಾಶಕ ಶ್ರೀರಾಮನ ಪ್ರೀತಿಯುಕ್ತ ನೋಟ 

ಪೂರ್ಣಾನಂದ ಭರಿತ ಅಮೃತಸಾಗರವು, ಎನ್ನ ಸ್ಮರಣೆಯಲ್ಲಿರಲಿ ಸದಾ 


ಬ್ರಹ್ಮಾದಿ ದೇವತೆಗಳ ಪದದಾತ, ಮುಕ್ತಿದಾತ, ಬ್ರಹ್ಮಾದಿವಂದಿತ  

ಈಶನ ಹುಬ್ಬಿನ ವಿಲಾಸ ನೆನಪಿರಲಿ ಅನವರತ 


ಅನಾದಿಕಾಲದಿಂದ ಬ್ರಹ್ಮಾದಿಗಳು ಅನವರತ ಸ್ತುತಿಸುತ್ತಲೂ 

ಪೂರ್ಣವಾಗದೀತನ ಗುಣಗಾನ. ಅಂಥ ಅನಂತನ ಚಿಂತೆ 

ನಮ್ಮಂತರಂಗದೊಳಿರಲಿ ಸದಾ, ಅಂತ್ಯಕಾಲದೊಳಂತು ಅತ್ಯವಶ್ಯ  


ತಮ್ಮ ಕಣ್ಣಿಗೆ ಕಂಡದ್ದೆಲ್ಲದರಲ್ಲೂ ಪರಮಾತ್ಮನ ರೂಪವನ್ನೆ ಕಂಡು, ಕಿವಿಗೆ ಬಿದ್ದ ಶಬ್ದಗಳೆಲ್ಲದರಲ್ಲೂ

ಪರಮಾತ್ಮನ ನಾಮ ಕೇಳುತ್ತ, ಪ್ರಣವೋಪಾಸನೆಯ ಮೂಲಕ ಸದಾ ಪರಮಾತ್ಮನ

ಪೂಜಿಸುತ್ತಿರುವ ಆಚಾರ್ಯರಿಗೆ ಇತರ ಸ್ತೋತ್ರಗಳ ಮೂಲಕ ಶ್ರೀಹರಿಯನ್ನು ಸ್ತುತಿಸುವ

ಅಗತ್ಯವಿಲ್ಲ. ಶ್ರೀ ರಾಘವೇಂದ್ರಸ್ವಾಮಿಗಳು ಪ್ರಾತಃಸಂಕಲ್ಪ ಗದ್ಯದಲ್ಲಿ ತಿಳಿಸಿರುವಂತೆ ಸರ್ವತ್ರ,

ಸರ್ವದಾ, ಸರ್ವಾಕಾರ, ಸರ್ವಾಧಾರ, ಎಂದು ಮೊದಲ್ಗೊಂಡು, ಸರ್ವತ್ಯಂತವಿಲಕ್ಷಣ,

ಸ್ವಗತಭೇದವಿವರ್ಜಿತ ಮುಂತಾಗಿ ಅನೇಕ ಗುಣವಿಶೇಷಣಗಳನ್ನು ಮುಖ್ಯಪ್ರಾಣರು

ಭಗವಂತನಲ್ಲಿ  ಕಂಡು, ಸದಾ ಭಗವಂತನ ಆರಾಧನೆಯಲ್ಲಿ ತೊಡಗಿರುತ್ತಾರೆ. ರಾಯರೇ

ಮತ್ತೆ ಹೇಳುವಂತೆ, “ಸದಾ ಭಗವತ್ಪರಾಣಾಮ್, ಭಗವದನ್ಯತ್ರ ಸರ್ವ ವಸ್ತುಷು ಮನಸ್ಸಂಗ

ರಹಿತಾನಾಮ್” (ಸದಾ ಭಗವಂತನಲ್ಲೇ ತೊಡಗಿರುವವರು, ಭಗವಂತನನ್ನುಳಿದು

ಮತ್ಯಾವ ವಿಷಯದಲ್ಲೂ ಆಸಕ್ತಿಯಿಲ್ಲದಿರುವವರು).  ಆ ರೀತಿಯ ಆರಾಧನೆಯನ್ನು

ಊಹಿಸಲೂ ಸಾಧ್ಯವಿಲ್ಲದ ನಮ್ಮಂಥವರಿಗೆ ಶ್ರೀಹರಿಯಲ್ಲಿ ಮನವನಿರಿಸಲು ಒಂದು

ಪ್ರತಿಕೃತಿಯ ಅಗತ್ಯಕಂಡ  ಆಚಾರ್ಯರು ದ್ವಾದಶ ಸ್ತೋತ್ರದಲ್ಲಿ ಶ್ರೀಹರಿಯ ಚಿತ್ರವನ್ನು

ನಮಗೆ ಕಾಣಿಸಿದ್ದಾರೆ. 


ವಂದೇವಂದ್ಯಂ ಸದಾನಂದಂ ಎಂದು ಪ್ರಾರಂಭವಾಗುವ ಮೊದಲ ಅಧ್ಯಾಯದಲ್ಲಿ

ಆಚಾರ್ಯರು ಶ್ರೀಹರಿಯನ್ನು  ಪಾದದಿಂದ ಮುಖದವರೆಗೆ ವರ್ಣಿಸಿ ಸ್ತುತಿಸುತ್ತಾ ಮನದಲ್ಲಿ

ಸದಾ ಶ್ರೀಹರಿಯ ಚಿಂತನೆಯಿರಲಿ, ವಿಶೇಷವಾಗಿ ಅಂತ್ಯಕಾಲದಲ್ಲಿ ಶ್ರೀಹರಿಯ

ಧ್ಯಾನವಿರಲೆಂದು ಸೂಚಿಸುತ್ತಾರೆ.  ಸದಾ ಮನದಲ್ಲಿ ಶ್ರೀಹರಿಯ ಚಿಂತನೆಯಿದ್ದರೆ,

ಅಂತ್ಯಕಾಲದಲ್ಲೂ ಮನದಲ್ಲಿ ಆ ಚಿಂತನೆ ಸಾಧ್ಯವಾಗಬಹುದೇನೋ ಎಂಬುದು ಇಲ್ಲಿರುವ

ಭಾವನೆ. 


‘ನಿಜಪೂರ್ಣಸುಖಾಮಿತಬೋಧತನು’, ‘ವಿಗ್ರಹೋ ಯಸ್ಯ ಸರ್ವೇಗುಣಾ ಏವಹಿ’,

‘ಪುಷ್ಟಷಾಡ್ಗುಣ್ಯಸದ್ವಿಗ್ರಹ’, ‘ಅಪರಿಮಿತಸುಖನಿಧಿವಿಮಲಸುದೇಹ’  ಮುಂತಾದ ಪದಗಳ

ಮೂಲಕ ಪರಮಾತ್ಮನ ದೇಹವೆನ್ನುವುದು ಒಂದು ನಿರ್ಮಲಗುಣಜ್ಞಾನಾನಂದ ರೂಪ ಮಾತ್ರ

ಎಂದು ವಿಶದಪಡಿಸಿರುವ ಆಚಾರ್ಯರು, ನಮ್ಮ ಅನುಕೂಲಕ್ಕೆಂದು ಪರಮಾತ್ಮನ ಪಾದ,

ಕಟಿ, ಎದೆ, ಭುಜ, ಕತ್ತು, ಕಣ್ಣು ಮುಂತಾಗಿ ಅಂಗಗಳ ವರ್ಣನೆಯನ್ನು ಮಾಡಿದ್ದಾರೆ. ಆದರೆ 

ಆ ರೀತಿಯಾಗಿ ಪರಮಾತ್ಮನ ಅಂಗಯುಕ್ತವಾದ ದೇಹವನ್ನು ಕಲ್ಪಿಸಿಕೊಂಡು ಪೂಜಿಸುವಾಗ

ಸಹ ಪರಮಾತ್ಮನ ನಿಜಸ್ವರೂಪದ ಅರಿವು ನಮಗಿರಬೇಕೆಂದು ಮೇಲ್ಕಾಣಿಸಿರುವ

ವಿಶೇಷಣಗಳ ಮೂಲಕ ಸೂಚಿಸಿದ್ದಾರೆ. 


ಸಕಲ ಜಡ, ಜೀವಗಳಲ್ಲಿ ಪರಮಾತ್ಮನನ್ನು ಕಾಣು, ಸಕಲ ಶಬ್ದಗಳಲ್ಲಿ ಭಗವಂತನ

ನಾಮವ ಕೇಳು, (“ಲೌಕಿಕ ವೈದಿಕ ಬೇಧ ಭಿನ್ನ ವರ್ಣಾತ್ಮಕ ಧ್ವನ್ಯಾತ್ಮಕ”  - ಮುಂತಾದ 

ಅಶೇಷ ಶಬ್ದಗಳೆಲ್ಲವೂ ಭಗವಂತನನ್ನೇ ಸೂಚಿಸುತ್ತವೆ ಎನ್ನುತ್ತಾರೆ ರಾಯರು.) ಮಾಡುವ

ಕರ್ಮಗಳೆಲ್ಲ ಶ್ರೀ ಹರಿಯ ಪೂಜೆಯಾಗಲಿ - ಇದು ನಾವು ಭಗವಂತನನ್ನು ಆರಾಧಿಸಬೇಕಾದ

ರೀತಿ. ರಾಯರು, ಆಚಾರ್ಯರು ಮತ್ತು ಭಗವದ್ಗೀತೆಯ ಮೂಲಕ ಶ್ರೀ ಕೃಷ್ಣಪರಮಾತ್ಮ ಸಹ

ಸೂಚಿಸಿರುವ ರೀತಿ ಇದು. 


ಈ ಚಿಂತನೆಯನ್ನು ನಾಲ್ಕೇ ಸಾಲುಗಳಲ್ಲಿ ವಿಜಯದಾಸರು ಸುಂದರವಾಗಿ ತಿಳಿಸಿದ್ದಾರೆ.. 


ಕಂಡ ಕಂಡದ್ದೆಲ್ಲ ಪದುಮನಾಭನ ಮೂರ್ತಿ 

ಉಂಡು ಉಟ್ಟಿದ್ದೆಲ್ಲ ವಿಷ್ಣುಪೂಜೆ 

ತಂಡ ತಂಡದವಾರ್ತೆ ವಾರಿಜಾಕ್ಷನ ಕೀರ್ತಿ 

ಹಿಂಡು ಹಿಂಡಿನ ಮಾತು ಹರಿಯನಾಮ 


ಆಚಾರ್ಯರ ಸ್ತೋತ್ರಗಳ ಅಭ್ಯಾಸ, ಪಠನೆ, ತತ್ವಗಳ ಚಿಂತನೆಯ ಮೂಲಕ ನಾವು ಕೂಡ

ದಾಸರು ಸೂಚಿಸುತ್ತಿರುವ  ಮಟ್ಟವನ್ನು  ತಲುಪವುದಾಗಲೆಂದು ಬೇಡಿಕೊಳ್ಳುತ್ತಾ, ಶ್ರೀಹರಿಯ, ಶ್ರೀಮದಾನಂದತೀರ್ಥರ, ಪಾದಪದ್ಮಗಳಿಗೆ ಈ ಕೆಲವು ಸಾಲುಗಳ ಬರಹದ ಮೂಲಕ ನನ್ನ

ನಮನ. 

“ಶ್ರೀಮದಾನಂದ ತೀರ್ಥ ತ್ರೈಲೋಕಾಚಾರ್ಯ ಪಾದೋಜ್ವಲ ಜಲಜ ಲಸತ್ ಪಾಂಸವೋಸ್ಮಾನ್ ಪುನಂತು”

( ತ್ರಿಲೋಕ ಗುರು ಶ್ರೀಮದಾನಂದ ತೀರ್ಥರ ಪಾದಧೂಳಿಯ ಕಣಗಳು ನಮ್ಮನ್ನು ರಕ್ಷಿಸಲಿ)