ಭಾನುವಾರ, ಫೆಬ್ರವರಿ 19, 2023

‘ವತ್ತಿನಣೆ’ - ಬೈಂದೂರಿನ ಬೃಂದಾವನ



ಹತ್ತುಹದಿನೈದು ವರುಷಗಳ ಹಿಂದೆ ಒಮ್ಮೆ ಉಡುಪಿಯಿಂದ ಗೋವಾಕ್ಕೆ ಬರುತ್ತಿದ್ದಾಗ ಬೈಂದೂರು ದಾಟಿ ೩-೪

ಕಿಲೋಮೀಟರ್ ಕಳೆದ ನಂತರ ನಿರ್ಜನ ಪ್ರದೇಶವೊಂದರಲ್ಲಿ, ರಸ್ತೆಯ ಎಡಭಾಗದಲ್ಲಿ ‘ಕಿರುಮಂತ್ರಾಲಯ’ -

‘ರಾಘವೇಂದ್ರಸ್ವಾಮಿಗಳ ಬೃಂದಾವನ’ ಎಂಬ ಫಲಕ ಕಂಡು ಅಚ್ಚರಿಗೊಂಡು ಗಾಡಿ ನಿಲ್ಲಿಸಿದೆ. ಫಲಕದಲ್ಲಿದ್ದ ಬಾಣ,

ಪಕ್ಕದಲಿದ್ದ ಒಂದು ಗುಡ್ಡದ ಮೇಲಕ್ಕೆ ದಾರಿ ತೋರುತ್ತಿತ್ತು. ಡಾಂಬರು ರಸ್ತೆಯಿದ್ದುದರಿಂದ ಗುಡ್ಡದ ಮೇಲಕ್ಕೆ ಗಾಡಿ

ನಡೆಸಿದೆ. ಹೆದ್ದಾರಿಯಿಂದ ಅನತಿ ದೂರದಲ್ಲಿಯೇ ಗುಡ್ಡದ ಮೇಲಿನ ಸಮತಟ್ಟಾದ ಸ್ಥಳದಲ್ಲಿ ಒಂದು ಸಣ್ಣ ಕೊಠಡಿ

ಮತ್ತು ಅದರೊಳಗೆ ಒಂದು ಚಿಕ್ಕದಾದ ಸುಂದರ ಕೆತ್ತನೆಯ ಬೃಂದಾವನ, ಪ್ರಾಣದೇವರು ಮತ್ತು

ಶ್ರೀ ರಾಘವೇಂದ್ರಸ್ವಾಮಿಗಳ ಮೂರ್ತಿ ಇದ್ದವು.   


ಬೈಂದೂರು - ಭಟ್ಕಳ ಎರಡೂ ಮುಸಲ್ಮಾನರ ಸಂಖ್ಯೆ ಹೆಚ್ಚು ಇರುವ ಜಾಗಗಳು. ಅವೆರಡರ ಮಧ್ಯೆ ನಿರ್ಜನವಾದ

ಒಂದು ಗುಡ್ಡದಮೇಲೆ ರಾಯರ ಬೃಂದಾವನ ! ಅದರ ಬಗ್ಗೆ ವಿಚಾರಿಸಲು ಸುತ್ತಮುತ್ತ ಯಾರೂ ಇಲ್ಲ.

ಯಾವುದೂ ವಸತಿಯಿಲ್ಲ. ಏನೇ ಇರಲಿ, ಬೃಂದಾವನ ಕಂಡು ಸಂತೋಷವಾಯಿತು. ಒಂದೆರಡು ನಿಮಿಷ

ಆಚೀಚೆ ಅಡ್ಡಾಡಿ ನೋಡಿ, ರಾಯರಿಗೆ ನಮಸ್ಕರಿಸಿ ವಾಪಸುಬಂದೆ. ಗುಡ್ಡದ ಮೇಲೆ ಅದೊಂದು ಕೊಠಡಿಯ ವಿನಾ

ಮತ್ತೇನೂ ಇಲ್ಲ. ರಾಯರ ವಿನಾ ಮತ್ಯಾರೂ ಇಲ್ಲ ! 


ನಂತರ ಅನೇಕಬಾರಿ ಉಡುಪಿ/ ಮಂಗಳೂರುಗಳಿಗೆ ಹೋದಾಗ ರೈಲಿನಲ್ಲಿ ಹೋಗಿಬಂದದ್ದರಿಂದಲೂ,

ಅಥವಾ ರಾತ್ರಿಯ  ಬಸ್ಸಿನಲ್ಲಿ ಹೋಗಿದ್ದರಿಂದಲೂ ಮತ್ತೆ ರಾಯರ ದರ್ಶನವಾಗಿರಲಿಲ್ಲ. ಮೊನ್ನೆ ಉಡುಪಿಯಿಂದ

ಬರುವಾಗ ಹೊಸ ಹೆದ್ದಾರಿಯ ಒಂದು ತಿರುವಿನಲ್ಲಿ ಮತ್ತೆ ಫಲಕ ಕಣ್ಣಿಗೆ ಬಿತ್ತು. ಗುಡ್ಡದ ಮೇಲೆ ಹೋದೆ.

ಈ ಬಾರಿ ಹೋದಾಗ ಅಲ್ಲಿ ಏನೋ ಕಟ್ಟಡದ ಕೆಲಸನಡೆಯುತ್ತಿತ್ತು. ಇಬ್ಬರು ಕೆಲಸಗಾರರು ಗುಂಡಿ ತೋಡುತ್ತಿದ್ದರು.

ಅರ್ಚಕರೊಬ್ಬರು ಅಭಿಷೇಕ ಮುಗಿಸಿ ಪುಷ್ಪಾರ್ಚನೆಗೆ ಅಣಿಯಾಗಿದ್ದರು. ಅರ್ಚಕರಿಂದ ಮಠದ ಬಗೆಗೆ ಕೆಲವು

ವಿವರ ಮತ್ತು ಆ ಪ್ರದೇಶದಲ್ಲಿ ರಾಯರ ಮಠ ಏಕೆ ಬಂತೆಂಬ ಪ್ರಶ್ನೆಗೆ ಉತ್ತರ ದೊರಕಿತು. 


ಸುಮಾರು ಮೂವತ್ತೈದು ನಲವತ್ತು ವರುಷಗಳ ಹಿಂದೆ - ನಾನು ಗೋವಾದಲ್ಲಿ ನೌಕರಿಪಡೆದು ಬಂದ ಸಮಯ -

ಮೇಲೆ ತಿಳಿಸಿದ ಗುಡ್ಡ ಇರುವ ‘ವತ್ತಿನಣೆ’ ಗ್ರಾಮದ ಬಳಿ ಮೈಸೂರಿನ ಕಂಪನಿ ಒಂದು ಬಾಕ್ಸೈಟ್

ಗಣಿಗಾರಿಕೆಯಲ್ಲಿ ತೊಡಗಿತ್ತಂತೆ. ಆ ಸಮಯದಲ್ಲಿ ಅಲ್ಲಿ ಕೆಲಸಮಾಡುತ್ತಿದ್ದ ಇಂಜಿನಿಯರ ಒಬ್ಬರು

ರಾಘವೇಂದ್ರಸ್ವಾಮಿಗಳ ಆರಾಧಕರಾಗಿದ್ದರಂತೆ. ಅವರಿಗೆ ಒಮ್ಮೆ ಸ್ವಪ್ನದಲ್ಲಿ, ಈಗ ಮಠವಿರುವ ಸ್ಥಳ ಕಂಡುಬಂದು,

ಅಲ್ಲಿ ನಿತ್ಯ ರಾಯರ ಸೇವೆಗೆ ವ್ಯವಸ್ಥೆ ಮಾಡಬೇಕೆಂದು ಪ್ರೇರಣೆಯಾಯಿತಂತೆ. ಆತ ಗುಡ್ಡದಮೇಲೆ ಒಂದು

ಗುಡಿಸಿಲು ಹಾಕಿ ಅದರಲ್ಲಿ ರಾಯರ ಒಂದು ಚಿತ್ರವಿಟ್ಟು ಪ್ರತಿದಿನ ತಪ್ಪದೆ ಅಲ್ಲಿ ಬಂದು ಪೂಜೆ ಮಾಡುತ್ತಿದ್ದರಂತೆ.

ಇದು ಕೆಲವು ವರ್ಷಗಳಕಾಲ ನಡೆಯಿತಂತೆ. 


ಈ ವಿಷಯ ತಿಳಿದ ಸಜ್ಜನರು ಕೆಲವರು ಅಲ್ಲಿ ಒಂದು ಬೃಂದಾವನವನ್ನು ಸ್ಥಾಪಿಸುವ ಸಂಕಲ್ಪಮಾಡಿ ಕಾರ್ಯವನ್ನು

ಕೈಗೊಳ್ಳುವ ಮೊದಲು ಆಗಿನ ಪೇಜಾವರ ಮಠಾಧೀಶರಾಗಿದ್ದ  ಶ್ರೀ ವಿಶ್ವೇಶತೀರ್ಥರ ಅಭಿಪ್ರಾಯ ಮತ್ತು ಸಲಹೆ

ಕೇಳಿದರಂತೆ. ಬೃಂದಾವನದ  ಸ್ಥಾಪನೆಗೆ ಹೃತ್ಪೂರ್ವಕವಾಗಿ ಬೆಂಬಲ ಸೂಚಿಸಿದ ಶ್ರೀಪಾದರು ಬೃಂದಾವನದ

ಪ್ರತಿಷ್ಠಾಪನೆಗೆ ಸಹಕರಿಸಿ ೧೯೯೧ರಲ್ಲಿ ತಮ್ಮ ಹಸ್ತದಿಂದಲೇ ಪ್ರತಿಷ್ಠಾಪನಾಕಾರ್ಯ ನೆರವೇರಿಸಿಕೊಟ್ಟರಂತೆ.

ಬೃಂದಾವನ ಮತ್ತು ಮೂರ್ತಿಯ ಕೆತ್ತನೆ ಕೆಲಸವನ್ನು ಸಮೀಪದ ಶಿರೂರು ಗ್ರಾಮದ ಶಿಲ್ಪಿಯೊಬ್ಬರಿಂದ

ಮಾಡಿಸಲಾಯಿತಂತೆ. ಈಗ ನಿತ್ಯ ಪೂಜೆ ಮುಂತಾದ ಕಾರ್ಯಗಳ ವ್ಯವಸ್ಥೆಯ ಉಸ್ತುವಾರಿಗಾಗಿ ಒಂದು

ಸಮಿತಿಯನ್ನು ರಚಿಸಿ, ಅದರ ಮೂಲಕ ಅರ್ಚಕರೊಬ್ಬರು ಬಂದು ಪೂಜೆ ಮಾಡುವ ವ್ಯವಸ್ಥೆ ಮಾಡಲಾಗಿದೆ.  


ಸಧ್ಯದಲ್ಲಿ ಬೃಂದಾವನ ಇರುವ ಸ್ಥಳ ಮೇಲಿನ ಚಿತ್ರದಲ್ಲಿರುವಂತಿದೆ. ಬಲಭಾಗದಲ್ಲಿ ಪ್ರಾಣದೇವರ ಗುಡಿ,

ಎಡಭಾಗದಲ್ಲಿ ನವಗ್ರಹಗಳು ಹಾಗೂ ಎದುರಿನಲ್ಲಿ ಕಾಣುವ ಕೊಠಡಿಯಲ್ಲಿ ಬೃಂದಾವನವಿದೆ. ಬಹುಶಃ

ಅದನ್ನು ‘ಮಠ’ ಎಂದು ಕರೆಯುವಂತಿಲ್ಲ. ಅಲ್ಲಿ ಯಾವುದೇ ವಿದ್ಯಾ ಪ್ರಸಾರಕ ಕಾರ್ಯವಾಗಲೀ, ಧರ್ಮ

ಪ್ರಚಾರ ಕಾರ್ಯವಾಗಲೀ, ಊಟೋಪಚಾರಗಳ ವ್ಯವಸ್ಥೆಯಾಗಲೀ ಇಲ್ಲ. ಕಟ್ಟಡವಾದಮೇಲೆ ಇದೆಲ್ಲವನ್ನೂ

ಮಾಡುವ ಆಲೋಚನೆ ಇರಬಹುದು. 


ನನ್ನ ಮಟ್ಟಿಗೆ ಹೇಳುವುದಾದರೆ ಈಗ ಇರುವ ಸ್ಥಳವನ್ನೇ ಕೊಂಚ ಅಚ್ಚುಕಟ್ಟಾಗಿಸಿ, ಚೊಕ್ಕವಾದ ಸ್ಥಳದಲ್ಲಿ

ಚಿಕ್ಕದಾದ ಮಂದಿರವೊಂದರ ನಿರ್ಮಾಣವಾದರೆ ಸಾಕು. ಮಳೆ, ಗಾಳಿ, ಬಿಸಿಲಿನಿಂದ ರಕ್ಷಣೆಗೆ ಬೇಕಾದಷ್ಟು

ಕಟ್ಟಡವಾದರೆ ಸರಿ.  ಬಾಗಿಲು - ಬೀಗವಿಲ್ಲದ, ಮುಕ್ತವಾದ ದರ್ಶನದ ವ್ಯವಸ್ಥೆ, ಯಾವುದೇ ಆಡಂಬರ -

ಅಡಾವುಡಿಯಿಲ್ಲದ ಸೇವೆ, ರಾಯರಲ್ಲಿ, ರಾಯರ ಬೋಧನೆಯಲ್ಲಿ, ಮನತೊಡಗಿಸುವಂಥ ವಾತಾವರಣ,

ಇಷ್ಟಿದ್ದರೆ ಸಾಕು. ಆದರೆ ನಾನೊಂದು ಎಡಬಿಡಂಗಿ. ನನಗೆ ಬೇಕಾದಂತೆ ಮಠ, ಮಂದಿರ ಇರುವುದು ಸಾಧ್ಯವೇ?

ಅದು ಸಮಾಜಕ್ಕೆ ಬೇಕಾದಂತೆ ಇರತಕ್ಕದ್ದು. ಹಾಗಾಗಿ ಒಂದಲ್ಲ ಒಂದು ದಿನ, ಮಠ, ಬೆಳ್ಳಿ ಪಾತ್ರೆ, ಚಿನ್ನದ ಕವಚ,

ಅದರ ರಕ್ಷಣೆಗೆ ಭದ್ರತೆ, ಜಾತ್ರೆ, ಜನಜಂಗುಳಿ ಎಲ್ಲವೂ ಆಗತಕ್ಕದ್ದೇ. ಆಗಲಿ. ಸಧ್ಯಕ್ಕಂತೂ ಅದಕ್ಕೆಲ್ಲಾ ಬೇಕಾದ

ಆರ್ಥಿಕ ಸಾಮರ್ಥ್ಯ ಅಲ್ಲಿ ಇರುವಂತೆ ಕಾಣುತ್ತಿಲ್ಲ. 


ಹೊಸ ಛಾವಣಿ ಹಾಕುವ ಕೆಲಸ ಕೈಗೊಂಡಿರುವುದಾಗಿ ಸಮಿತಿಯ ಕರಪತ್ರ ತಿಳಿಸುತ್ತದೆ. ಅದು ಸಮರ್ಪಕವಾಗಿ

ನೆರವೇರಲೆಂದು ಪ್ರಾರ್ಥಿಸಿ ನನ್ನಿಂದಾದ ಸಹಾಯ ಮಾಡಿ ಕೈಮುಗಿದು ಕೂಡುತ್ತೇನೆ.  ಯಾರಿಗಾದರೂ ಈ ಕೆಲಸಕ್ಕೆ

ಆರ್ಥಿಕ ಸಹಾಯ ಮಾಡುವ ಇಚ್ಛೆಯಿದ್ದರೆ ಚಿತ್ರದಲ್ಲಿರುವ ಬ್ಯಾಂಕಿನ ಖಾತೆಗೆ ಹಣ ಸಂದಾಯ ಮಾಡಬಹುದು.

ನಿರ್ಮಾಣಮಾಡಬೇಕೆಂದಿರುವ ಕಟ್ಟಡ ಉಡುಪಿಯ ದೇವಸ್ಥಾನಗಳ ಶೈಲಿಯಲ್ಲಿದೆ. ಪರಿಸರ ಸುಂದರವಾಗಿದೆ.

ಎದುರಿಗೆ ಸಹ್ಯಾದ್ರಿ ಪರ್ವತಗಳ ಸಾಲು, ಹಿಂದೆ ಅರಬ್ಬೀ ಸಮುದ್ರ. ಪ್ರಶಾಂತವಾದ, ಸ್ವಚ್ಛವಾದ ಮಂದಿರವಾಗಿ,

ದರ್ಶನಾಕಾಂಕ್ಷಿಗಳ ಮನಕ್ಕೆ ಮುದನೀಡುವಂಥ ವ್ಯವಸ್ಥೆ ಆದರೆ ಬಹಳ ಚೆನ್ನ. 


ಆಗುವುದಾಗಲಿ.  ನಾನೇನಾದರೂ ಮತ್ತೊಮ್ಮೆ ಉಡುಪಿಯ ದಾರಿಯಲ್ಲಿ ಹೋದರೆ ಇನ್ನಷ್ಟು ವಿವರಗಳನ್ನು

ತಿಳಿಯುವ ಪ್ರಯತ್ನ ಮಾಡುತ್ತೇನೆ. ಏನಾಗುತ್ತಿದೆ ಎಂಬುದನ್ನು ನಿಮಗೂ ತಿಳಿಸುತ್ತೇನೆ.

 






ಭಾನುವಾರ, ಜನವರಿ 22, 2023

ಪಕ್ಕದ ಮನೆಯ, ಬೆಕ್ಕಿನ ಮರಿಯ, ಚಿಕ್ಕ ಕಥೆ



ಅದೊಂದು ಬೆಕ್ಕಿನ ಮರಿ. ಎಲ್ಲಿಂದ ಬಂತೋ ತಿಳಿಯದು. ಬಿಳಿಯ ಮೈಮೇಲೆ ಕಪ್ಪು ಚಿತ್ತಾರ

ಅಥವಾ ಕರಿಯ ಮೈ ಮೇಲೆ ಬಿಳಿಯ ಚಿತ್ತಾರ ಎನ್ನಿ. ಎರಡೂ ಸರಿಯೇ. ಒಟ್ಟಿನಲ್ಲಿ

ಕಪ್ಪು - ಬಿಳುಪು. ಮುದ್ದಾಗಿತ್ತು. ಮರಿಯಲ್ಲವೇ ? ಚಿಕ್ಕಂದಿನಲ್ಲಿ ಎಲ್ಲವೂ ಮುದ್ದೇ !

ವಿಕಾರಗಳೆಲ್ಲಾ ಕಾಣಿಸಿಕೊಳ್ಳುವುದು ವಯಸ್ಸಾದಮೇಲೆಯೇ ! ಅದಕ್ಕೇ ಬೀಚಿಯವರು

ಬರೆದರು “ಎಂತೊಳ್ಳೆ ಮರಿಕತ್ತೆ, ಚೆನ್ನಿತ್ತು ಚೆಲುವಿತ್ತು, ತನ್ನಪ್ಪನಂತಾಗಿ ಹಾಳಾಯ್ತೋ ತಿಂಮ!”.

ಅದಿರಲಿ ನಾ ಹೇಳಹೊರಟದ್ದು ಬೆಕ್ಕಿನ ಮರಿಯ ಕಥೆ. 


ನಾನು ಅದನ್ನು ಮೊದಲು ಕಂಡಾಗ, ಕ್ಷಮಿಸಿ, ನಾನು ಅದನ್ನು ಮೊದಲು ಕಾಣಲಿಲ್ಲ,

ಅದರ ಧ್ವನಿಯನ್ನು ಕೇಳಿದೆ. ಮೇಲೆ ಬರೆದ ವಿವರವೆಲ್ಲಾ ಅದನ್ನು ಕಂಡ ನಂತರ ತಿಳಿದದ್ದು.

ಮೊದಲಬಾರಿಗೆ ನನಗೆ ಅದರ ಇರುವಿಕೆಯ ಅರಿವಾದಾಗ ಅದು ನಮ್ಮ ಪಕ್ಕದ ಮನೆಯ

ಹಿಂಭಾಗದ ಯಾವುದೋ ಸಂದಿಯಲ್ಲಿ ಅಡಗಿ ಕುಳಿತಿತ್ತು. ನಮ್ಮ ಪಕ್ಕದ ಮನೆಯಾಕೆ

ಅದನ್ನು ಅಲ್ಲಿಂದ ಹೊರ ಹೊರಡಿಸುವ ಪ್ರಯತ್ನದಲ್ಲಿದ್ದರು. ಸುಮಾರು ಅರ್ಧಘಂಟೆ ಕಾಲ

ಅವರು ಅದರೊಡನೆ ಕನ್ನಡದಲ್ಲಿ, ಇಂಗ್ಲಿಷಿನಲ್ಲಿ, ತಮಿಳಿನಲ್ಲಿ, ಅಂದರೆ - ಬೆಕ್ಕಿನ ಭಾಷೆಬಿಟ್ಟು

ತಮಗೆ ತಿಳಿದ ಮಿಕ್ಕ ಎಲ್ಲ ಭಾಷೆಗಳಲ್ಲೂ, ಸಂಭಾಷಣೆ ನಡೆಸಿದರೂ ಅದು ಹೊರಬಂದಂತೆ

ಕಾಣಲಿಲ್ಲ. ಆಮೇಲೆ ಏನಾಯಿತೋ ನನಗೆ ತಿಳಿಯದು. 


ಅದಾದ ಕೆಲವುದಿನದ ನಂತರ ನಮ್ಮ ಮನೆಗೂ ಪಕ್ಕದ ಮನೆಗೂ ಮಧ್ಯೆ ಇರುವ ತಂತಿ

ಜಾಲರಿಯ ಆಚೆಬದಿಯಲ್ಲಿ ನಾನು ಅದನ್ನು ಕಂಡೆ. ನಮ್ಮ ಎರಡೂ ಮನೆಗಳ ಮಧ್ಯದಲ್ಲಿರುವ

ಕಂಪೌಂಡು ಗೋಡೆಯ ಅವರ ಕಡೆಯ ಅರ್ಧಭಾಗದಮೇಲೆ ಅದು ಕುಳಿತಿತ್ತು. ನಾನು ಸೌಜನ್ಯಕ್ಕೆಂದು

ಅದರ ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸಿ ನನ್ನ ಹೆಸರು ಹೇಳಿದೆ. ಪುಸ್ ಪುಸ್ ಎಂದೆ.

ಮ್ಯಾವ್ ಮ್ಯಾವ್ ಎಂದೆ. ಬೆಂಗಳೂರಿಗೆ ಬಂದಿದ್ದ ಕೈಲಾಸಂ ಅವರ ಬೋರೇಗೌಡನಂತೆ. ಕೇಳಿದ್ದೀರಾ ?

ನಮ್ಮ ತಿಪ್ಪಾರಳ್ಳಿ ?  “ ತಮಾಸೆ ನೋಡಕ್ ಬೋರಾ ವೊಂಟ ಲಾಲಬಾಗ್ ತೋಟಕ್ಕೆ,

ಉಲಿನ್ನೋಡಿ ಬರೆ ಆಕಿದ್ ದೊಡ್ಬೆಕ್ಕನ್ಕೊಂಡ, ಬೋನ್ನೊಳಗ್ ನುಗ್ಗಿ ಉಲಿನ್ ಸವರ್ತಾ

ಪುಸ್ ಪುಸ್ ಅಂತಿದ್ದ, ಬೋರಾ ಪುಸ್ ಪುಸ್ ಅಂತಿದ್ದ  ..... ..... “.  ಹಾಗೆ. ಆದರೆ

ಇದು ನಿಜವಾಗಿಯೂ ಬೆಕ್ಕಿನ ಮರಿಯೇ.  ಹುಲಿಯಲ್ಲ. ಮತ್ತೆ, ನಾನು ಬೋನಿನ ಹೊರಗಿದ್ದೆ

ಅಷ್ಟೇ. ಸರಿ, ಬೆಕ್ಕಿನ ಮರಿ ನನಗೆ ಉತ್ತರಿಸಲಿಲ್ಲ. ಕೈ - ಕಾಲು ಕುಲುಕಲು ಸಾಧ್ಯವಿರಲಿಲ್ಲ.

ತಂತಿ ಜಾಲರಿ ಅಡ್ಡವಿತ್ತು. ನಾನು ಒಂದರ್ಧ ನಿಮಿಷ ಅದನ್ನು ನೋಡುತ್ತಾ ನಿಂತೆ. ಅದು

ನನ್ನನ್ನು ನೋಡುತ್ತಿತ್ತು. ನಂತರ ನಾನು ಅದಕ್ಕೆ ವಿದಾಯ ಹೇಳಿ ಬಂದು ಬಿಟ್ಟೆ. 


ಒಂದೆರಡು ದಿನದ ನಂತರ ಪಕ್ಕದ ಮನೆಯಾಕೆ ಸಿಕ್ಕಿದರು. ಬೆಕ್ಕಿನ ಮರಿಯ ಬಗ್ಗೆ ತಿಳಿಸಿದರು.

ಸುಮಾರು ಹತ್ತುನಿಮಿಷ ಅದರ ಪ್ರವರ ವಿವರಗಳು ಹಾಗೂ ಅದು ಅವರ ಸುಪರ್ದಿಗೆ

ಬಂದ ಸಂಧರ್ಭವನ್ನು ವಿವರಿಸಿದರು. ವಿವರಗಳು ನಿಮಗೆ ಬೇಸರ ತರಿಸಬಹುದೇನೋ.

ಅದರ ಸಾರಾಂಶ ಹೀಗೆ. 


ಆ ಮರಿ ಹೋದವಾರ ನಾವು ಊರಿಗೆ ಹೋಗಿದ್ದ ಸಮಯದಲ್ಲಿ ಯಾವಾಗಲೋ ಬಂದು ನಮ್ಮ

ಮನೆಯ ನೀರಿನ ಮೀಟರಿನ ಡಬ್ಬಿಯಲ್ಲಿ ಹುದುಗಿತ್ತಂತೆ. ಒಂದು ರಾತ್ರಿಯಿಡೀ ಅರಚುತ್ತಿತ್ತಂತೆ.

ಮರುದಿನ ಮುಂಜಾನೆ ಆಕೆ ಬಂದು ಅದನ್ನು ಅಲ್ಲಿಂದ ಎತ್ತಿ ಹೊರಗೆ ಬಿಟ್ಟು ಅದರ ತಾಯಿ

ಬಂದು ಮರಿಯನ್ನು ಒಯ್ಯುತ್ತದೇನೋ ಎಂದು ನೋಡಿದರಂತೆ. ತಾಯಿ ಬರಲಿಲ್ಲ. ಆ ಮರಿ

ನಮ್ಮ ಮನೆಗಳ ಸುತ್ತಮುತ್ತವೇ ಓಡಾಡುತ್ತಿದ್ದು, ಪಕ್ಕದ ಮನೆಯಾಕೆ ಹಾಕಿದ ಹಾಲು

ಕುಡಿದುಕೊಂಡು ಇದ್ದಿತಂತೆ. ಕಾಲಾನುಕ್ರಮೇಣ ಆಕೆಗೆ ಅದರಮೇಲೆ ಮಮತೆ ಹುಟ್ಟಿ ಆಕೆ

ಅದನ್ನು ದತ್ತು ಪಡೆದರಂತೆ. ಹಾಗಾಗಿ ಅದು ಅವರ ಸ್ವತ್ತಾಯಿತು. 


ಇಷ್ಟೆಲ್ಲಾ ಆದದ್ದು ನಮಗೆ ತಿಳಿಯಲಿಲ್ಲ. ಏನೇ ಆಗಲಿ ಅದು ಮೊದಲು ಕಂಡಿದ್ದು ನಮ್ಮ

ಮೀಟರಿನ ಡಬ್ಬದಲ್ಲಾದ್ದರಿಂದ ಬೆಕ್ಕಿನ ಮರಿಯ ಮೇಲಿನ ಮೊದಲ ಹಕ್ಕು ನನ್ನದಿತ್ತು.

ಅವರು ಅದನ್ನು ದತ್ತು ಪಡೆಯುವ ಮೊದಲು ನನ್ನನ್ನು ಒಂದು ಮಾತು ಕೇಳಬಹುದಿತ್ತೇನೋ.

ಹೋಗಲಿ ಬಿಡಿ ಇಂಥ ಸಣ್ಣ ಸಣ್ಣ ವಿಷಯಗಳನ್ನು ಹಚ್ಚಿಕೊಂಡು ಕೂಡುವುದಲ್ಲ. ಅಷ್ಟಲ್ಲದೆ,

ನನಗೇನೂ ಬೆಕ್ಕಿನ ಮರಿ ಬೇಕಿರಲಿಲ್ಲ. 


ಈಗ ನನಗೆ ಪ್ರತಿದಿನ ಸಾಕುತಾಯಿ ಮತ್ತು ದತ್ತು ಬೆಕ್ಕಿನ ಮರಿಯ ಸಂಭಾಷಣೆ ಕೇಳುವ

ಸುಯೋಗ. ನನಗೆ ಅವರ ಮಾತನ್ನು ಕದ್ದು ಕೇಳುವ ಚಟವೇನೂ ಇಲ್ಲ. ಆದರೆ ಅದು

ಸಾಮಾನ್ಯವಾಗಿ ನಾನು ಮುಂಜಾನೆ ವಾಕಿಂಗ್ ಮುಗಿಸಿ ಬರುವ ಹೊತ್ತಿಗೆ ಶುರುವಾಗುತ್ತದೆ.

ಮತ್ತು, ಅಪ್ರಯತ್ನವಾಗಿ ನಮ್ಮ ವರಾಂಡದಲ್ಲಿ ಬಂದು ಕುಳಿತ ನನ್ನ ಕಿವಿಗೆ ಬೀಳುತ್ತದೆ.

ಬೆಂಗಳೂರಿನಲ್ಲಿ ಎರಡುಮನೆಗಳ ಮಧ್ಯೆ ಜಾಗ ಎಷ್ಟು?  ಆರಿಂಚು ಇದ್ದೀತು ! ನಮ್ಮ

ವರಾಂಡಕ್ಕೂ ಅವರ ಮನೆಗೂ ಮೂರಡಿ ದೂರವಷ್ಟೇ ! ಇಂದು ಮುಂಜಾನೆ ನನ್ನ ಕಿವಿಗೆ

ಬಿದ್ದ ಸಂಭಾಷಣೆ ಹೀಗಿತ್ತು. 


“ಮ್ಯಾವ್ ಮ್ಯಾವ್”

“ಓ ಎದ್ಬಿಟ್ಯಾ ಪುಟ್ಟ?” 

 “ಮ್ಯಾವ್ ಮ್ಯಾವ್”

“ಅದ್ಯಾಕೆ ಇಷ್ಟು ಬೇಗ ಎದ್ದೆ”

 “ಮ್ಯಾವ್ ಮ್ಯಾವ್”

“ನಿದ್ದೆ ಬರಲಿಲ್ವಾ ?”

“ಮ್ಯಾವ್ ಮ್ಯಾವ್”

“ಹಾಲು ಕೊಡಲಾ”

 “ಮ್ಯಾವ್ ಮ್ಯಾವ್”

“ಯಾಕೆ? ಹಸಿವಿಲ್ವಾ?”

“ಮ್ಯಾವ್ ಮ್ಯಾವ್”

“ಹಾಲು ಬೇಡ್ವಾ ?”

“ಮ್ಯಾವ್ ಮ್ಯಾವ್”

“ಅದೇನು ಸರಿಯಾಗಿ ಹೇಳು ಮರೀ”

“ಮ್ಯಾವ್ ಮ್ಯಾವ್”

“ಒಳಗ್ ಬರ್ತೀಯಾ ?”

“ಮ್ಯಾವ್ ಮ್ಯಾವ್”

“ಚಳಿ ಆಗತ್ತಾ ?”

“ಮ್ಯಾವ್ ಮ್ಯಾವ್”

“ತಾಳು ಕಿಟಕಿ ತೆಗೀತೀನಿ”

“ಮ್ಯಾವ್ ಮ್ಯಾವ್”

“ಬೇಡ್ವಾ”

“ಮ್ಯಾವ್ ಮ್ಯಾವ್”

“ಅದೇನದು ಹೇಳು ಕಂದಾ”

“ಮ್ಯಾವ್ ಮ್ಯಾವ್”

“ಹಾರ್ಲಿಕ್ಸ್ ಕೊಡ್ಲಾ”

“ಮ್ಯಾವ್ ಮ್ಯಾವ್”

“ಬೇಡ್ವಾ ? ಹಾಲೇ ತರ್ತೀನಿ ತಾಳು”


ಅವರು ಹಾಲು ತಂದರೋ, ಬಿಟ್ಟರೋ, ಮರಿ ಕುಡಿಯಿತೋ ಬಿಟ್ಟಿತೋ ನನಗೆ ತಿಳಿಯುವ

ಮುನ್ನ, ಮುಂಜಾನೆ ನಾನು ತರಬೇಕಾಗಿದ್ದ ಹಾಲನ್ನು ನಾನಿನ್ನೂ ತಂದಿಲ್ಲವೆಂದು ನನಗೆ

ನೆನಪಾಗಿ ನಾನು ಹೊರಗೆ ಹೊರಟುಬಿಟ್ಟೆ. ಮುಂಜಾನೆ ಏಳುವ ಹೊತ್ತಿಗೆ, ಬಿಸಿ ಕಾಫಿಗೆ

ಹೊಸ ಹಾಲಿಲ್ಲದಿದ್ದರೆ ನನ್ನಾಕೆ ತನಗೆ ಹೇಳಬೇಕೆನಿಸಿದ್ದನ್ನು ಸ್ಪಷ್ಟವಾಗಿ ನನ್ನ ಭಾಷೆಯಲ್ಲೇ,

ಪೂರ್ಣ ನನಗೆ ವಿಶದವಾಗುವಂತೆ ಹೇಳಿ ಬಿಡುತ್ತಾಳೆ. ಆದ್ದರಿಂದ ನನ್ನ ಎಚ್ಚರಿಕೆಯಲ್ಲಿ

ನಾನಿರಬೇಕಲ್ಲವೇ ? ಹಾಗಾಗಿ ನಾನು ಜಾಗ ಖಾಲಿ ಮಾಡಿದೆ. 


ಪ್ರತಿದಿನವೂ ಮೇಲೆ ತಿಳಿಸಿದ ಧಾಟಿಯಲ್ಲೇ ಅಷ್ಟಿಷ್ಟು ಸಂಭಾಷಣೆ ನನ್ನ ಕಿವಿಗೆ ಬೀಳುತ್ತಲೇ

ಇರುತ್ತದೆ. ಆ ಬೆಕ್ಕಿನ ಮರಿ ಏನು ಹೇಳಿತೆಂದು ತಿಳಿಯುವ ಕುತೂಹಲ ನನಗೆ. ಆದರೆ

ಬೆಕ್ಕಿನ ಭಾಷೆ ನನಗಿನ್ನೂ ಗೊತ್ತಾಗಿಲ್ಲ. ನಮ್ಮ ಪಕ್ಕದ ಮನೆಯಾಕೆಗೆ ತಿಳಿಯುತ್ತದೇನೋ ?

ಅವರು ಸಿಕ್ಕರೆ ಕೇಳಿನೋಡಬೇಕು. ಒಂದು ವೇಳೆ ನನಗೆ ತಿಳಿದರೆ ನಿಮಗೂ ತಿಳಿಸುತ್ತೇನೆ. 

ಶುಕ್ರವಾರ, ಜನವರಿ 6, 2023

ಗೊರೂರು ಮತ್ತು ಗೊರೂರು ರಾಮಸ್ವಾಮಯ್ಯಂಗಾರ್ಯರು


 

 

 

ಯಾವುದೋ ಕಾರಣದಿಂದ ಸಕಲೇಶಪುರಕ್ಕೆ ಹೋಗಿದ್ದೆ. ಅಲ್ಲಿಂದ ಮುಂದೆ ನಾನು ಮೈಸೂರಿಗೆ ಹೋಗಬೇಕಿತ್ತು.

ಸಕಲೇಶಪುರದಿಂದ ಹಾಸನಕ್ಕೆ ಬಂದು ಅಲ್ಲಿಂದ ಮೈಸೂರಿಗೆ ನೇರವಾಗಿ ಪ್ರಯಾಣಿಸಬಹುದಿತ್ತು.

ಆದರೆ ಹೆದ್ದಾರಿಯನ್ನು ಬಿಟ್ಟು ಆಚೆ ಈಚೆಯ ಒಳ ಪ್ರದೇಶಗಳನ್ನು ನೋಡುವ ಇಚ್ಛೆ ನನಗೆ ಇದ್ದಿದ್ದರಿಂದ

ಬೇರೆ ದಾರಿಗಳಿದ್ದರೆ ತಿಳಿಸಬೇಕೆಂದು ನಾನು ಗೂಗಲ್ ಗುರೂಜಿಯವರನ್ನು ಕೇಳಿಕೊಂಡೆ. ನಾನು

ಪ್ರಯಾಣಿಸಬಹುದಾದ ಇತರ ದಾರಿಗಳನ್ನು ತೋರಿಸುವಾಗ ಅವರು ಒಂದು ರಸ್ತೆ ಶ್ರೀ

ರಾಮಸ್ವಾಮಯ್ಯಂಗಾರ್ಯರ ಗೊರೂರಿನ ಮೂಲಕ ಹಾದುಹೋಗುತ್ತದೆಂದು ತಿಳಿಸಿದರು. 

 

ಗೊರೂರು, ಹೇಮಾವತಿ ನದಿ, ಯೋಗಾನರಸಿಂಹಸ್ವಾಮಿ ದೇವಸ್ಥಾನ, ದೇವಾಲಯದ ಮುಂದಿನ ತೋಪು,

ಜಾತ್ರೆ, ದೇವಸ್ಥಾನದ ಹುಳಿಯನ್ನ ಇವುಗಳ ಬಗ್ಗೆ ಗೊರೂರರ ಪುಸ್ತಕಗಳಲ್ಲಿ ಓದಿ, ಮನದಲ್ಲಿಯೇ ಅವುಗಳ

ಚಿತ್ರವನ್ನು ರೂಪಿಸಿಕೊಂಡು ಆನಂದಿಸಿದ್ದ ನನಗೆ ಆ ಎಲ್ಲವನ್ನೂ ಕಣ್ಣಾರೆ ನೋಡಬೇಕೆಂಬುದು ಬಹುಕಾಲದ

ಬಯಕೆ. ಜತೆಗೆ ಕರಿಯ, ಶಾಲುಸಾಬಿ, ಸೀನಪ್ಪ , ರಂಗೇಗೌಡ, ದಪ್ಪ ಹೊಟ್ಟೆಯ ಜೋಡೀದಾರರು

ಎಲ್ಲರನ್ನೂ ಕಾಣುವುದಾಗಿದ್ದರೆ ಬಹಳ ಚನ್ನವಿತ್ತು.  ಆದರೆ ನಾನು ಹುಟ್ಟಿದ್ದು ಕೊಂಚ ತಡವಾಯಿತು.

ಅದಿರಲಿ, ಗೊರೂರು ಮತ್ತು ಹೇಮಾವತಿ ನದಿ ಇನ್ನೂ ಇವೆ ಎಂದು ತಿಳಿದಾಕ್ಷಣ ನಾನು ಗೊರೂರಿನ

ಮೂಲಕ ಮೈಸೂರಿಗೆ ಹೋಗುವುದೆಂದು ತೀರ್ಮಾನಿಸಿದೆ. 

 

ಗೊರೂರು ತಲುಪುವ ಮುಂಚೆ ಗೊರೂರರ ಜೀವನದ ಒಂದು ಪ್ರಸಂಗ ತಿಳಿಸುತ್ತೇನೆ. ಶ್ರೀ ಗೊರೂರು

ರಾಮಸ್ವಾಮಯ್ಯಂಗಾರ್ಯರು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಕೂಡಾ ಪಾಸುಮಾಡಿರಲಿಲ್ಲವಂತೆ. ಆದರೆ ಅವರು

ಬರೆದ ‘ಹಳ್ಳಿಯ ಚಿತ್ರಗಳು’ ಪುಸ್ತಕ  ಬಹಳ ಜನಪ್ರಿಯವಾಗಿ, ಹೆಸರುಮಾಡಿದ ನಂತರ ಅವರನ್ನು ಒಮ್ಮೆ

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪರೀಕ್ಷಕರನ್ನಾಗಿ ನೇಮಿಸಿದರಂತೆ. ಇದು ಸುಮಾರು ೧೯೩೦ರಲ್ಲಿ. ಏನೂ ಓದಿಲ್ಲದ

ರಾಮಸ್ವಾಮಯ್ಯಂಗಾರ್ಯರು ಪರೀಕ್ಷಕರಾದ ವಿಷಯತಿಳಿದ ಕೆಲವರ ಹೊಟ್ಟೆ ಕೊಂಚ ಉರಿಯಿತಂತೆ.

ಆ ಜನ, ಪರೀಕ್ಷಕರಾಗಲು ಬೇಕಾದ ಯಾವುದೇ ಅರ್ಹತಾಪರೀಕ್ಷೆಯನ್ನು ಗೊರೂರರು ಪಾಸುಮಾಡಿಲ್ಲವೆಂದು

ತಗಾದೆ ತೆಗೆದರಂತೆ. ಗೊರೂರು ಅವರನ್ನು ಪರೀಕ್ಷಕರನ್ನಾಗಿ ನಿಯಮಿಸಿದ ಎನ್ ಎಸ್ ಸುಬ್ಬರಾಯರು,

‘ಹಳ್ಳಿಯ ಚಿತ್ರಗಳು’ ಪುಸ್ತಕವೇ ಅವರ ಅರ್ಹತೆಯೆಂದು ಹೇಳಿ, ತಗಾದೆ ತೆಗೆದವರ ಬಾಯಿಮುಚ್ಚಿಸಿದರಂತೆ.

ಆದರೂ, ಯಾವುದಾದರೂ ಒಂದು ಪರೀಕ್ಷೆ ಪ್ಯಾಸುಮಾಡುವಂತೆ ಗೊರೂರರಿಗೆ ಸೂಚಿಸಿದರಂತೆ.

ಅದರಂತೆ ಗೊರೂರರು ಮದ್ರಾಸ್ ವಿಶ್ವವಿದ್ಯಾಲಯದ ‘ಕನ್ನಡ ವಿದ್ವಾನ್’ ಪರೀಕ್ಷೆಗೆ ನೋಂದಾಯಿಸಿಕೊಂಡರಂತೆ. 

ಆ ಪರೀಕ್ಷೆಗೆ ಗೊರೂರು ಅವರೇ ಬರೆದಿದ್ದ ‘ನಮ್ಮ ಊರಿನ ರಸಿಕರು’ ಪುಸ್ತಕ  ಪಠ್ಯಪುಸ್ತಕವಾಗಿತ್ತಂತೆ.

ಗೊರೂರರು ತಮ್ಮ ಪುಸ್ತಕವನ್ನು ತಾವೇ ಪಠ್ಯವಾಗಿ ಓದಿ, ಪರೀಕ್ಷೆ ಬರೆದರಂತೆ. ಪರೀಕ್ಷೆ ಪ್ಯಾಸಾಯಿತು.

ಆದರೆ ಪರೀಕ್ಷಕರಾಗಿದ್ದ ಮುಳಿಯ ತಿಮ್ಮಪ್ಪಯ್ಯನವರು ಗೊರೂರರನ್ನು ಕುರಿತು “ನೀನು ಬರೆದ ಉತ್ತರಗಳಿಗೆ

ನಾನು ಕೊಟ್ಟ ಅಂಕ ಹೆಚ್ಚಾಯಿತು” ಎಂದರಂತೆ ! ಇದನ್ನು ನಾನು ಶ್ರೀ ಸಿ ಜೆ ವೆಂಕಟಯ್ಯನವರು ಗೊರೂರರ

ಬಗ್ಗೆ ಬರೆದ ಪುಸ್ತಕದಲ್ಲಿ ಇತ್ತೀಚಿಗೆ ನೋಡಿದೆ. 

 

ಸರಿ, ಹೇಮಾವತಿ ಜಲಾಶಯ ಮತ್ತು ನಂತರ ಗೊರೂರಿನ ಮೂಲಕ ಮೈಸೂರಿಗೆ ಪಯಣಿಸುವುದೆಂದು

ನಿರ್ಧರಿಸಿದ ನಾನು  ಸಕಲೇಶಪುರದ ಬಳಿಯ ಬಾಳ್ಳುಪೇಟೆಯ ನಂತರ ಗಾಡಿಯನ್ನು ಬಲಕ್ಕೆ ತಿರುಗಿಸಿದೆ.

ಸಣ್ಣ ಆದರೆ ಸುಸ್ಥಿತಿಯಲ್ಲಿದ್ದ ರಸ್ತೆ, ಅಕ್ಕ ಪಕ್ಕ ಅಡಿಕೆ, ತೆಂಗು ತೋಟಗಳು, ಜೋಳ ಬೆಳೆಯುತ್ತಿದ್ದ ಹಸಿರು

ಹೊಲಗಳು, ಸಣ್ಣ ಸಣ್ಣ ಕೆರೆ ಕುಂಟೆಗಳು, ಚಿಕ್ಕ ಚಿಕ್ಕ ಗುಡ್ಡಗಳಿಂದ ಕೂಡಿದ ಪರಿಸರ ಬಹಳ ಆಹ್ಲಾದಕರವಾಗಿತ್ತು.

“ಅಲ್ಲಿಗಲ್ಲಿಗೆ ಬೆಳೆದ ಬೆಳೆಗಳಿಂ ಮೆಳೆಗಳಿಂ - ಅಲ್ಲಿಗಲ್ಲಿಗೆ ವನಸ್ಥಳಗಳಿಂ ಕೊಳಗಳಿಂ” ಎಂಬಂತೆ ! ಮಗ್ಗೆ ಎಂಬ

ಗ್ರಾಮದ ನಂತರ ರಸ್ತೆ ಕೊಂಚ ಕೊಂಚ ಹಾಳಾಗಿದ್ದರೂ ಗಾಡಿ ಚಲಿಸಲು ತೊಂದರೆ ಇರಲಿಲ್ಲ. ಹೇಮಾವತಿ

ಜಲಾಶಯವನ್ನು ದಾಟಿದ ನಂತರ ಮತ್ತೂ ಹಾಳಾದ ರಸ್ತೆಯ ಸ್ಥಿತಿ ಕಂಡು ನನಗೇಕೆ ಈ ಗೊರೂರಿನ ಭ್ರಮೆ

ಎನ್ನಿಸಿದರೂ ಊರು ಅಲ್ಲಿಂದ ಹೆಚ್ಚು ದೂರವಿರಲಿಲ್ಲವಾದ್ದರಿಂದ ಮುಂದುವರಿದೆವು. ಬಾಳ್ಳುಪೇಟೆಯಿಂದ ಹೊರಟ

ಎರಡುತಾಸಿನ ಒಳಗೆ ನಾವು ಗೊರೂರು ತಲುಪಿದೆವು. ಈಗ ಹೆದ್ದಾರಿಯೂ ಗೊರೂರಿನ ಪಕ್ಕದಲ್ಲೇ ಹಾಯುತ್ತದೆ.

ಹಳೆಯಊರಿನ ಕೆಲವುಭಾಗ, ಹೇಮಾವತಿ ನದಿ, ನರಸಿಂಹ ಸ್ವಾಮಿಯ ದೇವಸ್ಥಾನ ಮತ್ತು ದೇವಾಲಯದ

ಮುಂದಿನ ತೋಪಿನ ಒಂದು ಭಾಗ ಇನ್ನೂ ಹಾಗೆಯೇ ಉಳಿದಂತಿದೆ. ಹಾಗೂ, ಅದು ರಾಮಸ್ವಾಮಯ್ಯಂಗಾರ್ಯರ

ಕಾಲಕ್ಕೂ ಇಂದಿಗೂ ಬಹುಶಃ ಹೆಚ್ಚು ಬದಲಾಗಿಲ್ಲವೆನಿಸುತ್ತದೆ. 

 

ಗೊರೂರಿನ ಯೋಗಾನರಸಿಂಹಸ್ವಾಮಿ ದೇವಸ್ಥಾನ - ಅದರ ಜಾತ್ರೆ, ಹೇಮಾವತಿ ನದಿ - ಅದರ ಮೊಸಳೆ ಮಡುವು,

ಶಾಲುಸಾಬಿ - ಅವನ ಕಠಾರಿ ಗುರುತಿನ ರುಜು, ಸೀನಪ್ಪ - ಅವನ ಬೆಲ್ಲ ಹೆಸರುಬೇಳೆಯ ಪಾನಕ,

ಜೋಡೀದಾರರು - ಅವರ ಹೊಟ್ಟೆ ಮತ್ತು ಕುದುರೆ, ಮಣೆಗಾರರು - ಅವರ ಬಾವುಟ ಇವೆಲ್ಲದರ ಚಿತ್ರಣ

ಸುಮಧುರ ಹಾಗೂ ಮನಕ್ಕೆ ಮುದ. ಜತೆಗೆ, ಕಳೆದು ಹೋದ ಕಾಲದ ಕಥೆಗಳು ಆ ಜೀವನದ ನಿರೂಪಣೆ

ಇವುಗಳು ನನಗೆ ಬಹಳ ಪ್ರಿಯ. ಹಾಗಾಗಿ ನಾನು ಗೊರೂರರ ಚಿತ್ರಣಗಳನ್ನು ಬಹಳ ಆನಂದದಿಂದ ಮತ್ತೆ

ಮತ್ತೆ ಓದಿದ್ದೇನೆ. ಹಾಗೆ ಓದಿ ತಿಳಿದಿದ್ದ ಸ್ಥಳಗಳನ್ನು ಈಗ ನೋಡುವ ಅವಕಾಶ ಸಿಕ್ಕಿದ್ದು ಬಹಳ

ಸಂತೋಷವಾಯಿತು. 

 

ಗೊರೂರಿನ ದೇವಸ್ಥಾನ ಅಂಥ ಹೆಸರುವಾಸಿಯಾದ ಸ್ಥಳವಲ್ಲವಾದ್ದರಿಂದ ಹೆಚ್ಚು ಜನರಿರಲಿಲ್ಲ. ಅಲ್ಲಿ

ಕುಳಿತಿದ್ದ ಕೆಲವು ಹೆಂಗಳೆಯರು ಯೋಗಾನರಸಿಂಹಸ್ವಾಮಿಯು ತಮ್ಮ ಮನೆದೇವರೆಂದೂ ತಾವು ದೇವರ

ಸೇವೆಗೆಂದು ಬಂದಿರುವುದಾಗಿಯೂ ತಿಳಿಸಿ ನಮ್ಮ ಪೂರ್ವಾಪರಗಳನ್ನು ವಿಚಾರಿಸಿಕೊಂಡರು. ಗೋವಾ

ವಾಸಿಯಾದ ನಾನು ಗೊರೂರಿನ ದೇವಸ್ಥಾನವನ್ನು ಹುಡುಕಿಕೊಂಡು ಬಂದಿದ್ದ ಬಗ್ಗೆ ಕುತೂಹಲ ವ್ಯಕ್ತ ಪಡಿಸಿದರು.

ರಾಮಸ್ವಾಮಯ್ಯಂಗಾರ್ಯರ ಪುಸ್ತಕಗಳನ್ನು ಓದಿ, ಅದರಲ್ಲಿ ವಿವರಿಸಿದ್ದ ಸ್ಥಳಗಳನ್ನು ಕಾಣುವ

ಅಪೇಕ್ಷೆಯಿಂದ ನಾನು ಅಲ್ಲಿಗೆ ಬಂದದ್ದೆಂದು ತಿಳಿಸಿದೆ. ಅವರು ಯಾರೂ ಗೊರೂರು ರಾಮಸ್ವಾಮಯ್ಯಂಗಾರ್ಯರ

ಹೆಸರೇ ಕೇಳಿರಲಿಲ್ಲ ! 

 

ಗೊರೂರು ರಾಮಸ್ವಾಮಯ್ಯಂಗಾರ್ಯರ ಹೆಸರು, ಪುಸ್ತಕಗಳ ವಿಷಯ ಕೆಲವು ಕಣ್ಣುಗಳಿಗೆ ಬಿದ್ದರೆ ಅವರ

ಬಗ್ಗೆ ತಿಳಿದಿಲ್ಲದ  ನಾಲ್ಕಾರುಜನ ಅವರ ಪುಸ್ತಕಗಳ ಮೇಲೆ ಕಣ್ಣು ಹಾಯಿಸುವಂತಾಗಲೆಂದು ಆಶಿಸಿ ಗೊರೂರಿನ

ಭೇಟಿಯ ಬಗ್ಗೆ ಮೇಲ್ಕಾಣಿಸಿರುವ ಕೆಲವುಸಾಲು ಬರೆದೆ. ಜತೆಗೇ ಕೆಲವು ಚಿತ್ರಗಳನ್ನೂ ಲಗತ್ತಿಸಿದ್ದೇನೆ. ಒಂದೆರಡು

ಗುಂಪುಗಳಿಗೆ ರವಾನಿಸಿದ್ದೇನೆ. 

 










ಮೇಲಿನ ಚಿತ್ರಗಳಲ್ಲಿ ಕಾಣುವ ದೇವಸ್ಥಾನ ಗೊರೂರಿನ ಯೋಗಾನರಸಿಂಹನದು. ಕಾಣಿಸುವ ನದಿ ಗೊರೂರಿನಲ್ಲಿ

ಹರಿಯುವ  ಹೇಮಾವತಿ ನದಿ. ದೇವಸ್ಥಾನದ ಮುಂದಿನ ತೋಪು ಸಹ ಗೊತ್ತಾಗುವಂತೆಯೇ ಇದೆ. ಉಳಿದ

ಮೂರುಚಿತ್ರಗಳು ನಮ್ಮ ಪ್ರಯಾಣದ ಸಮಯದಲ್ಲಿ  ಕಂಡ ಪ್ರಕೃತಿಯ ಕೆಲವು ಚಿತ್ರಗಳು. 

 

ಶನಿವಾರ, ಡಿಸೆಂಬರ್ 17, 2022

ನಾಯಿಬಂದಾವೋ ಬೆನ್ಹತ್ತಿ

ಪ್ರತಿದಿನ ಮುಂಜಾನೆ ಐದರಿಂದ ಐದೂವರೆಯ ಒಳಗೆ ನಾನು ವಾಯು ಸಂಚಾರಕ್ಕೆ ಹೊರಡುತ್ತೇನೆ.

ಕೆಲವೊಮ್ಮೆ ಐದಕ್ಕೆ ಮುಂಚೆಯೂ ಹೊರಬೀಳುವುದುಂಟು. ಈ ಡಿಸೆಂಬರ ತಿಂಗಳಿನಲ್ಲಿ ಆ

ಸಮಯದಲ್ಲಿ ಹೊರಗೆ ಇನ್ನೂ ಕತ್ತಲಿರುತ್ತದೆ. ಬೀದಿ ದೀಪಗಳು  ನನಗೆ ಹಾದಿ ತೋರುತ್ತವೆ.

ಚಳಿಯಿದ್ದರೆ ಯಾವುದಾದರೂ ಬೆಚ್ಚಗಿನ ಬಟ್ಟೆ ತೊಟ್ಟು ಮುಂಜಾನೆಯ ಅಹ್ಹ್ಲಾದಕರ ಹವೆಯಲ್ಲಿ

ಏನೋ ಚಿಂತಿಸುತ್ತಲೋ, ಅಥವಾ ಎಂಥದೋ ಶ್ಲೋಕವೋ, ಹಾಡೋ ಗುನುಗುತ್ತಲೋ, ಆಸುಪಾಸಿನ

ಪರಿವೆಯಿಲ್ಲದೆ ನಾನು ಹೆಜ್ಜೆ ಹಾಕುತ್ತಿರುತ್ತೇನೆ. 


ನನ್ನ ಸಂಚಾರಕ್ಕೆ ಮುದನೀಡುವ ಪರಿಸರವನ್ನು  ಸೃಷ್ಟಿಸಿರುವ ಭಗವಂತ, ನನ್ನ ಸಂತೋಷವನ್ನು

ಭಗ್ನಮಾಡಲು ಎರಡು ಸಂಗತಿಗಳ ಸೃಷ್ಟಿಮಾಡಿದ್ದಾನೆ. ಒಂದು, ಬೆಳಗಿನ ಶುದ್ಧ ಗಾಳಿಗೆ ತಮ್ಮ ದಟ್ಟ

ಹೊಗೆ ಬೆರಸಿ ಕಿರಿಕಿರಿ ಮಾಡುವ ವಾಹನಗಳು. ಎರಡನೆಯದು ಬೀದಿ ನಾಯಿಗಳು. ಬೆಳಗ್ಗೆ

ದಿನಪತ್ರಿಕೆ ಮತ್ತು ಹಾಲು ಸರಬರಾಜುಮಾಡುವ ದ್ವಿಚಕ್ರಿಗಳು ಸಂದಿಸಂದಿಗಳಲ್ಲೂ 

ಸುತ್ತಾಡುತ್ತಿರುತ್ತವೆ. ಜತೆಗೇ ತರಕಾರಿ ಮತ್ತಿತರ ನಿತ್ಯೋಪಯೋಗಿ ವಸ್ತುಗಳನ್ನು

ಸರಬರಾಜುಮಾಡುವ ಲಾರಿ, ರಿಕ್ಷಾಗಳು ಎಲ್ಲೆಡೆಯೂ ಎದುರಾಗುತ್ತವೆ. ಇವುಗಳಿಂದ

ಕಿರಿಕಿರಿಯಾಗುವುದು ನಿಜ. ಆದರೆ ಅವುಗಳಿಂದ ಯಾವುದೇ  ಹೆದರಿಕೆ, ಬೆದರಿಕೆ ಇಲ್ಲ. 


ಮತ್ತೆ ಬೀದಿನಾಯಿಗಳು. ನನ್ನ ಮಟ್ಟಿಗೆ ಹೇಳುವುದಾದರೆ ಬೀದಿನಾಯಿಗಳಿಂದ ಆಗುವ ತೊಂದರೆ

ಹೆಚ್ಚು. ಬೀದಿ ದೀಪ ತಾಗದಂಥ  ಯಾವುದೋ ವಾಹನದ ಕೆಳಗೋ, ಮರದ ಬುಡದಲ್ಲೋ,

ಗೋಡೆಯ ಪಕ್ಕದಲ್ಲೋ, ಕತ್ತಲ ಸಂದಿಯಲ್ಲಿ ನನ್ನ ಕಣ್ಣಿಗೆ ಬೀಳದೆ ಮಲಗಿರುವ ನಾಯಿಯೊಂದು

ಇದ್ದಕ್ಕಿದ್ದಂತೆ ಯಾವುದೋ ಆವೇಶಕ್ಕೊಳಗಾದಂತೆ ಗವ್ವೆಂದು ನನ್ನ ಮೇಲೆರಗಿ, ನನ್ನನ್ನು ನನ್ನ ಚಿಂತನೆಯ

ಆಕಾಶದಿಂದ ಭೂಮಿಗೆ ಎಳೆದು ಅಪ್ಪಳಿಸುತ್ತದೆ. ಗಾಬರಿಯಿಂದ ಮೈ ಬೆವರಿ, ನನ್ನ ಹೃದಯ

ಬಾಯಿಗೆ ಬರುತ್ತದೆ. 


ಅಷ್ಟೇಅಲ್ಲ, ಒಂದು ನಾಯಿ ಬೊಗಳಿದರೆ ಆ ಬೀದಿಯಲ್ಲಿನ ಉಳಿದ ನಾಯಿಗಳಷ್ಟೇ ಅಲ್ಲದೆ ಪಕ್ಕದ

ಬೀದಿಯ ನಾಯಿಗಳೂ ಎಚ್ಚೆತ್ತುಕೊಂಡು ನನ್ನ ಮೇಲೆ ಆಕ್ರಮಣಕ್ಕೆ ತಯಾರಾಗಿ, ಗುರುಗುಟ್ಟುತ್ತಾ

ನನ್ನ ಹಾದಿ ಕಾಯುತ್ತಾ ನಿಲ್ಲುತ್ತವೆ.  ನಾನು ನನ್ನ ಬಡಿದುಕೊಳ್ಳುವ ಹೃದಯವನ್ನು ಘಟ್ಟಿಯಾಗಿ

ಹಿಡಿದು, ಇಲ್ಲದ ಧೈರ್ಯ ತೋರುತ್ತಾ, ಕೈಯಲ್ಲಿ ಕೋಲಿದ್ದರೆ ಅದನ್ನು ಝಳಪಿಸಿ  ಹಿಂದೆ ಮುಂದೆ

ನಡೆದಾಡುತ್ತಾ ಹೇಗೋ ಮಾಡಿ ಆ ನಾಯಿಗಳ ಸೈನ್ಯದಿಂದ ಪಾರಾಗಿ ನಡೆಯಬೇಕಾಗುತ್ತದೆ.

ಹೀಗಾಗಿ ನನ್ನ ದೈನಂದಿನ ಜೀವನದ ಮೇಲೆ ಬಹಳವೇ ಪರಿಣಾಮ ಬೀರುವ ಪ್ರಾಣಿ ನಮ್ಮ ಬೀದಿ ನಾಯಿ. 


ಅನೇಕ ವರುಷಗಳ ಓಡಾಟದ ಅಭ್ಯಾಸದಿಂದ ನಾನು ನಾಯಿಗಳು ಇರಬಹುದಾದ ಸಾಧ್ಯತೆಯನ್ನು

ಗುರುತಿಸುವ ಪರಿಣಿತಿಯನ್ನು ಗಳಿಸಿಕೊಂಡು, ಅಂಥ ರಸ್ತೆಗಳನ್ನು ಬಿಟ್ಟು ಬೇರೆ ಕಡೆಗಳಲ್ಲಿ

ನಡೆದಾಡುವ ಅಭ್ಯಾಸವನ್ನು ಮಾಡಿಕೊಂಡಿದ್ದೇನೆ. ಆದರೂ ಒಂದೇ ದಾರಿಯಲ್ಲಿ ಸುತ್ತಿ ಸುತ್ತಿ

ಬೇಸತ್ತು ಒಮ್ಮೊಮ್ಮೆ ಹೊಸಬೀದಿಗಳನ್ನು ಹಿಡಿದು ನಡೆಯುವುದುಂಟು. ಅಥವಾ ನಮ್ಮೂರು ಬಿಟ್ಟು

ಬೇರೆ ಸ್ಥಳಗಳಲ್ಲಿ ಇರುವಾಗ ಪರಿಚಯವಿಲ್ಲದ ರಸ್ತೆಗಳಿಗೆ ಕಾಲಿಟ್ಟು ತೊಂದರೆಗೆ ಸಿಕ್ಕುವುದುಂಟು.

ಇಂದು ಮುಂಜಾನೆ ಅಂಥದೊಂದು ಮುಖಾಮುಖಿಯಲ್ಲಿ ನಾನು ಸಿಕ್ಕಿಕೊಳ್ಳಬೇಕಾಯಿತು. ಆ

ಪ್ರಸಂಗದಿಂದ ಪ್ರೇರಿತವಾದ ಪದ್ಯ ಈ ಕೆಳಗಿನದು. 



ಮುದದ ಮುಂಜಾವಿನ 

ಮಸುಕು ಬೆಳಕಿನಲ್ಲಿ 

ಮನ ಹರಿಯಬಿಟ್ಟು  

ಮೈಮರೆತು ನಡೆವಾಗ 


ಬೀದಿ ದೀಪದ 

ಕಿರಣ ತಾಗದ 

ಕತ್ತಲೆಯ ಮೂಲೆಯಿಂದ  

ಗವ್ವೆಂದು ಎಗರಿಬಂದು 


ಬೆಚ್ಚಿಬೀಳಿಸಿ ಬೆದರಿಸಿ

ಬಾಯ್ಬಿರಿದು ಹೆದರಿಸಿ 

ಬೊಗಳುತ್ತ ಹಿಂಬಾಲಿಸಿ 

ಚಳಿಯಲ್ಲೂ ಬೆವರಿಳಿಸುವ,  


ಬೀದಿ ಬೀದಿಗಳಲ್ಲಿ 

ಬೀಡು ಬಿಟ್ಟು 

ಭಿಡೆಯಿಲ್ಲದೆ 

ಬೆಳೆಯುತ್ತಿರುವ 


ಬೀದಿನಾಯಿಗಳ 

ಕಾರಣ, ಪ್ರೇರಣೆಯಿಂದ 

ಪ್ರ್ರಾಣತಳೆದ ಈ ಪದ್ಯ,

ಆ ಶ್ವಾನಗಳಿಗೇ ಸಮರ್ಪಣೆ  ! 


ಇದನ್ನು ಬರೆವಾಗ ಶಿಶುನಾಳ ಶರೀಫರ ನೆನಪಾಯಿತು. ಬೀದಿ ಬೀದಿ ತಿರುಗುವ ದಾಸರಾದ ಸಾಹೇಬರಿಗೂ  

ಸಾಕಷ್ಟು ಬೀದಿ ನಾಯಿಗಳ ಕಾಟದ ಅನುಭವವಿದ್ದಿರಬೇಕು. ಜತೆಗೇ, ನಾಯಿಕಾಟವನ್ನು  ಮೀರಿಸುವ 

ನರರ ಕಾಟ ಕೂಡ ! ಅದರಿಂದಲೇ ಅವರು ಹಾಡಿದರು  -  “ನಾಯಿಬಂದಾವೋ ಬೆನ್ಹತ್ತಿ, ನಾರಾಯಣ,

ನಾಯಿಬಂದಾವೋ ಬೆನ್ಹತ್ತಿ / ನಾಯಿಯಂದರೆ ನಾಯಿಯಲ್ಲ, ಮಾನವಜನ್ಮದ ಹೀನ ನಾಯಿ / ಜ್ಞಾನಾನಂದ

ತಿಳಿಯದಂಥ ಶ್ವಾನಾನಂದದೊಳು ದುಂಧೆ / ನಾಯಿಬಂದಾವೋ ಬೆನ್ಹತ್ತಿ  !” 


ನನ್ನ ಪುಣ್ಯ. ನನಗೆ ಅಂಥ ನರರ ಕಾಟವಿಲ್ಲ !! ಮೇಲೆ ಕಾಣಿಸಿದ ಪದವನ್ನು ಶ್ರೀ ಶಿವಮೊಗ್ಗ ಸುಬ್ಬಣ್ಣನವರು

ಹಾಡಿರುವ ಧಾಟಿ ನನಗೆ ಬಹಳ ಹಿಡಿಸಿತು. ಶರೀಫ ಸಾಹೇಬರ ಪದಗಳ ವಿವರಣೆ ಸುಲಭವಲ್ಲ.

ತಿಳಿದವರು ತಮ್ಮ ತಿಳುವಳಿಕೆಗೆ ತಕ್ಕಂತೆ ಅದನ್ನು ವಿವರಿಸಬಹುದು. ಆಸಕ್ತಿಯಿದ್ದರೆ, ವಿವರಿಸುವ

ಪ್ರಯತ್ನಪಡಿ. ಹಾಗೆಯೇ ಇತರ ಪದಗಳನ್ನೂ ಕೇಳಿ ಅರ್ಥ ಹೊರಗೆಳೆಯುವ ಯತ್ನ ಮಾಡಿ.