ಶುಕ್ರವಾರ, ನವೆಂಬರ್ 13, 2020

ನೀರು ತುಂಬುವ ಹಬ್ಬ (ಒಂದು ಸಣ್ಣ ಲಘುಬರಹ)

ನಾಳೆ ನರಕ ಚತುರ್ದಶಿ. ಅದರ ಹಿಂದಿನ ದಿನ, ತ್ರಯೋದಶಿಯ ಸಂಜೆ ‘ನೀರುತುಂಬುವ ಹಬ್ಬ’ ಎಂದು

ಆಚರಿಸುವುದು ಪದ್ಧತಿ. ನನ್ನ ಚಿಕ್ಕಂದಿನಲ್ಲಿ, ಬೆಂಗಳೂರಿನ ನಮ್ಮ ಮನೆಯಲ್ಲಿ, ನಮ್ಮಮ್ಮ, ಹಂಡೆ,

ಬಿಂದಿಗೆಗಳಲ್ಲಿ ನೀರು ತುಂಬಿಸಿಟ್ಟು, ಅದರ ಮುಂದೆ ರಂಗೋಲಿ ಬಿಡಿಸಿ, ಅವುಗಳಿಗೆ ಅರಿಶಿನ ಕುಂಕುಮವಿಟ್ಟು 

ಪೂಜೆ ಮಾಡುತ್ತಿದ್ದರು. 


ನಾನು ಬೆಂಗಳೂರು ಬಿಟ್ಟು ನಲವತ್ತು ವರುಷಗಳೇ ಆಗಿಹೋದವು.  ಹಿಂದೆ ಬೆಂಗಳೂರಿನ ನಮ್ಮ ಮನೆಯಲ್ಲಿದ್ದ

ಎಲ್ಲಾ ನಲ್ಲಿಗಳಲ್ಲೂ ನೀರು ಬರುತ್ತಿದ್ದದ್ದು ನನಗೆ ಚೆನ್ನಾಗಿ ನೆನಪಿದೆ. ಆದರೆ ನನ್ನ ವಿದ್ಯಾಭ್ಯಾಸ ಮುಗಿಯುವ

ಹೊತ್ತಿಗೆ ನಲ್ಲಿಯಿಂದ ಸುರಿಯುತ್ತಿದ್ದ ನೀರು, ನಿಧಾನವಾಗಿ ಬೀಳಲು ತೊಡಗಿ, ದಿನೇ ದಿನೇ ಕ್ಷೀಣಿಸಿ, ಕೊನೆಗೆ

ದಾರದಂತೆ ತೆಳ್ಳಗೆ ಅಲುಗಾಡುತ್ತಿತ್ತು ಅಷ್ಟೇ. ಮುಂದಿನ ದಿನಗಳಲ್ಲಿ ನೀರಿನ ಧಾರೆ ಪೂರ್ತಿ ನಿಂತು, ನಲ್ಲಿ

ಒಣಗಿ ಅದರಿಂದ ಬರಿಯ ಗಾಳಿಮಾತ್ರ ಆಗಾಗ ಹೊರಬೀಳುತ್ತಿತ್ತು. 


ಶ್ರೀ ಕೈಲಾಸಂ ಅವರ ‘ಕೋಳಿಕೆ ರಂಗ’ನ ಪರಿಚಯ ಇರುವವರಿಗೆ 


‘ಎತ್ತಿಲ್ಲದ್ ಬಂಡಿಗಳು 

ಎಣ್ಣೆ ಇಲ್ಲದ್  ದೀಪಗಳು 

ತುಂಬಿದ್ ಮೈಸೂರಿಗ್ಬಂದೆ’ 

ಎಂಬ ಸಾಲುಗಳು ನೆನಪಿರಬಹುದು.  


ತನ್ನ ಹಳ್ಳಿಯಿಂದ ಮೈಸೂರು ಶಹರಿಗೆ  ಬಂದ ಕೋಳೀಕೇರಂಗ ಅಲ್ಲಿಯ ಮೋಟಾರುಕಾರು,

ವಿದ್ಯುತ್ ದೀಪಗಳನ್ನು ಕಂಡು ಬೆರಗಾಗಿ ನುಡಿದ ಮಾತು ಅದು.  


ಹಾಗೆಯೇ, ಬೆಂಗಳೂರಿನ ವಾಸಿಯಾಗಿದ್ದ ನಾನು,

‘ನೀರಿಲ್ಲದ್ ನಲ್ಲಿಗಳು, 

ದೀಪ ಇಲ್ಲದ್ ಕಂಬಗಳು, 

ತುಂಬಿದ್ ಬೆಂಗ್ಳೂರ್ನಲ್ಲಿದ್ದೆ ’ ಎಂದು ಹಾಡಬಹುದೇನೋ  !  


ನಮ್ಮ ರಸ್ತೆಯ ಇನ್ನೊಂದು  ಬದಿಯಿಂದ ಸಂಪರ್ಕ ಪಡೆದಿದ್ದ ನಮ್ಮ ಎದುರು ಮನೆಯಲ್ಲಿ ನೀರು ಬರುತ್ತಿತ್ತು.

ನಮ್ಮ ನಲ್ಲಿಗಳು ಒಣಗಿಹೋದಮೇಲೆ ನಮ್ಮ ಎದುರು ಮನೆಯವರ ಔದಾರ್ಯದಿಂದ ನಾವು ಅನೇಕ 

ವರುಷಗಳ ಕಾಲ ಅವರ ಅಂಗಳದ ನಲ್ಲಿಯಿಂದ ನೀರು ಹೊತ್ತು ತಂದು ನಮ್ಮ ಮನೆಯ ಹಂಡೆ, ಬಿಂದಿಗೆ,

ಕೊಳದಪ್ಪಲೆ,ಡಬರಿ, ಚೊಂಬು, ಕೊನೆಗೆ ಲೋಟ ಬಟ್ಟಲುಗಳಲ್ಲೂ ನೀರು ತುಂಬಿಸಿ ಇಟ್ಟುಕೊಳ್ಳುತ್ತಿದ್ದೆವು.

ತುಂಬಿದ್ದ ನೀರಿನಲ್ಲಿ ದಿನಕಳೆದು ಮರುದಿನ ಮತ್ತೆ ಯಥಾರೀತಿ ನೀರು ಹೊತ್ತು ತಂದು ತುಂಬುವುದು !

ಹಾಗಾಗಿ, ನಮ್ಮ ಮನೆಯಲ್ಲಿ ಪ್ರತಿದಿನ ನೀರು ತುಂಬುವ ಹಬ್ಬ !


ಆ ಸಮಯದಲ್ಲಿ ನನ್ನ ತಂಗಿಯ ಮದುವೆಯಾಯಿತು. ಮೊದಲ ದೀಪಾವಳಿಗೆಂದು ನಮ್ಮ ಭಾವನವರು

ನಮ್ಮ ಮನೆಗೆ  ಬಂದಾಗ ಕೆ ಎಸ ನರಸಿಂಹಸ್ವಾಮಿಯವರ ‘ರಾಯರು ಬಂದರು ಮಾವನ ಮನೆಗೆ’ ಪದ್ಯದಂತೆ

  “ಬಾಗಿಲ ಬಳಿ ಕಾಲಿಗೆ ಬಿಸಿ ನೀರಿನ ತಂಬಿಗೆ” ಬರುವ ಬದಲು ಬಾಗಿಲ ಬಳಿ ಅಳಿಯಂದಿರ ಕೈಗೂ ಒಂದು

ಖಾಲಿ ಬಕೆಟ್ ಬಂದಿತ್ತು ! ಅಂದು ಸಂಜೆ ಹೊಸ ಅಳಿಯರಿಂದಲೂ  ಭರ್ಜರಿ ‘ನೀರು ತುಂಬುವ ಹಬ್ಬ’

ಮಾಡಿಸಿದೆವು. 


ಪ್ರತಿವರುಷ ನೀರು ತುಂಬುವ ಹಬ್ಬ ಬಂದಾಗ ನನಗೆ ನಮ್ಮ ಬೆಂಗಳೂರಿನ ನೀರಿಲ್ಲದ ಹಬ್ಬದ  ನೆನಪಾಗುತ್ತದೆ .

ಭಗವಂತನ ಕೃಪೆಯಿಂದ ಗೋವಾದ ನಮ್ಮೂರಿನಲ್ಲಿ ಪ್ರತಿವರುಷ ಮಳೆಯಾಗಿ, ನಲ್ಲಿಯಲ್ಲಿ ನೀರು ಬರುತ್ತಿದೆ.

ನನ್ನಾಕೆ ಒಂದೆರಡು ಪಾತ್ರೆಗಳಿಗೆ ಅರಿಶಿನ ಕುಂಕುಮ ಹಚ್ಚಿ ನೀರು ತುಂಬುತ್ತಾಳೆ. ಆ ಕಾರ್ಯಕ್ರಮ ಇಂದು

ಸಂಜೆಯೂ ನೆರವೇರಲಿದೆ. 


ಈ ಸಂಧರ್ಭದಲ್ಲಿ, ಪರಮಾತ್ಮನ ಕೃಪೆ ಹೀಗೆಯೇ ನಮ್ಮ ಮೇಲೆ ಮತ್ತು ನಿಮ್ಮೆಲ್ಲರ ಮೇಲೆ ಸದಾ ಇರಲೆಂದು

ಹಾರೈಸುತ್ತೇನೆ.  ಸ್ನೇಹಿತರಿಗೆಲ್ಲಾ  ದೀಪಾವಳಿಯ ಶುಭಾಶಯಗಳು.  




ಶನಿವಾರ, ಆಗಸ್ಟ್ 15, 2020

ಇಂದು ಮುಂಜಾನೆಯ ಮಾತು.


Add caption



ದುಗುಡ ತುಂಬಿದಂಥ ಮುಂಜಾವು. ಓತ ಪ್ರೋತ ಸುರಿಯುತ್ತಿದೆ ಮಳೆ. ಏಳಾದರೂ ಸೂರ್ಯನ

ಸುಳಿವೇ ಇಲ್ಲ. ಈಚೆಗೆ ಅವನು ಹೀಗೆಯೇ. ಮನಬಂದರೆ, ದಿನದಲ್ಲೊಮ್ಮೆ ಯಾವಾಗಲೋ ಮನಬಂದಾಗ

ನಮ್ಮ ಮುಂದೆ ಸುಳಿದಾಡಿ, ಬದುಕನ್ನಿಷ್ಟು ಬೆಳಕುಮಾಡಿ, ಮತ್ತೆ ಮರೆಯಾಗಿಬಿಡುತ್ತಾನೆ.  

ನಮ್ಮ ಮನೆಯ ಬೆಳೆದ ಮಕ್ಕಳಂತೆ ! 

ಮೋಡಗಳೂ ಮುಗಿಲ ಪೂರ್ತಿ ಹರಡಿಕೊಂಡು ಮಲಗಿಬಿಟ್ಟಿವೆ. ಎರಡುತಿಂಗಳಿಂದ ನಡೆದು ನಡೆದು

ಸುಸ್ತಾಯಿತೇನೋ ! ತಾವು ತುಂಬಿಕೊಂಡ ನೀರೆಲ್ಲಾ ಒಂದೇಕಡೆ ಸುರಿದುಹೋಗುತ್ತಿದೆಯೆಂಬ ಪರಿವೆಯೂ

ಇಲ್ಲ ಅವಕ್ಕೆ ! 

ಎದ್ದು ಹೊರಬಿದ್ದವನು ನಾನೊಬ್ಬನೇ ಎನಿಸುತ್ತದೆ. ನನ್ನ ನಿತ್ಯಸಂಚಾರದ ಚಟದ ದಾಸ. 

ನನ್ನ ಜತೆಗೆ, ಅಲ್ಲಿ ದೂರದ ಮರವೊಂದರಮೇಲೆ, ಪೂರ್ತಿ ತೋಯ್ದು ತೊಪ್ಪೆಯಾಗಿ, ಕಪ್ಪುಕಲೆಯಾಗಿ

ಕುಳಿತಿರುವ ಕಾಗೆಯೊಂದೇ ! ಅದರದೇನು ಸಂಕಟವೋ ದೇವರೇಬಲ್ಲ. 

ಹಾಗೆ ನೋಡಿದರೆ, ಕಪ್ಪು ಛತ್ರಿಕವುಚಿಕೊಂಡು ನಡೆಯುತ್ತಿರುವ ನಾನೂ ರಸ್ತೆಯಮೇಲೆ ಒಂದು ಕಪ್ಪು ಕಲೆಯೇ.  

ನನ್ನನ್ನು ಕಂಡವರು, ‘ಈ ಮಳೆಯಲ್ಲಿ ಹೊರಬಿದ್ದ ಈ ಮನುಷ್ಯನದು ಅದೇನು ಸಂಕಟವೋ,


ಹುಚ್ಚೋ’ ಎನ್ನುವರೇನೋ !   


ಶುಕ್ರವಾರ, ಆಗಸ್ಟ್ 14, 2020

ಕೋತಿ ಕೆಲಸ ಹಾಗೂ ಪ್ರಾರಬ್ಧ ಕರ್ಮ.




ಯಾರಾದರೂ ತಮಗೆ ಸಂಭಂದವಿಲ್ಲದ ಅಥವಾ ಅಗತ್ಯವಿಲ್ಲದ ಯಾವುದಾದರೂ ಇಲ್ಲ ಸಲ್ಲದ

ಕೆಲಸಕ್ಕೆ ಕೈಹಾಕಿ ಆ ಮೂಲಕ ಪದಾರ್ಥಗಳನ್ನು ಅಥವಾ ವಸ್ತುಗಳನ್ನು  ಹಾಳುಮಾಡಿದಾಗ ಅಥವಾ

ಕಾರಣವಿಲ್ಲದೆ ‘ಕೈಕಡಿತದಿಂದ’ ಏನಾದರೂ ಮಾಡಿ ಏನನ್ನಾದರೂ ಹಾಳುಗೆಡವಿದಾಗ ಅಂಥದನ್ನು

ನಮ್ಮಲ್ಲಿ ‘ಕೋತಿ ಕೆಲಸ’ ಎನ್ನುತ್ತೇವೆ.  ಉದಾ : ಏನೋ ನೋಡುತ್ತಲೋ, ಮಾತನಾಡುತ್ತಲೋ ನಿಂತಿದ್ದಾಗ

ಕೈಗೆ ಸಿಕ್ಕಿದ ಕಡ್ಡಿಯನ್ನು ಪಕ್ಕದ ಕಪಾಟಿನ ಬಾಗಿಲ ಬೀಗದ ತೂತಿನೊಳಗೆ ಹಾಕಿ ತಿರುಗಿಸುತ್ತಾ

ಅದರೊಳಗೆ ಕಡ್ಡಿಯನ್ನು ಮುರಿದುಬಿಡುವುದು. ಕುಳಿತು ಮಾತನಾಡುತ್ತಿದ್ದಾಗ ಪಕ್ಕದಲ್ಲಿದ್ದ ಕಾಗದ ತುಂಡನ್ನು

ಮಡಿಸಿ, ಬಿಡಿಸಿ ಮಾಡುತ್ತಾ, ಅದನ್ನು ಹರಿದು, ನಂತರ ಅದು ಯಾವುದೋ ಮುಖ್ಯವಾದ ಪತ್ರವೋ,

ರಸೀತಿಯೋ ಎಂದು ತಿಳಿದು ಪರಿತಪಿಸುವುದು, ಇಂಥ ಕೆಲಸಗಳು. ಮಕ್ಕಳು, ಮಕ್ಕಳು ಮಾತ್ರವೇಕೆ

ದೊಡ್ಡವರೂ ಸಹ, ಅಂಥ ಯಾವುದಾದರೂ ಕೆಲಸದಲ್ಲಿ ನಿರತರಾದದ್ದನ್ನು ಕಂಡಾಗ  “ಸುಮ್ಮನೆ

ಇರಬಾರದೇ? ಕೋತಿ ಕೆಲಸ ಮಾಡುವುದೇಕೆ?” ಎಂಬ ಟೀಕೆ ನಮ್ಮ ಮನೆಯಲ್ಲಿ ಯಾರಿಂದಲಾದರೂ

ಬರುತ್ತದೆ.  


ಅಂತೆಯೇ, ನಮ್ಮ ಪಾತ್ರವೇನು ಇಲ್ಲದ, ನಾವು ಯಾವ ರೀತಿಯಲ್ಲೂ  ಅದಕ್ಕೆ ಕಾರಣರಲ್ಲದ

ಯಾವುದಾದರೂ ಘಟನೆ ಘಟಿಸಿ ಅದರಿಂದ ನಮಗೆ  ತೊಂದರೆಯಾದಾಗ ಅದನ್ನು ‘ಪ್ರಾರಬ್ಧ ಕರ್ಮ’

ಎನ್ನುತ್ತೇವೆ.  ನಮ್ಮ ಪುರಾಣಗಳ ಪ್ರಕಾರ  ‘ಪ್ರಾರಬ್ಧ ಕರ್ಮ’ ಎಂಬುದಕ್ಕೆ ಬೇರೆಯೇ ಅರ್ಥವಿದೆ. ನಾನು ಇಲ್ಲಿ

ಸಾಮಾನ್ಯ ಬಳಕೆಯ ಬಗ್ಗೆ ಹೇಳುತ್ತಿದ್ದೇನೆ. ಇವೆರಡೂ ಪದಗಳ ಬಳಕೆಯನ್ನು ಉದಾಹರಣೆ ಮೂಲಕ ತಿಳಿಸುವ

ಒಂದು ಪ್ರಸಂಗ ಮೊನ್ನೆ ಬಂದಿತು. 


ಕೋತಿಗಳು ನಮ್ಮ ಅಂಗಳಕ್ಕೆ ಬರುವುದು ಹೊಸದೇನಲ್ಲ. ಎರಡುಮೂರು ತಿಂಗಳಿಗೊಮ್ಮೆ ಒಂದು ಕೋತಿಗಳ

ಗುಂಪು ಬಂದು ಧಾಳಿ ಮಾಡಿ ನಮ್ಮ ಅಂಗಳದ ಗಿಡಮರಗಳ ರೆಂಬೆ ಕೊಂಬೆ ಗಳನ್ನು ಮುರಿದು, ಎಲೆ, ಚಿಗುರು,

ಹೀಚು, ಕಾಯಿಗಳನ್ನೆಲ್ಲಾ ಕಿತ್ತು, ಸ್ವಲ್ಪವನ್ನು  ತಿಂದು, ಉಳಿದದ್ದನ್ನು  ಚೆಲ್ಲಾಡಿ, ತಮ್ಮ ದಾರಿ ಹಿಡಿದು

ಹೊರಟುಹೋಗುತ್ತವೆ. ಇದರ ಬಗ್ಗೆ ನನ್ನ ಆಕ್ಷೇಪಣೆ ಏನಿಲ್ಲ. ಕೋತಿಗಳು ಬದುಕಬೇಕಾಗಿರುವುದೆ ಹಾಗೆ.

ಮರ್ಯಾದಾ ಪುರುಷೋತ್ತಮ ಶ್ರೀರಾಮನ ವಾನರ ಸೈನ್ಯವೇ ಲಂಕೆಯಿಂದ ಹಿಂದಿರುಗುವಾಗ, ತಮಗೆ ಆಹಾರ

ಸ್ವೀಕರಿಸಲು ಆಹ್ವಾನ ನೀಡಿದ  ಯಾರದೋ ವನವನ್ನು ಹೊಕ್ಕು, ಹಣ್ಣು ಕಾಯಿಗಳನ್ನು ತಿಂದು ಹೊಟ್ಟೆ

ತುಂಬಿಕೊಂಡು, ಅಷ್ಟಕ್ಕೆ ಬಿಡದೆ, ಉಳಿದ ವನವನ್ನು ಕಿತ್ತು ತೂರಾಡಿ ಧ್ವಂಸಮಾಡಿ ಬಂದವೆಂದು ಓದಿದ್ದೇನೆ.

‘ರಾಮಸೇನಾ’ ಎನ್ನುವ ವಾನರಗಳೆಲ್ಲಾ ಹಾಗೆಯೇ ಎಂದು ಹೇಳುವ ಉಧ್ಧಟತನವನ್ನು ನಾನು ಮಾಡಲಾರೆ.

ಆದರೆ ಆ ವಾನರ ಸೈನ್ಯದ ಕತೆಯೇ ಹಾಗಾದರೆ ಇನ್ನು ನಮ್ಮ ನಾಡಿನ ಕೋತಿಗಳ ಕಥೆ ಕೇಳಬೇಕೆ ?  


ಮೊನ್ನೆ  ಮಧ್ಯಾಹ್ನ ಮಹಡಿಯಮೇಲೆ ಕೋಣೆಯಲ್ಲಿ ಕೂತು ಏನೋ ಓದುತ್ತಿದ್ದಾಗ ಹೊರಗಡೆ ಸದ್ದಾಯಿತು.

ಕಿಟಕಿಯಿಂದ ಇಣುಕಿದಾಗ ಪಕ್ಕದ ಮನೆಯ ಬಾಲ್ಕನಿಯ ಮೇಲೆ ಎರಡು ಮಂಗಗಳು ಕಾಣಿಸಿದವು.

ಅದರಲ್ಲೊಂದು ಮಂಗ ಬಾಲ್ಕನಿಯ ಮೇಲಿಂದ ಅವರ ಅಂಗಳದಲ್ಲಿದ್ದ ಬಾಳೆಗಿಡಕ್ಕೆ ಹಾರಿತು. ಗೊನೆಯ

ಭಾರದಿಂದ ಆಗಲೇ ಬಗ್ಗಿದ್ದ ಬಾಳೆಗಿಡ, ಮಂಗನ ಭಾರಕ್ಕೆ ಮುರಿದು ನಮ್ಮ ಕಂಪೌಂಡಿನ ಮೇಲೆ ಬಿತ್ತು.

ಎರಡೂ ಕೋತಿಗಳು ಬಿದ್ದ ಗಿಡದಿಂದ ಎರಡೆರಡು ಬಾಳೆಯ ಕಾಯಿಗಳನ್ನು ಮುರಿದುಕೊಂಡು ಕಚ್ಚಿ ರುಚಿ

ನೋಡಿ, ಬಹುಶಃ ರುಚಿ ಸರಿಬರದೆ, ಅದನ್ನು ಬಿಸುಟು, ಪಕ್ಕದಲ್ಲಿದ್ದ ನಮ್ಮ ಸೀಬೆಗಿಡಕ್ಕೆ ಏರಿದವು.

ಬಲಿತು ಹಣ್ಣಾಗುತ್ತಿದ್ದ ಕಾಯಿಗಳೆರಡನ್ನು ಕಿತ್ತು  ತಿನ್ನುತ್ತಾ ಅದರ ಬದಿಯಲ್ಲಿದ್ದ ಮಾವಿನ ಮರಕ್ಕೆ ಹಾರಿ

ಕುಳಿತವು. ಆ ಹೊತ್ತಿಗೆ ಕಿಟಕಿಯಲ್ಲಿ ನನ್ನನ್ನು ಕಂಡು ಹಲ್ಲುಕಿರಿದು, ಗುರೆ್ರಂದು ಬೆದರಿಸಿ, ಮಾಳಿಗೆಯ

ಮೇಲಕ್ಕೆ ಹತ್ತಿ ನನಗೆ ಕಾಣದಾದವು. ಮತ್ಯಾವುದೋ ಕೆಲಸದಲ್ಲಿ ಮಗ್ನನಾದ ನನಗೆ ಕೋತಿಗಳ

ವಿಷಯ ಮರೆತೇ ಹೋಯಿತು.


ಒಂದೆರಡು ಘಂಟೆಗಳ ನಂತರ ಏನೋ ಕೆಲಸಕ್ಕೆಂದು ಹೊರಹೋದವನು ವಾಪಸು ಬಂದಾಗ ಮನೆಯ

ತಾರಸಿಯಿಂದ ಕೆಳಕ್ಕೆ ನೀರಿಳಿಯುತ್ತಿದ್ದುದು ಕಾಣಿಸಿತು. ಮಳೆಯಿಲ್ಲದ ಸಮಯದಲ್ಲಿ  ಹೀಗೆ ನೀರು ಸುರಿದರೆ

ಸಾಮಾನ್ಯವಾಗಿ ತಾರಸಿ ಮೇಲಿರುವ ನೀರಿನ ತೊಟ್ಟಿ ತುಂಬಿಕೊಂಡು, ಹೆಚ್ಚಾದ ನೀರು ಹೊರಗೆ ಬೀಳುತ್ತಿದೆಯೆಂದು

ಅರ್ಥ. ಆದರೆ ಅದು ನಲ್ಲಿಯಲ್ಲಿ ನೀರು ಬರುವ ಸಮಯವಲ್ಲವಾದ್ದರಿಂದ, ಅನುಮಾನ ಬಂದು,

ಏನಾಗಿದೆಯೆಂದು ತಿಳಿಯಲು ತಾರಸಿಯ ಮೇಲಕ್ಕೆ ಹತ್ತಿದೆ. ನಮ್ಮ ತಾರಸಿಯ ಮೇಲೆ ನೀರಿನ

ಟಾಕಿಯೊಂದಿಗೆ ಸೌರಶಕ್ತಿಯಿಂದ  ನೀರು ಬಿಸಿಮಾಡುವ ಉಪಕರಣವೂ ಇದೆ. ಅದರಿಂದ  ಬಿಸಿನೀರು

ಹೊರಗೆ ಬರುವ ಕೊಳವೆ ಮುರಿದು ನೀರು ಬುಗ್ಗೆ ಬುಗ್ಗೆ ಯಾಗಿ ಹೊರಗೆ ಸುರಿಯುತ್ತಿತ್ತು. ಅದು ಹೇಗೆ ಮುರಿಯಿತೆಂದು

ತಿಳಿಯದೆ ಅತ್ತಿತ್ತ ನೋಡಿದಾಗ ಪಕ್ಕದ ಮನೆಯ ಎರಡನೇ ಮಜಲಿನ ಮೇಲೆ ಕುಳಿತು ನೀರು ಹೊರಹೊಮ್ಮುತ್ತಿದ್ದ

ದೃಶ್ಯವನ್ನು ನೋಡಿ ಸಂತೋಷಪಡುತ್ತಿದ್ದ ಮಂಗ ಕಣ್ಣಿಗೆ ಬಿತ್ತು. ಅದರ ಕುಚೇಷ್ಟೆಯನ್ನು  ಕಂಡು ಅಸಾಧ್ಯ ಸಿಟ್ಟು

ಬಂದರೂ ಸಹ, ಅದಕ್ಕೆ ನಾನು ಏನೂ ಮಾಡುವಂತೆ ಇರದಿದ್ದ ಕಾರಣ, ಮುರಿದು ಕೆಳಗೆ ಬಿದ್ದಿದ್ದ ಕೊಳವೆಯನ್ನು

ಕೈಗೆತ್ತಿಕೊಂಡು ಅದರ ಕಡೆಗೆ ಬೀಸುವ ನಟನೆ ಮಾಡಿದೆ. ನನ್ನಂಥವರು ಅದೆಷ್ಟು ಜನರನ್ನು ಕಂಡಿದೆಯೋ ಆ

ಮಂಗ ! ನನ್ನಿಂದ ಏನೂ ಆಗದೆಂದು ಅದಕ್ಕೆ ಚೆನ್ನಾಗಿ ಗೊತ್ತು. ನನ್ನ ಸಮಾಧಾನಕ್ಕೆಂಬಂತೆ  ಎರಡು ಹೆಜ್ಜೆ ಹಿಂದೆ

ಸರಿದು, ಮತ್ತೆ ನನ್ನೆಡೆ ತಿರುಗಿ ಅಣಕಿಸಿ, ಹಲ್ಲುಕಿರಿದು, ಗುರ ಗುಟ್ಟಿ ಓಡಿಹೋಯಿತು. ಮುರಿದ ಕೊಳವೆ,

ಮಂಗನದೇ ಕೆಲಸವೆಂದು ಗೊತ್ತಾಯಿತು. 


ಇಲ್ಲಿಯವರೆಗೂ ಸುಮ್ಮನೆ ನಡೆದ  ವಿಷಯ ಮಾತ್ರ  ತಿಳಿಸಿದೆ. ಇದು ಬರಿಯ ಒಂದು ನೀರಿನ ಕೊಳವೆ

ಮುರಿದು ಸರಿಪಡಿಸಿದ ಕೆಲಸವಾಗಿ ಮುಗಿಯಲಿಲ್ಲ.  ಆದಿನ ಮನೆಯಲ್ಲಿ ಏನೋ ವಿಶೇಷವಿದ್ದ ಕಾರಣ ಕೆಲವು

ಅತಿಥಿಗಳು ಮನೆಗೆ ಬರುವವರಿದ್ದರು. ನನ್ನ ಪತ್ನಿ ಅವರ ಉಪಾಹಾರದ ತಯಾರಿಯಲ್ಲಿದ್ದಂತೆ ನೀರು

ಖಾಲಿಯಾಗಿ ನಲ್ಲಿ ಗೊರ ಗೊರ ಎಂದುಬಿಟ್ಟಿತು. ಆಕೆಗೆ ಕೊಳವೆ ಮುರಿದಿದ್ದ ವಿಷಯ ತಿಳಿದಿರಲಿಲ್ಲವಾದ್ದರಿಂದ,

ತಾರಸಿ ಮೇಲಿನ ತೊಟ್ಟಿಯಲ್ಲಿ ನೀರು ಖಾಲಿಯಾಯಿತೆಂದುಕೊಂಡು ಕೆಳಗೆ ನೀರು ಸಂಗ್ರಹ ವಾಗಿದ್ದ ಇನ್ನೊಂದು

ತೊಟ್ಟಿಯಿಂದ ನೀರನ್ನು ಮೇಲಕ್ಕೆ ಪಂಪ್ ಮಾಡಿದಳು. ಮೇಲೇರಿದ ನೀರು, ಮುರಿದ ಕೊಳವೆಯಿಂದ ಮತ್ತೆ 

ಹೊರಹರಿದು, ಮೇಲಿನ, ಕೆಳಗಿನ, ಎರಡೂ ನೀರಿನ ತೊಟ್ಟಿಗಳು ಖಾಲಿಯಾಗುವುದರಲ್ಲಿದ್ದವು. ಆ

ಸಮಯದಲ್ಲೇ ನಾನು ಅದನ್ನು ಕಂಡಿದ್ದು. ಕೊನೆಗೆ ಪಕ್ಕದ ಮನೆಯಿಂದ ಬಕೆಟ್ಟುಗಳನ್ನೂ ನೀರನ್ನೂ ಕೇಳಿ

ಪಡೆದು ಅಂದಿನ ಕೆಲಸವನ್ನು ಸಾಗಹಾಕಿದ್ದಾಯಿತು.   


ಮುಂದಿನದು ಗೊತ್ತೇ ಇದೆಯಲ್ಲ, ಮಾರನೆಯ ದಿನ ಗಡಿಬಿಡಿಯಲ್ಲಿ ನಲ್ಲಿ ಕೆಲಸದವನನ್ನು ಕರೆದು, ಐನೂರು

ರೂಪಾಯಿ ಖರ್ಚುಮಾಡಿ, ಮುರಿದ ಕೊಳವೆಯ ರಿಪೇರಿ ಮಾಡಿಸಿದ್ದಾಯಿತು. ಏನೂ ಕಾರಣವಿಲ್ಲದೆ, ನನ್ನ

ತಪ್ಪೇನೂ ಇಲ್ಲದೆ, ನನಗೆ ವೃಥಾ ಶ್ರಮ ಮತ್ತು  ಖರ್ಚು. ಅದಕ್ಕೆ ಮಿಗಿಲಾಗಿ, ಏನೆಲ್ಲಾ ಸುವ್ಯವಸ್ಥೆ

ಮಾಡಿಟ್ಟುಕೊಂಡಿದ್ದರೂ ಬೇಕಾದ ಸಮಯದಲ್ಲಿ ಅವೆಲ್ಲ ಕೆಲಸಕ್ಕೆ ಬಾರದಂತಾಗಿ ಅವ್ಯವಸ್ಥೆ ಹಾಗೂ

ಪರದಾಟವಾಯಿತು. 


ಈಗ ನೋಡಿ, ಆ ಕೋತಿ ನಮ್ಮ ಆವರಣಕ್ಕೆ ಬಂದದ್ದು ಆಹಾರ ಹುಡುಕಿಕೊಂಡು. ಅದಕ್ಕೆ ಬೇಕಾದ ಆಹಾರ

ಸಿಕ್ಕಿತ್ತು ಕೂಡ. ತನ್ನ ಆಹಾರ ದೊರಕಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದ ಕೋತಿಯಿಂದ, ಆ ಕಾರ್ಯದ

ಸಂಭಂದದಲ್ಲಿ, ನನ್ನ ತೋಟದ ಇತರ ಗಿಡಮರಗಳಿಗೆ ಆಗಿದ್ದ ವಿಧ್ವಂಸಕ ಕಾರ್ಯಕ್ಕೆ ನನ್ನ ಆಕ್ಷೇಪಣೆ ಇರಲಿಲ್ಲ.

ಆದರೆ ತನ್ನ ಹೊಟ್ಟೆ ತುಂಬಿಸಿಕೊಂಡು ತನ್ನಪಾಡಿಗೆ ತಾನು ತನ್ನ ಜಾಗಕ್ಕೆ ವಾಪಸುಹೋಗುವ ಬದಲು ಅದು

ಮಾಡಿದ್ದೇನು?  ತನ್ನ ದಾರಿಬಿಟ್ಟು, ತಾರಸಿಯಮೇಲೇರಿ, ತನಗೆ ಯಾವ ರೀತಿಯಲ್ಲೂ ಸಂಭಂದವೇ ಇಲ್ಲದಿದ್ದ

ನೀರಿನ ಕೊಳವೆಯನ್ನು ಹಿಡಿದು ನೇತಾಡಿ, ಎಗರಾಡಿ, ಅದನ್ನು ಮುರಿದಿಟ್ಟು  ಹೋಯಿತು. ಇಂಥ ಕೆಲಸಗಳನ್ನೇ

‘ಕೋತಿಕೆಲಸ’ ಎನ್ನುವುದಲ್ಲವೇ ? 


ಈ ‘ಕೋತಿಕೆಲಸ’ದ ಬಗೆಗೆ  ಬರೆಯಬೇಕೆಂದು ಬರಹ ಪ್ರಾರಂಭಮಾಡಿದ್ದ ಸಮಯದಲ್ಲಿ, ನನ್ನ ಪತ್ನಿ ನಮ್ಮ

ಪಕ್ಕದ ಮನೆಯಾಕೆಯೊಡನೆ  ನಡೆಸಿದ್ದ ಮಾತುಕತೆ ಕಿವಿಗೆ ಬಿತ್ತು. ನಮ್ಮ ಬಾಲ್ಕನಿಯಲ್ಲಿ ನಿಂತಿದ್ದ ನನ್ನ ಪತ್ನಿ

ತಮ್ಮ ಮನೆಯ  ಕಿಟಕಿಯಲ್ಲಿ ನಿಂತಿದ್ದ ಪಕ್ಕದ ಮನೆಯಾಕೆಯೊಡನೆ ಮಾತು ನಡೆಸಿದ್ದಳು. ಕೋತಿ ನಮ್ಮ

ನೀರಿನ ಕೊಳವೆಯನ್ನು ಮುರಿದದ್ದು ಮತ್ತೆ ಅದರ ನಂತರ ಆದ ತೊಂದರೆಗಳ  ಬಗೆಗೆ ಆಕೆಗೆ ವಿವರಿಸಿ 

“ ಗಿಡ, ಹಣ್ಣು, ಕಾಯಿ ಹಾಳಾದರೆ ಪರವಾಗಿಲ್ಲ ಬಿಡಿ, ಆದರೆ ಆ ಹಾಳು ಕೋತಿಗೆ ನಮ್ಮ ಪೈಪು ಮುರಿಯುವ

ಮನಸ್ಸೇಕೆ ಬಂತೋ ?” ಎಂದು ಉದ್ಗರಿಸಿ  “ಯಾರಿಗೆ ಗೊತ್ತು? ಒಟ್ಟಿನಲ್ಲಿ ನಮ್ಮ ‘ಪ್ರಾರಬ್ಧ ಕರ್ಮ’ ಅಷ್ಟೇ ”

ಎಂದು ಮಾತು ಮುಗಿಸಿದಳು. ನನ್ನ ‘ಕೋತಿಕೆಲಸ’ಕ್ಕೆ ‘ಪ್ರಾರಬ್ಧಕರ್ಮ’ದ  ಜತೆಸಿಕ್ಕಿತು !







ದೈತ್ಯರನ್ನು ಕಂಡಾಗ ಅನಿಸಿದ್ದು







 


ಮಳೆಗಾಲ ಬರುತ್ತಿದ್ದಂತೆ 

ಇವರು ಅವತರಿಸುತ್ತಾರೆ 

ಕಂಬವನ್ನೋ ಕಾಂಡವನ್ನೋ

ಆವರಿಸಿ ಬೆಳೆಯುತ್ತಾರೆ 

ಭೂತಾಕಾರ ತಳೆದು 

ಕೈಚಾಚಿ ನಿಲ್ಲುತ್ತಾರೆ 

ಕೆಲವು ತಿಂಗಳಕಾಲ 

ಕಂಗೊಳಿಸುತ್ತಾರೆ

ಕಾಲಮುಗಿದಂತೆ  

ನಿಂತಲ್ಲಿಯೇ ನಲುಗಿ 

ಕಂಡಂತೆಯೇ ಕರಗಿ 

ಕಾಣದಾಗುತ್ತಾರೆ 


ಪ್ರತಿ ವರುಷದ ನೆಂಟರು

ಈ ಹಚ್ಚ ಹಸಿರು ದೈತ್ಯರು !  


ಮಳೆಗಾಲ ಕಾಲಿಡುತ್ತಿದ್ದಂತೆಯೇ ನನ್ನ ಸುತ್ತಮುತ್ತಲಿನ ಗಿಡ, ಬಳ್ಳಿಗಳಿಗೆ ಹೊಸ ಚೈತನ್ಯ ಬಂದು

ಹುರುಪಿನಿಂದ ಬೆಳೆಯುತ್ತವೆ. ಅಕ್ಕ ಪಕ್ಕದಲ್ಲಿ ಸಿಕ್ಕ ಖಾಲಿಜಾಗವನ್ನೆಲ್ಲಾ ಆವರಿಸಿಕೊಳ್ಳುತ್ತವೆ.

ತಂತಿ, ಕಂಬ, ಮರಗಳನ್ನು ಆಧರಿಸಿದ  ಬಳ್ಳಿಗಳು ಆಕಾಶದತ್ತ ಪಸರಿಸುತ್ತವೆ. ದೊಡ್ಡ ದೊಡ್ಡ ಹಸಿರಿನ

ರಾಶಿಗಳಾಗುತ್ತವೆ. ಹಸಿರು ದೈತ್ಯರಾಗಿ ಅವತರಿಸುತ್ತವೆ. 


Add caption



Add caption


ಈ ಹಸಿರು ದೈತ್ಯರನ್ನು ನಾನು ಪ್ರತಿ ವರುಷ ನೋಡುತ್ತೇನೆ. ಅವರನ್ನು ನೋಡಿದಾಗಲೆಲ್ಲಾ ನನಗೆ ನಾವು

ದಸರಾ, ದೀಪಾವಳಿಯ ಸಮಯದಲ್ಲಿ ಕಟ್ಟಿ ನಿಲ್ಲಿಸುವ  ರಾವಣಾಸುರ, ನರಕಾಸುರರ ನೆನಪಾಗುತ್ತದೆ. 

ದುಷ್ಟತೆಯ ಪ್ರತೀಕವಾದ ಅಸುರರನ್ನು ಸುಡುವ ಮೂಲಕ ದುಷ್ಟತನವನ್ನು ನಾಶಮಾಡುತ್ತೇವೆಂಬ

ಭಾವನೆಯಿಂದ ನಾವು ಅವರ ಪ್ರತಿಕೃತಿಗಳನ್ನು ಸುಟ್ಟು ಭಸ್ಮಮಾಡುತ್ತೇವೆ.  

ಎಷ್ಟು ಪ್ರತಿಕೃತಿಗಳನ್ನು ಸುಟ್ಟರೂ ನಮ್ಮ ಮನದೊಳಗೆ  ಮನೆಮಾಡಿರುವ ಅಸುರರು ನಿರಂತರವಾಗಿ

ಬೆಳೆಯುತ್ತಲೇ ಇದ್ದಾರೆ. 

ನಮ್ಮ ಒಳಿತಿಗಾಗಿ ತಾವು ಬೆಳೆಯುವ ಹಸಿರುದೈತ್ಯರ ವಂಶ ಮಾತ್ರ ದಿನೇ ದಿನೇ ನಿರ್ವಂಶವಾಗುವತ್ತ ಸಾಗುತ್ತಿದೆ !

(ರಾವಣಾಸುರ, ನರಕಾಸುರರ ಚಿತ್ರಗಳು ನನ್ನವಲ್ಲ. ಅಂತರ್ಜಾಲದಿಂದ ಪಡೆದುಕೊಂಡದ್ದು)

ಸೋಮವಾರ, ಮೇ 4, 2020

ನಿಸ್ಸಾರ ಅಹಮದ್ದರಿಗೆ ಶ್ರದ್ಧಾಂಜಲಿ

ನಾವು ಶಾಲೆಯಲ್ಲಿ ಕನ್ನಡ ಕಲಿಯುವಾಗ ಓದಿದ ಕನ್ನಡ ಪದ್ಯಗಳನ್ನು  ಬಿಟ್ಟರೆ, ಇತರೆ
ಕವಿಗಳು/ಕವನಗಳನ್ನು  ನಾನು ಬಲ್ಲವನಲ್ಲ. ಕಾರಣ ಇಷ್ಟೇ. ನನಗೆ ಕವನಗಳು/ಪದ್ಯಗಳು
ಸುಲಭವಾಗಿ ಅರ್ಥವಾಗುವುದಿಲ್ಲ. ಮೇಲ್ನೋಟಕ್ಕೆ ಕಂಡದ್ದನ್ನು ಮಾತ್ರ ನಾನು ಓದಿ ತಿಳಿಯಬಲ್ಲೆ.
ಕವಿಗಳ ಕವನದ ಒಳಹೊಕ್ಕು ನೋಡಿ ಅವರ ಕವನದ ರಸಾಸ್ವಾದನೆ ಮಾಡುವುದಾಗಲೀ ಅಥವಾ
ನನ್ನ ಮನದೊಳಗೆ ಹೊಕ್ಕು ಹುಡುಕಾಡಿ ಅವರು ಬರೆದ ಸಾಲುಗಳ ಅರ್ಥ ಪಡೆದುಕೊಳ್ಳುವುದಾಗಲೀ
  ನನಗೆ ಕಷ್ಟಸಾಧ್ಯವಾದ ಕೆಲಸ. ಓದಿದ ಸಾಲುಗಳ ಸೌಂದರ್ಯ ಛಟ್ಟನೆ ತಿಳಿಯುವಂತಿದ್ದರೆ ನಾನು
ಅಂಥ ಪದ್ಯಗಳನ್ನು ಓದಿ ಆನಂದಿಸಬಲ್ಲೆ. 

ನನಗೆ ಸುಲಭವಾಗಿ ತಿಳಿಯುವಂಥ  ಅನೇಕ ಕವನಗಳ ಮೂಲಕ ನನ್ನ ಮನಸ್ಸಿಗೆ ಮುದನೀಡಿರುವ
ಮಾನ್ಯ ನಿಸ್ಸಾರ ಅಹಮದ್ದರು ತೀರಿಕೊಂಡದ್ದು ನನಗೆ ಬಹಳ ದುಃಖಕರ ಸುದ್ದಿ. 

ಅವರ ನಿತ್ಯೋತ್ಸವ, ನಾಡದೇವಿಯೇ, ಬೆಣ್ಣೆ ಕಳ್ಳ ಕೃಷ್ಣ, ಪುರಂದರ ದಾಸರು, ಕುರಿಗಳು ಸಾರ್,
ಗಾಂಧಿಬಜಾರಿನ ಒಂದು ಸಂಜೆ, ಮಾಸ್ತಿ, ರಾಮನ್ ಸತ್ತ ಸುದ್ದಿ, ಅಮ್ಮ ಆಚಾರ ನಾನು, ಗೃಹಪ್ರವೇಶದ
ಉಡುಗೊರೆ ಮುಂತಾದ ಅನೇಕ ಕವನಗಳನ್ನು ಮತ್ತೆ ಮತ್ತೆ ಓದಿ ಬಹಳ ಸಂತೋಷಪಟ್ಟಿದ್ದೇನೆ. 

ನಾನು ಹೈಸ್ಕೂಲಿನಲ್ಲಿದ್ದಾಗ ಒಂದು ಸಮಾರಂಭಕ್ಕೆ ಆಗಮಿಸಿದ್ದ ಮೈಸೂರು ಅನಂತಸ್ವಾಮಿಯವರು
ಕುರಿಗಳು ಸಾರ್ ಕುರಿಗಳು ಪದ್ಯವನ್ನು ಮನತಟ್ಟುವಂತೆ ಹಾಡಿದ್ದರು. ಹಾಡು ಹಿಡಿಸಿತ್ತು. ಕವಿ
ಯಾರೆಂದು ತಿಳಿದಿರಲಿಲ್ಲ. ಅದಾದ ಎರಡುಮೂರು ವರುಷಗಳ ನಂತರ ನಾನು ಪಿ ಯು ಸಿ ಯಲ್ಲಿದ್ದಾಗ
ಮೊದಲಬಾರಿಗೆ ನಿಸ್ಸಾರ ಅಹಮದ್ದರ ಹೆಸರು ಕೇಳಿದೆ. ಅವರನ್ನು ಕಂಡೆ.  ಅವರು ನಮ್ಮ  ಕಾಲೇಜಿಗೆ ಬಂದು
(ನ್ಯಾಷನಲ್ ಕಾಲೇಜು ಬೆಂಗಳೂರು)  ಮಾರಲ್ ಸೈನ್ಸ್ ತರಗತಿಯನ್ನು ಉದ್ದೇಶಿಸಿ ಒಂದು ಘಂಟೆಯ
ಕಾಲ ಮಾತನಾಡಿದರು.  ನಂತರ ತಮ್ಮ, ರಾಮನ್ ಸತ್ತ ಸುದ್ದಿ ಹಾಗೂ ಗಾಂಧಿಬಜಾರಿನ ಒಂದು ಸಂಜೆ
ಕವನಗಳ ವಾಚನಮಾಡಿದರು. 

ಮತ್ತೆ ಅದೆಷ್ಟೋ ಕಾಲದ ನಂತರ ಅವರ ‘ನಿಸ್ಸಾರ ಅಹಮದ್ದರ ಆಯ್ದಕವಿತೆಗಳು’ ಸಂಕಲನ ನನ್ನ ಕೈಗೆ
ಸಿಕ್ಕು ಅದರ ಮೂಲಕ ಅವರ ಇನ್ನಿತರ ಕವಿತೆಗಳ ಪರಿಚಯ ನನಗಾಯಿತು. ಅವರ ಕವನಗಳನ್ನು ಬಹಳ
ಮೆಚ್ಚಿಕೊಂಡಿದ್ದ ನನಗೆ, ಒಮ್ಮೆ ಪದ್ಮನಾಭನಗರದಲ್ಲಿ ನಡೆದು ಹೋಗುತ್ತಿದ್ದಾಗ  ಒಂದು ಮನೆಯ ಮುಂದೆ
ಕೆ ಎಸ ನಿಸ್ಸಾರ ಅಹಮದ್ ಎಂಬ ಫಲಕ ಕಂಡು ಬಹಳ ಆನಂದವಾಯಿತು. ಬಾಗಿಲುತಟ್ಟಿ ಅವರನ್ನು
ಕಂಡುಬರಲೇ ಎನಿಸಿದರೂ ಅದೇನೋ ಹಿಂಜರಿಕೆ. ಸುಮ್ಮನಾದೆ. ನನ್ನ ಹತ್ತಿರದ ನೆಂಟರು ಅವರ
ಮನೆಯ ಸಾಲಿನಲ್ಲೇ ವಾಸವಿದ್ದುದರಿಂದ ಅನೇಕಬಾರಿ ಅವರ ಮನೆಯಮುಂದೆಯೇ  ಓಡಾಡುತ್ತಿದ್ದೆ.
ಒಳಹೊಕ್ಕುಅವರನ್ನು ಕಂಡು ಕೈಕುಲುಕಿ ಬರಬೇಕೆಂಬ ಆಸೆಯನ್ನು ಮಾತ್ರ ಪ್ರತಿಬಾರಿಯೂ ಹತ್ತಿಕ್ಕಿದ್ದೆ.

ಈಗ್ಗೆ ಐದಾರು ವರುಷಗಳ ಹಿಂದೆ ನಾನು ಏನೋ ಒಂದು ಬರಹವನ್ನು ಬರೆಯುತ್ತಿದ್ದಾಗ, ಅವರ
‘ಗೃಹಪ್ರವೇಶದ ಉಡುಗೊರೆ’ ಕವನವನ್ನು ಉದಾಹರಿಸಬೇಕಿತ್ತು. ನನಗೆ ಆ ಕವನದ ವಸ್ತು ಮತ್ತು
ಕೆಲವುಸಾಲುಗಳು ಮಾತ್ರ ನೆನಪಿದ್ದವು.  ಕವನದ ಶೀರ್ಷಿಕೆ ಸಹ ಗೊತ್ತಿರಲಿಲ್ಲ. ಆ ಸಮಯದಲ್ಲಿ ಒಮ್ಮೆ
ಬೆಂಗಳೂರಿಗೆ ಹೋದಾಗ ಅವರನ್ನೇ ಭೇಟಿಯಾಗಿ ಅದನ್ನು ಕೇಳಬಾರದೇಕೆ ಎನಿಸಿತು. ಅಷ್ಟುಹೊತ್ತಿಗೆ
ನಮ್ಮಮನೆಯೇ ಪದ್ಮನಾಭನಗರದಲ್ಲಿತ್ತು. ಅವರ ಮನೆಗೆ ಬಹಳ ಸಮೀಪ. ಆದರೆ ಅಂತಹ ಘನತೆವೆತ್ತ
ಕವಿಯೊಬ್ಬರನ್ನು ಭೇಟಿಯಾಗಿ ಸರಿಯಾಗಿ ತಿಳಿವಳಿಕೆಸಹ ಇಲ್ಲದ ಅವರ ಕವನದ ಬಗ್ಗೆ ವಿಚಾರಿಸಲು
ಬಹಳವೇ ಹಿಂಜರಿಕೆ. ಕೊನೆಗೆ ಧೈರ್ಯಮಾಡಿ ಹಿಂಜರಿಯುತ್ತಲೇ ಅವರ ಮನೆಯ ಕರೆಘಂಟೆ ಬಾರಿಸಿದೆ.
ಅವರೇ ಬಾಗಿಲು ತೆರೆದರು. ನನ್ನ ಪರಿಚಯ ಮಾಡಿಕೊಂಡು ನಾನು ಅವರಲ್ಲಿಗೆ ಹೋದ ಉದ್ದೇಶ್ಯವನ್ನು
ತಿಳಿಸಿದೆ. “ಒಹೋ ಕನ್ನಡ ಬರೆಯುತ್ತೀರೇನು?” ಎಂದು ಉತ್ಸುಕತೆಯಿಂದ ನನ್ನ ಮೂರುಕಾಸಿನ
ಬರವಣಿಗೆಯ ಬಗ್ಗೆ ವಿಚಾರಿಸಿ “ಅದಾ? ಅದು ‘ಗೃಹಪ್ರವೇಶದ ಉಡುಗೊರೆ’ ಎಂಬ ಕವನ. ಯಾವ
ಸಂಕಲನದಲ್ಲಿದೆ ಎಂಬ ನೆನಪಿಲ್ಲ. ಸಪ್ನಾ ಬುಕ್ ಸ್ಟಾಲ್ ನಲ್ಲಿ ನನ್ನ ಸಮಗ್ರ ಕವನ ಸಂಕಲನ
ಇರಬಹುದು. ಅದರಲ್ಲಿನೋಡಿ. ಒಂದುವೇಳೆ ನಿಮಗೆ ಸಿಕ್ಕದಿದ್ದರೆ ತಿಳಿಸಿ. ಖಂಡಿತ ಹುಡುಕಿಕೊಡುತ್ತೇನೆ” 
ಎಂದು ಬಹಳ ಸಜ್ಜನಿಕೆಯಿಂದ ಮಾತನಾಡಿಸಿ ಕಳಿಸಿದರು. ಸಪ್ನಾ ಮಳಿಗೆಯಲ್ಲಿ ನನಗೆ ಆ ಕವನ
ಸಿಕ್ಕಿದ್ದರಿಂದ ನಾನು ಮತ್ತೆ ಅವರಲ್ಲಿಗೆ ಹೋಗಲಿಲ್ಲ. 

ನಂತರ ಅವರ ಅನೇಕ ಕವನಗಳನ್ನು ಓದಿ,  ಆಸಕ್ತಿ ಇರುವವರಿಗೆ ಓದಿ ಕೇಳಿಸಿ ಸಂತೋಷಿಸಿದ್ದೇನೆ.
ಬುರಖಾ ಹಾಕಿದ ಮುಸ್ಲಿಂ ಮಹಿಳೆಯರನ್ನು ಕಂಡಾಗಲೆಲ್ಲ ‘ಅಮ್ಮ ಆಚಾರ ನಾನು’ ನೆನಪಿಗೆ ಬರುತ್ತದೆ.
ನನ್ನ ಅಂಗಳದ ಮಲ್ಲ್ಲಿಗೆ ಬಳ್ಳಿ ಕಂಡಾಗಲೆಲ್ಲ  ‘ಗೃಹಪ್ರವೇಶದ ಉಡುಗೊರೆ’ ನೆನಪಾಗುತ್ತದೆ.  

ನಿಸ್ಸಾರ ಅಹಮದ್ದರು ಇನ್ನಿಲ್ಲವಾದರೂ ಅವರ ಕವನಗಳ ಮೂಲಕ ಅವರು ಸದಾ ನಮ್ಮೊಡನೆಯೇ
ಇರುತ್ತಾರೆ. 

ಆ ಮಹನೀಯರಿಗೆ, ಈ ಬರಹದ ಮೂಲಕ ನನ್ನ ನಮನ. 

ಶನಿವಾರ, ಏಪ್ರಿಲ್ 25, 2020

ನಾನು ಬರೆಯುವುದು ಹೀಗೆ



ಲೇಖಕ ಅಥವಾ ಕವಿ ಎಂಬ ಯಾವ ನಾಮವನ್ನೂ ಹೊಂದುವ ಅರ್ಹತೆ ನನಗಿಲ್ಲವಾದರೂ, ನಾನೂ
ನಾಲ್ಕಾರು ಲೇಖನಗಳನ್ನು ಹಾಗೂ ಚುಟುಕ, ಕವನಗಳನ್ನು ಬರೆಯುವ ಪ್ರಯತ್ನ ಮಾಡಿರುವುದುಂಟು.
ಯಾವುದೊ ಒಂದು ಘಟನೆ ಅಥವಾ ಒಂದು ಚಿಂತನೆ, ಮನಸ್ಸನ್ನು  ಪ್ರಚೋದಿಸಿ, ಒಂದೆರಡು ಶಬ್ದಗಳನ್ನೋ,
ಸಾಲುಗಳನ್ನೋ ಮೂಡಿಸುತ್ತದೆ.  ಹಾಗೆ ಪ್ರಭಾವಿತವಾಗಿ ಮೂಡಿದ ಪದಗಳು/ ಸಾಲುಗಳನ್ನು ಮನದಲ್ಲಿ
ಉಳಿಸಿಟ್ಟುಕೊಂಡು ಅದರಬಗ್ಗೆ ಚಿಂತಿಸಿ ಬೆಳಸಿದರೆ  ಅದು ಒಂದು ಬರಹವಾಗಿ ರೂಪತಾಳುತ್ತದೆ. 

ನಾನು ಬರೆದಿರುವ ಬಹುತೇಕ ಬರಹಗಳಿಗೆ ಬೇಕಾದ ಅಂತಹ ಪ್ರಚೋದನೆಯ ಕಿಡಿ ನನ್ನ ಮನಸ್ಸಿಗೆ
ತಗುಲಿರುವುದು ನಾನು ಮುಂಜಾನೆ ವಾಯುಸಂಚಾರಕ್ಕೆ ಹೊರಬಿದ್ದಾಗ.  ನನ್ನ ವಾಯುಸಂಚಾರದ ವೇಳೆ
ಸಾಮಾನ್ಯವಾಗಿ ಮುಂಜಾನೆ ಐದುಘಂಟೆಯಿಂದ ಆರು ಅಥವಾ ಆರೂವರೆಯವರೆಗೆ. ಅದು ನನಗೆ ಬಹಳ
ಪ್ರಿಯವಾದ ಸಮಯ. ನಾನಿರುವುದು ಸಣ್ಣ ಶಹರವಾದ್ದರಿಂದ ಆಹೊತ್ತಿಗೆ ರಸ್ತೆ ಪೂರ್ಣ ಖಾಲಿಯೇ ಇರುತ್ತದೆ.
ಹವೆ ತಂಪಾಗಿರುತ್ತದೆ. ಮಳೆಗಾಲವಾದರೆ, ಮಳೆಬೀಳುತ್ತಿದ್ದರೂ ನನ್ನ ವಾಕಿಂಗ್ ತಪ್ಪುವುದಿಲ್ಲ. ಕೊಡೆಯನ್ನೂ
ಹಿಡಿಯದೇ ನೆನೆಯುತ್ತಲೇ ನಡೆಯುವುದು ನನ್ನ ಅಭ್ಯಾಸ. ನನ್ನ ಸಂಚಾರಕ್ಕೆ ಕಂಟಕವೆಂದರೆ ಬೀದಿನಾಯಿಗಳು
ಮಾತ್ರ. ಬೀಸುವಬಲವಿಲ್ಲದಿದ್ದರೂ ಕೈಯಲ್ಲೊಂದು ಬಡಿಗೆ ಹಿಡಿದು, ಅದನ್ನು  ನಾಯಿಗಳಿಗೆ ತೋರಿಸುತ್ತಾ,
ಅವು ಮೇಲೆ ಹಾರದಿರಲೆಂದು ಬೇಡುತ್ತಾ, ಅರೆಗತ್ತಲಿನಲ್ಲಿ ನಾನು ನಡೆದುಬಿಡುತ್ತೇನೆ. ನನ್ನ ಬಾಯಿಂದ
ಸಹಸ್ರನಾಮವೋ, ದಾಸರಪದವೋ, ಮತ್ಯಾವುದೋ ಸ್ತೋತ್ರವೋ ಹೊರಬೀಳುತ್ತಿರುತ್ತದೆ. ನನಗೆ
ಹಾದಿಯಲ್ಲಿ ಪ್ರತಿದಿನ ಸಿಕ್ಕುವ ಕೆಲವರಿಗೆ ಆ ನೋಟ ಅಭ್ಯಾಸವಾಗಿದೆ. ಹೊಸಬರು ಯಾರಾದರೂ
ಎದುರಾದರೆ  ಅದೇನನ್ನೋ  ಮಣಮಣಿಸುತ್ತ, ಮಳೆಯಲ್ಲಿ  ನೆನೆಯುತ್ತಾ , ಕೊಲುಬೀಸುತ್ತ ನಡೆಯುವ ಈ
ಅರೆಹುಚ್ಚನನ್ನು ಮತ್ತೆ ಮತ್ತೆ ಹಿಂತಿರುಗಿ  ನೋಡುತ್ತಾ  ಮುಂದುವರೆಯುತ್ತಾರೆ. 

ಇಷ್ಟೆಲ್ಲಾ ಏಕೆ ಹೇಳಿದೆನೆಂದರೆ ಇದು ಹೆಚ್ಚು ಕಡಿಮೆ ನನ್ನ ಎಲ್ಲ ಬರಹಗಳು ಉದಯವಾಗುವ ಸಂಧರ್ಭ.
ಸಾಲುಗಳು ಮೂಡಿದೊಡನೆ, ಅವುಗಳನ್ನು ಮರೆಯದೆ ಹಿಡಿದಿಟ್ಟುಕೊಳ್ಳಲೋಸುಗ, ಸ್ತೋತ್ರ, ಸಹಸ್ರನಾಮವನ್ನು
ಕೈಬಿಟ್ಟು ಅದನ್ನೇ ಮರಳಿ ಮರಳಿ ಹೇಳಿಕೊಳ್ಳುತ್ತಾ ಬೇಗ ಬೇಗನೆ ಮನೆಗೆ ಬಂದು, ಕೈಗೆ ಸಿಕ್ಕಿದ ಕಾಗದದ
ಮೇಲೆ ಗೀಚಿಬಿಡುತ್ತೇನೆ. ಏನನ್ನೋ ಸಾಧಿಸಿದವನಂತೆ ನಿಟ್ಟುಸಿರು ಬಿಡುತ್ತೇನೆ. ಅನೇಕ ಬಾರಿ ಹೀಗೆ
ಹೊಳೆದದ್ದನ್ನು ನಂತರ ಬರೆದರಾಯಿತೆಂದು ಪಕ್ಕಕ್ಕಿಟ್ಟು,   ಅದು ಮತ್ತೆ ಬುದ್ಧಿಗೆ ಸಿಲುಕದೇ ಪರಿತಪಿಸಿದ್ದೇನೆ.  

ಹೀಗೊಮ್ಮೆ ಒಂದು ಪ್ರಕ್ರಿಯೆ ಶುರುವಾದರೆ ಅದು ಒಂದು ಸ್ಥಿತಿಗೆ ತಲುಪುವವರೆಗೂ ಮನಸ್ಸಿಗೆ
ಸಮಾಧಾನವಿಲ್ಲ. ಸ್ನಾನದ ವೇಳೆ, ಪೂಜೆಯವೇಳೆ, ಉಪಾಹಾರದ ವೇಳೆ ಈ ಎಲ್ಲ ಸಮಯದಲ್ಲೂ 
ಗೀಚಿದ ಸಾಲುಗಳು ಮನದಲ್ಲೇ ಸುಳಿಯುತ್ತಿದ್ದು, ಬೆಳೆದು, ಬದಲಾಗುತ್ತಿರುತ್ತವೆ. ಹೊಳೆದದ್ದನ್ನು ಆಗಿಂದಾಗ್ಗೆ 
ಕಾಗದದ ತುಣುಕಿನ ಮೇಲಿನ ಸಾಲುಗಳ ಮಧ್ಯ ತುರುಕಿಟ್ಟು, ಕೊಂಚ ಸಮಯ ಸಿಕ್ಕಾಗ ಬರೆದದ್ದನ್ನೆಲ್ಲಾ 
ಗಣಕಯಂತ್ರದಲ್ಲಿ ನುಸುಳಿಸಿಬಿಟ್ಟರೆ, ಎರಡನೇ ಹಂತ ಮುಗಿಯಿತು. 

ನಂತರ, ದಿನನಿತ್ಯ ಕ್ಲಿನಿಕ್ಕಿನಲ್ಲಿ ಕೂತು ಯಾರಾದರೂ ಅನ್ನದಾತರು ಬರಲೆಂದು ಪ್ರಾರ್ಥಿಸುವ ನಾನು,
ಬರಹದಲ್ಲಿ ತೊಡಗಿಕೊಂಡಾಗ ಯಾರೂ  ಬರದಿರಲೆಂದು ಬೇಡುತ್ತೇನೆ.  ಕೆಲವುಬಾರಿ ಚಿಕಿತ್ಸೆಯಲ್ಲಿ
ನಡೆಸುತ್ತಿರುವಾಗಲೂ  ಮಧ್ಯೆ ಮಧ್ಯೆ ಕೈತೊಳೆದುಬಂದು ಒಂದೆರಡು ಸಾಲು ಅಚ್ಚುಮಾಡುವುದು,
ಅಳಿಸಿ ಬರೆಯುವುದು ನಡೆಯುತ್ತಿರುತ್ತದೆ. ಮನದಲ್ಲಿ ನಕ್ಷೆಯಾಗಿದ್ದ ಬರಹ ಪೂರ್ಣವಾಯಿತೆನಿದಮೇಲೆ
ಮನಸ್ಸು ನಿರಾಳವಾಗುತ್ತದೆ. ಮೂರನೇ ಹಂತ. 

ಅಲ್ಲಿಗೆ ತಲುಪಿದಮೇಲೆ, ಮನದಲ್ಲಿ ಮೂಡಿದ್ದ ಸಾಲುಗಳು ಎಲ್ಲಿಯೂ ಹಾರಿಬಿಡುಬಿಡುವುದಿಲ್ಲವೆಂದು
ಖಚಿತವಾದ ನಂತರ, ಕೊಂಚ ವಿರಾಮವಾಗಿ ಬರಹವನ್ನು ಪರಿಷ್ಕರಿಸುವ ಕಾರ್ಯ ಶುರುವಾಗುತ್ತದೆ. 
ಕಾಗದದಮೇಲೆ, ಹಾಳೆಯ ಒಂದೇಪಕ್ಕದಲ್ಲಿ, ಸಾಲುಗಳ ನಡುವೆ ಅಂತರವಿಟ್ಟು ಬರೆಯುತ್ತಿದ್ದ ಕಾಲದಲ್ಲಿ,
ಒಮ್ಮೆ ಬರೆದದ್ದನ್ನು ಬದಲಾಯಿಸುವ ಕೆಲಸ ಬಹಳ ತಲೆನೋವಿನದಾಗಿತ್ತು. ಈಗ ಗಣಕ ಯಂತ್ರದಮೇಲೆ
ನೂರುಬಾರಿ ಬೇಕಾದರೂ ಬರೆದದ್ದನ್ನು ಅಳಿಸಿ ಮತ್ತೆ ಬರೆಯಬಹುದು. ವಾಕ್ಯಗಳನ್ನು ಹಿಂದೆಮುಂದೆ
ಮಾಡಬಹುದು. ಅಳಿಸಿದ್ದನ್ನು ಉಳಿಸಿಟ್ಟುಕೊಂಡು ಮತ್ತೆ ಉಪಯೋಗಿಸಬಹುದು. ಬುಧ್ಧಿಯ ಕೆಲಸ
ಕಡಿಮೆಯಾಗಿಲ್ಲವಾದರೂ, ಕೈಕೆಲಸ ಬಹಳಸುಲಭವಾಗಿದೆ. 

ಕೆಲವು ಬರಹಗಳು ಈ ಸ್ಥಿತಿ ತಲುಪಿದನಂತರವೂ  ಅವುಗಳ ಪೂರ್ಣರೂಪ ಮನಸ್ಸಿಗೆ ಹಿಡಿಸದೆ, ತಿಂಗಳು,
ವರುಷಗಳ ಕಾಲ, ಮಾನಿಟರಿನ ಒಂದುಮೂಲೆಯಲ್ಲಿ ಹಾಗೆಯೇ ಉಳಿದುಬಿಡುತ್ತವೆ. ಕೆಲವು, ಅಲ್ಲಿಂದ
ನೇರವಾಗಿ ‘ಟ್ರಾಶ್ ಬಿನ್’ ಸೇರುತ್ತವೆ. ಉಳಿದವು ಅಲ್ಲಿ ಕೆತ್ತಿ, ಇಲ್ಲಿ ಮೆತ್ತಿ ಆದಮೇಲೆ ಮತ್ತೊಬ್ಬರ
ಮುಂದಿಡುವ ಸ್ಥಿತಿಗೆ ತಲುಪುತ್ತವೆ. 

ನಾನು ಹೀಗೆ ಪರಿಷ್ಕರಣೆಯ ಕೆಲಸ ಮಾಡುವಾಗೆಲ್ಲಾ  ಶ್ರೀ ಆರ. ಕೆ . ನಾರಾಯಣರ ಲೇಖನ ಮನಸ್ಸಿಗೆ
ಬರುತ್ತದೆ. ಅವರು ಎರಡು ಮೂರುಪುಟ ಒಮ್ಮೆಗೇ ಬರೆದುಬಿಡುತ್ತಿದ್ದರಂತೆ. ನಂತರ ಪರಿಷ್ಕರಣೆ ಪ್ರಾರಂಭ.
ಬರೆದ ಸಾಲುಗಳ ಮಧ್ಯೆ ಹೊಸ ಸಾಲುಗಳನ್ನು ಸೇರಿಸಿ, ಬರೆದದ್ದನ್ನು, ಅಳಿಸಿ, ಮತ್ತೆ ಬರೆದು, ಕೊನೆಯಲ್ಲಿ
ಪೂರ್ಣವಾದ ಲೇಖನವು, ಪರಿಷ್ಕರಣೆಯ ಸಮಯದಲ್ಲಿ ಸಾಲುಗಳ ಮಧ್ಯ ಸೇರಿದ ಹೊಸ ಸಾಲುಗಳನ್ನು 
ಮಾತ್ರ ಒಳಗೊಂಡಿದ್ದು, ಮೂಲಬರಹವೆ ನಾಪತ್ತೆಯಾಗಿರುತ್ತಿತ್ತಂತೆ !


ಆ ಮಹಾನುಭಾವರೊಂದಿಗೆ ಹೋಲಿಸಿಕೊಳ್ಳುವುದು ಅಪಚಾರವಾದರೂ, ನನ್ನ ಕೆಲವು ಬರಹಗಳೂ ಹಾಗೆಯೇ
ಆಗಿ ಕೊನೆಗೆ ಅವನ್ನು ಯಾರ ಮುಂದೆಯಾದರೂ  ತಂದಿಡಬಹುದೆಂಬ ರೂಪಕ್ಕೆ ಬರುತ್ತವೆ.  ನನಗೋಸ್ಕರ
ನಾನು ಬರೆಯುವುದೆಂದರೂ, ಬರೆದದ್ದನ್ನು ಮತ್ಯಾರಾದರೂ ಓದಿ ‘ಚೆನ್ನ’ ವೆಂದರೆ ಮನಸ್ಸಿಗೆ ಒಂದು ಸಾರ್ಥಕ
ಭಾವ ಬರುತ್ತದೆ. ಹಿಂದೆ ಹಾಗಾಗಲು ಬರಹಗಳನ್ನು  ಯಾವುದಾದರೂ ಪತ್ರಿಕೆಯಲ್ಲಿ ಪ್ರಕಟಣೆಗೆ ಕಳಿಸಿ,
ಅದು ಅಚ್ಚಾಗುವುದನ್ನು ಕಾಯಬೇಕಿತ್ತು.  ಈಗ ಬರೆದದ್ದನ್ನು ನೇರವಾಗಿ ಓದುಗರ ಮುಂದಿಟ್ಟು, ಅದನ್ನು
ಯಾರಾದರೂ ಓದಿ ಮೆಚ್ಚಿದರೆ ಸಂತೋಷಪಡಬಹುದು. ಆ ಆನಂದಕ್ಕಾಗಿ  ತಿಂಗಳು ತಿಂಗಳ ಕಾಲ ಕಾಯಬೇಕಿಲ್ಲ. 
ಇಷ್ಟಾಗಿಯೂ ಈಗ ಬಹಳದಿನಗಳಿಂದ ಏನೂ ಬರೆದಿರಲಿಲ್ಲ. ಶ್ರೀ ಹೆಗಡೆಯವರ ಲೇಖನ ಮತ್ತು ಅದಕ್ಕೆ
ಪ್ರತಿಕ್ರಿಯೆಗಾಗಿ ಬಂದ ಆಹ್ವಾನ ಈ ನಾಲ್ಕುಸಾಲಿನ  ಬರವಣಿಗೆಗೆ ಅನುವುಮಾಡಿಕೊಟ್ಟಿತು. 

ಶುಕ್ರವಾರ, ಏಪ್ರಿಲ್ 24, 2020

Grihapraveshada Udugore - Nissar Ahmad

ವರ್ಷಗಳ ಹಿಂದೆ ನಮ್ಮ ಗೃಹಪ್ರವೇಶದ ದಿವಸ
ಕನಿಷ್ಟರು ವರಿಷ್ಟರು ಎಂಬ ಫರಕಿಲ್ಲದೆ ನಂಟರಿಷ್ಟರು
ವಿಶ್ವಾಸವಿಟ್ಟು ಹತ್ತಿರ ದೂರದಿಂದ ಬಂದರು
ಹೊಸಮನೆ ಅಮಿತ ಸೌಭಾಗ್ಯವೆರೆಯಲಿ ಅಂದರು
ಕರೆಯೋಲೆಯಲ್ಲಿ ಬೇಡವೆನ್ದಿದ್ದರೂ
ಕಣ್ಣುಕುಕ್ಕುವ ರಂಗುರಂಗಿನ ಪ್ಯಾಕೆಟ್ಟುಗಳಸಲ್ವಾರ್ ಕಮೀಜ್ ತೊಟ್ಟು
ಸೂಚಿಸದೆ ಲವಲೇಶವೂ ಗುಟ್ಟು
ಮರೆಮಾಚಿದ ಮಿಠಾಯಿ, ಪುಷ್ಪಗುಚ್ಛ, ಕಪ್ಪು ಸಾಸರ್ ಸೆಟ್ಟು
ಗಡಿಯಾರ ಬಟ್ಟೆಬರೆ
ತಂದಿತ್ತರು ಇನ್ನು ಏನೇನೋ ಪ್ರೀತಿಯುಡುಗೊರೆ

ಮಾರನೆಯ ದಿನ ಮಿಠಾಯಿಯ ಆಯುಷ್ಯ
ಮುಗಿದಿತ್ತು ಬಾಯಿಗಳ ಬೇಟೆಗೆ
ಅದರ ಮರುದಿನ ಬಸವಳಿದ ಹೂವಿನ ಬುಕೆ
ಕಾಲಕ್ರಮೇಣ ಒಡೆದ ಕಪ್ಪು ಬಸಿಗಳ ಚಕ್ಕೆ
ಪಾವ್ತಿಯಾದವು ಬೀದಿ ತೊಟ್ಟಿಯ ಹರಿಶ್ಚಂದ್ರ ಘಾಟಿಗೆ

ಗಡಿಯಾರ ಗತಿಗೆಟ್ಟು ಉಪೇಕ್ಷೆಗೊಳಗಾಗಿ
ವಸ್ತ್ರ ಹರಿದು ನಿರುಪಯೋಗಿ
ವರ್ಗವಾದವು ಹಿನ್ಮನೆಯ ಹೆಳವ ಕಪಾಟಿಗೆ
ಇದೆತರಹ
ಇನ್ನಿತರ ಕಾಣಿಕೆಗಳ ಕಥೆ ಸಹ.

ಅಷ್ಟೇನೂ ಗುರುತಿಲ್ಲದ ನನ್ನ ಕವನಾಭಿಮಾನಿಯೋರ್ವ
ಬೆಲೆಕೊಟ್ಟು ಕೊಳ್ಳದ, ಎಂದೇ ಬೆಲೆಕಟ್ಟಲಾಗದ ಅಪೂರ್ವ
ಉಡುಗೊರೆಯೊಂದ ಅಂಜುತ್ತಲೇ ಕೊಟ್ಟ
ಕಾಗದದ ವರ್ನರನ್ಜಿತತೆಯಿಂದ ಅದಗಿಸಿಡದೆ ಒಳ ಗುಟ್ಟ
ಅರ್ಥಾತ್ ನಿತ್ಯಮಲ್ಲಿಗೆ ಹಮ್ಬಿನೊಂದು ಕಡ್ಡಿಯ ತಂದು ಗೇಟ ಬಳಿ ನೆಟ್ಟ.

ಇಂದಿಗೂ ಒಳಹೊರಗೆ ಹಿತಮಿತ ಗಮಗಮ
ವಿದೇಶಿ ಅತ್ತರಿಗೆ ಸಮ
ನೋಟಕ್ಕೆ ಹಬ್ಬದ ಊಟ ಚಿಕ್ಕೆ ಹೂ ಹೊರೆ
ಅವನೀಗ ಆಗಿದ್ದರು ಕಣ್ಮರೆ.